ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ: ಪ್ರತಿಕ್ರಿಯೆಗೆ ಸೋನಿಯಾ ಗಾಂಧಿ ನಕಾರ
ಹೊಸದಿಲ್ಲಿ, ನ.20: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಯ ಕುರಿತ ಪ್ರಗತಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದರು.
ಶಿವಸೇನೆ ನೇತೃತ್ವದ ಸರಕಾರ ಮುಂದಿನ ತಿಂಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಎರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಲು ಸೋನಿಯಾ ನಿರಾಕರಿಸಿದರು.
ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುದ್ದಿಗಾರರು ಸೋನಿಯಾ ಅವರ ಗಮನ ಸೆಳೆದಾಗ, ‘ನೋ ಕಮೆಂಟ್ಸ್’ ಎಂದು ಪ್ರತಿಕ್ರಿಯಿಸಿದರು. ಕಳೆದ ತಿಂಗಳು ಅಸೆಂಬ್ಲಿ ಚುನಾವಣೆಯ ಫಲಿತಾಂಶದ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಹಗ್ಗಜಗ್ಗಾಟ ನಡೆದ ಕಾರಣ ನ.12ರಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಬಿಜೆಪಿಯೊಂದಿಗೆ ಶಿವಸೇನೆ ಮೈತ್ರಿಕಡಿದುಕೊಂಡ ಬಳಿಕ ಕಾಂಗ್ರೆಸ್-ಎನ್ಸಿಪಿ ಜೊತೆಗೂಡಿ ಶಿವಸೇನೆ ಸರಕಾರ ರಚಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.