ಆರ್‌ಸಿಇಪಿಯಿಂದ ಹೊರಗಾದ ಆರ್ಥಿಕತೆ

Update: 2019-11-15 06:07 GMT

ಅಂತರ್‌ರಾಷ್ಟ್ರೀಯ ವಾಣಿಜ್ಯವೆಂಬುದು ಆರ್ಥಿಕತೆಗೆ ಎಷ್ಟು ಸಂಬಂಧಪಟ್ಟಿದೆಯೋ ಅಷ್ಟೇ ಮಟ್ಟಿಗೆ ರಾಜಕೀಯಕ್ಕೂ ಸಂಬಂಧಪಟ್ಟಿದೆ. ಆದ್ದರಿಂದಲೇ ಇಂತಹ ವಾಣಿಜ್ಯ ಒಪ್ಪಂದಗಳಿಗೆ ಸಮ್ಮತಿಸುವಾಗ ಸರಕಾರವು ಹೆಚ್ಚಿನ ಎಚ್ಚರಿಕೆಯನ್ನು ತೋರಬೇಕಿರುತ್ತದೆ. ಸರಕಾರಗಳು ಉತ್ತರದಾಯಿಗಳಾಗಿರಬೇಕೆಂಬ ಉದ್ದೇಶದಿಂದಲೂ ಇಂತಹ ಎಚ್ಚರಿಕೆಯನ್ನು ಪಾಲಿಸಬಹುದು ಅಥವಾ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲೂ ಸಹ ಸೂಕ್ತ ಎಚ್ಚರಿಕೆಗಳನ್ನು ಕಲ್ಪಿಸಿಕೊಳ್ಳಬಹುದು. ಆಳುವ ಸರಕಾರವು ಆರ್‌ಸಿಇಪಿಯಿಂದ ಹೊರಬಂದಿದ್ದನ್ನು ಹಾಡಿಹೊಗಳುವ ಮೊದಲು ಇವೆರಡರ ನಡುವಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

ಭಾರತವು ಆರ್‌ಸಿಇಪಿಯಿಂದ ಹೊರಗೆ ಬಂದದ್ದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಇಂತಹ ಮುಕ್ತ ವ್ಯಾಪಾರ ಒಪ್ಪಂದಗಳು ತಮ್ಮ ಬದುಕಿನ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಆತಂಕಗೊಂಡಿದ್ದ ಸಾಮಾನ್ಯ ಜನರು ನೀಡಿದ ಇತ್ತೀಚಿನ ಚುನಾವಣಾ ತೀರ್ಪಿನಿಂದ ಸರಕಾರದ ತೀರ್ಮಾನವು ಪ್ರಭಾವಿತಗೊಂಡಿರಬಹುದೇ? ಅಥವಾ ಇದು ಒಂದು ನಿರ್ದಿಷ್ಟ ಪ್ರಾದೇಶಿಕ ಯಾಜಮಾನ್ಯವನ್ನು ಸ್ಥಾಪಿಸಲೆಂದೇ ರೂಪುಗೊಳ್ಳುತ್ತಿರುವ ಈ ಬಹುಪಕ್ಷೀಯ ಒಪ್ಪಂದದ ಭಾಗವಾಗಬೇಕೆಂಬ ಒತ್ತಡಗಳನ್ನು ಮೀರಿ ನಿಂತ ಸರಕಾರದ ಸ್ವತಂತ್ರ ರಾಜಕೀಯದ ಗೆಲುವೇ? ಅಥವಾ ಇದು ಜಾಗತಿಕ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರಧಾರಿಗಳಾಗಿರುವವರ ರಾಜತಾಂತ್ರಿಕ ಹಿತಾಸಕ್ತಿಗಳು ಹೇರಿದ ಒತ್ತಡದ ಪರಿಣಾಮವೋ? ಕಾರಣಗಳೇನೇ ಇದ್ದರೂ ಜಗತ್ತಿನ ಶೇ.40ರಷ್ಟು ವಾಣಿಜ್ಯವನ್ನು ನಿರ್ವಹಿಸುವಂತಹ ಒಂದು ಬೃಹತ್ ವಾಣಿಜ್ಯ ಒಕ್ಕೂಟದಿಂದ ಕೊನೆಯ ನಿಮಿಷದಲ್ಲಿ ಹೊರಬರುವಂತಹ ಧೈರ್ಯವನ್ನು ತೋರಿದ ಸರಕಾರವನ್ನು ಅಭಿನಂದಿಸಲೇ ಬೇಕು. ಆದರೆ ದುರದೃಷ್ಟವಶಾತ್, ಒಂದು ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಈ ನಿರ್ಧಾರವೂ ಮೇಲ್ತೋರಿಕೆಯದ್ದಾಗಿರದಿದ್ದರೂ, ಅದರ ಹಿಂದೆ ಆರ್ಥಿಕ ಏಕೀಕರಣದ ಕುರಿತಾದ ಯಾವುದೇ ಸುಸಂಬದ್ಧ ‘ನೀತಿ’ಗಳು ಇಲ್ಲದ ಮತ್ತು ಕೇವಲ ರಾಜಕೀಯ ಅನಿವಾರ್ಯತೆಗಳಿಂದಾಗಿ ತೆಗೆದುಕೊಂಡ ತೀರ್ಮಾನವಾಗಿ ಕಾಣುತ್ತದೆ.

ಏಶ್ಯ-ಪೆಸಿಫಿಕ್ ಪ್ರಾಂತದಲ್ಲಿ ರೂಪುಗೊಂಡಿರುವ ಹಲವಾರು ಪ್ರಾದೇಶಿಕ ಮುಕ್ತ ವ್ಯಾಪಾರ ಒಪ್ಪಂದದ ರೀತಿಯಲ್ಲಿ ಆರ್‌ಸಿಇಪಿ ಸಹ ಆಗ್ನೇಯ ಏಶ್ಯ ದೇಶಗಳನ್ನೇ ಕೇಂದ್ರವಾಗಿಟ್ಟುಕೊಂಡಿವೆ. ಕಳೆದೊಂದು ದಶಕದಿಂದಲೂ ಈ ಆಗ್ನೇಯ ಏಶ್ಯ ದೇಶಗಳ ಒಕ್ಕೂಟವು (ಏಸಿಯಾನ್) ಈ ಭೂಪ್ರದೇಶದಲ್ಲಿ ಹಲವಾರು ವ್ಯಾಪಾರ ಸಂಬಂಧಿ ಮಾತುಕತೆ ಹಾಗೂ ಕಾರ್ಯತಂತ್ರಗಳಲ್ಲಿ ತೊಡಗಿಕೊಂಡಿದೆ. ಆದರೂ ಒಂದು ದೇಶದ ಸರಕುಗಳು ಮತ್ತೊಂದು ದೇಶದಲ್ಲಿ ತಂದು ಸುರಿಯುವ (ಡಂಪಿಂಗ್) ಮೂಲಭೂತ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮಾತ್ರ ವಿಫಲವಾಗಿವೆ. ಉದಾಹರಣೆಗೆ ಆಗ್ನೇಯ ಏಶ್ಯ ದೇಶಗಳ ಒಕ್ಕೂಟದ ಸದಸ್ಯ ರಾಷ್ಟ್ರವಾದ ಸಿಂಗಾಪುರದ ಜೊತೆಗೆ ಭಾರತವು ಮುಕ್ತ ವ್ಯಾಪಾರ ಒಪ್ಪಂದವನ್ನು ಹಾಗೂ ಎರಡೆರಡು ದೇಶಗಳಲ್ಲಿನ ತೆರಿಗೆ ಭಾರ ತಡೆ ಒಪ್ಪಂದವನ್ನೂ ಮಾಡಿಕೊಂಡಿದೆ. ಆದರೆ ಅದರ ಲಾಭವನ್ನು ಚೀನಾವು ಪಡೆದುಕೊಂಡು ತನ್ನ ಅಗ್ಗದ ಸರಕುಗಳನ್ನು ಸಿಂಗಾಪುರದ ಮೂಲಕ ಭಾರತಕ್ಕೆ ತಂದು ಸುರಿಯುತ್ತಿದೆ. ಈ ಸಮಸ್ಯೆಯನ್ನು ಗುರುತಿಸಲಾಗಿದೆಯಾದರೂ ಅದು ತಡೆಯಿಲ್ಲದೆ ಮುಂದುವರಿದಿದೆ. ಭಾರತವು ಸಹಿಮಾಡಿರುವ ಯಾವುದೇ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಸರಕಿನ ಮೂಲದ ಕುರಿತಾದ ನಿಯಮಗಳಿಲ್ಲ. ಅದಿಲ್ಲದೆ ದೇಶದೊಳಗೆ ಸುರಿಯಲಾಗುತ್ತಿರುವ ಸರಕುಗಳ ಮೂಲವನ್ನು ಪತ್ತೆಹಚ್ಚುವ ಕಷ್ಟ ತಪ್ಪುವುದಿಲ್ಲ. ಆರ್‌ಸಿಇಪಿಯಲ್ಲಿ ಇಂತಹ ಒಂದು ನಿಯಮಕ್ಕೆ ಭಾರತವು ಒತ್ತಾಯ ಮಾಡುತ್ತಿದೆ. ಅಂತಹ ನಿಮಯಮಗಳು ಸೇರ್ಪಡೆಯಾದಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಹಿತಾಸಕ್ತಿಯೂ ಈಡೇರಬಹುದು. ಹಾಗಿದ್ದಲ್ಲಿ ಆರ್‌ಸಿಇಪಿಯಿಂದ ಭಾರತ ಹೊರಬಂದಿರುವುದರಿಂದ ಉತ್ತಮ ವಾಣಿಜ್ಯ ಅವಕಾಶವನ್ನು ಕಳೆದುಕೊಂಡಿದೆಯೇ? ಆರ್‌ಸಿಇಪಿಯಿಂದ ಹೊರಬಿದ್ದಿರುವುದರಿಂದ ಈ ಪ್ರದೇಶದೊಳಗಿನ ವಾಣಜ್ಯ ಸಹಭಾಗಿಯಾಗಿ ಭಾರತದ ಪ್ರತಿಷ್ಠೆಗೆ ಕುಂದೊದಗಿದೆಯೇ? ಒಂದು ವೇಳೆ ಈ ಭೂ ಪ್ರದೇಶದೊಳಗಿನ ದೇಶಗಳ ನಡುವಿನ ವ್ಯಾಪಾರ ಅಷ್ಟು ಮಹತ್ವದ್ದಾಗಿದ್ದಲ್ಲಿ ಭಾರತವು ತನ್ನ ಆಸಕ್ತಿಗೆ ಪೂರಕವಾದ ಶರತ್ತಿಗಳಿಗಾಗಿ ಒತ್ತಡವನ್ನು ಹೇರದೆ ಒಪ್ಪಂದದಿಂದ ಹೊರಬಂದಿದ್ದೇಕೆ?

ಭಾರತಕ್ಕೆ ಆಗ್ನೇಯ ಏಶ್ಯ ದೇಶಗಳ ಒಕ್ಕೂಟ- ಏಸಿಯಾನ್ ಮತ್ತು ಅದರ ನೇತೃತ್ವದ ಆರ್‌ಸಿಇಪಿ ದೇಶಗಳು ಸಹಜ ವಾಣಿಜ್ಯ ಸಹಭಾಗಿಗಳಲ್ಲವೆಂದೂ ಮತ್ತು ಈ ಪ್ರದೇಶದಲ್ಲಿ ಚೀನಾದಂತಹ ದೇಶದೊಂದಿಗೆ ಭಾರತವು ನಿಕಟ ಸಂಬಂಧಗಳನ್ನು ಸ್ಥಾಪಿಸುವುದು ಕಷ್ಟವೆಂದೂ ಕೆಲವರು ವಾದಿಸಬಹುದು. ಆದರೆ ಇಡೀ ಈ ಪ್ರದೇಶದ ಜೊತೆಗೆ ಭಾರತದ ವ್ಯಾಪಾರ ಎಷ್ಟಿದೆಯೋ ಅದಕ್ಕಿಂತ ಏಸಿಯಾನ್‌ನ ಹಲವು ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ವಾಣಿಜ್ಯವು ಹೆಚ್ಚಿದೆ ಎಂಬುದನ್ನು ಮರೆಯಲಾಗದು. ಒಂದು ಮುಕ್ತ ವ್ಯಾಪಾರ ಪ್ರದೇಶವಾಗಿ ಆಸಿಯಾನ್‌ಗೆ ಒಂದು ಸೈದ್ಧಾಂತಿಕ ಮಹತ್ವವನ್ನು ನೀಡಲಾಗಿದೆ. ಆದರೂ ವಾಸ್ತವದಲ್ಲಿ ಅದು ಅಸ್ತಿತ್ವಕ್ಕೆ ಬಂದು ಹಲವು ದಶಕಗಳೇ ಆಗಿದ್ದರೂ ಜಗತ್ತಿನ ವಾಣಿಜ್ಯದಲ್ಲಿ ಅದರ ಪಾಲು ಕೇವಲ ಶೇ.7ರಷ್ಟು ಮಾತ್ರ. ಹಾಗೆಯೇ ಆಸಿಯಾನ್‌ನ ಒಟ್ಟಾರೆ ವಾಣಿಜ್ಯ ವ್ಯವಹಾರದಲ್ಲಿ ಭಾರತದ ಪಾಲು ಕೇವಲ ಶೇ.2-3ರಷ್ಟು ಮಾತ್ರ. ವಾಣಿಜ್ಯದಲ್ಲಿ ಇಷ್ಟು ನಗಣ್ಯವಾದ ಪಾಲನ್ನು ಹೊಂದಿದ್ದರೂ ಭಾರತವು ದಶಕಗಳಿಂದ ಆಸಿಯಾನ್‌ನ ಸಮಾಲೋಚನಾ ಸಹಭಾಗಿಯಾಗಿಯೇ ಮುಂದುವರಿದಿದೆ ಮತ್ತು ಆರ್‌ಸಿಇಪಿಯಿಂದ ಹೊರಬಂದಿದ್ದರೂ ಇದು ಮುಂದುವರಿಯಲಿದೆ. ಮತ್ತೊಂದು ಕಡೆ ಆರ್‌ಸಿಇಪಿಯಿಂದ ಭಾರತವು ಹೊರಬಂದಿದ್ದರೂ ಎಲ್ಲಿಯತನಕ ಭಾರತದೊಂದಿಗಿನ ವ್ಯಾಪಾರದಿಂದ ಹೆಚ್ಚಿನ ಲಾಭವು ದೊರೆಯುತ್ತಿರುತ್ತದೋ ಅಲ್ಲಿಯತನಕ ಆಸಿಯಾನ್‌ನ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ವಾಣಿಜ್ಯ ವ್ಯವಹಾರ ಮುಂದುವರಿಯಲಿದೆ. ಮತ್ತೊಂದು ಕಡೆಯಿಂದ ನೋಡಿದರೆ ಕೊನೆ ನಿಮಿಷದಲ್ಲಿ ಮಾತುಕತೆಯಿಂದ ಹೊರಬಂದಿದ್ದು ಭಾರತ ಸರಕಾರದ ಚಾಣಾಕ್ಷ ರಾಜಕೀಯ ನಡೆಯಾಗಿದೆ. ಇದೇ ರೀತಿಯ ರಾಜಕೀಯ ಲೆಕ್ಕಾಚಾರಗಳ ಕಾರಣಗಳಿಂದಾಗಿಯೇ ಹೆಚ್ಚಿನ ಆರ್ಥಿಕ ಮಹತ್ವವಿಲ್ಲದಿದ್ದರೂ ಹಾಗೂ ಸದಸ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಸ್ನೇಹಯುತವಾಗಿರದಿದ್ದರೂ ದಕ್ಷಿಣ ಏಶ್ಯ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್)ವನ್ನು ಕಳೆದ ಮೂರು ದಶಕಗಳಿಂದಲೂ ಜೀವಂತವಾಗಿ ಉಳಿಸಿಕೊಳ್ಳಲಾಗಿದೆ. ಈ ಭಾಗದ ಹಲವಾರು ದೇಶಗಳು ಸಂಬಂಧಪಟ್ಟ ಪ್ರಾದೇಶಿಕ ಒಪ್ಪಂದಗಳ ಭಾಗಿಯಾಗಲು ಬೇಕಾದ ರಾಜಕೀಯ ಮಾನ್ಯತೆಯನ್ನು ಏಶ್ಯ ಪ್ರಾದೇಶಿಕವಾದವು ನೀಡುತ್ತಾ ಬಂದಿದೆ. ಉದಾರೀಕರಣವು ಉಚ್ಛ್ರಾಯದಲ್ಲಿದ್ದ ಸಮಯದಲ್ಲೂ ಸಹ ದುರ್ಬಲವಾಗಿದ್ದ ಇಂತಹ ಪ್ರದೇಶಿಕ ಒಕ್ಕೂಟಗಳ ಭಾಗವಾಗುವುದು ಮಾನ್ಯತೆಯನ್ನು ಒದಗಿಸುತ್ತಿತ್ತು. ಹಾಗೆಯೇ ಇಂದು ಜಗತ್ತಿನ ಬೃಹತ್ ಆರ್ಥಿಕತೆಗಳೇ ತಮ್ಮ ತಮ್ಮ ಗೃಹಮಾರುಕಟ್ಟೆಯ ಸ್ವರಕ್ಷಣಾವಾದಗಳಿಗೆ ಹಿಂದಿರುಗುತ್ತಿರುವಾಗ ಇಂತಹ ಪ್ರಾದೇಶಿಕ ಒಕ್ಕೂಟಗಳಿಂದ ಹೊರಬರುತ್ತಿರುವುದು ಲಾಭದಾಯಕವಲ್ಲ ಎಂದೇನೂ ಹೇಳಲಾಗುವುದಿಲ್ಲ. ಕೊನೆ ನಿಮಿಷದಲ್ಲಿ ಒಪ್ಪಂದದಿಂದ ಹೊರಬಂದಿರುವ ಆಳುವ ಸರಕಾರದ ನಡೆಯು ಏಶ್ಯ-ಪೆಸಿಫಿಕ್ ವಲಯದ ಸ್ನೇಹಿತರ ಕುರಿತಾಗಿ ಒಳಗೊಳ್ಳುವ ಧೋರಣೆಯೆಂದು ಜಾಗತಿಕ ವೀಕ್ಷಕರಿಗೆ ಕಾಣಬಹುದು. ಆದರೆ ಅದೇ ಸಮಯದಲ್ಲಿ ಅದು ತನ್ನ ದೇಶದೊಳಗಡೆ ತನ್ನ ಸರಕಾರದ ಬಗ್ಗೆ ಹೆಚ್ಚುತ್ತಿದ್ದ ಜನಸಾಮಾನ್ಯ ವಿರೋಧಿ ಎಂಬ ಇಮೇಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಆದರೆ ಈ ಹಿಂದೆಗೆತದಿಂದ ಕೆಲವು ಕ್ಷೇತ್ರಗಳಿಗೆ ಮಾತ್ರ ಕೆಲವು ತಾತ್ಕಾಲಿಕ ಪರಿಹಾರವಷ್ಟೇ ಸಿಕ್ಕಂತಾಗಿದೆ. ಏಕೆಂದರೆ ಯಾವ ಮೂಲಭೂತ ಆರ್ಥಿಕ ಬಿಕ್ಕಟ್ಟಿಗೆ ಭಾರತ ಸಿಲುಕಿದೆಯೋ ಅದಕ್ಕೆ ಈ ಹಿಂದೆೆಗೆತದಿಂದ ಯಾವ ದೊಡ್ಡ ಪರಿಹಾರವೂ ಸಿಗುವುದಿಲ್ಲ. ಉದಾಹರಣೆಗೆ ಸ್ಥಳೀಯ ಮಧ್ಯವರ್ತಿಗಳಿಂದ ನಿಯಂತ್ರಿತವಾಗುವ ತಾಜಾಹಾಲು ಮಾರುಕಟ್ಟೆಯ ಜಾಲದಲ್ಲಿ ಸಿಲುಕಿರುವ ಸಣ್ಣ ಪುಟ್ಟ ಹಾಲು ಉತ್ಪಾದಕರಿಗೆ ಆರ್‌ಸಿಇಪಿಯಿಂದ ಹೊರಬಂದಿರುವುದು ಯಾವ ಪರಿಹಾರವನ್ನು ನೀಡಬಲ್ಲದು? ಆರ್‌ಸಿಇಪಿಯಿಂದ ಹೊರಬಂದಿರುವುದು ದೇಶೀಯ ಮಾರುಕಟ್ಟೆಯ ಮೇಲೆ ಏಕಸ್ವಾಮ್ಯ ಹೊಂದಿರುವ ಬಲಾಢ್ಯರ ಆಧಿಪತ್ಯವನ್ನು ಕಾಪಾಡಿದೆಯೇ ವಿನಾ ಭಾರತದ ಹಾಲು ಉತ್ಪನ್ನದ ಅಂತರ್‌ರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನೇನೂ ಹೆಚ್ಚಿಸಲು ಸಹಾಯ ಮಾಡಿಲ್ಲ. ಆದರೆ ಭಾರತದ ರೈತರ ಆದಾಯವು ದುಪ್ಪಟ್ಟಾಗಬೇಕೆಂದರೆ ಅಧಿಕ ಮೌಲ್ಯದ ಕೃಷಿ ಸರಕುಗಳನ್ನು ಉತ್ಪಾದಿಸಬೇಕೆಂದು ಹೇಳುತ್ತಿದ್ದದ್ದು ಇದೇ ಸರಕಾರವೇ ಅಲ್ಲವೇ? ಹಾಗಿದ್ದಲ್ಲಿ ಅದು ರೈತರು ತಮ್ಮ ಸರಕನ್ನು ತಮಗೆ ಬೇಕಾದ ಮಾರುಕಟ್ಟೆಗೆ ಮಾರಲು ಬೇಕಾದ ಅವಕಾಶ ಮತ್ತು ಆಯ್ಕೆಯನ್ನು ಒದಗಿಸುವ ರೀತಿಯಲ್ಲಿ ಶಾಸನಗಳನ್ನು ಮಾಡಬೇಕೇ ಹೊರತು ಎಚ್ಚರಿಕೆಯಿಂದ ಕೂಡಿದ ಬಹುಪಕ್ಷೀಯ ಒಪ್ಪಂದದ ಹೆಸರಿನಲ್ಲಿ ಅವರ ಮಾರುಕಟ್ಟೆಯ ಆಯ್ಕೆಗಳನ್ನು ಸೀಮಿತಗೊಳಿಸಬಾರದಲ್ಲವೇ?

ಅಂತರ್‌ರಾಷ್ಟ್ರೀಯ ವಾಣಿಜ್ಯವೆಂಬುದು ಆರ್ಥಿಕತೆಗೆ ಎಷ್ಟು ಸಂಬಂಧಪಟ್ಟಿದೆಯೋ ಅಷ್ಟೇ ಮಟ್ಟಿಗೆ ರಾಜಕೀಯಕ್ಕೂ ಸಂಬಂಧಪಟ್ಟಿದೆ. ಆದ್ದರಿಂದಲೇ ಇಂತಹ ವಾಣಿಜ್ಯ ಒಪ್ಪಂದಗಳಿಗೆ ಸಮ್ಮತಿಸುವಾಗ ಸರಕಾರವು ಹೆಚ್ಚಿನ ಎಚ್ಚರಿಕೆಯನ್ನು ತೋರಬೇಕಿರುತ್ತದೆ. ಸರಕಾರಗಳು ಉತ್ತರದಾಯಿಗಳಾಗಿರಬೇಕೆಂಬ ಉದ್ದೇಶದಿಂದಲೂ ಇಂತಹ ಎಚ್ಚರಿಕೆಯನ್ನು ಪಾಲಿಸಬಹುದು ಅಥವಾ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲೂ ಸಹ ಸೂಕ್ತ ಎಚ್ಚರಿಕೆಗಳನ್ನು ಕಲ್ಪಿಸಿಕೊಳ್ಳಬಹುದು. ಆಳುವ ಸರಕಾರವು ಆರ್‌ಸಿಇಪಿಯಿಂದ ಹೊರಬಂದಿದ್ದನ್ನು ಹಾಡಿಹೊಗಳುವ ಮೊದಲು ಇವೆರಡರ ನಡುವಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News