ಬಾಬಾಸಾಹೇಬರ ನೆನಪಿನ ಬೆಳಕಿನಲ್ಲಿ

Update: 2019-12-09 06:52 GMT

ಬಾಬಾ ಸಾಹೇಬರು ಚಿರ ವಿಶ್ರಾಂತಿ ಪಡೆಯುತ್ತಿರುವ ಈ ಚೈತ್ಯ ಭೂಮಿಯಲ್ಲಿ ಡಿಸೆಂಬರ್ 6ಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಇದೇ ರೀತಿ ಅವರು ಬೌದ್ಧ ಧರ್ಮ ಸೇರಿದ ನಾಗಪುರದಲ್ಲಿ ವಿಜಯ ದಶಮಿಯ ದಿನ ಇದಕ್ಕಿಂತ ಹೆಚ್ಚು ಜನ ಸೇರುತ್ತಾರೆ ಎಂದು ಗೊತ್ತಿತ್ತು. ಅದನ್ನು ಕಣ್ಣಾರೆ ಕಾಣಬೇಕೆಂಬುದು ಬಹುದಿನದ ಆಸೆಯಾಗಿತ್ತು. ಈ ಬಾರಿ ಕಲಬುರಗಿಯ ಸಮಾನ ಮನಸ್ಕ ಗೆಳೆಯ ಮಾರುತಿ ಗೋಖಲೆ ಮತ್ತು ಸಹೋದರಿ ಜಯಶ್ರೀ ಗೋಖಲೆ ಅವರು ಚೈತ್ಯ ಭೂಮಿಗೆ ಹೊರಟೇ ಬಿಡೋಣ ಎಂದರು. ಹೀಗಾಗಿ ಇದನ್ನು ಕಣ್ಣಾರೆ ಕಾಣುವ ಅವಕಾಶ ದೊರಕಿತು.

ದೇಶದ ಕೋಟ್ಯಂತರ ಜನರನ್ನು ಅವರ ಮೂಲವನ್ನು ಪ್ರಶ್ನಿಸಿ ದೇಶದಿಂದ ಹೊರದಬ್ಬುವ ಇಲ್ಲವೇ ಡಿಟೆನ್ಷನ್ ಸೆಂಟರ್‌ಗೆ ನೂಕುವ ಎನ್‌ಆರ್‌ಸಿ ಕಾನೂನು ತರುವ ಮಸಲತ್ತು ನಡೆದಿರುವಾಗ, ನಾನು ಮುಂಬೈಯ ಬಾಬಾಸಾಹೇಬರ ಚೈತ್ಯ ಭೂಮಿಯಲ್ಲಿ ಇದ್ದೆ. ಈ ಸಂದರ್ಭದಲ್ಲೇ ಹೈದರಾಬಾದ್‌ನಲ್ಲಿ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ನಡೆಯಿತು. ಉನ್ನಾವೊದಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳನ್ನು ಬೆಂಕಿ ಹಚ್ಚಿ ಸುಡಲಾಯಿತು.

ಡಿಸೆಂಬರ್ 6 ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ. ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಲು ಅದೇ ದಿನ ನಿಗದಿಪಡಿಸಿದ ಸಂಗತಿ ಎಲ್ಲರಿಗೂ ಗೊತ್ತಿರುವಷ್ಟು ಹಳೆಯದು. ಆ ದಿನ ಅಂಬೇಡ್ಕರರು ವಿಶ್ರಮಿಸುತ್ತಿರುವ ಮುಂಬೈಯ ಶಿವಾಜಿ ಮೈದಾನದ ಚೈತ್ಯ ಭೂಮಿಗೆ ದೇಶದ ಮೂಲೆ ಮೂಲೆಗಳಿಂದ 20 ಲಕ್ಷಕ್ಕೂ ಹೆಚ್ಚು ಜನ ತಮಗೆ ಬಿಡುಗಡೆಯ ಬೆಳಕನ್ನು ನೀಡಿದ ಭಾಗ್ಯವಿಧಾತನಿಗೆ ಗೌರವಿಸಲು ಬಂದಿದ್ದರು.

ಹೀಗೆ ಬಂದವರಾರೂ ಅನುಕೂಲಸ್ಥರಲ್ಲ, ಅವರೆಲ್ಲ ಕಡು ಬಡವರು. ತಮ್ಮ ಬೆವರಿನಿಂದ ಈ ಭಾರತವನ್ನು ಸಂಪದ್ಭರಿತ ಮಾಡಿ ತಾವು ಬಡತನವನ್ನೇ ಉಂಡು, ಅದನ್ನೇ ಹೊದ್ದುಕೊಂಡು ಬದುಕಿದವರು. ಇವರಿಗೆಲ್ಲ ಬಾಬಾಸಾಹೇಬರ ಬಗ್ಗೆ ಅಪಾರ ಧನ್ಯತಾ ಭಾವ. ದೂರದ ಉತ್ತರ ಪ್ರದೇಶ, ಬಿಹಾರ, ಹರ್ಯಾಣ, ಪಂಜಾಬ್, ಒಡಿಶಾ ಹಾಗೂ ಪಕ್ಕದ ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ಬಂದ ಅವರು ರೈಲು ನಿಲ್ದಾಣದಲ್ಲಿ ಇಳಿದು ನೇರವಾಗಿ ಬಂದದ್ದು ಚೈತ್ಯ ಭೂಮಿಗೆ.

ಅಲ್ಲೆ ಅವರು ಜೆಂಡಾ ಊರಿದ್ದರು. ಅವರು ಲಾಡ್ಜಿಂಗ್ ಮಾಡಿ, ಅಲ್ಲಿ ನೆಲೆಸುತ್ತಾರೆಂದು ಊಹಿಸುವುದು ಕಷ್ಟ. ನಾವು ಡಿಸೆಂಬರ್ 5 ನೇ ತಾರೀಕಿನ ಸಂಜೆ ಅಲ್ಲಿ ಹೋದಾಗ, ಜನರು ಆಗಲೇ ಬರಲು ಆರಂಭಿಸಿದ್ದರು. ರಾತ್ರಿ 12 ದಾಟಿ ಬೆಳಗಿನ ಜಾವದವರೆಗೆ ಅಲ್ಲಿದ್ದೆವು. ಜನ ಬರುತ್ತಲೇ ಇದ್ದರು. ನೆಲದ ಮೇಲೆ ಊಟದ ಗಂಟು ಬಿಚ್ಚಿ, ತಂಗಳನ್ನ ಕಟ್ಟಿ ರೊಟ್ಟಿಯನ್ನು ತಿಂದು ಅದೇ ನೆಲವನ್ನೇ ಹಾಸಿಗೆ ಮಾಡಿ ಮಲಗಿದ ಈ ಜನರು ಅಂಬೇಡ್ಕರರ ಪುಸ್ತಕಗಳನ್ನು ಓದಿರಲಿಕ್ಕಿಲ್ಲ. ಆದರೆ, ಅವರು ನಿರಂತರ ಬೆಳಕು ನೀಡುವ ಆರದ ಜ್ಯೋತಿ ಎಂದು ಗೊತ್ತು.

‘ನಾನು ಹಿಂದೂವಾಗಿ ಆಕಸ್ಮಿಕವಾಗಿ ಜನಿಸಿದ್ದರೂ ಹಿಂದೂವಾಗಿ ಸಾಯುವುದಿಲ್ಲ’ ಎಂದು ಬೌದ್ಧ ಧರ್ಮ ಸೇರಿದ ಮತ್ತು ಭಾರತಕ್ಕೊಂದು ಸಂವಿಧಾನ ನೀಡಿದ ಬಾಬಾಸಾಹೇಬರ ಕನಸಿನ ಭಾರತವನ್ನು ನುಚ್ಚು ನೂರು ಮಾಡಿ ಮನುವಾದಿ ಫ್ಯಾಶಿಸ್ಟ್ ಕಂದಕಕ್ಕೆ ದೇಶವನ್ನು ತಳ್ಳಲು ಹುನ್ನಾರ ನಡೆದಿದೆ. ಈ ದಿನಗಳಲ್ಲಿ ಬಾಬಾ ಸಾಹೇಬರನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಜನ ಇಲ್ಲಿ ಬಂದಿದ್ದರು. ಅವರಲ್ಲಿ ಮೀಸಲು ಸೌಕರ್ಯ ಪಡೆದವರ ಸಂಖ್ಯೆ ಕಡಿಮೆಯಿತ್ತು.

ಹೀಗೆ ಬಂದ ಉತ್ತರ ಪ್ರದೇಶದ ಎಂಬತ್ತರ ದಂಪತಿಯನ್ನು ಮಾತಾಡಿಸಿದಾಗ, ‘ನಾವು ನಮ್ಮ ಹಳ್ಳಿಯಿಂದ ಹೊರಟು ಎರಡು ರಾತ್ರಿ ಒಂದು ಹಗಲು ರೈಲಿನ ಜನರಲ್ ಬೋಗಿಯಲ್ಲಿ ಕುಳಿತು ಬಂದುದಾಗಿ ತಿಳಿಸಿದರು. ಹರಿದ ಅಂಗಿ, ಹಸಿದ ಹೊಟ್ಟೆ, ನಿದ್ದೆಗೆಟ್ಟ ಕಣ್ಣು ಗಳು ಮೈದಾನದ ತುಂಬ ಇಂಥ ಲಕ್ಷ, ಲಕ್ಷ ಜನರಿದ್ದರು. ಅವರು ಅಲ್ಲೇ ಕುಳಿತು, ಮಲಗಿ, ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಆಲಿಸುತ್ತಿದ್ದರು. ಹೋರಾಟದ ಹಾಡುಗಳನ್ನು ಕೇಳುತ್ತಿದ್ದರು.

ಬಾಬಾ ಸಾಹೇಬರು ಚಿರ ವಿಶ್ರಾಂತಿ ಪಡೆಯುತ್ತಿರುವ ಈ ಚೈತ್ಯ ಭೂಮಿಯಲ್ಲಿ ಡಿಸೆಂಬರ್ 6ಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಇದೇ ರೀತಿ ಅವರು ಬೌದ್ಧ ಧರ್ಮ ಸೇರಿದ ನಾಗಪುರದಲ್ಲಿ ವಿಜಯ ದಶಮಿಯ ದಿನ ಇದಕ್ಕಿಂತ ಹೆಚ್ಚು ಜನ ಸೇರುತ್ತಾರೆ ಎಂದು ಗೊತ್ತಿತ್ತು. ಅದನ್ನು ಕಣ್ಣಾರೆ ಕಾಣಬೇಕೆಂಬುದು ಬಹುದಿನದ ಆಸೆಯಾಗಿತ್ತು. ಈ ಬಾರಿ ಕಲಬುರಗಿಯ ಸಮಾನ ಮನಸ್ಕ ಗೆಳೆಯ ಮಾರುತಿ ಗೋಖಲೆ ಮತ್ತು ಸಹೋದರಿ ಜಯಶ್ರೀ ಗೋಖಲೆ ಅವರು ಚೈತ್ಯ ಭೂಮಿಗೆ ಹೊರಟೇ ಬಿಡೋಣ ಎಂದರು. ಹೀಗಾಗಿ ಇದನ್ನು ಕಣ್ಣಾರೆ ಕಾಣುವ ಅವಕಾಶ ದೊರಕಿತು.

ಅಂಬೇಡ್ಕರ್, ಕನಸಿನ ಸಮಾನತೆಯ ಜಾತಿ ರಹಿತ ಭಾರತವನ್ನು ನಾಶ ಮಾಡಲು ಬಂದಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ಬಗ್ಗೆ ಈ ಜನಸಾಗರದಲ್ಲಿ ಅಸಮಾಧಾನ ಒಳಗೊಳಗೆ ಕುದಿಯುತ್ತಿರುವುದು ಗೋಚರಿಸಿತು. ಆದರೆ, ಈ ನೊಂದ ಜನರಿಗೆ ಪರ್ಯಾಯ ಗೋಚರಿಸುತ್ತಿಲ್ಲ. ತುಂಬ ನಂಬಿಕೊಂಡಿದ್ದ ಬಿಎಸ್ಪಿ ಬಗ್ಗೆ ಕಾನ್ಶೀರಾಮ್‌ಜಿ ಅಗಲಿಕೆ ನಂತರ ಇವರಿಗೆ ಭ್ರಮ ನಿರಸನ ಉಂಟಾಗಿದೆ. ಉತ್ತರ ಪ್ರದೇಶದಿಂದ ಬಂದ ಅನೇಕ ಬಿಎಸ್ಪಿಬೆಂಬಲಿಗರನ್ನು ಮಾತಾಡಿಸಿದಾಗ ಅವರಲ್ಲಿನ ಬೇಸರ ಕಂಡು ಬಂತು.

ಕಾನ್ಶೀರಾಮ್ ಕಾಲದಲ್ಲಿ ಬಿಎಸ್ಪಿಗೆ ಬೆಂಬಲವಾಗಿ ನಿಂತಿದ್ದ ಅತಿ ಹಿಂದುಳಿದ ವರ್ಗಗಳ ಜನ ಅದರಿಂದ ದೂರವಾಗಿದ್ದಾರೆ. ಮಾಯಾವತಿಯವರು ಭಾಯಿಚಾರ ಹೆಸರಿನಲ್ಲಿ ಅತಿ ಹಿಂದುಳಿದ ವರ್ಗಗಳ ಕೋಟಾ ಕಟ್ ಮಾಡಿ ಅದರಲ್ಲಿ ಬ್ರಾಹ್ಮಣರಿಗೆ ಅವಕಾಶ ಮಾಡಿಕೊಟ್ಟು ಟಿಕೆಟ್ ನೀಡಿ ಶಾಸಕ, ಮಂತ್ರಿಗಳನ್ನಾಗಿ ಮಾಡಿದ ನಂತರ ಬಿಎಸ್ಪಿಯ ಹಿಂದಿನ ಬೆಂಬಲಿಗರು ಅದರಿಂದ ದೂರವಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ ಜೊತೆ ಮಾಡಿಕೊಂಡ ಮೈತ್ರಿಯ ಬಗ್ಗೆ ಅಂಥ ವಿರೋಧ ಕಂಡು ಬರುತ್ತಿಲ್ಲ. ಹಿಂದಿನ ಬಿಜೆಪಿ ಸರಕಾರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದಲಿತ ಪರ ಹೋರಾಟಗಾರರ ಮೇಲೆ ಕೇಸು ಹಾಕಿ ಜೈಲಿಗಟ್ಟಿದ ಬಗ್ಗೆ ಅನೇಕರಿಗೆ ಅಸಮಾಧಾನವಿದೆ.

ಮುಂಬೈ ಈ ದೇಶದ ವಾಣಿಜ್ಯ ನಗರಿ. ಒಂದು ಕಾಲದಲ್ಲಿ ಕಾರ್ಮಿಕ ಹೋರಾಟದ ರಣಭೂಮಿಯಾಗಿತ್ತು. ಎಪ್ಪತ್ತರ ದಶಕದಲ್ಲಿ ದಲಿತ ಪ್ಯಾಂಥರ್ಸ್ ಸಂಘಟನೆ ಹೆಸರು ಮಾಡಿತ್ತು. ಈಗ ವಾತಾವರಣ ಬದಲಾಗಿದೆ. ಸಂಘಟನೆಗಳಿಗೆ ಸುಸ್ತಾಗಿದೆ. ಆದರೆ, ಬಾಬಾಸಾಹೇಬರ ಜ್ಯೋತಿ ಇನ್ನೂ ಬೆಳಕು ನೀಡುತ್ತಲೇ ಇದೆ. ಈ ಬೆಳಕಿನಲ್ಲಿ ಹೊಸ ಪೀಳಿಗೆ ಮುನ್ನಡೆಯಬೇಕಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News