ಕಾಶ್ಮೀರದ ನಿರ್ಬಂಧಗಳನ್ನು ತೆರವುಗೊಳಿಸಿ: ರಾಜ ದಂಪತಿ ಭೇಟಿಗೆ ಮುನ್ನ ಭಾರತಕ್ಕೆ ಸ್ವೀಡನ್ ಆಗ್ರಹ
Update: 2019-11-29 12:11 GMT
ಸ್ಟಾಕ್ಹೋಂ: ಸ್ವೀಡನ್ ದೇಶದ ರಾಜ ದಂಪತಿ ಕಾರ್ಲ್ ಗುಸ್ತಫ್ ಹಾಗೂ ಸಿಲ್ವಿಯಾ, ವಿದೇಶಾಂಗ ಸಚಿವೆ ಆನ್ನೆ ಲಿಂಡೆ ಸಹಿತ ಆ ದೇಶದ ಅಧಿಕೃತ ನಿಯೋಗ ಡಿಸೆಂಬರ್ 1ರಿಂದ ಒಂದು ವಾರದ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದೆ. ಈ ಪ್ರವಾಸಕ್ಕೆ ಇನ್ನೇನು ಎರಡೇ ದಿನಗಳಿವೆಯೆನ್ನುವಾಗ ಸಚಿವೆ ಆನ್ನೆ ಅವರು ಭಾರತಕ್ಕೆ ಜಮ್ಮು ಕಾಶ್ಮೀರ ಕುರಿತಂತೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಹೇರಲಾಗಿರುವ ಎಲ್ಲಾ ನಿರ್ಬಂಧಗಳನ್ನೂ ತೆರವುಗೊಳಿಸಬೇಕೆಂದು ಭಾರತ ಸರಕಾರವನ್ನು ಅವರು ಸ್ವೀಡನ್ ದೇಶದ ಸಂಸತ್ತಿಗೆ ನೀಡಿರುವ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಕಾಶ್ಮೀರದಲ್ಲಿನ ಪರಿಸ್ಥಿತಿ ಕಳವಳಕಾರಿ ಎಂದೂ ಸಚಿವೆ ಹೇಳಿದ್ದು, ಅಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಅಲ್ಲಿನ ಸಮಸ್ಯೆಗೆ ಪರಿಹಾರ ಕೈಗೊಳ್ಳುವಾಗ ಕಾಶ್ಮೀರಿಗಳನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳಬೇಕೆಂದು ಅವರು ಹೇಳಿದ್ದಾರೆ.