ಕುಡಿಯುವ ನೀರು ಈ ದಶಕದ ದೊಡ್ಡ ಸವಾಲು

Update: 2020-02-09 18:54 GMT

ಕುಡಿಯುವ ನೀರು ಪರಿಸರ ಕಾನೂನುಗಳ ಕಟ್ಟುನಿಟ್ಟಾದ ಅನುಷ್ಠಾನ, ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ತಪ್ಪು ಮಾಡುವ ಅಧಿಕಾರಿಗಳಿಗೆ ತತ್ ಕ್ಷಣ ಶಿಕ್ಷೆ, ಪರಿಸರ ಸಮಸ್ಯೆಗಳ ಕುರಿತು ಖಚಿತವಾದ ಮಾಧ್ಯಮ ವರದಿ ಹಾಗೂ ಸಂವೇದನಾಶೀಲ ಸ್ಥಳೀಯ ಆಡಳಿತವು ನೀರಿನ ಕೊರತೆಯನ್ನು ನಿವಾರಿಸಬಲ್ಲದು.

ಭಾರತದ ಜಲಕ್ಷಾಮ, ನೀರಿನ ಬಿಕ್ಕಟ್ಟು ಮುಖ್ಯವಾಗಿ ಮಾನವ ನಿರ್ಮಿತ, ನೀರಿನ ಬಗ್ಗೆ ಮನುಷ್ಯರು ತೋರುವ ಅಸಡ್ಡೆಯ ಪರಿಣಾಮ. ದಶಕಗಳ ಲಾಗಾಯ್ತು ನಮ್ಮ ದೇಶ ತನ್ನ ಬೃಹತ್ ಜಲ ಸಂಪನ್ಮೂಲಗಳನ್ನು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನಿಭಾಯಿಸಿಲ್ಲ.

 ನಮ್ಮ ದೇಶದಲ್ಲಿರುವ ಜಲಸಂಪನ್ಮೂಲಗಳಲ್ಲಿ ಇರುವ ನೀರಿನ ಸುಮಾರು 22ಶೇ. ಒಂದೋ ಒಣಗಿ ಹೋಗಿದೆ ಅಥವಾ ಬಿಕ್ಕಟ್ಟಿನ ಹಾಗೂ ಮಿತಿಮೀರಿ ಬಳಕೆಯಾದ ಹಂತಗಳಲ್ಲಿದೆ. ಎಂದಿದ್ದಾರೆ ಜಲಶಕ್ತಿ (ಜಲ ಸಂಪನ್ಮೂಲ) ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ, ನದಿಗಳನ್ನು ಹಾಗೂ ಸರೋವರಗಳನ್ನು ಹೊರತುಪಡಿಸಿ, ನೀರಿನ ಆಕರಗಳು (ವಾಟರ್ ಬಾಡೀಸ್) ದೇಶದಲ್ಲಿ ಸುಮಾರು ಏಳು ಮಿಲಿಯ ಹೆಕ್ಟೇರ್‌ನಷ್ಟು ಜಾಗದಲ್ಲಿ ವ್ಯಾಪಿಸಿಕೊಂಡಿವೆ. ದೇಶದಲ್ಲಿರುವ ನದಿಗಳು ಹಾಗೂ ಕಾಲುವೆಗಳು ಸುಮಾರು 1,84,000 ಕಿ.ಮೀ.ಗಳಷ್ಟು ಉದ್ದ ಇವೆ. ದುರದೃಷ್ಟವಶಾತ್ ವಾಟರ್ ಬಾಡಿಗಳ ಬುಪಾಲು ಉಪಯೋಗಕ್ಕೆ ಸಿಗದಂತಾಗಿದೆ.

ತಜ್ಞರ ಸಮಿತಿಯ ವರದಿಯೊಂದರ ಪ್ರಕಾರ, ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಇರುವ ಕೆರೆಗಳ ಒಟ್ಟು 57,982 ಎಕರೆ ಜಲಪ್ರದೇಶದಲ್ಲಿ 10,785 ಎಕರೆ ವಿಸ್ತಾರವಾದಷ್ಟು ಕೆರೆಗಳನ್ನು ಅತಿಕ್ರಮಣ ಮಾಡಲಾಗಿದೆ. ಹಾಗೆಯೇ ಮುಂಬೈಯಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ನಗರದ 94 ಶೇ. ಪ್ರದೇಶವನ್ನು ಸಮತಟ್ಟುಗೊಳಿಸಿ ಅಲ್ಲಿ ಕಾಂಕ್ರಿಟ್ ಕಟ್ಟಡಗಳನ್ನು ನಿರ್ಮಿಸಿದ ಪರಿಣಾಮವಾಗಿ ಮುಂಬೈ ನಗರದ 60 ಶೇ. ಸಸ್ಯಪ್ರದೇಶ ಮತ್ತು 65 ಶೇ. ವಾಟರ್ ಬಾಡಿಗಳನ್ನು ನಗರವು ಕಳೆದುಕೊಂಡಿದೆ. ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದ ವಿಷಯವಿದು. ಅದೇ ರೀತಿಯಾಗಿ ಕೋಲ್ಕತಾ ನಗರ 2006ರ ಬಳಿಕದ ವರ್ಷಗಳಲ್ಲಿ ಅದರ ಜಲಾಶ್ರಯದ 46 ಶೇ. ದಷ್ಟನ್ನು ಕಳೆದುಕೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಕೊಲ್ಕತ್ತಾ ಅಲ್ಲಿದ್ದ 3,874 ಕೆರೆಗಳಲ್ಲಿ 2,204 ಕೆರೆಗಳನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ 1947ರ ವರೆಗೆ 60,000 ಕೆರೆಗಳಿದ್ದವು ಇವತ್ತು ಜಲಾಶಯಗಳ ಬೇಕಾಬಿಟ್ಟಿ ನಾಶದಿಂದಾಗಿ ತೆಲಂಗಾಣ ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ.

ಹೈದರಾಬಾದ್‌ನಲ್ಲಿ 1995ರಲ್ಲಿ ಹತ್ತು ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚು ವಿಸ್ತಾರವಾದ, ಸುಮಾರು 90.56 ಚದರ ಕಿ.ಮೀ. ಪ್ರದೇಶವನ್ನೊಳಗೊಂಡ 169 ಕೆರೆಗಳಿದ್ದವು. ಇಂದು ಯೋಜನಾ ರಹಿತ ರಿಯಲ್‌ಎಸ್ಟೇಟ್ ಬೆಳವಣಿಗೆಯಿಂದಾಗಿ, 2005 ಮತ್ತು 2016ರ ನಡುವೆ ಹೈದರಾಬಾದ್ ನಗರ 2,999 ವಾಟರ್ ಬಾಡಿಗಳನ್ನು ಕಳೆದುಕೊಂಡಿದೆ.

ಹಳ್ಳಿಗಳಿಂದ ಭಾರೀ ಸಂಖ್ಯೆಯಲ್ಲಿ ನಗರಗಳಿಗೆ ಜನರು ವಲಸೆ ಬರುತ್ತಿರುವುದರಿಂದ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇಂತಹ ವಲಸೆಗಳ ಪರಿಣಾಮವಾಗಿ ನಗರಗಳ ಜನಸಂಖ್ಯೆ 1901ರಿಂದ 2017ರ ನಡುವೆ 11.14 ಶೇ. ದಿಂದ 34 ಶೇ.ಕ್ಕೆ ಏರಿದೆ. ರಾಜಕೀಯ ಅರ್ಥಶಾಸ್ತ್ರಜ್ಞರು ನಗರ ಭಾರತ ರಾಷ್ಟ್ರದ ಒಟ್ಟು ಜಿಡಿಪಿಗೆ ಮೂರನೇ ಎರಡರಷ್ಟು ಕೊಡುಗೆ ನೀಡುತ್ತಿದೆ ಎನ್ನುತ್ತಾರೆ. ಆದರೆ ನಗರ ಹಾಗೂ ಗ್ರಾಮೀಣ ಭಾರತದ ಕೆರೆಗಳ ಪುನರುಜ್ಜೀವನದ ವೆಚ್ಚ ನಮ್ಮ ಜಿಡಿಪಿಯಲ್ಲಾಗುವ ಗಳಿಕೆಯ ದೊಡ್ಡ ಭಾಗವನ್ನು ಅಳಿಸಿ ಹಾಕುತ್ತದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಭಾರೀ ಸಾರ್ವಜನಿಕ ಬಂಡವಾಳ ಮತ್ತು ವಿದೇಶಿ ನೆರವಿನಿಂದ ಗರಿಷ್ಠ ಸಂಖ್ಯೆಯ ಅಣೆಕಟ್ಟುಗಳನ್ನು, ಜಲಾಶಯಗಳನ್ನು ಹಾಗೂ ವಾಟರ್ ಶೆಡ್‌ಗಳನ್ನು ನಿರ್ಮಿಸಿದೆ. ಆದರೆ ರೈತರ ಆತ್ಮಹತ್ಯೆಯ ಯಾದಿಯಲ್ಲಿ ಈ ರಾಜ್ಯಗಳು ಮೇಲಿನ ಸ್ಥಾನದಲ್ಲಿವೆ.

 ಪರಿಸರ ಕಾನೂನುಗಳ ಕಟ್ಟುನಿಟ್ಟಾದ ಅನುಷ್ಠಾನ, ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ತಪ್ಪು ಮಾಡುವ ಅಧಿಕಾರಿಗಳಿಗೆ ತತ್ ಕ್ಷಣ ಶಿಕ್ಷೆ, ಪರಿಸರ ಸಮಸ್ಯೆಗಳ ಕುರಿತು ಖಚಿತವಾದ ಮಾಧ್ಯಮ ವರದಿ ಹಾಗೂ ಸಂವೇದನಾಶೀಲ ಸ್ಥಳೀಯ ಆಡಳಿತವು ನೀರಿನ ಕೊರತೆಯನ್ನು ನಿವಾರಿಸಬಲ್ಲದು. ಹೈದರಾಬಾದ್‌ನಲ್ಲಿರುವ ಇಸ್ರೋದ ದಿ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ದೇಶಾದ್ಯಂತ ಇರುವ ವಾಟರ್ ಬಾಡಿಗಳ ಕುರಿತು ಪಾಕ್ಷಿಕ ವರದಿ ತಯಾರಿಸಲು ಸ್ಯಾಟಲೈಟ್ ಚಿತ್ರಗಳನ್ನು ಬಳಸುತ್ತದೆ. ಹೀಗೆ ದೊರಕುವ ಇಸ್ರೋ ದತ್ತಾಂಶವನ್ನು ದೇಶದ ವಾಟರ್ ಬಾಡಿಗಳ ಮೇಲೆ ನಿಗಾ ಇಡಲು ಬಳಸಿಕೊಳ್ಳಬಹುದು. ಅಲ್ಲದೆ ವಾಟರ್‌ಬಾಡಿಗಳ ತಪಾಸಣೆ ಮತ್ತು ನಿಗದಿತವಾಗಿ ಅವುಗಳ ಮೇಲೆ ನಿಗಾ ಇಡುವ ಮೂಲಕ ಅವುಗಳನ್ನು ಉಳಿಸಿಕೊಳ್ಳುವುದು ಸಾಧ್ಯ.

ಸಾಮಾಜಿಕ ಕಾರ್ಯಕರ್ತ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಅಣ್ಣಾ ಹಝಾರೆ, ಮಹಾರಾಷ್ಟ್ರದಲ್ಲಿ ರಾಲೆಗಾಂವ್ ಸಿದ್ದಿ ಹಳ್ಳಿಯನ್ನು ಮರುಭೂಮಿಯಂತಹ ಸ್ಥಿತಿಯಿಂದ, ಜಲಸಂರರಕ್ಷಣಾ ತಂತ್ರಗಳ ಮೂಲಕ ಹೇಗೆ ಸಸ್ಯ ಸಮೃದ್ಧ ಹಳ್ಳಿಯನ್ನಾಗಿ ಬದಲಾಯಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ನೀರಿನ ಕೊರತೆಯನ್ನು ನೀಗಲು ರಾಷ್ಟ್ರಕ್ಕೆ ಅವರಂತಹ ಪ್ರಾಮಾಣಿಕ, ಸ್ವಯಂಪ್ರೇರಿತ ಸ್ವಯಂಸೇವಕರ ಅವಶ್ಯಕತೆ ಇದೆ.

 ಕೃಪೆ: ಡೆಕ್ಕನ್ ಹೆರಾಲ್ಡ್

Writer - ಸುಧಾಂಶು ಆರ್. ದಾಸ್

contributor

Editor - ಸುಧಾಂಶು ಆರ್. ದಾಸ್

contributor

Similar News

ಜಗದಗಲ
ಜಗ ದಗಲ