ಪ್ರತಿಭಟನಾನಿರತ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಪ್ರಹಾರ
Update: 2019-12-09 15:00 GMT
ಹೊಸದಿಲ್ಲಿ, ಡಿ.9: ಹಾಸ್ಟೆಲ್ ಶುಲ್ಕಗಳನ್ನು ಹೆಚ್ಚಿಸಿರುವುದರ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಸೋಮವಾರ ವಿವಿ ಕ್ಯಾಂಪಸ್ನಿಂದ ರಾಷ್ಟ್ರಪತಿ ಭವನಕ್ಕೆ ಜಾಥಾದಲ್ಲಿ ತೆರಳುತ್ತಿದ್ದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯು ಇಲ್ಲಿಯ ಸರೋಜಿನಿ ನಗರ ಪ್ರದೇಶದಲ್ಲಿ ಸಂಭವಿಸಿದೆ.
ಭಿಕಾಜಿ ಕಾಮಾ ಪ್ಲೇಸ್ ಮೆಟ್ರೋ ಸ್ಟೇಷನ್ ಬಳಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ದಾಟಲು ವಿದ್ಯಾರ್ಥಿಗಳು ಪ್ರಯತ್ನಿಸಿದಾಗ ಅವರ ವಿರುದ್ಧ ಲಾಠಿ ಪ್ರಹಾರ ನಡೆದಿದೆ.
ವಿದ್ಯಾರ್ಥಿಗಳು ಕಳೆದ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ,ಹಾಸ್ಟೆಲ್ ಶುಲ್ಕದಲ್ಲಿ ಸುಮಾರು ಶೇ.300ರಷ್ಟು ಏರಿಕೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕೆಂಬ ಅವರ ಬೇಡಿಕೆಯನ್ನು ಜೆಎನ್ಯು ಆಡಳಿತ ಮಂಡಳಿಯು ತಿರಸ್ಕರಿಸಿದೆ. ಕಳೆದ ತಿಂಗಳು ಶುಲ್ಕ ಏರಿಕೆಯನ್ನು ಭಾಗಶಃ ಹಿಂದೆಗೆದುಕೊಳ್ಳುವ ವಿವಿಯ ಪ್ರಸ್ತಾವವನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದರು.