ಉನ್ನಾವೊ ಅತ್ಯಾಚಾರ ಪ್ರಕರಣ: ಇಂದು ತೀರ್ಪು ಸಾಧ್ಯತೆ

Update: 2019-12-15 17:28 GMT

ಹೊಸದಿಲ್ಲಿ, ಡಿ.15: ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಆರೋಪಿಯಾಗಿರುವ 2017ರಲ್ಲಿ ಮಹಿಳೆಯೊಬ್ಬರ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಕುರಿತ ತೀರ್ಪನ್ನು ದಿಲ್ಲಿಯ ನ್ಯಾಯಾಲಯವು ಸೋಮವಾರ ಪ್ರಕಟಿಸುವ ಸಾಧ್ಯತೆಯಿದೆ.

ಸಾರ್ವಜನಿಕರು ಹಾಗೂ ಮಾಧ್ಯಮಗಳ ಅನುಪಸ್ಥಿತಿಯಲ್ಲಿ ಸಿಬಿಐ ಹಾಗೂ ಆರೋಪಿ ಪರ ವಕೀಲರುಗಳ ಅಂತಿಮ ವಾದಗಳನ್ನು ಆಲಿಸಿದ ಬಳಿಕ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಸೋಮವಾರ ತಾನು ತೀರ್ಪು ಪ್ರಕಟಿಸುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಉನ್ನಾವೊ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಲಕ್ನೋದ ನ್ಯಾಯಾಲಯದಿಂದ ದಿಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆನಂತರ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 5ರಿಂದ ದಿನಂಪ್ರತಿ ನಡೆಸಿದ್ದರು.

ಯುವತಿಯು 2017ರಲ್ಲಿ ಅಪ್ರಾಪ್ತ ವಯಸ್ಕಳಾಗಿದ್ದಾಗ ಆಕೆಯನ್ನು ಸೆಂಗಾರ್, ಅಪಹರಿಸಿ ಅತ್ಯಾಚಾರವೆಸಗಿದ್ದಾನೆಂದು ಆಪಾದಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ಶಶಿಸಿಂಗ್ ವಿರುದ್ಧವೂ ನ್ಯಾಯಾಲಯವು ದೋಷಾರೋಪ ಹೊರಿಸಿತ್ತು.

ಉತ್ತರಪ್ರದೇಶದ ಬಂಗೆಮಾವು ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿದ್ದ ಸೆಂಗಾರ್‌ನನ್ನು 2019ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ನ್ಯಾಯಾಲಯವು ಆಗಸ್ಟ್ 9ರಂದು ಸೆಂಗಾರ್ ಹಾಗೂ ಶಶಿ ಸಿಂಗ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 120 ಬಿ ( ಕ್ರಿಮಿನಲ್ ಸಂಚು), 363 (ಅಪಹರಣ), 366 ( ಅಪಹರಣ ಅಥವಾ ವಿವಾಹಕ್ಕೆ ಮಹಿಳೆಯನ್ನು ಬಲವಂತಪಡಿಸಿದ್ದುದು), 376 (ಅತ್ಯಾಚಾರ) ಹಾಗೂ ಪೋಸ್ಕೊ ಕಾಯ್ದೆಯ ಇತರ ಕೆಲವು ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಿತ್ತು.

ಈ ವರ್ಷದ ಜುಲೈ 28ರಂದು ಯುವತಿಯು ಪ್ರಯಾಣಿಸುತ್ತಿದ್ದ ಕಾರಿಗೆ, ಟ್ರಕ್ಕೊಂದು ಡಿಕ್ಕಿ ಹೊಡೆದು ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಈ ಅವಘಡದಲ್ಲಿ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಈ ಘಟನೆಯ ಹಿಂದೆ ಸೆಂಗಾರ್‌ನ ಕೈವಾಡವಿದೆಯೆಂದು ಯುವತಿಯ ಕುಟುಂಬ ಆಪಾದಿಇಸಿದೆ.

2018ರ ಎಪ್ರಿಲ್ 3ರಂದು ಮಹಿಳೆಯ ತಂದೆಯನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧಿಸಲಾಗಿತ್ತು. ಕೆಲವು ದಿನಗಳ ನಂತರ , ಜುಲೈ 9ರಂದು ಆತ ನ್ಯಾಯಾಂಗ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಶಾಸಕ, ಆತನ ಸಹೋದರ ಅತುಲ್ ಹಾಗೂ ಇತರ 9 ಮಂದಿಯ ವಿರುದ್ಧ ಕೊಲೆ ಹಾಗೂ ಇತರ ಆರೋಪಗಳನ್ನು ಹೊರಿಸಿತ್ತು.

 ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ 13 ಮಂದಿ ಪ್ರಾಸಿಕ್ಯೂಶನ್ ಸಾಕ್ಷಿಗಳು ಹಾಗೂ 9 ಮಂದಿ ಕಕ್ಷಿದಾರರ ಪರ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿತ್ತು. ಅತ್ಯಾಚಾರ ಸಂತ್ರಸ್ತೆಯ ತಾಯಿ ಹಾಗೂ ಚಿಕ್ಕಪ್ಪ ಪ್ರಕರಣದ ಮುಖ್ಯ ಸಾಕ್ಷಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News