ಮಸೀದಿಯಲ್ಲಿ ಹಸೆಮಣೆಯೇರಿದ ಹಿಂದೂ ಜೋಡಿ: ವಿವಾಹಕ್ಕೆ ಸಾಕ್ಷಿಯಾದ ಹಿಂದೂ-ಮುಸ್ಲಿಮರು
ಕೊಚ್ಚಿ: ದೇಶದ ಹಲವೆಡೆ ಸೌಹಾರ್ದ ವಾತಾವರಣ ಹದಗೆಡುತ್ತಿರುವ ನಡುವೆಯೇ ಕೇರಳದ ಮುಸ್ಲಿಮ್ ಜಮಾಅತ್ ಒಂದು ಹಿಂದೂ ಜೋಡಿಯ ವಿವಾಹಕ್ಕೆ ಮಸೀದಿಯಲ್ಲಿ ಸ್ಥಳಾವಕಾಶ ನೀಡಿ, ಸಹಾಯ ಮಾಡುವ ಮೂಲಕ ಸಾಮರಸ್ಯಕ್ಕೆ ಮಾದರಿಯಾಗಿದೆ.
ರವಿವಾರ ಆಲಪ್ಪುಳ ಜಿಲ್ಲೆಯ ಕಾಯಂಕುಳಂನ ಚೆರುವಳ್ಳಿ ಜಮಾಅತ್ ಮಸೀದಿಯಲ್ಲಿ ಈ ದಂಪತಿ ಹಸೆಮಣೆಯೇರಿದರು. ಹಿಂದೂ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ಹಿಂದೂ ಮತ್ತು ಮುಸ್ಲಿಮರು ಭಾಗಿಯಾದರು.
ಮಸೀದಿ ಆವರಣದಲ್ಲಿ ಪುರೋಹಿತರ ನೇತೃತ್ವದಲ್ಲಿ ನಡೆದ ವಿವಾಹದಲ್ಲಿ ಅಂಜು ಮತ್ತು ಶರತ್ ಹಸೆಮಣೆ ಏರಿದರು. ಸುಮಾರು 1000 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು.
ಮದುವೆಯ ಫೋಟೊವನ್ನು ಪೋಸ್ಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ನವದಂಪತಿಗೆ ಶುಭ ಹಾರೈಸಿದರು.
ಬಡತನದ ಹಿನ್ನೆಲೆಯಲ್ಲಿ ಅಂಜು ಅವರ ತಾಯಿ ಮಸೀದಿ ಕಮಿಟಿಯ ನೆರವು ಕೋರಿದ್ದರು. ಕೂಡಲೇ ಅದಕ್ಕೊಪ್ಪಿದ ಮಸೀದಿ ಕಮಿಟಿ ನೆರವು ನೀಡಿದೆ. ಇಷ್ಟೇ ಅಲ್ಲದೆ ಜಮಾಅತ್ ಸಮಿತಿಯು ವಧು ಅಂಜುಗೆ 10 ಪವನ್ ಚಿನ್ನ ಮತ್ತು 2 ಲಕ್ಷ ರೂ. ನೀಡಿದೆ.