ಆರ್‌ಸಿಇಪಿ ಒಪ್ಪಂದದಿಂದ ಭಾರತ ನಿಜಕ್ಕೂ ಹೊರಬಂದಿದೆಯೇ?

Update: 2019-11-08 18:33 GMT

ಒಪ್ಪಂದದಿಂದ ಭಾರತವು ಹೊರಬಂದಿದ್ದಕ್ಕೆ ವಾಣಿಜ್ಯ ಸಚಿವಾಲಯ ಏನೇ ಕಾರಣ ಕೊಟ್ಟರೂ ಭಾರತವೂ ಸಹಿ ಮಾಡಿರುವ 16 ರಾಷ್ಟ್ರಗಳ ಜಂಟಿ ಹೇಳಿಕೆಯು ಹೇಳುವುದೇನೆಂದರೆ ಸದ್ಯಕ್ಕೆ ಭಾರತವು ವ್ಯಕ್ತ ಪಡಿಸಿದ ಎಲ್ಲಾ ಕಾಳಜಿಗಳನ್ನು ಹಾಲಿ ಒಪ್ಪಂದವು ಒಳಗೊಂಡಿಲ್ಲವೆಂದು ಭಾರತವು ಭಾವಿಸುತ್ತದೆ ಹಾಗೂ ಆ ಕಾಳಜಿಗಳೆಲ್ಲವನ್ನು ಉಳಿದ ದೇಶಗಳು ಒಳಗೊಂಡ ತರುವಾಯ ಭಾರತವೂ ಒಪ್ಪಂದದ ಭಾಗವಾಗುತ್ತದೆ ಮತ್ತು ಉಳಿದ 15 ದೇಶಗಳು ಈಗಿನಿಂದಲೇ ಭಾರತದ ಕಾಳಜಿಗಳನ್ನು ಒಳಗೊಳ್ಳಲು ಪ್ರಯತ್ನವನ್ನೂ ಹಾಕುತ್ತವೆ.


ಇಡೀ ಭಾರತದ ಜನರನ್ನು ಆತಂಕಕ್ಕೆ ದೂಡಿದ್ದ ಆರ್‌ಸಿಇಪಿ ಒಪ್ಪಂದಕ್ಕೆ ಮೋದಿ ಸರಕಾರವು ನವೆಂಬರ್ 4ರಂದು ಸಹಿಹಾಕಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿಯಾದರೂ ಬಡಭಾರತ ನಿಟ್ಟುಸಿರನ್ನು ಬಿಡುವಂತಾಗಿದೆ. ಆದರೆ ದೊಡ್ಡ ಉದ್ಯಮಿಗಳ ಭಾರತಕ್ಕೆ ಇದರಿಂದ ಅಸಮಾಧಾನವಾಗಿದೆ. ಕಳೆದ ಆರು ತಿಂಗಳಿಂದಲೂ ಈ ಒಪ್ಪಂದದ ವಿರುದ್ಧ ಭಾರತದುದ್ದಕ್ಕೂ ಹೋರಾಟಗಳು ನಡೆದಿದ್ದವು. ಹಾಲು ಉತ್ಪಾದಕರು, ಅಡಿಕೆ, ತೆಂಗು, ಮೆಣಸು, ಕಾಫಿ, ಚಹಾ ಬೆಳೆಗಾರರು, ಸ್ಟೀಲ್ ಮತ್ತು ಜವಳಿ ಉದ್ಯಮ ಸಂಘಸಂಸ್ಥೆಗಳು, ಎಲ್ಲಾ ರೈತ ಸಂಘಟನೆಗಳು ಒಟ್ಟುಗೂಡಿ ಸರಕಾರವು ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಬಾರದೆಂದು ಬೀದಿಗಿಳಿದಿದ್ದವು. ಬಹುಪಾಲು ವಿರೋಧ ಪಕ್ಷಗಳೂ ಈ ಒಪ್ಪಂದವನ್ನು ವಿರೋಧಿಸಿದ್ದವು ಮತ್ತು ಈ ಸರಕಾರವನ್ನು ನಡೆಸುತ್ತಿರುವ ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್ ಹಾಗೂ ಭಾರತೀಯ ಕಿಸಾನ್ ಸಂಘ ಸಹ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಾಯಿಸಿತ್ತು. ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದ್ದರೆ ವಿದೇಶಿ ಕೃಷಿ ಹಾಗೂ ಕೈಗಾರಿಕಾ ಸರಕುಗಳ ಆಮದಿನ ಮೇಲೆ ಈವರೆಗೆ ಹಾಕುತ್ತಿದ್ದ ಸುಂಕಗಳನ್ನು ನಿಧಾನವಾಗಿ ತೆಗೆಯಬೇಕಾಗುತ್ತಿತ್ತು.

ಆಗ ಇತರ ಆರ್‌ಸಿಇಪಿ (ಇಂಡೋನೇಶಿಯಾ, ಫಿಲಿಪ್ಫೀನ್ಸ್, ಸಿಂಗಾಪುರ, ಮಲೇಷಿಯಾ, ಬ್ರೂನಿ, ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾ, ಥಾಯ್ಲೆಂಡ್, ಮ್ಯಾನ್ಮಾರ್, ದ. ಕೊರಿಯಾ, ಜಪಾನ್, ಚೀನಾ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟಗಳಿಂದ ಅದರಲ್ಲೂ ದಕ್ಷಿಣ ಏಶ್ಯ ದೇಶಗಳಿಂದ ತೋಟಗಾರಿಕಾ ಉತ್ಪನ್ನಗಳು ಹಾಗೂ ಆಸ್ಟ್ರೇಲಿಯಾದಿಂದ ಸಕ್ಕರೆ ಮತ್ತು ಗೋಧಿಯಂತಹ ಕೃಷಿ ಉತ್ಪನ್ನಗಳು, ನ್ಯೂಝಿಲ್ಯಾಂಡ್‌ನಿಂದ ಹೈನು ಉತ್ಪನ್ನಗಳು, ಚೀನಾದಿಂದ ಇತರ ಕೈಗಾರಿಕಾ ಉತ್ಪನ್ನಗಳು ಅತ್ಯಂತ ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಹರಿದು ಬಂದು ಭಾರತದ ರೈತಾಪಿಯನ್ನು ಮತ್ತು ಸಣ್ಣಪುಟ್ಟ ಉದ್ಯಮಿಗಳನ್ನು ಬೀದಿಪಾಲು ಮಾಡುತ್ತಿತ್ತು. ಇದಕ್ಕೆ ಪ್ರತಿಯಾಗಿ ಆ ದೇಶಗಳ ಮಾರುಕಟ್ಟೆಗಳು ನಮಗೆ ತೆರೆದುಕೊಂಡರೂ ನಮ್ಮ ರಫ್ತುಗಳ ಕಳಪೆ ಗುಣಮಟ್ಟ, ದರ ಹಾಗೂ ಆ ದೇಶಗಳು ವಿಧಿಸುವ ಸುಂಕೇತರ ಶರತ್ತುಗಳು ನಮ್ಮ ರಫ್ತಿಗೆ ಕಿಮ್ಮತ್ತಿಲ್ಲದಂತೆ ಮಾಡುತ್ತಿದ್ದವು. ಆದ್ದರಿಂದಲೇ ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದೆಂಬ ಪ್ರತಿರೋಧಕ್ಕೆ ಆರ್ಥಿಕ, ರಾಜಕೀಯ ಹಾಗೂ ನೈತಿಕ ಕಾರಣಗಳೆಲ್ಲವೂ ಇತ್ತು. ಆದ್ದರಿಂದಲೇ ಭಾರತದಲ್ಲಿ ಈ ಒಪ್ಪಂದ ಬೇಡವೆಂಬ ಅಭಿಪ್ರಾಯವೂ ರೂಪುಗೊಂಡಿತ್ತು.

ಆರ್‌ಸಿಇಪಿ ಬೇಕೆನ್ನುವ ಭಾರತದ ದೊಡ್ಡ ಬಂಡವಾಳಿಗರು
ಆದರೂ ಈ ಒಪ್ಪಂದವು ಆಗಲೇ ಬೇಕೆಂದು ನಿರಂತರವಾಗಿ ಸರಕಾರದ ಮೇಲೆ ಒತ್ತಡ ಹಾಕುತ್ತಾ ಬಂದಿದ್ದು ಮಾತ್ರ ಈ ದೇಶದ ಬೃಹತ್ ಉದ್ದಿಮೆಗಳ ಸಂಸ್ಥೆಯಾದ ಕನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್-ಸಿಐಐ ಹಾಗೂ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್‌ಕಾಮರ್ಸ್ (ಫಿಕ್ಕಿ)ನಂತಹ ಸಂಸ್ಥೆಗಳು ಮಾತ್ರ. ಈ ಬೃಹತ್ ಉದ್ಯಮಿಗಳ ಕಾರ್ಯಕ್ಷೇತ್ರ ಕೇವಲ ಒಂದು ಉದ್ಯಮಕ್ಕೆ ಸೀಮಿತವಾಗಿಲ್ಲ ಹಾಗೂ ಈಗಾಗಲೇ ಆರ್‌ಸಿಇಪಿ ದೇಶಗಳಲ್ಲಿ ನಮ್ಮ ದೇಶವು ಪಡೆದುಕೊಂಡಿರುವ ಒಂದಷ್ಟು ಮಟ್ಟಿಗಿನ ರಫ್ತು ಮಾರುಕಟ್ಟೆಯ ಪ್ರಧಾನ ಫಲಾನುಭವಿಗಳು ಈ ಹತ್ತಾರು ಬೃಹತ್ ಉದ್ಯಮಿಗಳಾಗಿದ್ದಾರೆ. ಅಲ್ಲದೆ ಲಾಭದಾಯಕ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ಕಾರ್ಮಿಕ, ಭೂ ಸ್ವಾಧೀನ ಹಾಗೂ ತೆರಿಗೆ ಸಂಬಂಧಿತ ಕಾನೂನುಗಳು ಭಾರತಕ್ಕಿಂತ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ದೇಶಗಳಲ್ಲಿ ಅದರಲ್ಲೂ ಆಸಿಯಾನ್ ದೇಶಗಳಲ್ಲಿ ಹೆಚ್ಚು ಆಕರ್ಷಕವಾಗಿದೆ. ಹಾಗೂ ಆರ್‌ಸಿಇಪಿ ಒಪ್ಪಂದವು ಈ ಬಂಡವಾಳ ಹೂಡಿಕೆಗೆ ಅತ್ಯುತ್ತಮ ರಕ್ಷಣೆಯನ್ನೂ ಒದಗಿಸುತ್ತದೆ. ಹೀಗಾಗಿ ಭಾರತದ ಜನತೆ ಈ ಒಪ್ಪಂದವನ್ನು ಆತಂಕದಿಂದ ಗಮನಿಸುತ್ತಿದ್ದರೆ ಭಾರತದ ಬೃಹತ್ ಉದ್ಯಮಿಗಳು ಮಾತ್ರ ಈ ಒಪ್ಪಂದಕ್ಕೆ ಸಹಿ ಬೀಳುವುದನ್ನು ಕಾತುರದಿಂದಲೇ ಎದುರುನೋಡುತ್ತಿದ್ದರು. ಇಂತಹ ಸಮಗ್ರ ಆರ್ಥಿಕ ಒಪ್ಪಂದಗಳು ವಾಸ್ತವದಲ್ಲಿ ಕೆಲವು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿಬಿಟ್ಟಿರುವ ಉದ್ಯಮಿಗಳಿಗೆ ಮಾತ್ರ ನಷ್ಟವನ್ನುಂಟು ಮಾಡಬಹುದು. ಆದರೆ ಗಣಿಗಾರಿಕೆಯಿಂದ ಮೊದಲುಗೊಂಡು ಸರಕು ಉತ್ಪಾದನೆ ಮತ್ತು ಅವುಗಳ ಮಾರಾಟ ಎಲ್ಲದರಲ್ಲೂ ವಿಸ್ತರಿಸಿಕೊಂಡಿರುವ ಉದ್ಯಮಿಗಳಿಗೆ ಒಂದರಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಲಾಭವಾಗುತ್ತದೆ. ಉದಾಹರಣೆಗೆ ಹಲವು ವರ್ಷಗಳ ಹಿಂದೆ ಚೀನಾದ ರೇಷ್ಮೆಯ ಮೇಲಿನ ಆಮದು ಸುಂಕ ಕಡಿಮೆಯಾಗಿ ಗುಣಮಟ್ಟದ ಚೀನಾ ರೇಷ್ಮೆಯು ಭಾರತದ ರೇಷ್ಮೆಗಿಂತ ಅಗ್ಗದಲ್ಲಿ ಸಿಗುವಂತಾಯಿತು. ಆಗ ರೇಶ್ಮೆ ಉದ್ಯಮಿಗಳು ಚೀನಾ ರೇಷ್ಮೆಗೆ ಮುಗಿಬಿದ್ದರು. ಯಾಕೆಂದರೆ ಅದರಲ್ಲಿ ಅವರಿಗೆ ಲಾಭವಿತ್ತು.

ಲಾಭದ ಮುಂದೆ ದೇಶಭಕ್ತಿಯಾಗಲಿ ಅಥವಾ ಇತರ ಕಾಳಜಿಯಾಗಲಿ ಕೆಲಸಕ್ಕೆ ಬರುವುದಿಲ್ಲವೆಂದು ಆಗಲೇ ಭಾರತದ ವ್ಯಾಪಾರಿ-ಉದ್ಯಮಿಗಳು ಸಾಬೀತು ಮಾಡಿದ್ದರು. ಹಾಗೆಯೇ ಭಾರತದಲ್ಲಿ ಸ್ಟೀಲ್ ಉತ್ಪಾದನೆ ಮಾಡಲು ಟನ್ ಒಂದಕ್ಕೆ 80 ಡಾಲರ್ ಆಗುತ್ತದೆ. ಆದರೆ ಆರ್‌ಸಿಇಪಿ ಒಪ್ಪಂದದಿಂದ ಚೀನಾದ ಸ್ಟೀಲ್ ಭಾರತದಲ್ಲೇ ಟನ್ನಿಗೆ 20 ಡಾಲರಿಗೆ ಸಿಗುವಂತಾಗುತ್ತದೆ. ಅದರಿಂದ ಟಾಟಾದಂತ ಬೃಹತ್ ಉದ್ಯಮವನ್ನೂ ಒಳಗೊಂಡಂತೆ ಅಥವಾ ಇತರ ಸ್ಟೀಲ್ ಉತ್ಪಾದಕರ ವಹಿವಾಟಿನ ಮೇಲೆ ಪೆಟ್ಟು ಬೀಳುವುದು ನಿಜ. ಆದರೆ ಟಾಟಾಗಳು ಸ್ಟೀಲ್ ಉತ್ಪಾದನೆಯಲ್ಲಿ ಮಾತ್ರವಲ್ಲದೆ ಅದನ್ನು ಬಳಸಿ ತಯಾರಿಸುವ ಆಟೋಮೊಬೈಲ್ ಹಾಗೂ ಇನ್ನಿತರ ಮ್ಯಾನುಫ್ಯಾಕ್ಚರಿಂಗ್ ನಲ್ಲೂ ಇರುವುದರಿಂದ ಟನ್ನಿಗೆ 20 ಡಾಲರಿಗೆ ಸ್ಟೀಲ್ ಸಿಗುವುದು ಅವರ ಮ್ಯಾನುಫ್ಯಾಕ್ಚರಿಂಗ್ ಉದ್ಯಮಕ್ಕೆ ಲಾಭವನ್ನೇ ತರುತ್ತದೆ, ಅಲ್ಲಿ ಕಳಕೊಂಡಿದ್ದಕ್ಕೆ ಇಲ್ಲಿ ಎರಡರಷ್ಟು ಲಾಭ ಮಾಡುತ್ತಾರೆ. ಚೀನಾದ ಬಗ್ಗೆ ಇಷ್ಟೆಲ್ಲಾ ಆತಂಕ ವ್ಯಕ್ತಪಡಿಸುತ್ತಿರುವ ಈ ಹೊತ್ತಿನಲ್ಲೂ ಭಾರತದ ಔಷಧ ಉದ್ಯಮ ತನ್ನ ಮೂಲ ಸಾಮಗ್ರಿಯನ್ನು ಆಮದು ಮಾಡಿಕೊಳ್ಳುತ್ತಿರುವುದು ಚೀನಾದಿಂದಲೇ. ಭಾರತದ ಔಷಧ ಉದ್ಯಮದ ವಿರೋಧವೇನಿದ್ದರೂ ಸಿದ್ಧ ಔಷಧಿ ಕ್ಷೇತ್ರದಲ್ಲಿ ಜಪಾನ್ ಹಾಗೂ ದಕ್ಷಿಣ ಕೊರಿಯಾ ಹಾಕುತ್ತಿರುವ ಪೇಟೆಂಟ್ ಶರತ್ತುಗಳ ವಿರುದ್ಧ ಮಾತ್ರ. ಹೀಗೆ ವಾಣಿಜ್ಯ ಜಗತ್ತಿನಲ್ಲಿ ಆರ್‌ಸಿಇಪಿಯಂಥ ಮುಕ್ತ ಮಾರುಕಟ್ಟೆ ಒಪ್ಪಂದಗಳು ಸಣ್ಣಪುಟ್ಟ ಉದ್ಯಮಿಗಳನ್ನು ಮತ್ತು ರೈತಾಪಿಯನ್ನು ಆತ್ಮಹತ್ಯೆಗೆ ದೂಡಿದರೂ ಬೃಹತ್ ಉದ್ಯಮಿಗಳಿಗೆ ಮಾತ್ರ ದೊಡ್ಡ ಲಾಭವನ್ನೇ ತರುತ್ತದೆ.

ಅದರಲ್ಲೂ ಭಾರತದ ಉದ್ಯಮಿಗಳ ಬೆಳವಣಿಗೆಯ ಇತಿಹಾಸವನ್ನು ನೋಡಿದರೆ ಅವರು ಬ್ರಿಟಿಷ್ ವಸಾಹತುಶಾಹಿಗಳ ಆಶ್ರಯದಲ್ಲಿ, ಸ್ವಾತಂತ್ರ್ಯಾ ನಂತರದಲ್ಲಿ ಅಮೆರಿಕ ಹಾಗೂ ರಶ್ಯಗಳ ಕೃಪಾಪೋಷಣೆಯಲ್ಲಿ ಮತ್ತು ಅವಲಂಬನೆಯಲ್ಲಿ ಬೆಳೆದದ್ದು ಹೆಚ್ಚು. ನಮ್ಮ ದೇಶದೊಳಗೆ ವಸಾಹತುಶಾಹಿ ಅಥವಾ ಆನಂತರದ ಪ್ರಬಲ ಆರ್ಥಿಕಶಕ್ತಿಗಳ ನವ ವಸಾಹತುಶಾಹಿ ವಾಣಿಜ್ಯ ಹಿತಾಸಕ್ತಿಗಳನ್ನು ವಿರೋಧಿಸುತ್ತಾ, ಭಾರತದ ಗೃಹ ಮಾರುಕಟ್ಟೆಯನ್ನು ಬೆಳೆಸುತ್ತಾ ತಾವೂ ಬೆಳೆದ ಇತಿಹಾಸವೇ ಅವಕ್ಕಿಲ್ಲ. ಹೀಗಾಗಿಯೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಾಗಲೀ ಅಥವಾ ಆ ನಂತರದ ಭಾರತದ ರಾಜಕೀಯದಲ್ಲಾಗಲೀ ಅವರ ಪಾತ್ರ ಬೃಹತ್ ಶಕ್ತಿಗಳನ್ನು ಅವಲಂಬಿಸುತ್ತಾ ಆ ಚೌಕಟ್ಟಿನೊಳಗೆ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವುದಾಗಿತ್ತೇ ವಿನಾ ಅವುಗಳೊಡನೆ ಪೈಪೋಟಿಗೆ ನಿಂತು ಭಾರತದ ಆರ್ಥಿಕತೆಯನ್ನು ಕಟ್ಟುವುದಾಗಿರಲಿಲ್ಲ. ಹೀಗಾಗಿಯೇ ದೇಶೀಯ ಉದ್ಯಮಗಳಿಗೆ ಧಕ್ಕೆ ತಂದ ಜಾಗತೀಕರಣ ನೀತಿಯನ್ನು 1991ರಲ್ಲಿ ಅತ್ಯಂತ ಸಂಭ್ರಮದಲ್ಲಿ ಸ್ವಾಗತಿಸಿದ್ದು ಇದೇ ಬೃಹತ್ ‘ಭಾರತೀಯ’ ಉದ್ಯಮಿಗಳೇ ಆಗಿದ್ದರು. ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲೂ, 1991ರ ನಂತರದ ಜಾಗತೀಕರಣದ ಹೆಸರಿನ ನವವಸಾಹತುಶಾಹಿ ವಿರೋಧಿ ಹೋರಾಟದಲ್ಲೂ ಭಾರತೀಯ ಬೃಹತ್ ಉದ್ಯಮಿಗಳ ಆಸಕ್ತಿಗಳೂ ಮತ್ತು ಭಾರತೀಯ ಜನರ ಆಸಕ್ತಿಗಳು ತದ್ವಿರುದ್ಧವಾಗಿಯೇ ಇತ್ತು. ಅದರ ಮುಂದುವರಿಕೆಯಾಗಿಯೇ ಆರ್‌ಸಿಇಪಿ ಒಪ್ಪಂದದ ವಿಷಯದಲ್ಲೂ ಭಾರತೀಯ ಬೃಹತ್ ಉದ್ಯಮಿಗಳ ದೇಶದ್ರೋಹಿ ಹಿತಾಸಕ್ತಿಗೂ ಭಾರತದ ಜನತೆಯ ಹಿತಾಸಕ್ತಿಗೂ ಸಂಘರ್ಷ ಏರ್ಪಟ್ಟಿದೆ. ಭಾರತದ ಪ್ರಭುತ್ವ- ದೊಡ್ಡ ಉದ್ಯಮಿ ಪರ. ಆರ್‌ಸಿಇಪಿ ಪರ.

ಇದರಲ್ಲಿ ಭಾರತದ ಪ್ರಭುತ್ವದ ಯಾರ ಹಿತಾಸಕ್ತಿಯ ಪರವಾಗಿದೆ? ಪ್ರಜಾತಾಂತ್ರಿಕ ವ್ಯವಸ್ಥೆಯ ಇಕ್ಕಟ್ಟುಗಳು ಭಾರತದ ಪ್ರಭುತ್ವವನ್ನೂ ಸಾರಾಸಗಟು ಜನವಿರೋಧಿ ನೀತಿಗಳನ್ನು ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳಲು ಬಿಡುತ್ತಿಲ್ಲವಾದರೂ ಭಾರತದ ಪ್ರಭುತ್ವವು, ಅದು ಬಿಜೆಪಿಯಾಗಿರಲಿ, ಕಾಂಗ್ರೆಸ್ಸಾಗಿರಲಿ ಅಥವಾ ಖಿಚಡಿ ಸರಕಾರವಾಗಿರಲಿ, ಅಂತಿಮವಾಗಿ ಜನರ ಆಸಕ್ತಿಗೆ ವಿರುದ್ಧವಾಗಿ ಈ ದೇಶದ್ರೋಹಿ ದೊಡ್ಡ ಉದ್ಯಮಿಗಳ ಹಿತಾಸಕ್ತಿಯನ್ನೇ ಕಾಯುತ್ತಾ ಬಂದಿವೆ. 1991ರಲ್ಲಿ ಆಗಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಖಾಸಗೀಕರಣ-ಉದಾರೀಕರಣ -ಜಾಗತೀಕರಣದ ನೀತಿಗಳನ್ನೇ ಇನ್ನೂ ತೀವ್ರವಾಗಿ ಹಾಗೂ ಆಕ್ರಮಣಶೀಲವಾಗಿ ಬಿಜೆಪಿ ಮುಂದುವರಿಸುತ್ತಿದೆಯಷ್ಟೆ. ಅದರ ನೆರಳೇ ಈ ಆರ್‌ಸಿಇಪಿ ಒಪ್ಪಂದದ ಇತಿಹಾಸದಲ್ಲೂ ಕಾಣಿಸುತ್ತದೆ.

 ಈ ಆರ್‌ಸಿಇಪಿ ಒಪ್ಪಂದದಲ್ಲಿ ಭಾರತ ಭಾಗವಹಿಸಲು ಪ್ರಾರಂಭಿಸಿದ್ದು 2012ರಲ್ಲಿ-ಕಾಂಗ್ರೆಸ್ ಸರಕಾರದ ಕಾಲದಲ್ಲಿ. ಅದಕ್ಕೆ ಪ್ರಮುಖವಾಗಿ ಒತ್ತಡ ಹಾಕಿದ್ದು ಭಾರತದ ಬೃಹತ್ ಉದ್ದಿಮೆಗಳು. ಆಗ ಬಿಜೆಪಿಯೂ ಈ ಮಾತುಕತೆಗಳಿಗೆ ಪೂರ್ಣ ಬೆಂಬಲವನ್ನು ನೀಡಿತ್ತು. ನಂತರ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ 18ಕ್ಕೂ ಹೆಚ್ಚು ಸುತ್ತುಗಳ ಮಾತುಕತೆಗಳು ನಡೆದಿವೆ. ಮೋದಿ ಸರಕಾರದ ಹೆಚ್ಚುಗಾರಿಕೆಯೇನೆಂದರೆ 2015ರ ಈ ಇಡೀ ಒಪ್ಪಂದಗಳ ಕರಡು, ಮಾತುಕತೆ ಎಲ್ಲವನ್ನೂ ಅತಿಹೆಚ್ಚು ರಹಸ್ಯಗೊಳಿಸಿದ್ದು. ಸೋರಿಕೆಯಾದ ಮಾಹಿತಿಗಳೂ ಭಾರತ ಸರಕಾರವು ಈ ಒಪ್ಪಂದಕ್ಕೆ ಅತಿಯಾಗಿ ಉತ್ಸುಕವಾಗಿದ್ದನ್ನು ಹಾಗೂ ಒಪ್ಪಂದವು ಹಾಕಿದ ಎಲ್ಲಾ ಜನವಿರೋಧಿ ಹಾಗೂ ದೇಶವಿರೋಧಿ ಚೌಕಟ್ಟನ್ನು ಭಾರತದ ಉದ್ಯಮ ಸಂಸ್ಥೆಗಳ ಕುಮ್ಮಕ್ಕಿನೊಂದಿಗೆ ಒಪ್ಪಿಕೊಳ್ಳುತ್ತಿದ್ದುದನ್ನೇ ಖಚಿತಪಡಿಸಿತ್ತು.

ಆದರೆ ಮೋದಿ ಸರಕಾರವು ಒಪ್ಪಂದಗಳ ವಿವರಗಳನ್ನು ಎಷ್ಟೇ ಗೋಪ್ಯವಾಗಿಟ್ಟಿದ್ದರೂ ಇದು ಡಿಜಿಟಲ್ ಯುಗವಾಗಿದ್ದರಿಂದ ಆರ್‌ಸಿಇಪಿ ಒಪ್ಪಂದದ ಸ್ವರೂಪಗಳು ಮತ್ತು ಭಾರತ ಸರಕಾರದ ಇರಾದೆಗಳು ಜನರಿಗೆ ಗೊತ್ತಾಯಿತು. ಹೀಗಾಗಿ 2016ರಿಂದಲೇ ಸಣ್ಣದಾಗಿ ಪ್ರಾರಂಭವಾಗಿದ್ದ ಹೋರಾಟಗಳು ಕಳೆದ ಆರು ತಿಂಗಳಲ್ಲಿ ಬೃಹತ್ ಮಟ್ಟದಲ್ಲಿ ಭುಗಿಲೆದ್ದಿತ್ತು. ಎಲ್ಲಾ ಬಗೆಯ ರೈತರು, ಸಣ್ಣ-ಮಧ್ಯಮ ಉದ್ಯಮಿಗಳು ಹಾಗೂ ದೊಡ್ಡ ಉದ್ಯಮಿಗಳ ಒಂದು ಸಣ್ಣ ವಿಭಾಗವೂ ಈ ಹೋರಾಟದಲ್ಲಿ ಭಾಗವಹಿಸಿದ್ದು ಸರಕಾರಕ್ಕೆ ಅನಿರೀಕ್ಷಿತವಾಗಿತ್ತು. ಅಲ್ಲದೆ ಇತ್ತೀಚಿನ ಚುನಾವಣೆಗಳಲ್ಲಿ ಗ್ರಾಮೀಣ ಭಾರತವು ಬಿಜೆಪಿಯ ಬಗ್ಗೆ ತೋರಿದ್ದ ಅಸಹನೆಗಳು ಹಾಗೂ ಸರಕಾರದ ವಿವಿಧ ಸಚಿವಾಲಯಗಳು ನೀಡಿದ ಮಾಹಿತಿಗಳು ಮತ್ತು ಆರೆಸ್ಸೆಸ್‌ನ ಗುಪ್ತಮಾಹಿತಿಗಳು ಎಲ್ಲವೂ ಒಟ್ಟು ಸೇರಿ ಕೊನೇ ನಿಮಿಷದಲ್ಲಿ ನರೇಂದ್ರ ಮೋದಿಯವರ ‘ಆತ್ಮಸಾಕ್ಷಿ’ಗೆ ದಿಢೀರನೆ ಜೀವಕೊಟ್ಟು ಸಹಿಹಾಕದಂತೆ ಮಾಡಿತು.
ಆದರೆ ಇದರ ಅರ್ಥ ಭಾರತ ಆರ್‌ಸಿಇಪಿ ಒಪ್ಪಂದದಿಂದ ಪೂರ್ತಿಯಾಗಿ ಹೊರಬಂದಿಯೆಂದೇ?

ಖಂಡಿತಾ ಅಲ್ಲ. ಒಪ್ಪಂದದಿಂದ ಭಾರತವು ಹೊರಬಂದಿದ್ದಕ್ಕೆ ವಾಣಿಜ್ಯ ಸಚಿವಾಲಯ ಏನೇ ಕಾರಣ ಕೊಟ್ಟರೂ ಭಾರತವೂ ಸಹಿ ಮಾಡಿರುವ 16 ರಾಷ್ಟ್ರಗಳ ಜಂಟಿ ಹೇಳಿಕೆಯು ಹೇಳುವುದೇನೆಂದರೆ ಸದ್ಯಕ್ಕೆ ಭಾರತವು ವ್ಯಕ್ತ ಪಡಿಸಿದ ಎಲ್ಲಾ ಕಾಳಜಿಗಳನ್ನು ಹಾಲಿ ಒಪ್ಪಂದವು ಒಳಗೊಂಡಿಲ್ಲವೆಂದು ಭಾರತವು ಭಾವಿಸುತ್ತದೆ ಹಾಗೂ ಆ ಕಾಳಜಿಗಳೆಲ್ಲವನ್ನು ಉಳಿದ ದೇಶಗಳು ಒಳಗೊಂಡ ತರುವಾಯ ಭಾರತವೂ ಒಪ್ಪಂದದ ಭಾಗವಾಗುತ್ತದೆ ಮತ್ತು ಉಳಿದ 15 ದೇಶಗಳು ಈಗಿನಿಂದಲೇ ಭಾರತದ ಕಾಳಜಿಗಳನ್ನು ಒಳಗೊಳ್ಳಲು ಪ್ರಯತ್ನವನ್ನೂ ಹಾಕುತ್ತವೆ. ಅದರ ಜೊತೆಗೆ ಭಾರತದ ಈ ನಡೆಯ ಬಗ್ಗೆ ಭಾರತದ ಬೃಹತ್ ಉದ್ಯಮಿಗಳ ಸಂಸ್ಥೆಯಾದ ಸಿಐಐ ಮುಖ್ಯಸ್ಥ ಉದ್ಯಮಿ ವಿಕ್ರಂ ಕಿರ್ಲೋಸ್ಕರ್ ಹೇಳಿಕೆಯನ್ನು ನೋಡಿ: ‘‘ಭಾರತದ ಕಾಳಜಿಗಳನ್ನು ಸಾಧ್ಯವಾದಷ್ಟು ಬೇಗ ಇತರ ದೇಶಗಳೂ ಒಳಗೊಳ್ಳುತ್ತದೆಂದೂ ಮತ್ತು ಭಾರತವು ಬೇಗನೆ ಆರ್‌ಸಿಇಪಿ ಒಪ್ಪಂದಕ್ಕೆ ಮರಳುತ್ತದೆಂದೂ ನಾವು ನಿರೀಕ್ಷಿಸುತ್ತೇವೆ.’’ ಹೀಗಾಗಿ ಈಗ ಭಾರತವು ಒಪ್ಪಂದದಿಂದ ಹೊರಗುಳಿದಿರುವುದು ತಾತ್ಕಾಲಿಕ.

ಆರ್‌ಸಿಇಪಿ ಒಪ್ಪಿಕೊಂಡಿರುವ ಭಾರತದ ಅಹವಾಲುಗಳು
ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕದಿರುವುದು ತಾತ್ಕಾಲಿಕ ಎಂದು ಭಾವಿಸುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ:

ಭಾರತವು ಈ ಒಪ್ಪಂದದ ಬಗ್ಗೆ ವ್ಯಕ್ತಪಡಿಸಿದ್ದು ಮೂರು ಆರ್ಥಿಕ ಕಾಳಜಿಗಳನ್ನು ಮಾತ್ರ ಮತ್ತು ಅವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಂದವು ಒಳಗೊಂಡಿತ್ತೆಂಬುದು ಈ ಮೊದಲೇ ಸ್ಪಷ್ಟವಾಗಿತ್ತು. ಇದರಲ್ಲಿ ಭಾರತವು ಚೀನಾವನ್ನು ಹೊರತುಪಡಿಸಿ ಆರ್‌ಸಿಇಪಿಯ ಉಳಿದ ಎಲ್ಲ ದೇಶಗಳ ಶೇ.80 ಸರಕುಗಳಿಗೆ ವಿಧಿಸುತ್ತಿದ್ದ ಸುಂಕಗಳನ್ನು ಕಡಿತ ಮಾಡಲು ಸಿದ್ಧವಾದರೂ ಚೀನಾ ಸರಕುಗಳ ಮೇಲೆ ಅದೇ ರೀತಿಯ ವಿನಾಯತಿಗಳನ್ನು ವಿಸ್ತರಿಸಲಾಗುವುದಿಲ್ಲ ಎನ್ನುವುದು ಮೊದಲನೆಯದು. ಅದರ ಬಗ್ಗೆ ಮಾತುಕತೆ ನಡೆದು ಚೀನಾದ ಶೇ.42.5 ಸರಕುಗಳಿಗೆ ಮಾತ್ರ ಸುಂಕ ವಿನಾಯತಿಯೆಂದು ತೀರ್ಮಾನವಾಗಿ ಭಾರತದ ದೊಡ್ಡ ಉದ್ಯಮಿಗಳು ಹರ್ಷಗೊಂಡಿದ್ದರು.

ಎರಡನೆಯದು ನಮ್ಮ ದೇಶದೊಳಗೆ ಯಾವುದಾದರೂ ಸರಕಿನ ಅದರಲ್ಲೂ ಕೃಷಿ ಸರಕಿನ ಆಮದು ಅಗಾಧವಾಗಿ ಹೆಚ್ಚಾಗುತ್ತಿದ್ದರೆ ಕೂಡಲೇ ಅದರ ಮೇಲೆ ಸುಂಕ ಹೆಚ್ಚಿಸುವ ಅಥವಾ ಆಮದು ನಿಲ್ಲಿಸುವ ಕ್ರಮಗಳು ಸ್ವಯಂಪ್ರೇರಿತವಾಗಿ ಜಾರಿಗೆ ಬರಬೇಕೆಂಬುದು. ಎಷ್ಟು ಸರಕುಗಳನ್ನು ಈ ಪಟ್ಟಿಗೆ ಸೇರಿಸಬೇಕೆಂಬ ಚರ್ಚೆ ನಡೆದಿದ್ದು ಒಂದು ವರದಿಯ ಪ್ರಕಾರ ಅದರ ಬಗ್ಗೆಯೂ ಒಂದು ಒಪ್ಪಂದಕ್ಕೆ ತಲುಪಲಾಗಿತ್ತು. ಮೂರನೆಯದು ಮೂಲ ದೇಶಗಳ ನಿಯಮಗಳ ಕಡ್ಡಾಯ ಅನುಷ್ಠಾನ. ಅಂದರೆ ಚೀನಾ ಮತ್ತೊಂದು ದೇಶದ ಮೂಲಕ ತನ್ನ ದೇಶದ ಸರಕುಗಳನ್ನು ಮಾರದಂತೆ ನಿರ್ಬಂಧ ಹೇರುವುದು. ವಾಸ್ತವದಲ್ಲಿ ಭಾರತದ ದೊಡ್ಡ ಉದ್ಯಮಿಗಳು ಹಾಗೂ ಭಾರತ ಸರಕಾರ ಇದರ ಬಗ್ಗೆ ವಿಶೇಷ ಒತ್ತಡವನ್ನೇನೂ ಹೇರುತ್ತಿರಲಿಲ್ಲ. ಏಕೆಂದರೆ ಅನಿರ್ಬಂಧಿತವಾಗಿ ಯಾವುದೇ ದೇಶದಲ್ಲಿ ಪರಸ್ಪರ ಶೂನ್ಯ ಸುಂಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಅವಕಾಶವೇ ಈ ಒಪ್ಪಂದದಲ್ಲಿ ಇರುವಾಗ ಮೂಲ ದೇಶ ನಿಯಮಕ್ಕೆ ಹೆಚ್ಚು ಅರ್ಥವೇ ಉಳಿಯುವುದಿಲ್ಲ. ಹೀಗೆ ಭಾರತ ದೇಶ ಮುಂದಿಟ್ಟ ಎಲ್ಲಾ ಆರ್ಥಿಕ ಕಾಳಜಿಗಳನ್ನು ಈಗಾಗಲೇ ಇತರ ದೇಶಗಳು ಒಂದಷ್ಟು ಮಟ್ಟಕ್ಕೆ ಮಾನ್ಯ ಮಾಡಿದ್ದವು. ಇನ್ನುಳಿದದ್ದನ್ನು ಪ್ರಮಾಣಾತ್ಮಕವಾಗಿ ಬಗೆಹರಿಸಿಕೊಳ್ಳುತ್ತಾ ಹೋಗಬೇಕೆಂಬುದೇ ಭಾರತದ ದೊಡ್ಡ ಬಹುರಾಷ್ಟ್ರೀಯ ಉದ್ಯಮಿಗಳ ಹಾಗೂ ಮೋದಿ ಸರಕಾರದ ಯೋಜನೆಯಾಗಿತ್ತು. ಆದರೆ ಈ ಒಪ್ಪಂದದಿಂದ ನೇರವಾಗಿ ಬಾಧಿತರಾಗುವ ದೇಶದ ಇತರ ಜನಸಮುದಾಯ ದೊಡ್ಡ ಮಟ್ಟದಲ್ಲಿ ಸಂಘಟಿತವಾಗಿ ಬೀದಿಗಿಳಿದಿದ್ದರಿಂದ ಸದ್ಯಕ್ಕೆ ಭಾರತ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿಲ್ಲವಷ್ಟೆ.

ಎಲ್ಲಿಯತನಕ ಬಾಧಿತ ಜನರ ಸಂಘಟಿತ ಐಕ್ಯತೆ ಗಟ್ಟಿಯಾಗಿರುತ್ತದೋ ಅಲ್ಲಿಯತನಕ ಮೋದಿ ಪ್ರಭುತ್ವ ಒಪ್ಪಂದಕ್ಕೆ ಸಹಿ ಹಾಕುವುದು ಕಷ್ಟ. ಇದರಲ್ಲಿ ಸಡಿಲಿಕೆ ಅಥವಾ ಒಡಕು ಅಥವಾ ಉನ್ಮಾದಗಳ ಮೈಮರೆವು ಉಂಟಾಗುತ್ತಿದ್ದಂತೆ ಭಾರತವೂ ಕೂಡ ಆರ್‌ಸಿಇಪಿ ಆಗುತ್ತದೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News