ಅಪಾಯಕಾರಿ ಮಿತಿಗಳನ್ನು ತಲುಪುತ್ತಿರುವ ಅಂತರ್ಜಲ

Update: 2020-03-21 17:26 GMT

ಯುನೆಸ್ಕೊ ವಿಶ್ವ ಜಲ ಅಭಿವೃದ್ಧಿ ವರದಿಯ ವಿವರಗಳನ್ನು ಗಮನಿಸಿದರೆ ಅಂತರ್ಜಲದ ಮೇಲೆ ಬೀಳುತ್ತಿರುವ ಒತ್ತಡದ ಗಂಭೀರತೆ ಅರ್ಥವಾಗಬಹುದು. ಅದು ಹೇಳುವಂತೆ, ಶೇ.54 ಬಾವಿಗಳಲ್ಲಿ ಕಳೆದ ಏಳು ವರ್ಷಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅಲ್ಲದೆ ಅದರ ಪ್ರಕಾರ 2020ರ ವೇಳೆಗೆ ಭಾರತದ 21 ಬೃಹತ್ ನಗರಗಳು ಅಂತರ್ಜಲರಹಿತ ನಗರಗಳಾಗಲಿವೆ.

ಬೇಸಿಗೆ ಬಂದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನುಡಿದಿರುವ ಭವಿಷ್ಯದ ಪ್ರಕಾರ ಈ ಬೇಸಿಗೆ ಹಿಂದಿನ ಎಲ್ಲ ಬೇಸಿಗೆಗಳಿಗಿಂತ ಹೆಚ್ಚು ಕಠಿಣವಾಗಲಿದೆ, ಕ್ರೂರವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಮೇಲ್ಪದರದ ನೀರು ಪ್ರಕ್ಷುಬ್ಧ ಸ್ಥಿತಿ ತಲುಪಿ ನಿರುಪಯೋಗಿ ಆಗಲಿದೆ. ಮುಂದಿನ ನಾಲ್ಕು ತಿಂಗಳು ಜೀವಿರಾಶಿಗಳು, ಬೇಸಾಯ, ಉದ್ಯಮಗಳು ಮತ್ತು ವಾಣಿಜ್ಯ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳು ಅಂತರ್ಜಲವನ್ನವಲಂಬಿಸಿಯೇ ಇರಬೇಕಾಗುತ್ತದೆ.

ಪ್ರತಿವರ್ಷ ಭಾರತದಲ್ಲಿ ಮಳೆಯ ಮೂಲಕ 4,000 ಬಿಲಿಯ ಕ್ಯೂಬಿಕ್ ಮೀಟರ್ (ಬಿಸಿಎಂ)ನಷ್ಟು ನೀರು ಲಭಿಸುತ್ತದೆ. ಇದರಲ್ಲಿ 1,137 ಬಿಸಿಎಂ ನೀರು ಮಾತ್ರ ಉಪಯೋಗಕ್ಕೆ ಲಭಿಸುತ್ತದೆ. ಮತ್ತೆ ಉಳಿದ ನೀರು ನದಿಗಳನ್ನು ಸೇರುತ್ತದೆ. 1,137 ಬಿಸಿಎಂನಲ್ಲಿ 490 ಬಿಸಿಎಂ ಭೂಮಿಯ ಮೇಲ್ಮೈಯಲ್ಲಿರುವ ನೀರಿನ ಸೆಲೆಗಳನ್ನು (ವಾಟರ್ ಬಾಡೀಸ್) ತುಂಬುತ್ತದೆ, 447 ಬಿಸಿಎಂ ಭೂಮಿಯ ಒಳಕ್ಕೆ ಇಳಿಯುತ್ತದೆ. ಹೀಗೆ ಇಳಿದ ಒಟ್ಟು ನೀರನ್ನು 447 ಬಿಸಿಎಂ ಅಂತರ್ಜಲವೆಂದು ಅಳತೆ ಮಾಡಲಾಗಿದೆ. ಇದರಲ್ಲಿ 411 ಬಿಸಿಎಂ ಅಂತರ್ಜಲ ಭೂಮಿಯಿಂದ ಹೊರಕ್ಕೆ ತೆಗೆಯಲು ಲಭ್ಯವಾಗುತ್ತದೆ.

ವಾರ್ಷಿಕ 251 ಬಿಸಿಎಂ ಅಂತರ್ಜಲವನ್ನು ಹೊರಕ್ಕೆ ತೆಗೆಯುವ ಮೂಲಕ ಭಾರತ 10 ಅತಿ ಹೆಚ್ಚು ಅಂತರ್ಜಲ ಹೊರ ತೆಗೆಯುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದ್ದು ಅಂತರ್ಜಲವನ್ನು ಗರಿಷ್ಠ ಬಳಸುವ ದೇಶವಾಗಿದೆ. 251 ಬಿಸಿಎಂ ನೀರನ್ನು ಹೊರತೆಗೆಯುವ ಮೂಲಕ ನಮ್ಮ ದೇಶ ಪ್ರತಿವರ್ಷ ಅಂತರ್ಜಲ ಸಂಪನ್ಮೂಲದ ಶೇ.62ಕ್ಕಿಂತಲೂ ಹೆಚ್ಚು ನೀರನ್ನು ಬಳಸುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಲ್ಲಿ ದೊರೆಯುವ ಒಟ್ಟು ಅಂತರ್ಜಲ 15 ಬಿಸಿಎಂ. ರಾಜ್ಯವು ಇದರ ಶೇ.61ರಷ್ಟು ನೀರನ್ನು ಹೊರಕ್ಕೆ ತೆಗೆಯುತ್ತದೆ.

ಅಂತರ್ಜಲ ಅತ್ಯಂತ ಹೆಚ್ಚು ಉಪಯೋಗವಾಗುವ ಜಲ ಸಂಪನ್ಮೂಲ. ದೇಶದ ಶೇ.85 ಗ್ರಾಮೀಣ ಭಾಗದ ಜನರು ಮತ್ತು ಶೇ. 50 ನಗರವಾಸಿಗಳು ಅಂತರ್ಜಲವನ್ನವಲಂಬಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗಿದೆ. ಕರ್ನಾಟಕದ 176 ತಾಲೂಕುಗಳ ಪೈಕಿ 45 ತಾಲೂಕುಗಳು ಮಿತಿಮೀರಿದ ಅಂತರ್ಜಲ ಬಳಕೆ ಪ್ರದೇಶಗಳಲ್ಲಿವೆ. ಇನ್ನು 8 ತಾಲೂಕುಗಳು ನೀರಿನ ಬಿಕ್ಕಟ್ಟಿಗೆ ಸಿಲುಕಿವೆ. 26 ತಾಲೂಕುಗಳು ಅರೆ-ಬಿಕ್ಕಟ್ಟಿನ ಸ್ಥಿತಿಯಲ್ಲಿವೆ.

ದೇಶದ ಬೃಹತ್ ಜನಸಂಖ್ಯೆ ಮತ್ತು ಸೀಮಿತ ಜಲಸಂಪನ್ಮೂಲಗಳಿಂದಾಗಿ ದೇಶದ ಶುದ್ಧ ನೀರಿನ ಸಂಪನ್ಮೂಲಗಳ ಮೇಲೆ ತುಂಬ ಒತ್ತಡಬೀಳುತ್ತಿದೆ. ಭಾರತವು ವಿಶ್ವದ ಒಟ್ಟು ಭೌಗೋಳಿಕ ಪ್ರದೇಶದ ಶೇ.2.50 ಪ್ರದೇಶವನ್ನು ಹೊಂದಿದೆ. ವಿಶ್ವದ ಜಾನುವಾರುಗಳ ಶೇ.15 ಪಾಲು ಭಾರತದಲ್ಲಿದೆ. ಆದರೆ ವಿಶ್ವದ ಜಲಸಂಪನ್ಮೂಲದ ಕೇವಲ ಶೇ.4 ಮಾತ್ರ ಭಾರತದಲ್ಲಿದೆ. ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ಲಭ್ಯವಿರುವ ತಲಾ ಜಲ ಲಭ್ಯತೆ ಶೇ.70ರಷ್ಟು ಕಡಿಮೆಯಾಗಿದೆ.

ಆದರೆ ಬೇಸಿಗೆಯಲ್ಲಿ ನೀರಿನ ನಿಜವಾದ ಬವಣೆಗೊಳಗಾಗುವವರು ಗ್ರಾಮೀಣ ಪ್ರದೇಶದ ಮಹಿಳೆಯರು. ತಮ್ಮ ದೈನಂದಿನ ನೀರಿನ ಅವಶ್ಯಕತೆ ಪೂರೈಸಲು ಅವರು ಪ್ರತಿದಿನ 200 ಮೀ.ನಿಂದ 3 ಕಿ.ಮೀ.ನಷ್ಟು ದೂರ ನಡೆಯಬೇಕಾಗುತ್ತದೆ. ಇದು ವಾರ್ಷಿಕ ಅವಧಿಯಲ್ಲಿ ದಿಲ್ಲಿಯಿಂದ ಪಾಟ್ನಾಕ್ಕೆ ಕಾಲುನಡಿಗೆ ಮೂಲಕ ಕ್ರಮಿಸುವ ದೂರಕ್ಕೆ ಸಮವಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ನೀರು ತರಲು ನಡೆಯಲು ಮಹಿಳೆಯರು ಹೆಚ್ಚು ಸಮಯ ತೆಗೆದುಕೊಂಡರೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ನಲ್ಲಿಗಳ ಮುಂದೆ ಕಾಯಲು ಮಹಿಳೆಯರು ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ.

ಯುನೆಸ್ಕೊ ವಿಶ್ವ ಜಲ ಅಭಿವೃದ್ಧಿ ವರದಿಯ ವಿವರಗಳನ್ನು ಗಮನಿಸಿದರೆ ಅಂತರ್ಜಲದ ಮೇಲೆ ಬೀಳುತ್ತಿರುವ ಒತ್ತಡದ ಗಂಭೀರತೆ ಅರ್ಥವಾಗಬಹುದು. ಅದು ಹೇಳುವಂತೆ, ಶೇ.54 ಬಾವಿಗಳಲ್ಲಿ ಕಳೆದ ಏಳು ವರ್ಷಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅಲ್ಲದೆ ಅದರ ಪ್ರಕಾರ 2020ರ ವೇಳೆಗೆ ಭಾರತದ 21 ಬೃಹತ್ ನಗರಗಳು ಅಂತರ್ಜಲರಹಿತ ನಗರಗಳಾಗಲಿವೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನೀತಿ ಆಯೋಗವು ಎರಡು ರೀತಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮೊದಲನೆಯದಾಗಿ, ಅಂತರ್ಜಲದ ಮೇಲಣ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಎರಡನೆಯದಾಗಿ, ಜಲ ಸಂಪನ್ಮೂಲ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.

ಅಂತರ್ಜಲದ ಮೇಲಣ ಅವಲಂಬನೆಯನ್ನು ಕಡಿಮೆ ಮಾಡಲು ನೀರಾವರಿ ಪಂಪ್‌ಗಳು ಬಳಸುವ ವಿದ್ಯುತ್‌ನ ಮೇಲೆ ನೀಡುವ ಸಹಾಯಧನವನ್ನು (ಸಬ್ಸಿಡಿ) ಕಡಿಮೆ ಮಾಡಬೇಕು ಎಂಬ ಸಲಹೆ ಕೇಳಿ ಬಂದಿದೆ. ಬಹುತೇಕ ಪ್ರಕರಣಗಳಲ್ಲಿ ಪಂಪ್‌ಗಳು ಅದಕ್ಷವಾಗಿ ಕಾರ್ಯ ನಿರ್ವಹಿಸುತ್ತವೆ. ಬಹುತೇಕ ರಾಜ್ಯಗಳಲ್ಲಿ ರೈತರು ಪಂಪ್‌ಗಳ ಮೂಲಕ ತೆಗೆಯುವ ಅಂತರ್ಜಲದ ಪ್ರಮಾಣವನ್ನು ಮತ್ತು ಅವುಗಳು ಬಳಸುವ ವಿದ್ಯುತ್ ಯುನಿಟ್‌ಗಳನ್ನು ಪರಿಗಣಿಸದೆ ಒಂದೋ ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ ಅಥವಾ ಒಂದು ನಿರ್ದಿಷ್ಟ ಕನಿಷ್ಠ ಮೊತ್ತವನ್ನಷ್ಟೆ ತೆಗೆದುಕೊಳ್ಳಲಾಗುತ್ತದೆ. ವಿದ್ಯುತ್ ಸಬ್ಸಿಡಿಯನ್ನು ಕಡಿಮೆ ಮಾಡುವುದಕ್ಕೂ ನೆಲದೊಳಗಿಂದ ತೆಗೆಯುವ ಅಂತರ್ಜಲದ ಪ್ರಮಾಣ ಕಡಿಮೆಯಾಗುವುದಕ್ಕೂ ಸಂಬಂಧ ಇರುವುದನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ಸರಾಸರಿ, ವಿದ್ಯುತ್ ಸಬ್ಸಿಡಿಯಲ್ಲಿ ಶೇ. 10 ಕಡಿಮೆ ಮಾಡಿದಲ್ಲಿ ಶೇ. 6.5ರಷ್ಟು ಅಂತರ್ಜಲ ಬಳಕೆ ಕಡಿಮೆಯಾಗುತ್ತದೆ. ಆದರೆ ಇಂತಹ ಸಬ್ಸಿಡಿ ಕಡಿತ ರಾಜಕೀಯವಾಗಿ ಜನಪ್ರಿಯ ಕೆಲಸವಲ್ಲವಾಗಿರುವುದರಿಂದ, ಬಿಲ್ಲಿಂಗ್ ಕ್ರಮವನ್ನು ಆರಂಭಿಸಿದ ಬಳಿಕ ಆ ರೈತರು ಉಳಿತಾಯ ಮಾಡುವ ಪ್ರತಿ ವಿದ್ಯುತ್ ಯುನಿಟ್‌ಗೂ ನಗದು ಪ್ರೋತ್ಸಾಹ ನೀಡಬೇಕೆಂಬ ಸೂಚನೆ, ಸಲಹೆ ಕೇಳಿ ಬಂದಿದೆ.

ಅಂತರ್ಜಲ ಹೆಚ್ಚಿಸಲು ಮಳೆಕೊಯ್ಲಿನಷ್ಟು ಉತ್ತಮವಾದ ಇನ್ನೊಂದು ಯೋಜನೆ ಇಲ್ಲವೆಂದು ಅಭಿಪ್ರಾಯಪಡಲಾಗಿದೆ. 100 ಚದರ ಮೀಟರ್ ಪ್ರದೇಶದಲ್ಲಿ ಬೀಳುವ ಮಳೆಯ ಶೇ.80ರಷ್ಟು ಮಳೆಕೊಯ್ಲು ಮಾಡಿದರೂ ಅದು 48,000 ಲೀಟರ್ ನೀರನ್ನು ಸಂಗ್ರಹಿಸಬಲ್ಲದು ಎನ್ನಲಾಗಿದೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ