ಸಿಎಎ ವಿರುದ್ಧ ಪ್ರತಿಭಟನೆ : ಹೈಕೋರ್ಟ್ ಮುಂದೆ ಸಂವಿಧಾನದ ಪೀಠಿಕೆಯನ್ನು ಓದಿದ ವಕೀಲರು
Update: 2020-01-20 16:41 GMT
ಮುಂಬೈ,ಜ.20: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆಯ ಅಂಗವಾಗಿ ವಕೀಲರ ಗುಂಪೊಂದು ಸೋಮವಾರ ಬಾಂಬೆ ಉಚ್ಚ ನ್ಯಾಯಾಲಯದ ಪ್ರವೇಶದ್ವಾರದ ಹೊರಗೆ ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದಿದರು.
ನಮರೋಜ್ ಸೀರ್ವೈ,ಗಾಯತ್ರಿ ಸಿಂಗ್ ಮತ್ತು ಮಿಹಿರ ದೇಸಾಯಿ ಸೇರಿದಂತೆ 50ಕ್ಕೂ ಅಧಿಕ ವಕೀಲರು ಏಕಕಾಲದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿದರಲ್ಲದೆ,ಧರ್ಮದ ಆಧಾರದಲ್ಲಿ ದೇಶವನ್ನು ಮತ್ತು ಅದರ ಪ್ರಜೆಗಳನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಆರು ಧಾರ್ಮಿಕ ಸಮುದಾಯಗಳಿಗೆ ಸೇರಿದ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಒದಗಿಸಲು ಸಿಎಎ ಉದ್ದೇಶಿಸಿದೆ,ಆದರೆ ಮುಸ್ಲಿಮ್ ಸಮುದಾಯವನ್ನು ಹೊರಗಿಟ್ಟಿದೆ ಮತ್ತು ಇದು ಸಾಂವಿಧಾನಿಕವಾಗಿ ತಪ್ಪಾಗಿದೆ ಎಂದು ವಕೀಲರು ಹೇಳಿದರು.