ಲಾಕ್ಡೌನ್ ನಂತರದ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ನಡೆಸಿ: ಸಚಿವರಿಗೆ ಪ್ರಧಾನಿ ಮೋದಿ ಸೂಚನೆ
Update: 2020-04-07 17:28 GMT
ಹೊಸದಿಲ್ಲಿ, ಎ.7: ಲಾಕ್ಡೌನ್ ಬಳಿಕದ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಆರ್ಥಿಕತೆಯ ಮೇಲೆ ಕೊರೋನ ವೈರಸ್ನ ಪರಿಣಾಮದ ತೀವ್ರತೆ ಕಡಿಮೆಗೊಳಿಸಲು ಯೋಜನೆ ರೂಪಿಸಬೇಕು ಎಂದು ಪ್ರಧಾನಿ ಮೋದಿ ಸಚಿವರಿಗೆ ಸೂಚಿಸಿದ್ದಾರೆ.
ಕೊರೋನ ಸೋಂಕಿನ ವಿರುದ್ಧದ ಸಮರ ಸುದೀರ್ಘಾವಧಿಯದ್ದಾಗಿದೆ. ಅಧಿಕ ಪ್ರಮಾಣದಲ್ಲಿ ಕೊರೋನ ಹರಡುವ ಪ್ರದೇಶಗಳೆಂದು ಗುರುತಿಸಿರುವ ಹಾಟ್ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆ ಹಂತಹಂತವಾಗಿ ಚಟುವಟಿಕೆಗಳನ್ನು ಆರಂಭಿಸುವ ಕ್ರಮವೂ ಸೇರಿದಂತೆ, ತುರ್ತು ಪರಿಸ್ಥಿತಿಯ ಸಂದರ್ಭವನ್ನು ನಿರ್ವಹಿಸುವ ತಂತ್ರೋಪಾಯಗಳನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ.