×
Ad

ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ. ಊರ್ವಿ ಶರ್ಮ

Update: 2020-04-05 17:32 IST
ಊರ್ವಿ ಶರ್ಮ ರೈನಾ

ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ಬೆನ್ನಿಗೇ ಟಿವಿ ಚಾನಲ್ ಗಳು ಹಾಗು ಸಾಮಾಜಿಕ ಜಾಲತಾಣಗಳಲ್ಲಿ ತಬ್ಲೀಗಿ ಜಮಾಅತ್ ನ ಸದಸ್ಯರ ವಿರುದ್ಧ ಭಾರೀ ಅಪಪ್ರಚಾರದ ಅಭಿಯಾನವೇ ನಡೆಯುತ್ತಿದೆ.

ತಬ್ಲೀಗಿ ಜಮಾಅತ್ ನವರು ಮರ್ಕಝ್ ಖಾಲಿ ಮಾಡಲು ಒಪ್ಪಲಿಲ್ಲ ಎಂಬಲ್ಲಿಂದ ಪ್ರಾರಂಭಿಸಿ ಅವರು ಕ್ವಾರಂಟೈನ್ ನಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ, ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ, ಕಂಡಕಂಡಲ್ಲಿ ಉಗುಳಿ ಕೊರೊನ ಹರಡುತ್ತಿದ್ದಾರೆ, ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.... ಹೀಗೆ ಅವರನ್ನು ಅಪರಾಧಿಗಳಾಗಿ ಘೋಷಿಸುವ ರೋಚಕ ಕತೆಗಳು ವ್ಯಾಪಕವಾಗಿ ಹರಡುತ್ತಿವೆ. 

ಈ ನಡುವೆ ಇಂತಹ ಒಂದೊಂದೇ ಕತೆಗಳು ಒಂದೋ ಅರ್ಧ ಸತ್ಯ ಅಥವಾ ಹಸಿ ಸುಳ್ಳು ಎಂಬಂತಹ ವರದಿಗಳೂ ಬರುತ್ತಿವೆ. ನಿರೀಕ್ಷೆಯಂತೆ ಹೆಚ್ಚಿನ ಮಾಧ್ಯಮಗಳು ಈ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ. ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಕ್ವಾರಂಟೈನ್ ನಲ್ಲಿರುವ ತಬ್ಲೀಗಿ ಜಮಾಅತ್ ಸದಸ್ಯರು ಮಾಂಸಾಹಾರಕ್ಕೆ ಹಠ ಹಿಡಿದಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಅಲ್ಲಿನ ಪೊಲೀಸರೇ ಹೇಳಿಕೆ ನೀಡಿದ್ದಾರೆ. 

ಈಗ ದಿಲ್ಲಿಯ ಮಹಿಳಾ ವೈದ್ಯರೊಬ್ಬರ ಟ್ವೀಟ್ ಗಳು ವೈರಲ್ ಆಗುತ್ತಿವೆ. "ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ನಾನೂ ಅಲ್ಲಿ ಕರ್ತವ್ಯದಲ್ಲಿದ್ದೆ. ಅಲ್ಲಿದ್ದ ತಬ್ಲೀಗಿಗಳು ಒಮ್ಮೆಯೂ ಯಾರ ಜೊತೆಯೂ ಅನುಚಿತವಾಗಿ ವರ್ತಿಸಿಲ್ಲ" ಎಂದು ಊರ್ವಿ ಶರ್ಮ ರೈನಾ ಎಂಬ ವೈದ್ಯೆ ಶುಕ್ರವಾರ  ಮೊದಲು ಟ್ವೀಟ್ ಮಾಡಿದ್ದರು. 

ಶನಿವಾರ ಮತ್ತೆ ಟ್ವೀಟ್ ಮಾಡಿರುವ ಊರ್ವಿ ಶರ್ಮ ಅವರು " ನಾನು ಮುಂಚೂಣಿಯಲ್ಲಿರುವಾಗ ಕಂಡಿದ್ದನ್ನು ಜನರಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಎಲ್ಲಾದರೂ ಯಾರಿಂದಲಾದರೂ ಕೆಟ್ಟ ವರ್ತನೆ ಕಂಡು ಬಂದಿದ್ದಲ್ಲಿ ನಾನು ಅದನ್ನು ಖಂಡಿತ ಸಮರ್ಥಿಸುವುದಿಲ್ಲ. ಆದರೆ ಎಲ್ಲೋ ಆಗಿರುವ ಘಟನೆಯನ್ನು ಎಲ್ಲೋ ಆದ ಘಟನೆ ಎಂದೇ ನೋಡಬೇಕೇ ವಿನಃ ಅದನ್ನು ಇಡೀ ಸಮುದಾಯದ ಮೇಲೆ ಹೊರಿಸಲು ಹೋಗಬಾರದು " ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 

ತಬ್ಲೀಗಿಗಳು ವೈದ್ಯರ ಜೊತೆ ಸಹಕರಿಸಿಲ್ಲ ಎಂಬ ವರದಿಗಳು ಒಂದು ವೇಳೆ ನಿಜವಾಗಿದ್ದರೂ ಅವರು ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಿದರು ಎಂದು ನಂಬಲು ಅವರ ಕಟು ಟೀಕಾಕಾರರೂ ಸಿದ್ಧರಿಲ್ಲ. ಏಕೆಂದರೆ ತಬ್ಲೀಗಿಗಳು ಮಹಿಳೆಯರ ಜೊತೆ ಮಾತನಾಡುವುದು, ಕೆಟ್ಟದಾಗಿ ವರ್ತಿಸುವುದು ಹಾಗಿರಲಿ. ಅವರು ಕುಟುಂಬದವರಲ್ಲದ ಮಹಿಳೆಯರನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಆ ನಿಯಮವನ್ನು ಅವರು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದು ಸಾಮಾನ್ಯವಾಗಿ ತಬ್ಲೀಗಿಗಳ ಬಗ್ಗೆ ತಿಳಿದವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಪೂರಕವಾಗಿ ಈಗ ಡಾ.ಊರ್ವಿ ಶರ್ಮ ಅವರ ಹೇಳಿಕೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News