ಬಡವರ ತಟ್ಟೆಯಿಂದ ಕಸಿದು ವಿಶ್ವಕ್ಕೆ ಶ್ರೀಮಂತರಾದವರು

Update: 2019-11-30 07:05 GMT

ಆರ್ಥಿಕ ಹಿಂಜರಿತದಿಂದ ದೇಶ ಕಂಗೆಟ್ಟಿರುವ ದಿನಗಳಲ್ಲೇ, ಫೋರ್ಬ್ಸ್ ಪತ್ರಿಕೆಯ ‘ರಿಯಲ್ ಟೈಮ್ ಬಿಲಿಯನೇರ್ಸ್‌ ಪಟ್ಟಿ’ ಹೊರ ಬಿದ್ದಿದೆ. ಇದರ ಪ್ರಕಾರ ಭಾರತದ ಅಂಬಾನಿ ಕುಟುಂಬ ಇನ್ನಷ್ಟು ಶ್ರಿಮಂತವಾಗಿದೆ. ಈ ವರ್ಷದ ಪೂರ್ವಾರ್ಧದಲ್ಲಿ ಬಿಡುಗಡೆಯಾದ 2019ರ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 13ನೇ ಸ್ಥಾನದಲ್ಲಿದ್ದರು. ಇದೀಗ ಅವರು ಜಗತ್ತಿನ ಒಂಬತ್ತನೇ ಅತಿ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಒಡೆತನದ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. 10ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಮೈಲಿಗಲ್ಲನ್ನು ದಾಟಿದೆ ಎಂದು ವರದಿ ಹೇಳುತ್ತಿದೆ. ಇದರ ಬೆನ್ನಿಗೇ ಇನ್ನೊಂದು ವರದಿ ಹೊರ ಬಿದ್ದಿದೆ. ಜುಲೈನಿಂದ ಸೆಪ್ಟಂಬರ್‌ವರೆಗಿನ ತ್ರೈಮಾಸಿಕದಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ದರ ಶೇ.4.5ಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯ ಜಿಡಿಪಿ ದರ ಶೇ. 7 ಆಗಿತ್ತು. ಬಹುಶಃ ಇದು ಇತ್ತೀಚಿನ ಅತಿ ಕಳಪೆ ಸಾಧನೆ ಎಂದು ಗುರುತಿಸಲ್ಪಟ್ಟಿದೆ.

ಸೆಪ್ಟಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ 8 ಪ್ರಮುಖ ಉದ್ದಿಮೆಗಳ ಉತ್ಪಾದನೆ ಶೇ. 5.8ರಷ್ಟು ಕಡಿಮೆಯಾಗಿದೆ ಎಂದು ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ. ಅಕ್ಟೋಬರ್‌ನಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ 17. 6 ಶೇ., ಕಚ್ಚಾತೈಲ ಉತ್ಪಾದನೆಯಲ್ಲಿ 5.1 ಶೇ., ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ 5.7 ಶೇ. ಕುಸಿತ ಕಂಡಿದೆ. ದೇಶ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ನಲುಗುತ್ತಿದ್ದರೂ, ಅಂಬಾನಿ ಕುಟುಂಬ ಮಾತ್ರ ತನ್ನ ಶ್ರೀಮಂತಿಕೆಯ ರ್ಯಾಂಕ್‌ನಲ್ಲಿ ಸಾಧನೆಯನ್ನು ತೋರಿಸಿದೆ. ಬಹುಶಃ ಅಂಬಾನಿಯ ಶ್ರೀಮಂತಿಕೆಗೆ ದೇಶ ತೆತ್ತ ಬೆಲೆ ಎಷ್ಟು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ದೇಶ ಆರ್ಥಿಕವಾಗಿ ಹಿಮ್ಮುಖವಾಗಿ ಚಲಿಸುತ್ತಿದ್ದರೆ ಇಲ್ಲಿ ಅತಿ ಶ್ರೀಮಂತರಾಗಿ 15 ಜನರು ಇನ್ನೂ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಅವರಲ್ಲಿ ಮುಖೇಶ್ ಅಂಬಾನಿ ಕೂಡ ಒಬ್ಬರು. ನೋಟು ನಿಷೇಧದ ಬಳಿಕ ಈ ದೇಶದ ಶ್ರೀಮಂತರ ತಿಜೋರಿಯಲ್ಲಿದ್ದ ಕಪ್ಪು ಹಣವೆಲ್ಲ ಹೊರಬಿದ್ದು ಅವರು ಬೀದಿ ಪಾಲಾಗುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಅವರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಬದಲಿಗೆ ಬಡವರು ಇನ್ನಷ್ಟು ಬಡವರಾಗಿ ಬೀದಿಗೆ ಬಿದ್ದಿದ್ದಾರೆ.

ಸರಕಾರವೇ ಮಂಡಿಸಿದ ಅಂಕಿಅಂಶದ ಆಧಾರದಲ್ಲಿ ಹೇಳುವುದಾದರೆ. ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ನಿರುದ್ಯೋಗ ಎರಡು ಪಟ್ಟು ಹೆಚ್ಚಳವಾಗಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಶೇ. 7.7ಕ್ಕೆ ತಲುಪಿದೆ ಮತ್ತು ಈ ನಿರುದ್ಯೋಗಗಳ ಆಘಾತಕ್ಕೆ ತತ್ತರಿಸಿದವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಡವರು ಮತ್ತು ಮಧ್ಯಮವರ್ಗಕ್ಕೆ ಸೇರಿದವರಾಗಿದ್ದಾರೆ. ದೇಶದ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಕೋಯಮತ್ತೂರು ಮಹಾನಗರ ಪಾಲಿಕೆ 549 ಸ್ವಚ್ಛತಾ ಕಾರ್ಮಿಕರ ಅಥವಾ ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿತ್ತು. ಈ ಹುದ್ದೆಗೆ 7,000 ಇಂಜಿನಿಯರ್ ಮತ್ತು ಇತರ ಪದವೀಧರರಿಂದ ಅರ್ಜಿಗಳು ಬಂದಿದ್ದವು. ಪದವೀಧರರು ಪೌರ ಕಾರ್ಮಿಕ ಕೆಲಸ ಮಾಡಬಾರದು ಎಂದಲ್ಲ. ಆದರೆ ಇಷ್ಟೂ ಇಂಜಿನಿಯರ್‌ಗಳು ತಮ್ಮ ಕ್ಷೇತ್ರದಲ್ಲಿ ನಿರುದ್ಯೋಗಿಗಳಾಗಿ ತಮ್ಮದಲ್ಲದ, ಕಡಿಮೆ ಆದಾಯದ ಪೌರಕಾರ್ಮಿಕ ಕೆಲಸಕ್ಕೆ ಅರ್ಜಿ ಹಾಕುವಂತಹ ಸನ್ನಿವೇಶ ಹೇಗೆ ಸೃಷ್ಟಿಯಾಯಿತು? ಹಿಂದೆ ನಿರುದ್ಯೋಗ ಸಮಸ್ಯೆಗಳಿಗೆ ‘ಪಕೋಡಾ ಮಾರುವ ಸಲಹೆ’ಯನ್ನು ಮೋದಿಯವರು ನೀಡಿದ್ದರು.

ಇಂದು ಈ ದೇಶದಲ್ಲಿ ಪಕೋಡಾ ಮಾರಿದರೂ ಅದನ್ನು ಕೊಳ್ಳುವ ಶಕ್ತಿ ಜನರಲ್ಲಿಲ್ಲ. ಆದುದರಿಂದ ಪಕೋಡಾ ಮಾರುವ ಮೂಲಕವೂ ತಮ್ಮ ನಿರುದ್ಯೋಗಗಳನ್ನು ನಿವಾರಿಸಿಕೊಳ್ಳುವ ಸಾಧ್ಯತೆಗಳು ಯುವ ಜನತೆಯ ಮುಂದಿಲ್ಲ. ಆದುದರಿಂದಲೇ ಅವರು ಬೀದಿಗುಡಿಸಿಯಾದರೂ ಬದುಕು ಕಟ್ಟಿಕೊಳ್ಳೋಣ ಎಂದು ಹೊರಟಿದ್ದಾರೆ. ಕಟ್ಟಡ ಕಾಮಗಾರಿಗಳನ್ನು ನಂಬಿದ ದಿನಗೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಬರ, ನೆರೆ ಇತ್ಯಾದಿಗಳಿಂದ ಕೃಷಿಯನ್ನು ಕೈಬಿಟ್ಟು ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರ ಬದುಕುವ ಹಕ್ಕುಗಳನ್ನೇ ಕಿತ್ತುಕೊಂಡಂತಾಗಿದೆ. ಅತ್ತ ನಗರದಲ್ಲೂ ಇರಲಾಗದೆ, ಹಳ್ಳಿಗೂ ಮರಳಲಾಗದ ಸ್ಥಿತಿ ಇವರದು. ಇದರ ಬೆನ್ನಿಗೆ ಬೆಲೆಯೇರಿಕೆ ಗಾಯದ ಮೇಲೆ ಬರೆ ಎಳೆದಿದೆ. ಈರುಳ್ಳಿ ಬೆಳೆದು ಅದನ್ನು ಮಧ್ಯವರ್ತಿಗಳ ಕೈಗಿಡುವಾಗ ರೈತರಿಗೆ ಅರ್ಹ ಬೆಲೆ ದಕ್ಕಲಿಲ್ಲ. ಈಗ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿಯ ಬೆಲೆ ಕೆ.ಜಿ.ಗೆ ನೂರು ರೂಪಾಯಿ ದಾಟಿದೆ. ಸರಕಾರ ಈವರೆಗೆ ಇದಕ್ಕೆ ಪರ್ಯಾಯ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಮಧ್ಯವರ್ತಿಗಳು ಮತ್ತು ಸರಕಾರದ ಸಹಭಾಗಿತ್ವದ ಕಾರಣದಿಂದಲೇ ಈರುಳ್ಳಿ ಬೆಲೆ ಗಗನಕ್ಕೇರಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಈವರೆಗೆ ಈರುಳ್ಳಿ ಬೆಲೆಯೇರಿಕೆಯ ಕುರಿತಂತೆ ಸರಕಾರ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಪರಿಹಾರದ ಭರವಸೆಯನ್ನೂ ಕೊಟ್ಟಿಲ್ಲ. ಪೆಟ್ರೋಲ್ ಬೆಲೆಯೇರಿಕೆಯ ಬಗ್ಗೆ ಜನರು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಹಣದುಬ್ಬರ ದೇಶವನ್ನು ಇನ್ನಷ್ಟು ಹಸಿವಿನೆಡೆಗೆ ಕೊಂಡೊಯ್ಯುತ್ತಿದೆ. ಇಂದು ಈ ದೇಶದಲ್ಲಿ ಲಾಭದಾಯಕವಾಗಿರುವ ಒಂದೇ ಒಂದು ದಂಧೆಯೆಂದರೆ ರಾಜಕಾರಣಿಗಳ ಕುದುರೆ ವ್ಯಾಪಾರ. ಬಿಜೆಪಿ ವಿಶ್ವದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿ ಗುರುತಿಸಿಕೊಂಡಿದೆ. ಜನರಲ್ಲಿ ಈರುಳ್ಳಿ ಕೊಳ್ಳುವುದಕ್ಕೆ ಹಣವಿಲ್ಲದೇ ಇದ್ದರೂ, ಒಬ್ಬೊಬ್ಬ ಶಾಸಕನನ್ನು ಹಲವು ಕೋಟಿ ರೂಪಾಯಿ ಕೊಟ್ಟು ಕೊಳ್ಳುವ ಶಕ್ತಿ ಇಂದು ರಾಜಕಾರಣಿಗಳಿಗಿದೆ. ಈ ಹಣ ಅವರಿಗೆ ಎಲ್ಲಿಂದ ಬಂತು? ಈ ಪ್ರಶ್ನೆಗೆ ದೇಶವನ್ನಾಳುವವರು ಉತ್ತರಿಸಬೇಕಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರ ಹಾಡಹಗಲೇ ನಡೆಯಿತಾದರೂ, ಯಾವುದೇ ರಾಜಕಾರಣಿಗಳ ನಿವಾಸಗಳಿಗೆ ಐಟಿ, ಈಡಿ ಅಧಿಕಾರಿಗಳ ದಾಳಿ ನಡೆಯಲಿಲ್ಲ. ಇದೆಲ್ಲವೂ ಏನನ್ನು ಹೇಳುತ್ತದೆ? ನೋಟು ನಿಷೇಧದ ನಿಜವಾದ ಫಲಾನುಭವಿಗಳು ಯಾರು ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ದೇಶದಲ್ಲಿ ಅಪೌಷ್ಟಿಕತೆಯ ಪ್ರಮಾಣ ಅಧಿಕವಾಗುತ್ತಿದೆ ಎನ್ನುವುದನ್ನು ವರದಿ ಹೇಳುತ್ತಿದೆ. ಹಸಿವಿನಿಂದ ಸಾಯುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಸರಕಾರ ಯಾವ ಅಂಕಿ ಅಂಶಗಳನ್ನು ಮುಂದಿಟ್ಟಿದೆಯೋ ಅದರ ದುಪ್ಪಟ್ಟು ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಹಾನಿಯಾಗಿದೆ. ಆರೋಗ್ಯ, ಶಿಕ್ಷಣ ಮೊದಲಾದ ಆರೋಗ್ಯ ವಲಯಗಳಿಗೆ ಮೀಸಲಾಗಿರುವ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ.

ಉತ್ತರ ಪ್ರದೇಶದ ಘಟನೆ, ನಮ್ಮ ಸರಕಾರಿ ಯೋಜನೆಗಳೆಲ್ಲ ಹೇಗೆ ಹಳ್ಳ ಹಿಡಿದಿದೆ ಎನ್ನುವುದನ್ನು ಹೇಳುತ್ತದೆ. ಬಿಸಿಯೂಟದ ಸಂದರ್ಭದಲ್ಲಿ 81 ಮಕ್ಕಳಿಗೆ ಒಂದು ಲೀಟರ್ ಹಾಲನ್ನು ಒದಗಿಸಲಾಗಿತ್ತು. ಒಂದು ಲೀಟರ್ ಹಾಲಿಗೆ ಬಕೆಟ್‌ಗಟ್ಟಲೆ ನೀರು ಸುರಿದು ಅದನ್ನು ವಿದ್ಯಾರ್ಥಿಗಳಿಗೆ ಹಂಚಲಾಗಿತ್ತು. ಇದೇ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಸಾಂಬಾರಿನ ಬದಲಿಗೆ ಅರಶಿನ ನೀರು ಕೊಟ್ಟದ್ದು, ರೊಟ್ಟಿಯ ಜೊತೆಗೆ ಉಪ್ಪು ಕೊಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಡಮಕ್ಕಳ ಲೋಟದಲ್ಲಿರಬೇಕಾದ ಹಾಲು, ಅನ್ನ, ಸಾಂಬಾರು ಅಂಬಾನಿಗಳ ತಟ್ಟೆ ಸೇರಿದೆ. ಈ ದೇಶದ ದುರಂತ ಇಷ್ಟಕ್ಕೇ ಮುಗಿದಿಲ್ಲ. ವಿದ್ಯಾರ್ಥಿಗಳಿಗೆ ಹಾಲು, ಅನ್ನಕ್ಕೆ ಸಾಂಬಾರು ವಿತರಿಸಲು ಗತಿಯಿಲ್ಲ ಉತ್ತರ ಪ್ರದೇಶ ಸರಕಾರ, ಗೋಶಾಲೆಯಲ್ಲಿರುವ ಗೋವುಗಳಿಗೆ ಚಳಿಯಿಂದ ರಕ್ಷಣೆ ನೀಡಲು ಕೋಟು ವಿತರಿಸಲು ಹೊರಟಿದೆ. ದೇಶ ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ದಿವಾಳಿಯಾಗಿದೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News