ಹೇ ರಾಮ್

Update: 2020-01-29 18:29 GMT

1947 ಸೆಪ್ಟಂಬರ್ ಎರಡನೇ ವಾರ ಗಾಂಧಿ ಕೋಲ್ಕತಾದಿಂದ ದಿಲ್ಲಿಗೆ ಬಂದರು. ಆ ಕಾಲಕ್ಕೆ ದಿಲ್ಲಿ, ಒಂದು ಕಡೆ ದೇಶ ಬಿಟ್ಟು ಬಂದ ಅಸಂಖ್ಯಾತ ನಿರಾಶ್ರಿತರ ಸಂದಣಿಯಿಂದ ಹಾಗೂ ಇನ್ನೊಂದು ಕಡೆ ಮತೀಯ ಗಲಭೆಗಳಿಂದ, ಸಂಕಟ ಹಿಂಸೆಗಳಿಂದ ದಾರುಣ ಕುರುಕ್ಷೇತ್ರವಾಗಿತ್ತು. ಗಾಂಧಿ ಅಲ್ಲಿ ತನ್ನ ಕೆಲಸವನ್ನು ತೊಡಗಿದರು. ನೌಖಾಲಿ-ಬಿಹಾರ-ಕೋಲ್ಕತಗಳಲ್ಲಿನಂತೆಯೇ ಇಲ್ಲೂ ಅಹಿಂಸೆಯ ಪ್ರಭಾವದಿಂದ ಶಾಂತಿ ಭರವಸೆಗಳನ್ನು ಸ್ಥಾಪಿಸಲು ತನ್ನನ್ನು ಸವೆಸಿದರು.

ದಿಲ್ಲಿಯಲ್ಲಿ ಸ್ಥಾಪಿತವಾಗಿದ್ದ ನೆಹರೂ ಸರಕಾರವು ಗಾಂಧಿಯ ಮಾತುಗಳಿಗೆಲ್ಲ ಮನ್ನಣೆ ಕೊಡುವ ಸ್ಥಿತಿಯಲ್ಲಿರಲಿಲ್ಲ. ‘‘ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ನಾನೀಗ ಹಿಂದಿನ ಬೆಂಚಿನವನಾಗಿದ್ದೇನೆ’’ ಅಂತ ಅವರೇ ಹೇಳಿಕೊಂಡರು. ಆದರೆ ಮೇಲಿಂದ ಮೇಲೆ ಬರುತ್ತಿದ್ದ ಕಷ್ಟದ ಸಮಸ್ಯೆಗಳ ಪರಿಹಾರಕ್ಕೆ ಅವರೆಲ್ಲರೂ ಗಾಂಧಿಯ ಸಲಹೆ ಕೇಳಿ ಬರುತ್ತಿರುವುದು ನಿಂತಿರಲಿಲ್ಲ. ಅಂತಹ ಸಮಸ್ಯೆಗಳ ಬಗ್ಗೆ ಮತ್ತು ಅದಾಗಲೇ ನೆಹರೂ ಪಟೇಲ್ ಮಧ್ಯೆ ಬೆಳೆಯುತ್ತಿದ್ದ ತೀವ್ರ ಭಿನ್ನಾಭಿಪ್ರಾಯಗಳ ಬಗ್ಗೆ ಕೂಡ ಗಾಂಧಿ ಗಮನ ಹರಿಸಬೇಕಾಗಿತ್ತು.

1948 ಜನವರಿ 13ರಂದು ದಿಲ್ಲಿಯಲ್ಲಿ ಮತೀಯ ಹಿಂಸಾಚಾರ ನಿಲ್ಲದಿರುವ ಕಾರಣ ಮತ್ತು ಭಾರತ ಸರಕಾರವು ಪಾಕಿಸ್ತಾನಕ್ಕೆ ಕೊಡಬೇಕಿದ್ದ ಪಾಲು ಹಣವನ್ನು ತಡೆಹಿಡಿದಿದ್ದ ಕಾರಣ ಗಾಂಧಿ ಅನಿರ್ದಿಷ್ಟ ಉಪವಾಸವನ್ನು ಆರಂಭಿಸಿದರು. ಆನಂತರ ದಿಲ್ಲಿಯ ಅನೇಕಾನೇಕ ಮುಖಂಡರು ನಾಗರಿಕರು ಮತ್ತು ಸರಕಾರ ಕೊಟ್ಟ ಆಶ್ವಾಸನೆಯನ್ನು ಒಪ್ಪಿ ದಿನಾಂಕ 18ರಂದು ಉಪವಾಸವನ್ನು ನಿಲ್ಲಿಸಿದರು. 20ರಂದು ಅವರ ಪ್ರಾರ್ಥನಾ ಸಭೆಯಲ್ಲಿ ಒಂದು ಬಾಂಬ್ ಸ್ಫೋಟವಾಯಿತು. ಅದು ತನ್ನ ಮೇಲೆ ಎಸೆದ ಬಾಂಬ್ ಎಂದು ತಕ್ಷಣ ಅವರಿಗೆ ತಿಳಿಯಲಿಲ್ಲ. ಆಮೇಲೆ, ಅದು ಗೊತ್ತಾಗಿ ಮದನ್ ಲಾಲ್ ಪಹವಾ ಎಂಬ ನಿರಾಶ್ರಿತನನ್ನು ಬಂಧಿಸಿದ್ದಾರೆಂದು ತಿಳಿದಾಗ ಗಾಂಧಿ ಹೀಗೆಂದರು: ‘‘ಅದು ನನ್ನ ಮೇಲೆ ಎಸೆದು ಬಾಂಬ್ ಎನ್ನುವುದು ಆ ಕ್ಷಣದಲ್ಲಿ ನನಗೆ ತಿಳಿದಿದ್ದರೆ ನಾನು ಏನು ಮಾಡುತ್ತಿದ್ದೇನೋ ಯಾರಿಗೆ ಗೊತ್ತು? ಬಾಂಬ್ ಎಸೆದವರ ಬಗ್ಗೆ ಯಾವುದೇ ದ್ವೇಷದ ಕಹಿಯಿಲ್ಲದೆ ಅವನನ್ನು ಕ್ಷಮಿಸಿ, ನಗುಮುಖದಿಂದ ಸಾವನ್ನು ಎದುರಿಸುತ್ತಿದ್ದೆನೇ?’’

ಮುಂದಿನ ದಿನಗಳಲ್ಲಿ ಗಾಂಧಿ ಕಾಂಗ್ರೆಸನ್ನು ಅಧಿಕಾರ ರಾಜಕಾರಣದ ಹೊರಗೆ ಕೇವಲ ಸಾರ್ವಜನಿಕ ಸೇವಾ ಸಂಸ್ಥೆಯಾಗಿ ಪುನರ್ ರಚಿಸುವ ಬಗ್ಗೆ ಯೋಚಿಸತೊಡಗಿದ್ದರು. ಉಪವಾಸದಿಂದ ಬಳಲಿಕೆಯ ನಡುವೆಯೂ ಅವರು ಕಾಂಗ್ರೆಸ್‌ನ ಹೊಸ ‘ಸಂಘಟನಾ ವಿಧಿ’ಗಳ ಕರಡನ್ನು ತಯಾರಿಸಿದರು. 29ರ ರಾತ್ರಿ ಮಲಗಲು ಹೊರಟಾಗ ಅವರು ತುಂಬಾ ದಣಿದಿದ್ದರು. ಮಲಗುವ ಮೊದಲು ಅವರು ಉರ್ದು ದ್ವಿಪದಿಯೊಂದನ್ನು ಹಾಡಿಕೊಂಡರು. ಅದರ ಸ್ಥೂಲ ಅರ್ಥ: ‘‘ಲೋಕದ ಹೂದೋಟದಲ್ಲಿ ಕ್ಷಣಿಕ ಜೈತ್ರಯಾತ್ರೆ, ಕ್ಷಣಿಕವಾದರೂ ಸವಿಯ ಬೇಕಾದನ್ನು ತುಂಬಿ ಜೀವಪಾತ್ರೆ’

ಅದೇ ದಿನ ಅವರು ಸ್ವಗ್ರಾಮದ ಕಿಶೋರಿಲಾಲಾ ಮಶ್ರುವಾಲಾ ಅವರಿಗೆ ಒಂದು ಪತ್ರ ಬರೆದು ತಾನು ಫೆಬ್ರವರಿ 3ರ ಹೊತ್ತಿಗೆ ಸೇವಾಗ್ರಾಮಕ್ಕೆ ಬಂದು 8-10 ದಿನ ಇರಲು ಯೋಜಿಸಿರುವುದಾಗಿಯೂ ಆದರೆ ಆ ಪ್ರವಾಸವು ನಿಶ್ಚಿತವಾಗಿಲ್ಲವೆಂದೂ ತಿಳಿಸಿದರು. ಅದು ಆ ದಿನ ಪೋಸ್ಟ್ ಆಗದೆ ಉಳಿಯಿತು. ಗಾಂಧಿಯ ಕಾರ್ಯಕ್ರಮವು ಸಂಜೆಗೆ ನಿಶ್ಚಿತವಾಗುತ್ತದೆ ಎಂದು ತಿಳಿದ ಮನುಗಾಂಧಿ, ಆ ಬಗ್ಗೆ ಒಂದು ಸಾಲು ಸೇರಿಸಿ ಅದನ್ನು ಮರುದಿನ ಅಂಚೆಗೆ ಕಳಿಸಿದರಾಯಿತು ಎಂದುಕೊಂಡರು. ಮಾರನೇ ದಿನ ಈ ಸಂಗತಿ ತಿಳಿದಾಗ ಗಾಂಧಿ ಮನುವಿಗೆ ಹೀಗೆಂದರು: ‘‘ಈ ಪತ್ರವನ್ನು ಹಾಗೆ ಅಂಚೆಗೆ ಹಾಕದೆ ಇಡಬಾರದಿತ್ತು... ನಾಳೆಯನ್ನು ಯಾರು ಕಂಡಿದ್ದಾರೆ? ಪತ್ರವನ್ನು ಅಂಚೆಗೆ ಕಳಿಸುವುದು ಬಿಷನ್‌ನ ಜವಾಬ್ದಾರಿಯಾಗಿತ್ತು, ನಿಜ. ಆದರೆ ಅಲ್ಲಿಗೂ ನನ್ನ ಎಲ್ಲ ಕೆಲಸಗಳ ಬಗ್ಗೆ ನನಗಿರುವ ಜವಾಬ್ದಾರಿ ತಪ್ಪಿಹೋಗುವುದಿಲ್ಲ. ನಾನು ಅದನ್ನು ನಿನ್ನ ಲೋಪವೆಂದೇ ಪರಿಗಣಿಸುತ್ತೇನೆ’’.

ಜನವರಿ 30ರಂದು ಗಾಂಧಿ ಎಂದಿನಂತೆ ಬೆಳಗಿನ ಜಾವ ಮೂರೂವರೆ ಗಂಟೆಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಪ್ರಾರ್ಥನೆ ನಡೆಸಿದರು. ಆಮೇಲೆ ರೂಢಿಯ ಪ್ರಕಾರ ಪತ್ರಗಳಿಗೆ ಉತ್ತರ ಬರೆಸಿದರು. ಆನಂತರ ಪ್ಯಾರೇಲಾಲ್‌ಗೆ ತಾನು ಹಿಂದಿನ ರಾತ್ರಿ ಆತುರದಲ್ಲಿ ಬರೆದಿದ್ದ ಕಾಂಗ್ರೆಸ್ ಸಂಘಟನೆಯ ಕರಡನ್ನು ಕೊಟ್ಟು ಅದರಲ್ಲಿರುವ ಲೋಪಗಳನ್ನು ತಿದ್ದಿ ತರಲು ಹೇಳಿದರು. ಸ್ವಲ್ಪಹೊತ್ತಾದ ಮೇಲೆ ಪ್ಯಾರೇಲಾಲ್ ಕರಡನ್ನು ನೋಡಿ ತಂದಾಗ, ಆ ಸಮಯಕ್ಕೆ ಮದ್ರಾಸ್ ಸರಕಾರವು ಎದುರಿಸುತ್ತಿದ್ದ ಆಹಾರ ಕೊರತೆಯನ್ನು ಪರಿಹರಿಸುವ ಬಗ್ಗೆ ಸೂಚನೆಗಳನ್ನು ನೀಡಿ ಅದನ್ನು ಟಿಪ್ಪಣಿ ಮಾಡುವಂತೆ ತಿಳಿಸಿದರು.

 ಆವತ್ತು ಸ್ನಾನ ಮುಗಿಸಿ ಬಂದಾಗ ಅವರ ದಣಿವು ಕಳೆದು ಉತ್ಸಾಹ ತುಂಬಿರುವಂತೆ ಕಂಡಿತು. ಆಮೇಲೆ ನೌಖಾಲಿ ಪ್ರವಾಸದಲ್ಲಿ ರೂಢಿ ಮಾಡಿಕೊಂಡಿದ್ದ ಬಂಗಾಳಿ ಕಲಿಕೆಯಲ್ಲಿ ಉದ್ಯುಕ್ತರಾದರು. ಅದಾದ ಮೇಲೆ ಪುನಃ ಪ್ಯಾರೇಲಾಲ್ ತಿದ್ದಿದ್ದ ಕರಡಿನಲ್ಲಿ ತಾವು ಬರೆದ ಸಂಖ್ಯೆಗಳು ತಪ್ಪಾಗಿದ್ದುವೆಂಬುದನ್ನು ನೆನೆಸಿಕೊಂಡು ಅದನ್ನು ತಿದ್ದಿದ್ದರು.

ಮಧ್ಯಾಹ್ನದ ಕಿರು ನಿದ್ದೆಯಾದ ಮೇಲೆ ಅವರು ಸಂದರ್ಶಕರನ್ನು ಭೇಟಿ ಮಾಡಿದರು. ಸಿಂಧಿ ಪ್ರತಿನಿಧಿಗಳ ತಂಡವನ್ನು ಕುರಿತು ಹೀಗೆಂದರು: ‘‘ಒಬ್ಬ ನಿರಾಶ್ರಿತನು ನನಗೆ ಹಿಮಾಲಯಕ್ಕೆ ಹೋಗಲು ಹೇಳಿದ. ನಿಜ, ಅದು ಅತ್ಯುತ್ತಮವಾದ ಸೂಚನೆಯೇ. ಹಾಗೆ ಮಾಡಿದರೆ ನಾನು ಈಗಿರುವುದಕ್ಕಿಂತ ಇಮ್ಮಡಿ ಮಹಾತ್ಮನಾಗಿ ಜನರನ್ನು ಆಕರ್ಷಿಸಬಹುದು. ಆದರೆ ಈಗಿನ ಕತ್ತಲು, ಹಿಂಸೆ, ನೋವುಗಳ ನಡುವಿನಲ್ಲಿ ಇಲ್ಲೇ ಇದ್ದು ನನ್ನ ಸುಖ ಶಕ್ತಿಗಳನ್ನು ಪಡೆದುಕೊಳ್ಳಬೇಕು; ಅದು ನನ್ನ ಸಂಕಲ್ಪ’’

ಮಧ್ಯಾಹ್ನದ ಮೇಲೆ ನಾಲ್ಕು ಗಂಟೆಗೆ ಸರ್ದಾರ್ ವಲ್ಲಭಭಾಯ್ ಪಟೇಲರು ಮಗಳು ಮಣಿಬೆಹನ್ ಜೊತೆಯಲ್ಲಿ ಬಂದು ಗಾಂಧಿಯನ್ನು ಭೇಟಿ ಮಾಡಿದರು. ಗಾಂಧಿ ಚರಕದಲ್ಲಿ ನೂಲುತ್ತಲೇ ಸಂಭಾಷಣೆ ನಡೆಸಿದರು. ಸರ್ದಾರ್ ಮತ್ತು ಪಂಡಿತ ನೆಹರೂ ಈ ಇಬ್ಬರಲ್ಲಿ ಯಾರಾದರೊಬ್ಬರು ಮಂತ್ರಿಮಂಡಲದಿಂದ ಹೊರ ಬರಬೇಕೆಂದು ತಾನು ಸೂಚಿಸಿದ್ದನ್ನು ನೆನೆಸಿ, ಈಗ ತನ್ನ ಅಭಿಪ್ರಾಯ ಬದಲಾಗಿದೆಯೆಂದೂ, ಸದ್ಯದ ಸಂದರ್ಭದಲ್ಲಿ ಇಬ್ಬರೂ ಕೂಡಿ ಮುಂದುವರಿಯಬೇಕಾದ್ದು ಅನಿವಾರ್ಯವೆಂದು ಹೇಳಿದರು. ಆವತ್ತಿನ ಪ್ರಾರ್ಥನಾ ಸಭೆಯಲ್ಲಿ ತಾನು ಈ ಬಗ್ಗೆ ಮಾತನಾಡುವುದಾಗಿಯೂ ಹೇಳಿದರು. ಅಗತ್ಯಬಿದ್ದರೆ ತಾನು ಸೇವಾಗ್ರಾಮಕ್ಕೆ ಹೋಗುವುದನ್ನು ಮುಂದೆ ಹಾಕುವುದಾಗಿ ಮತ್ತು ಅವರಿಬ್ಬರಲ್ಲಿನ ಭಿನ್ನಾಭಿಪ್ರಾಯವನ್ನು ಅಂತಿಮವಾಗಿ ಪರಿಹರಿಸುವ ತನಕ ತಾನು ದಿಲ್ಲಿಯನ್ನು ಬಿಡುವುದಿಲ್ಲವೆಂದು ಕೂಡ ತಿಳಿಸಿದರು.

 ಸರ್ದಾರರ ಜೊತೆ ಮಾತು ನಡೆದಿರುವಾಗಲೇ 4:30 ಗಂಟೆಗೆ ಗಾಂಧಿಗೆ ಅಭಾ ಸಂಜೆಯ ಆಹಾರವನ್ನು ತಂದು ಕೊಟ್ಟರು. ಅದಾಗಲೇ ಪ್ರಾರ್ಥನೆಯ ವೇಳೆ ಸಮೀಪಿಸುತ್ತಿತ್ತು. ಆದರೆ ಸರ್ದಾರರ ಮಾತು ಮುಗಿದಿರಲಿಲ್ಲ. ನಿಗದಿತ ವೇಳೆಯು, ಅದು ಪ್ರಾರ್ಥನೆಗೆ ಸಂಬಂಧಿಸಿ ಯಾವತ್ತೂ ತಪ್ಪಕೂಡದು ಎಂಬುದು ಗಾಂಧಿಯ ನಿಯಮವಾಗಿತ್ತು. ಇದರಿಂದ ಅಭಾಗೆ ತುಂಬಾ ಆತಂಕವೆನಿಸತೊಡಗಿತು. ಮಧ್ಯೆ ಬಾಯಿ ಹಾಕಲಿಕ್ಕೂ ಆಕೆಗೆ ಧೈರ್ಯವಾಗಲಿಲ್ಲ ಕಟ್ಟಕಡೆಗೆ ಆಕೆ ಹತಾಶಳಾಗಿ ಗಾಂಧಿಯ ಗಡಿಯಾರವನ್ನು ಎತ್ತಿ ಅವರ ಎದುರು ಹಿಡಿದರು. ಆದರೂ ಪ್ರಯೋಜನವಾಗಲಿಲ್ಲ. ಅಭಾರ ಪೇಚಾಟವನ್ನು ಗಮನಿಸಿದ ಮಣಿಬೆಹನ್ ಉಪಾಯದಿಂದ ಮಧ್ಯ ಪ್ರವೇಶಿಸಿ ವಿಷಯ ತಿಳಿಸಿದರು. ಗಾಂಧಿ ಪ್ರಾರ್ಥನೆಗೆ ಹೋಗಲು ಮೇಲೆ ಏಳುತ್ತಾ ಸರ್ದಾರರಿಗೆ, ‘‘ಈಗ ನಾನು ನಿಮ್ಮಿಂದ ಹರಿದುಕೊಂಡು ಹೋಗಬೇಕಾಗಿದೆ’’ ಎಂದರು.

 ಗಾಂಧಿ ಅಭಾ ಮತ್ತು ಮನುಗಾಂಧಿಯವರ ಜೊತೆ ಪ್ರಾರ್ಥನೆಗೆ ಹೋದರು. ದಾರಿಯಲ್ಲಿ ಅಭಾ ಹೇಳಿದರು: ‘‘ಬಾಪು ನಿಮ್ಮ ಗಡಿಯಾರ ಬೇಸರಗೊಂಡಿರಬೇಕು. ನೀವು ಅದರ ಕಡೆ ನೋಡುವುದೇ ಇಲ್ಲ’’

ಗಾಂಧಿ: ನಾನು ಯಾಕೆ ನೋಡಬೇಕು? ವೇಳೆ ನೋಡಿಕೊಳ್ಳಲು ನೀವೆಲ್ಲ ಇದ್ದೀರಲ್ಲ?

‘‘ಆದರೆ ನೀವು ನಿಮ್ಮ ಸಮಯ ಪಾಲಕರ ಕಡೆಗೂ ನೋಡುವು ದಿಲ್ಲ’’ ಅಂತ ಹುಡುಗಿಯರಲ್ಲೊಬ್ಬರು ಮಾರ್ನುಡಿದಾಗ ಗಾಂಧಿ ದೊಡ್ಡದಾಗಿ ನಕ್ಕರು. ಮೆಟ್ಟಿಲು ಹತ್ತಿ ಪ್ರಾರ್ಥನಾ ಸಭೆ ನಡೆಯುವ ಬಯಲಿಗೆ ಕಾಲಿಡುತ್ತಾ ಗಾಂಧಿ ಹೀಗೆಂದರು: ‘‘ನಾನು ಹತ್ತು ನಿಮಿಷ ತಡವಾಗಿರುವುದು ನಿಮ್ಮ ತಪ್ಪು. ದಾದಿಯರು ತಮ್ಮ ಕರ್ತವ್ಯವನ್ನು ನೆರವೇರಿಸುತ್ತಲೇ ಇರಬೇಕು. ದೇವರೇ ಎದುರು ಬಂದು ನಿಂತರೂ ನಿಲ್ಲಿಸಬಾರದು. ರೋಗಿಗೆ ಔಷಧ ಕೊಡಬೇಕಾದ ಸಮಯದಲ್ಲಿ ನೀವು ಏನೇ ಕಾರಣದಿಂದ ತಳುವಿದರೂ ಅದರಿಂದ ಬಡ ರೋಗಿ ಸಾಯುತ್ತಾನೆ. ಪ್ರಾರ್ಥನೆಯ ವಿಷಯವೂ ಹಾಗೇ; ಒಂದು ನಿಮಿಷ ಮಾತ್ರ ನಾನು ತಡ ಮಾಡಿದರೂ ಅದು ನನ್ನನ್ನು ಕೊರೆಯುತ್ತದೆ.’’

ಆ ದಿನ ಸುಮಾರು ಒಂದು ಸಾವಿರಕ್ಕೂ ಮಿಕ್ಕು ಸಭಿಕರು ಸೇರಿದ್ದರು. ಸಭಿಕರ ಮಧ್ಯೆ ದಾರ ಕಟ್ಟಿದ ಹಾದಿಯಲ್ಲಿ ನಡೆಯುತ್ತಾ ಗಾಂಧಿ ಹುಡುಗಿಯರ ಹೆಗಲ ಮೇಲಿದ್ದ ತನ್ನ ಕೈಗಳನ್ನು ತೆಗೆದು ನಮಸ್ಕರಿಸುತ್ತಿದ್ದ ಜನರಿಗೆ ಪ್ರತಿ ನಮಸ್ಕಾರ ಮಾಡಿದರು. ಇದ್ದಕ್ಕಿದ್ದಂತೆ ಯಾವನೋ ಒಬ್ಬ ಜನರ ಗುಂಪಿನಿಂದ ತಳ್ಳಿಕೊಳ್ಳುತ್ತಾ ಬಂದು ಗಾಂಧಿಯ ಕಡೆಗೆ ಧಾವಿಸಿದ. ಆತ ಗಾಂಧಿಯ ಪಾದಗಳನ್ನು ಮುಟ್ಟಲು ಬರುತ್ತಿದ್ದಾನೆಂದು ಭಾವಿಸಿದ ಮನು ‘‘ಈಗಲೇ ಪ್ರಾರ್ಥನೆಗೆ ತಡವಾಗಿದೆ’’ ಎನ್ನುತ್ತಾ ಅವರ ಕೈಮುಟ್ಟಿ ಅವನನ್ನು ನಿವಾರಿಸಲೆತ್ನಿಸಿದರು. ಆದರೆ ಆತ ಆಕೆಯನ್ನು ಬಲವಾಗಿ ತಳ್ಳಿದ. ಆಕೆಯ ಕೈಯಲ್ಲಿದ್ದ ಪುಸ್ತಕ ಮತ್ತು ಮಾಲೆ ಕೆಳಗೆ ಬಿದ್ದವು. ಬಿದ್ದ ವಸ್ತುಗಳನ್ನು ಎತ್ತಿಕೊಳ್ಳಲಿಕ್ಕಾಗಿ ಆಕೆ ಬಾಗಿದಾಗ ಆತ ಗಾಂಧಿಗೆ ಮುಖಾಮುಖಿ ನಿಂತು ಸಮೀಪದಿಂದ ಪಿಸ್ತೂಲ್ ಎತ್ತಿ ಒಂದಾದ ಮೇಲೊಂದರಂತೆ ಏಕಪ್ರಕಾರ ಮೂರು ಗುಂಡುಗಳನ್ನು ಹಾರಿಸಿದ. ಗಾಂಧಿ ‘‘ಹೇ ರಾಮ್’’ ಅಂದರು. ಅವರ ಬಿಳಿ ಬಟ್ಟೆಯ ಮೇಲೆ ಕೆಂಪು ಹರಡಿಕೊಳ್ಳುತ್ತಾ ನಮಸ್ಕರಿಸಲು ಎತ್ತಿದ್ದ ಕೈ ಕೆಳಗಿಳಿಯಿತು ಬಸವಳಿದ ದೇಹ ಮೃದುವಾಗಿ ನೆಲಕ್ಕೆ ಕುಸಿಯಿತು ಗಾಂಧಿ 5:17 ಗಂಟೆಗೆ ಕೊನೆಯುಸಿರೆಳೆದರು.

 ಕೃಪೆ: ಸ್ವರಾಜ್ಯದ ಹಾದಿ ಹೆಜ್ಜೆಗಳು

Writer - ಕೆ. ವಿ. ಸುಬ್ಬಣ್ಣ

contributor

Editor - ಕೆ. ವಿ. ಸುಬ್ಬಣ್ಣ

contributor

Similar News

ಜಗದಗಲ
ಜಗ ದಗಲ