ಆರೋಪಿ ವಿನಯ್ ಶರ್ಮಾ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ: ತಿಹಾರ್ ಕಾರಾಗೃಹ
ಹೊಸದಿಲ್ಲಿ, ಫೆ. 22: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ವಿನಯ್ ಶರ್ಮಾನಿಗಾದ ಗಾಯ ಸ್ವಯಂ ಪ್ರಚೋದಿತ. ಅಲ್ಲದೆ ಆತ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ತಿಹಾರ್ ಜೈಲು ಅಧಿಕಾರಿಗಳು ಸ್ಥಳೀಯ ನ್ಯಾಯಾಲಯಕ್ಕೆ ಶನಿವಾರ ತಿಳಿಸಿದ್ದಾರೆ.
ಕಳೆದ ವಾರ ನ್ಯಾಯಾಲಯದಲ್ಲಿ ವಿನಯ್ ಶರ್ಮಾನ ಪರ ನ್ಯಾಯವಾದಿ ಎ.ಪಿ. ಸಿಂಗ್, ಆತ ಮಾನಸಿಕ ಅಸ್ವಸ್ಥತೆ ಹಾಗೂ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾನೆ. ತನ್ನ ವಕೀಲ ಹಾಗೂ ಕುಟುಂಬದವರನ್ನು ಗುರುತಿಸಲು ಕೂಡ ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದ್ರ ರಾಣಾ, ತಿಹಾರ್ ಕಾರಾಗೃಹದ ಅಧಿಕಾರಿಗಳಿಂದ ವರದಿ ಕೋರಿದ್ದರು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಿದ್ದರು.
ಮನವಿಯಲ್ಲಿ ವಿನಯ್ ಶರ್ಮಾನ ತಲೆಗೆ ಘಾಸಿಯಾಗಿದೆ. ಬಲ ತೋಳಿಗೆ ಗಾಯಗಳಾಗಿವೆ. ಮಾನಸಿಕ ಅಸ್ವಸ್ಥತೆ ಹಾಗೂ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು.
ತಿಹಾರ್ ಕಾರಾಗೃಹವನ್ನು ಪ್ರತಿನಿಧಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್, ವಿನಯ್ ಶರ್ಮಾ ಸಲ್ಲಿಸಿದ ಮನವಿ ವಿಕೃತ ಸಂಗತಿಗಳ ಕಟ್ಟು. ಮರಣದಂಡನೆಯನ್ನು ಎದುರು ನೋಡುತ್ತಿರುವ ಆರೋಪಿ ತನ್ನ ತಲೆಯನ್ನು ಜೈಲಿನ ಗೋಡೆಗೆ ಚಚ್ಚಿಕೊಂಡಿದ್ದಾನೆ. ಅದು ಸ್ಪಯಂ ಪ್ರಚೋದಿತ ಗಾಯ ಎಂದಿದ್ದಾರೆ.