ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಲದೀಪ್ ಸೇಂಗಾರ್ಗೆ 3 ದಿನ ಪರೋಲ್
ಉನ್ನಾವೊ, ಅ. 28: ದಿಲ್ಲಿಯಲ್ಲಿ ರವಿವಾರ ನಿಧನರಾದ ಸಹೋದರ ಮನೋಜ್ ಸೆಂಗಾರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಉಚ್ಛಾಟಿತ ಸಚಿವ ಕುಲದೀಪ್ ಸೆಂಗಾರ್ ಹಾಗೂ ಆತನ ಸಹೋದರ ಅತುಲ್ ಸೆಂಗಾರ್ಗೆ 72 ಗಂಟೆಗಳ ಪರೋಲ್ ದೊರಕಿದೆ.
ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಲದೀಪ್ ಸೆಂಗಾರ್ನನ್ನು ಸೋಮವಾರ ಹೊಸದಿಲ್ಲಿಯಿಂದ ಉನ್ನಾವೊಗೆ ಕರೆದು ತರಲಾಗಿದೆ. ಲಕ್ನೋ ಕಾರಾಗೃಹದಲ್ಲಿ ಇರಿಸಲಾಗಿದ್ದ ಅತುಲ್ ಸೆಂಗಾರ್ನನ್ನು ಕೂಡ ಉನ್ನಾವೊಗೆ ಕರೆ ತರಲಾಗಿದೆ.
ಮನೋಜ್ ಸೆಂಗಾರ್ ಹೊಸದಿಲ್ಲಿಯಲ್ಲಿ ಇದ್ದುಕೊಂಡು ಕುಲದೀಪ್ ಸೆಂಗಾರ್ ವಿರುದ್ಧ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ. ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ಪರ ವಕೀಲ ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿದ್ದ ರಾಯ್ಬರೇಲಿಯಲ್ಲಿ ಜುಲೈ 28ರಂದು ನಡೆದ ಅಪಘಾತ ಪ್ರಕರಣದಲ್ಲಿ ಈತ ಸಹ ಆರೋಪಿ. ಕುಲದೀಪ್ ಸೆಂಗಾರ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರೆ, ಅತುಲ್ ಸೆಂಗಾರ್ ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಥಳಿಸಿ ಹತ್ಯೆಗೆ ಕಾರಣವಾದ ಆರೋಪದಲ್ಲಿ ಜೈಲು ಸೇರಿದ್ದಾನೆ.