ಕೋರ್ಟ್‌ಗೆ ಬಂದು ನಿಮ್ಮ ನವೀನ ಕಲ್ಪನೆಯನ್ನು ಹಂಚಿಕೊಳ್ಳಿ: ಗಡ್ಕರಿಗೆ ಸುಪ್ರೀಂ ಕೋರಿಕೆ

Update: 2020-02-19 18:17 GMT

ಹೊಸದಿಲ್ಲಿ, ಫೆ.19: ಮಾಲಿನ್ಯ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನ್ಯಾಯಾಲಯಕ್ಕೆ ಬಂದು ತಮ್ಮಲ್ಲಿರುವ ನವೀನ ಕಲ್ಪನೆ, ಅಭಿಪ್ರಾಯವನ್ನು ಹಂಚಿಕೊಳ್ಳಬೇಕೆಂದು ವಿನಂತಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಇದು ಸಚಿವರ ಸಹಯೋಗಕ್ಕೆ ಕೋರಿಕೆಯಾಗಿದೆ, ಸಮನ್ಸ್ ಅಲ್ಲ ಎಂದು ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ. ವಿದ್ಯುತ್‌ಚಾಲಿತ ವಾಹನಗಳಿಗೆ ಸಂಬಂಧಿಸಿ ಸರಕಾರದ ಕಾರ್ಯನೀತಿಯನ್ನು ಜಾರಿಗೊಳಿಸುವ ಕುರಿತ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಹೇಳಿಕೆ ನೀಡಿದೆ.

ಕೇಂದ್ರ ರಸ್ತೆ ಸಾರಿಗೆ ಸಚಿವರ ಬಳಿ ನವೀನ ಕಲ್ಪನೆಯಿದೆ. ಅವರು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿರುವುದರಿಂದ ನ್ಯಾಯಾಲಯಕ್ಕೆ ಬಂದು ನಮಗೆ ನೆರವಾಗಬೇಕೆಂದು ಕೋರುತ್ತೇವೆ ಎಂದು ನ್ಯಾ. ಎಸ್‌.ಎ. ಬೋಬ್ಡೆ ಹೇಳಿದರು. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ನ್ಯಾಯಾಧೀಶರು, ಇದನ್ನು ರಾಜಕೀಯ ದೃಷ್ಟಿಯಿಂದ ಕಾಣುವ ಸಾಧ್ಯತೆಯಿದೆ. ನಾವು ಸಚಿವರಿಗೆ ಸಮನ್ಸ್ ನೀಡುತ್ತೇವೆ ಎಂದು ಭಾವಿಸಬೇಡಿ. ಇದು ಕೋರಿಕೆಯಾಗಿದೆ. ಅಧಿಕಾರ ಸ್ಥಾನದಲ್ಲಿರುವ ಒಬ್ಬರು ನಿರ್ಧಾರ ಕೈಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ದಯವಿಟ್ಟು ಅವರು ಹಾಜರಾಗುವಂತೆ ನೋಡಿಕೊಳ್ಳಿ ಎಂದು ಸರಕಾರದ ಪರ ವಕೀಲರಿಗೆ ನ್ಯಾಯಪೀಠ ತಿಳಿಸಿತು.

ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಶುಲ್ಕ ವಿಧಿಸಿ, ವಿದ್ಯುತ್ ವಾಹನಗಳಿಗೆ ಸಬ್ಸಿಡಿ ಒದಗಿಸಬಹುದು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಕೋರಿದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ, ವಿದ್ಯುತ್ ವಾಹನಗಳ ವಿಷಯ ಇತರ ಹಲವು ವಿಷಯಗಳಿಗೆ ಸಂಬಂಧಿಸಿದ್ದು ಇಂತಹ ಅರ್ಜಿಗಳು ವಿಚಾರಣೆಗೆ ಬಾಕಿಯಿದೆ. ವಾಹನಗಳಿಂದ ಆಗುವ ಮಾಲಿನ್ಯದ ಸಮಸ್ಯೆ ಕೇವಲ ದಿಲ್ಲಿ ಅಥವಾ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದೆ. ನಿರ್ಧಾರ ಕೈಗೊಳ್ಳುವ ಅಧಿಕಾರವುಳ್ಳ ಅಧಿಕಾರಿಯ ನೆರವಿನಿಂದ ಎಲ್ಲಾ ಅರ್ಜಿಗಳನ್ನೂ ಏಕಕಾಲದಲ್ಲೇ ಪರಿಗಣಿಸುವ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಪೀಠ, ಈ ಬಗ್ಗೆ ಉತ್ತರಿಸಲು ಕೇಂದ್ರ ಸರಕಾರಕ್ಕೆ 4 ವಾರಗಳ ಅವಕಾಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News