ಚಂದ್ರಶೇಖರ್ ಆಝಾದ್ ಕರೆ ನೀಡಿದ್ದ ಭಾರತ್ ಬಂದ್ ಆಂಶಿಕ ಯಶಸ್ವಿ

Update: 2020-02-23 18:03 GMT

ಹೊಸದಿಲ್ಲಿ, ಫೆ.23: ಸರಕಾರಿ ಉದ್ಯೋಗದಲ್ಲಿ ಭಡ್ತಿಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಭೀಮ್‌ಸೇನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದಿ ಕರೆ ನೀಡಿದ್ದ ಭಾರತ್‌ಬಂದ್ ಪ್ರತಿಭಟನೆಗೆ ಹಲವು ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿದ್ದು ದೇಶದ ಕೆಲವೆಡೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ಭಾರತ್‌ಬಂದ್‌ಗೆ ಉತ್ತರಪ್ರದೇಶದಲ್ಲಿ ಶಿವಪಾಲ್ ಯಾದವ್‌ರ ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ, ಬಿಹಾರದಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ , ಉಪೇಂದ್ರ ಕುಶ್ವಾಹಾ ನೇತೃತ್ವದ ಲೋಕಸಮತಾ ಪಕ್ಷ, ಜೀತನ್‌ರಾಮ್ ಮಾಂಜಿಯ ಹಿಂದುಸ್ತಾನೀ ಅವಾಮೀ ಮೋರ್ಛಾ, ಪಪ್ಪು ಯಾದವರ ಜನ ಅಧಿಕಾರ ಪಕ್ಷ ಬೆಂಬಲ ಘೋಷಿಸಿತ್ತು. ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಅಧ್ಯಕ್ಷ ನಿತಿನ್ ರಾವತ್ ಅವರೂ ಬೆಂಬಲ ಸೂಚಿಸಿದ್ದರು. ಸಂವಿಧಾನದ ರಕ್ಷಣೆ ಮತ್ತು ಮೀಸಲಾತಿಯ ರಕ್ಷಣೆಗಾಗಿ ಭಾರತ್ ಬಂದ್ ಪ್ರತಿಭಟನೆಯನ್ನು ಹೃತ್ಪೂರ್ವಕವಾಗಿ ಬೆಂಬಲಿಸುತ್ತಿದ್ದೇನೆ. ಮೀಸಲಾತಿ ನಮ್ಮ ಗೌರವ ಮತ್ತು ಆತ್ಮಾಭಿಮಾನವಾಗಿದೆ. ಯಾವುದೇ ಬೆಲೆ ತೆತ್ತಾದರೂ ಇದನ್ನು ಉಳಿಸಿಕೊಳ್ಳುತ್ತೇವೆ . ಸಂವಿಧಾನ ಚಿರಾಯುವಾಗಲಿ, ಜೈ ಭೀಮ್ ಎಂದು ನಿತಿನ್ ರಾವತ್ ಟ್ವೀಟ್ ಮಾಡಿದ್ದಾರೆ.

ಶನಿವಾರ, ನಾಗಪುರದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ರ್ಯಾಲಿಯ ಅಂಗವಾಗಿ ಆರೆಸ್ಸೆಸ್ ಕೇಂದ್ರ ಕಚೇರಿಯೆದುರು ರಾಷ್ಟ್ರಧ್ವಜ ಆರಳಿಸಿದ್ದ ಚಂದ್ರಶೇಖರ್ ಆಝಾದ್, ಆರೆಸ್ಸೆಸ್ ಸಂಘಟನೆಯ ನಿಷೇಧಕ್ಕೆ ಆಗ್ರಹಿಸಿದ್ದರು. ಶನಿವಾರ ಮಧ್ಯರಾತ್ರಿಯ ಬಳಿಕ 12:30ರ ವೇಳೆ ದಿಲ್ಲಿಯ ಸೀಲಾಂಪುರ-ಜಫ್ರಾಬಾದ್ ಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನೂರಾರು ಮಹಿಳೆಯರು ಜಫ್ರಾಬಾದ್ ಮೆಟ್ರೋ ನಿಲ್ದಾಣದ ಹೊರಗಡೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಇದನ್ನು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದ ಚಂದ್ರಶೇಖರ್ ಆಝಾದ್, ಬೆಳಕು ಹರಿಯಲು ಇನ್ನೂ ಸುಮಾರು 6 ಗಂಟೆಗಳಿವೆ. ಆದರೆ ಸೀಲಾಂಪುರದ ಮಾತೆಯರು ಮತ್ತು ಸಹೋದರಿಯರು ಈಗಾಗಲೇ ಭಾರತ್ ಬಂದ್‌ನ ಕಹಳೆ ಮೊಳಗಿಸಿಯೇ ಬಿಟ್ಟಿದ್ದಾರೆ ಎಂದು ಅಭಿನಂದಿಸಿದ್ದರು.

ಬಿಜೆಪಿ ಪಕ್ಷದವರ ಪ್ರಚೋದನೆಗೆ ಒಳಗಾಗಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಮುಂದಾಗಬಾರದು ಎಂದು ಬೆಂಬಲಿಗರಿಗೆ ಕರೆ ನೀಡಿರುವ ಆಝಾದ್, ಪೌರತ್ವ ಕಾಯ್ದೆ, ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿಯನ್ನು ವಿರೋಧಿಸುವ ನಿಟ್ಟಿನಲ್ಲೂ ಭಾರತ್ ಬಂದ್ ಆಯೋಜಿಸಲಾಗಿದೆ ಎಂದಿದ್ದಾರೆ. ಭಾರತ್ ಬಂದ್ ಅಂಗವಾಗಿ ರವಿವಾರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಚಂದ್ರಶೇಖರ್ ಆಝಾದ್ ಪಾಲ್ಗೊಂಡರು.

ಈ ಮಧ್ಯೆ, ದಲಿತ ಸಮುದಾಯದವರ ಸಂಖ್ಯೆ ಹೆಚ್ಚಾಗಿರುವ ಉತ್ತರಪ್ರದೇಶದ ಸಹಾರನ್‌ಪುರದಲ್ಲಿ ಪೊಲೀಸರು ದಲಿತ ಸಂಘಟನೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ದಲಿತ ಸಂಘಟನೆಯವರು ಶಾಂತ ರೀತಿಯಿಂದ ಪ್ರತಿಭಟನೆ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಹಿಂಸಾಚಾರಕ್ಕೆ ಮುಂದಾಗಬಾರದು ಎಂದು ಸಹರಾನ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಹೇಳಿದ್ದಾರೆ. 2018ರ ಎಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ನಡೆದ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಬಾರಿ ಸಾಮಾಜಿಕ ಮಾಧ್ಯಮದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದ್ದು ಎಲ್ಲಾ ಪೊಲೀಸ್ ಸಿಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಮೀರತ್ ಜಿಲ್ಲಾ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News