ಊರಿಗೆ ತೆರಳಲು ಸೈಕಲ್ ಕದ್ದು, ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟ ವಲಸಿಗ ಕಾರ್ಮಿಕ !
ಜೈಪುರ್: ರಾಜಸ್ಥಾನದ ಭರತ್ಪುರ್ದಿಂದ ಸುಮಾರು 250 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಬರೇಲಿಯಲ್ಲಿರುವ ತನ್ನ ಮನೆಗೆ ತನ್ನ ಪುತ್ರನೊಂದಿಗೆ ತೆರಳಲು ಸೈಕಲ್ ಒಂದನ್ನು ಕದ್ದ ವಲಸಿಗ ಕಾರ್ಮಿಕನೊಬ್ಬ ಆ ಸೈಕಲ್ ಮಾಲಿಕನಿಗೆ ಬರೆದಿರುವ ಕ್ಷಮಾಪಣೆ ಪತ್ರ ಮನಕಲಕುವಂತಿದೆ.
ಮುಹಮ್ಮದ್ ಇಕ್ಬಾಲ್ ಎಂಬ ಹೆಸರಿನ ಈ ವಲಸಿಗ ಕಾರ್ಮಿಕ ಸೋಮವಾರ ರಾತ್ರಿ ಭರತ್ಪುರ್ ಜಿಲ್ಲೆಯ ರಾರಹ್ ಗ್ರಾಮದ ಸಾಹಬ್ ಸಿಂಗ್ ಎಂಬಾತನ ಮನೆಯ ಹೊರಗಿದ್ದ ಸೈಕಲ್ ಒಂದನ್ನು ಕದ್ದಿದ್ದ. ಮರುದಿನ ತನ್ನ ಮನೆ ಜಗಲಿಯನ್ನು ಗುಡಿಸುತ್ತಿದ್ದಾಗ ಸಿಂಗ್ಗೆ ಈ ಪತ್ರ ದೊರಕಿತ್ತು.
ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು. “ನಾನೊಬ್ಬ ಕಾರ್ಮಿಕ ಹಾಗೂ ಅಸಹಾಯಕ ಕೂಡ, ನಾನು ಅಪರಾಧವೆಸಗಿದ್ದೇನೆ. ನಿಮ್ಮ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ. ನನಗೆ ಬರೇಲಿ ತನಕ ಹೋಗಲಿದೆ. ನನ್ನ ಬಳಿ ಬೇರೆ ಯಾವುದೇ ದಾರಿಯಿಲ್ಲ ಹಾಗೂ ನನಗೊಬ್ಬ ವಿಕಲಾಂಗ ಮಗನಿದ್ದಾನೆ.''
ಕಾರ್ಮಿಕ ಸೈಕಲ್ ಕದ್ದ ರಾರಾಹ್ ಗ್ರಾಮವು ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿದೆ.