ಅಂಬೇಡ್ಕರ್ ವಿರಚಿತ ಭಾರತೀಯ ಸಂವಿಧಾನ

Update: 2019-11-18 06:56 GMT

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಚರಿತ್ರೆಯಿಂದ ಸ್ಫೂರ್ತಿ ಪಡೆದು ಭವಿಷ್ಯದಲ್ಲಿ ಪ್ರಜೆಗಳ ಬದುಕನ್ನು ಹಸನಾಗಿಸುವುದು ಅವಶ್ಯಕವಾದ ಶಾಸನಾತ್ಮಕ, ಆಡಳಿತಾತ್ಮಕ ಮತ್ತು ಅಭಿವೃದ್ಧಿ ಕೇಂದ್ರಿತ ಮಾರ್ಗೋಪಾಯಗಳನ್ನು ಆಳುವ ಸರಕಾರಕ್ಕೆ ಸೂಚಿಸುವ ಸಲುವಾಗಿ ಸ್ವತಂತ್ರ ರಾಷ್ಟ್ರವೊಂದಕ್ಕೆ ಸಂವಿಧಾನ ಅತ್ಯವಶ್ಯಕ. ಭಾರತವು ಸುಮಾರು 1000 ವರ್ಷಗಳ ದಾಸ್ಯಕ್ಕೆ ಒಳಪಡಲು ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿದ ಮನುವಾದಿಗಳೇ ಮುಖ್ಯ ಕಾರಣ. ಮನುವಾದಿಗಳು ಹುಟ್ಟಿನಿಂದ ಅಪ್ಪಟ ಗುಲಾಮರೆಂಬುದು ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಮನುವಾದಿಗಳ ಹುನ್ನಾರದಿಂದಾಗಿ ಮುಸಲ್ಮಾನರು ಮತ್ತು ವಸಾಹತುಶಾಹಿಗಳು ಭಾರತವನ್ನು ದಾಸ್ಯಕ್ಕೆ ದೂಡಿದರು. ಭಾರತದ ಸಂವಿಧಾನಕ್ಕೆ ಸುದೀರ್ಘ ಇತಿಹಾಸವಿದೆ. ಭಾರತೀಯ ಸಂವಿಧಾನದ ಆದಿಗುರು ಬುದ್ಧನಾದರೆ ಸ್ವತಂತ್ರ ಸಂವಿಧಾನಕ್ಕೆ ಸ್ಪಷ್ಟ ರೂಪ ಕೊಟ್ಟ ಸರ್ವಜನಾಂಗದ ಅಭ್ಯುದಯದ ರೂವಾರಿ ಅಂಬೇಡ್ಕರ್ ಅಂತ್ಯವಿಲ್ಲದ ಗುರುವಾಗಿ ಭಾರತೀಯ ಇತಿಹಾಸದಲ್ಲಿ ಗೌರವಿಸಲ್ಪಟ್ಟಿದ್ದಾರೆ.

ಭಾರತೀಯ ಸಂವಿಧಾನ ಸಭೆಗೆ ಅಂದಿನ ಮನುವಾದಿ ಕೇಂದ್ರಿತ ಆಳುವ ವರ್ಗ ಅಂಬೇಡ್ಕರ್ ಪ್ರವೇಶಿಸದಂತೆ ನಡೆಸಿದ ಕುಚೋದ್ಯ ಇತಿಹಾಸದಲ್ಲಿ ದಾಖಲಾಗಿದೆ. ಕ್ಲಿಮೆಂಟ್ ಆಟ್ಲಿ, ಲಾರ್ಡ್‌ಮೌಂಟ್ ಬ್ಯಾಟನ್, ಅನಿಬೆಸೆಂಟ್ ಮೊದಲಾದ ಪ್ರಜ್ಞಾವಂತ ಬ್ರಿಟಿಷರ ಒತ್ತಾಯಕ್ಕೆ ಮಣಿದು ಭಾರತದ ರಾಷ್ಟ್ರೀಯ ನಾಯಕರು ಬೊಂಬಾಯಿ ನಗರದಿಂದ ಅಂಬೇಡ್ಕರ್‌ರನ್ನು ಒಲ್ಲದ ಮನಸ್ಸಿನಿಂದ ಸಂವಿಧಾನ ಸಭೆಗೆ ಎರಡನೇ ಪ್ರಯತ್ನದಲ್ಲಿ ಆಯ್ಕೆ ಮಾಡಿದರು. ಸ್ವಾತಂತ್ರಾನಂತರದಲ್ಲಿ ಗಾಂಧಿ ಮತ್ತು ಬಳಗ ಇಂಗ್ಲೆಂಡಿನ ಅಂತರ್‌ರಾಷ್ಟ್ರೀಯ ಸಂವಿಧಾನ ತಜ್ಞ ಲಾರ್ಡ್ ಜನ್ನಿಂಗ್ಸ್‌ರವರ ಬಳಿ ಸಂವಿಧಾನ ಬರೆದುಕೊಡಬೇಕೆಂದು ಮನವಿ ಮಾಡಿದಾಗ ಅವರು ನಯವಾಗಿ ತಿರಸ್ಕರಿಸಿ ಭಾರತದಂತಹ ಬಹುಸಂಸ್ಕೃತಿಗಳು, ಬಹುಧರ್ಮಗಳು, ಬಹು ಜನಾಂಗಗಳು ಮತ್ತು ವೈವಿಧ್ಯತೆ ಇರುವ ದೇಶಕ್ಕೆ ಶ್ರೇಷ್ಠ ಸಂವಿಧಾನ ಬರೆದುಕೊಡಲು ಅಂಬೇಡ್ಕರ್‌ಗೆ ಮಾತ್ರ ಸಾಧ್ಯವೆಂದು ಸ್ಪಷ್ಟವಾಗಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ರಾಷ್ಟ್ರನಾಯಕರಿಂದ ಅನಿವಾರ್ಯವಾಗಿ ಆಗಸ್ಟ್ 29, 1947ರಲ್ಲಿ ನೇಮಕಗೊಂಡರು.

ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸಯ್ಯದ್ ಮುಹಮ್ಮದ್ ಸಾದುಲ್ಲಾ, ಕೆ.ಎಂ.ಮುನ್ಸಿ, ಬಿ.ಎಲ್.ಮಿತ್ತರ್ ಮತ್ತು ಡಿ.ಪಿ.ಖೈತಾನ್‌ರವರು ಸದಸ್ಯರಾಗಿ ನೇಮಕಗೊಂಡರು. ಅನೇಕ ಸದಸ್ಯರು ವೃದ್ಧಾಪ್ಯ, ಅನಾರೋಗ್ಯ, ಸಾವು ಮತ್ತಿತರ ಕಾರಣಗಳಿಂದಾಗಿ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿಲ್ಲ. ಇಂತಹ ಸವಾಲಿನ ಸಂದರ್ಭದಲ್ಲಿ ಅಂಬೇಡ್ಕರ್ ಕೃಷ್ಣಸ್ವಾಮಿ ಅಯ್ಯರ್ ಮತ್ತು ಸಂವಿಧಾನ ಸಲಹೆಗಾರ ಬಿ.ಎನ್.ರಾವ್‌ರವರ ಸಹಕಾರದಿಂದ ಹಗಲಿರುಳು ಕಷ್ಟಪಟ್ಟು ಭಾರತೀಯ ಸಂವಿಧಾನವನ್ನು ರಚಿಸಿದರು. ರಾಷ್ಟ್ರದ ಹಿತಕ್ಕಾಗಿ ಆಹಾರ, ವಿಶ್ರಾಂತಿ, ಆರೋಗ್ಯ, ಆಯಸ್ಸು ಮೊದಲಾದವುಗಳನ್ನು ಲೆಕ್ಕಿಸದೇ ತಮ್ಮ ಅಮೂಲ್ಯ ಆಯಸ್ಸನ್ನು ಕಳೆದುಕೊಂಡು ಅಂಬೇಡ್ಕರ್ ಭಾರತಕ್ಕೆ ವಿಶ್ವಶ್ರೇಷ್ಠ ಸಂವಿಧಾನವನ್ನು ಕೊಟ್ಟರು. ಹುಟ್ಟಿನಿಂದ ಅತ್ಯಂತ ಕೆಳ ಜಾತಿಯನ್ನು ಪ್ರತಿನಿಧಿಸಿದರೂ ಅಂಬೇಡ್ಕರ್ ವಿದ್ವತ್ತಿನಿಂದ ಅತ್ಯಂತ ಶ್ರೇಷ್ಠ ಮೇಧಾವಿಯಾಗಿ ಜಗತ್ತಿನ ಗಮನಸೆಳೆದಿದ್ದಾರೆ.

ದಲಿತರು ಭಾರತ ದೇಶಕ್ಕೆ ಶ್ರೇಷ್ಠ ಬೌದ್ಧಿಕ ಕೊಡುಗೆಗಳನ್ನು ನೀಡಿದ್ದಾರೆಂಬುದನ್ನು ಅಂಬೇಡ್ಕರ್‌ರವರ ಮಾತುಗಳಲ್ಲೇ ತಿಳಿಯಬಹುದಾಗಿದೆ: ಹಿಂದೂಗಳಿಗೆ ವೇದ ಬೇಕೆನಿಸಿದಾಗ ಅವರು ಸವರ್ಣೀಯರಲ್ಲದ ವೇದವ್ಯಾಸರನ್ನು ಅವಲಂಬಿಸಬೇಕಾಯಿತು. ಹಿಂದೂಗಳಿಗೆ ಪುರಾಣ ಬೇಕೆನಿಸಿದಾಗ ಅವರು ಅಸ್ಪಶ್ಯನಾದ ವಾಲ್ಮೀಕಿಯನ್ನು ಅವಲಂಬಿಸಬೇಕಾಯಿತು. ಹಿಂದೂಗಳಿಗೆ ಸ್ವಾತಂತ್ರಾನಂತರದಲ್ಲಿ ಸಂವಿಧಾನ ಬೇಕೆನಿಸಿದಾಗ ಅವರು ನನ್ನನ್ನೇ ಅವಲಂಬಿಸಬೇಕಾಯಿತು. ಅಂಬೇಡ್ಕರ್‌ರವರ ಈ ಮಾತುಗಳು ದಲಿತರು ನಿಜಕ್ಕೂ ಧರೆಗೆ ದೊಡ್ಡವರು ಎಂಬುದಕ್ಕೆ ಪುರಾವೆಯಾಗಿದೆ. ಭಾರತೀಯರು ಸಂವಿಧಾನ ಪ್ರಜ್ಞೆಯನ್ನು ಬೆಳೆಸಿಕೊಂಡು ತಮ್ಮ ಹಕ್ಕುಬಾಧ್ಯತೆಗಳಿಗಾಗಿ ಸಂಘಟಿತ ಹೋರಾಟ ನಡೆಸಿದಾಗ ಮಾತ್ರ ನನ್ನ ಶ್ರಮ ಸಾರ್ಥಕವಾಗುತ್ತದೆಯೆಂದು ಅಂಬೇಡ್ಕರ್ ಆಶಿಸಿದ್ದರು. ಸಂವಿಧಾನ ಸಭೆಯಲ್ಲಿ ನವೆಂಬರ್ 5, 1948ರಂದು ಮಾತನಾಡುತ್ತಾ ಹಿರಿಯ ರಾಷ್ಟ್ರನಾಯಕ ಟಿ.ಟಿ. ಕೃಷ್ಣಮಾಚಾರಿ ಸಂವಿಧಾನ ಕರಡು ರಚನಾ ಸಭೆಗೆ ನೇಮಕಗೊಂಡಿದ್ದ 7 ಮಂದಿ ಸದಸ್ಯರಲ್ಲಿ ಬಹಳಷ್ಟು ಜನ ಒಂದಲ್ಲ ಒಂದು ಕಾರಣಕ್ಕಾಗಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ಪರಿಣಾಮವಾಗಿ ಅಂಬೇಡ್ಕರ್ ದೇಶದ ಹಿತದೃಷ್ಠಿಯಿಂದ ಹಗಲಿರುಳು ಶ್ರಮಿಸಿ ವಿಶ್ವದ ಚರಿತ್ರೆ, ಪರಂಪರೆ, ಹೋರಾಟ ಮತ್ತು ಸಂವಿಧಾನಗಳ ಆಮೂಲಾಗ್ರ ಅಧ್ಯಯನ ನಡೆಸಿ ಭಾರತೀಯ ಸಂಸ್ಕೃತಿ ಮತ್ತು ಪರಿಸರಗಳಿಗೆ ಸೂಕ್ತವಾದ ಶ್ರೇಷ್ಠ ಸಂವಿಧಾನವನ್ನು ರಚಿಸಿ ದೇಶದ ಹಿತವನ್ನು ಕಾಪಾಡಿದ ಧೀಮಂತ ಚಿಂತಕ ಮತ್ತು ಮುತ್ಸದ್ಧಿಯಾಗಿ ಭಾರತದಲ್ಲಿ ಗೌರವಕ್ಕೆ ಭಾಜನರಾಗಿದ್ದಾರೆ ಎಂಬ ಸತ್ಯನಿಷ್ಠ ಮಾತುಗಳನ್ನು ರಾಜಕೀಯ ಇತಿಹಾಸಕಾರ ಸಹಾರೆ (1988) ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಭಾರತದ ಪ್ರಥಮ ರಾಷ್ಟ್ರಪತಿ ಮತ್ತು ಸಂವಿಧಾನ ಸಭೆಯ ಅಧ್ಯಕ್ಷರೂ ಆಗಿದ್ದ ಬಾಬು ರಾಜೇಂದ್ರಪ್ರಸಾದ್‌ರವರು ಅಂಬೇಡ್ಕರ್‌ರವರು ಭಾರತೀಯ ಸಂವಿಧಾನ ರಚನೆಯಲ್ಲಿ ವಹಿಸಿದ ಐತಿಹಾಸಿಕ ಪಾತ್ರವನ್ನು ಪ್ರಶಂಶಿಸಿರುವುದನ್ನು (ಸಂಘಾಲ್, 1968) ಹೀಗೆ ಉಲ್ಲೇಖಿಸಿದ್ದಾರೆ: ಸಂವಿಧಾನ ಸಭೆಯಲ್ಲಿ ಎಲ್ಲಾ ವಿಷಯಗಳನ್ನೂ ಕೂಲಂಕಷವಾಗಿ ಚರ್ಚಿಸುವ ಸಂದರ್ಭಗಳನ್ನು ನಾನೇ ಅನುಭವಿಸಿದ್ದೇನೆ. ಸಂವಿಧಾನ ರಚನಾ ಸಮಿತಿ ಸದಸ್ಯರು ಮತ್ತು ಬಹುಮುಖ್ಯವಾಗಿ ಅದರ ಅಧ್ಯಕ್ಷರಾದ ಅಂಬೇಡ್ಕರ್‌ರವರು ತಮ್ಮ ಹದಗೆಡುತ್ತಿರುವ ಆರೋಗ್ಯ ಮತ್ತು ಸಮಾಜ ಸುಧಾರಣಾ ಹೋರಾಟಗಳ ನಡುವೆಯೂ ಅತ್ಯಂತ ಶ್ರಮವಹಿಸಿ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಅಂಬೇಡ್ಕರ್‌ರವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನಾವು ಕೈಗೊಂಡ ಅತ್ಯಂತ ಶ್ರೇಷ್ಠ ನಿರ್ಧಾರವಾಗಿದೆ. ಅಂಬೇಡ್ಕರ್‌ರವರು ತಮ್ಮ ಆಯ್ಕೆಯನ್ನು ಅತ್ಯಂತ ಚೆನ್ನಾಗಿ ಸಮರ್ಥಿಸಿಕೊಂಡರಷ್ಟೇ ಅಲ್ಲದೆ ತಮಗೆ ವಹಿಸಿದ ಜವಾಬ್ದಾರಿಗೆ ಘನತೆಯನ್ನು ತಂದುಕೊಟ್ಟಿದ್ದಾರೆ.

ಅಂಬೇಡ್ಕರ್‌ರವರು ಭಾರತಕ್ಕೆ ಔಪಚಾರಿಕವಾಗಿ ಸಂವಿಧಾನ ವೊಂದನ್ನು ನೀಡದೇ ತಮ್ಮ ಅಪೂರ್ವ ವಿದ್ವತ್ತು ಮತ್ತು ಮುತ್ಸದ್ದಿತನಗಳ ಆಧಾರದ ಮೇಲೆ ದೇಶವಿಭಜಕ ಶಕ್ತಿಗಳು ಮತ್ತು ಅರಾಜಕ ಶಕ್ತಿಗಳ ಹುನ್ನಾರಗಳನ್ನು ಅತ್ಯಂತ ಸಮರ್ಥವಾಗಿ ನಿಗ್ರಹಿಸಿ ದೇಶವನ್ನು ಶಾಂತಿ ಮತ್ತು ಯುದ್ಧಕಾಲಗಳಲ್ಲಿ ಅಖಂಡವಾಗಿ ರಕ್ಷಿಸಬಲ್ಲ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಅಂಬೇಡ್ಕರ್ ಜಾತಿ ಪದ್ಧತಿಯ ವಿರುದ್ಧ ಜೀವನಪರ್ಯಂತ ಹೋರಾಡಿ ಭಾರತವನ್ನು ಪ್ರಬುದ್ಧ ಭಾರತವನ್ನಾಗಿ ರೂಪಿಸಬಲ್ಲ ಶ್ರೇಷ್ಠ ಆಶಯಗಳು ಮತ್ತು ವಿಧಿ-ವಿಧಾನಗಳನ್ನೊಳಗೊಂಡ ಸಂವಿಧಾನವನ್ನು ಅತ್ಯಂತ ಸವಾಲಿನ ಮತ್ತು ಸಂಕೀರ್ಣ ಪರಿಸ್ಥಿತಿಗಳಲ್ಲಿ ರಚಿಸಿರುವುದು ಗಮನಾರ್ಹ ಸಂಗತಿ. ಭಾರತದ 2ನೇ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್‌ರವರು ಸಮಸ್ತ ಭಾರತೀಯರ ಬದುಕನ್ನು ಹಸನುಗೊಳಿಸುವ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಅಂಬೇಡ್ಕರ್ ಮಹಾನ್ ದೇಶಭಕ್ತರಾಗಿ ಸ್ವತಂತ್ರಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನಗಳಿಸಿದ್ದಾರೆ ಎಂದು ಅಂಬೇಡ್ಕರ್‌ರವರ ಸಂವಿಧಾನಾತ್ಮಕ ಕೊಡುಗೆಯನ್ನು ಪ್ರಶಂಶಿಸಿದ್ದಾರೆ. ಮತ್ತೋರ್ವ ರಾಷ್ಟ್ರಪತಿ ವಿ.ವಿ.ಗಿರಿ ಯವರು ಭಾರತದ ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್‌ರವರ ಆಯ್ಕೆ ಅತ್ಯಂತ ಸೂಕ್ತವಾಗಿದ್ದು ಅವರು ತಮ್ಮ ಅವಿರತ ಅಧ್ಯಯನ, ಸಂಶೋಧನೆ ಮತ್ತು ವಿದ್ವತ್ಪೂರ್ಣ ಬರಹಗಳಿಂದ ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನವನ್ನಾಗಿ ರಚಿಸಿ ಎಲ್ಲ ಪ್ರಜೆಗಳ ಹಿತವನ್ನು ಕಾಪಾಡಿರುವ ಮಹಾ ಮುತ್ಸದ್ದಿ ಎಂದು ಅಭಿನಂದಿಸಿದ್ದಾರೆ.

ಅಂಬೇಡ್ಕರ್ ಭಾರತೀಯ ಇತಿಹಾಸ ಮತ್ತು ಸಂವಿಧಾನಗಳಲ್ಲಿ ಅಜರಾಮರರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಭ್ರಷ್ಟಾಚಾರ, ಆಪರೇಷನ್ ಕಮಲ, ವಸೂಲಿಬಾಜಿ ಮೊದಲಾದ ಸಂವಿಧಾನ ವಿರೋಧಿ ಕೃತ್ಯಗಳು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಿತೂರಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಕುತಂತ್ರಗಳಿಂದ ಕರ್ನಾಟಕದಲ್ಲಿ ಕೋಮುವಾದಿಗಳ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸುಮಾರು 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಅಂದಿನ ವಿಧಾನಸಭಾ ಅಧ್ಯಕ್ಷ ರಮೇಶ್‌ಕುಮಾರ್‌ರವರ ನಿಲುವನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಅಂಗೀಕರಿಸಿದೆ. ಆದರೆ, ಮೂಲನಿವಾಸಿಗಳ ದೊರೆ ಮಹಿಷನ ಜಯಂತಿ ಮತ್ತು ಮಹಾನ್ ರಾಷ್ಟ್ರೀಯವಾದಿ ಟಿಪ್ಪು ಸುಲ್ತಾನ್‌ರ ಜನ್ಮ ದಿನಾಚರಣೆಯನ್ನು ನಿಷೇಧಿಸಿ ತಮ್ಮ ಅವಿವೇಕವನ್ನು ಪ್ರದರ್ಶಿಸಿರುವ ಬಿಜೆಪಿ ಸರಕಾರ ಮತ್ತೊಂದು ಅನಾಹುತವನ್ನು ಸೃಷ್ಟಿಸಿದೆ. ನವೆಂಬರ್ 26ರ ಗಣರಾಜ್ಯೋತ್ಸವ ದಿನವನ್ನು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸುವ ನೆಪದಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲವೆಂದು ಶಿಕ್ಷಣ ಮಂತ್ರಿ ಸುರೇಶ್‌ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಕುಚೋದ್ಯದಿಂದ ಹೊರಡಿಸಿರುವ ಸುತ್ತೋಲೆ ಆಘಾತಕಾರಿಯಾಗಿದೆ. ಇಂತಹ ಅಮಾನವೀಯ ಪ್ರವೃತ್ತಿಗಳ ವಿರುದ್ಧ ದೇಶದ ಎಲ್ಲೆಡೆ ಪ್ರತಿಭಟನೆಗಳು ಜರುಗಿವೆ. ಹಿಂದುತ್ವವಾದಿಗಳು ಎಷ್ಟೇ ಕಿತಾಪತಿ ನಡೆಸಿದರೂ ದೇಶ ವಿದೇಶಗಳಲ್ಲಿ ಲಭ್ಯವಿರುವ ಐತಿಹಾಸಿಕ ದಾಖಲೆಗಳು ಅಂಬೇಡ್ಕರ್‌ರವರು ಭಾರತೀಯ ಸಂವಿಧಾನದ ಪ್ರಧಾನ ಶಿಲ್ಪಿ ಎಂಬ ಸತ್ಯವನ್ನು ಪ್ರತಿಬಿಂಬಿಸುತ್ತವೆ.

ಸಂವಿಧಾನ ಕರಡು ರಚನಾ ಸಮಿತಿಯ ಎಲ್ಲಾ ಸದಸ್ಯರು ಅಂಬೇಡ್ಕರ್‌ರವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಸಂವಿಧಾನ ರಚನೆ ಪ್ರಕ್ರಿಯೆಯಲ್ಲಿ ಸಹಕರಿಸಲಾಗಲಿಲ್ಲ. ಆದರೂ ಸಹ ಅಂಬೇಡ್ಕರ್‌ರವರು ಏಕಾಂಗಿ ವೀರನಂತೆ ಶ್ರಮವಹಿಸಿ ಇಡೀ ವಿಶ್ವವೇ ಬೆರಗಾಗುವಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿ ತಾವೊಬ್ಬ ಶ್ರೇಷ್ಠ ಚಿಂತಕ, ಮುತ್ಸದ್ದಿ ಮತ್ತು ರಾಷ್ಟ್ರೀಯವಾದಿಯೆಂದು ಸಾಬೀತುಪಡಿಸಿರುವುದನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಲಾರ್ಡ್ ಜನ್ನಿಂಗ್ಸ್, ಬಾಬು ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಟಿ.ಟಿ.ಕೃಷ್ಣಮಾಚಾರಿ, ವಿ.ವಿ.ಗಿರಿ ಮೊದಲಾದ ಮಹನೀಯರು ಮಂಡಿಸಿರುವ ಸತ್ಯವನ್ನು ಇತ್ತೀಚಿನ ಕೋಮುವಾದಿಗಳು ಮುಚ್ಚಲು ಸಾಧ್ಯವಿಲ್ಲ. ಕೊನೆಯ ದರ್ಜೆ ಕಿತಾಪತಿಗಳು ಮತ್ತು ಇತಿಹಾಸ ವಿರೋಧಿ ಕೋಮುವಾದಿಗಳ ಹುನ್ನಾರಗಳಿಂದ ಭಾರತದ ಇತಿಹಾಸ ಕಸದ ಬುಟ್ಟಿ ಸೇರಬಾರದೆಂಬುದು ಪ್ರಜ್ಞಾವಂತರ ಆಶಯವಾಗಿದೆ. ಇಂತಹ ಚಿಲ್ಲರೆ ಆಟಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ಗಳಿಸುವ ಲಾಭಕ್ಕಿಂತ ಅನುಭವಿಸುವ ಕಷ್ಟನಷ್ಟಗಳೇ ಹೆಚ್ಚೆಂಬುದನ್ನು ಮೊದಲು ಅರಿಯಬೇಕು. ಜೈಭಾರತ್! ಜೈಭೀಮ್! ಜೈಸಂವಿಧಾನ್!

Writer - ಡಾ.ಬಿ.ಪಿ.ಮಹೇಶ ಚಂದ್ರಗುರು

contributor

Editor - ಡಾ.ಬಿ.ಪಿ.ಮಹೇಶ ಚಂದ್ರಗುರು

contributor

Similar News