ಫ್ಯಾಕ್ಟ್ ಚೆಕ್: ಕೊರೋನ ಸಮಯದಲ್ಲಿ ದ್ವೇಷ ಹರಡಲು ‘ಮಸೀದಿಗಾಗಿ ಹಿಂದೂ ಬಾಲಕನ ಬಲಿ’ ಎಂಬ ಹೊಸ ಸುಳ್ಳು

Update: 2020-05-18 11:52 GMT

ಬಿಹಾರದ ಗೋಪಾಲ್ ಗಂಜ್ ಎಂಬಲ್ಲಿ ಮಸೀದಿಯೊಂದಕ್ಕೆ ಹಿಂದೂ ಬಾಲಕನೊಬ್ಬನನ್ನು ಬಲಿ ಕೊಡಲಾಗಿದೆ ಎಂದು ಬಲಪಂಥೀಯ ವೆಬ್ ಸೈಟ್ OpIndia  ವರದಿಯೊಂದನ್ನು ಪ್ರಕಟಿಸಿತ್ತು. “ಗ್ರಾಮದಲ್ಲಿ ಹೊಸ ಮಸೀದಿಯೊಂದನ್ನು ನಿರ್ಮಿಸಲಾಗಿದ್ದು, ಹಿಂದೂವನ್ನು ಬಲಿ ನೀಡಿದರೆ ಮಸೀದಿಯು ಶಕ್ತಿಶಾಲಿಯಾಗಲಿದೆ ಎನ್ನುವ ನಂಬಿಕೆಯಿದೆ” ಎಂದು ವರದಿ ಪ್ರಕಟಿಸಿದ್ದ OpIndia ಬಿಹಾರದ ಕಟೈಯಾದ ಬೇಲಾ ದೀಹ್ ಗ್ರಾಮದ ರಾಜೇಶ್ ಜೈಸ್ವಾಲ್ ರ ಪುತ್ರ 15 ವರ್ಷದ ರೋಹಿತ್ ನನ್ನು ಬಲಿ ಕೊಡಲಾಗಿದೆ ಎಂದು ಆರೋಪಿಸಿತ್ತು.

ಸಾಮಾಜಿಕ ಜಾಲತಾಣ ಫೇಸ್ಬುಕ್ , ಟ್ವಿಟರ್ , ವಾಟ್ಸ್ಯಾಪ್ ಗಳಲ್ಲೂ ಇದೇ ರೀತಿಯ ಆರೋಪಗಳೊಂದಿಗೆ ಬಾಲಕನ ಮೃತದೇಹದ ಫೋಟೊಗಳು ವೈರಲ್ ಆಗಿದ್ದವು. ಇಷ್ಟೇ ಅಲ್ಲದೆ ಒಪಿಇಂಡಿಯಾ , “ರೋಹಿತ್ ನನ್ನು ಕರೆತಂದಿದ್ದ ಮುಸ್ಲಿಂ ಮಕ್ಕಳ ಪೋಷಕರು ಆತ ಆಗಮಿಸುತ್ತಿದ್ದಂತೆ ಹಿಡಿದು ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹೀನ ಕೃತ್ಯದಲ್ಲಿ 6 ಮಂದಿ ಭಾಗಿಯಾಗಿದ್ದಾರೆ” ಎಂದಿತ್ತು.

ಇದೇ ವರದಿಯಲ್ಲಿ ಒಪಿಇಂಡಿಯಾ ಬಾಲಕನ ಸಹೋದರಿ ಮತ್ತು ತಂದೆಯ ವಿಡಿಯೋಗಳ ಜೊತೆಗೆ ಕಟೈಯಾದ ಪೊಲೀಸರು ಬಾಲಕನ ಕುಟುಂಬವನ್ನು ನಿಂದಿಸುತ್ತಿರುವ ವಿಡಿಯೋವನ್ನು ಪ್ರಕಟಿಸಿತ್ತು.

ಈ ಬಗ್ಗೆ ಮೇ 17ರಂದು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಬಿಹಾರ ಪೊಲೀಸ್ ಡಿಜಿಐ ಗುಪ್ತೇಶ್ವರ್ ಪಾಂಡೆ, ಈ ಘಟನೆಗೆ ಸಂಬಂಧಿಸಿ ಕಟೈಯಾ ಎಸ್ಎಚ್ ಒ ಅಶ್ವಿನಿ ತಿವಾರಿಯವರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ಇನ್ನು ಉಳಿದಿರುವ 2 ವಿಡಿಯೋಗಳಲ್ಲಿ ಬಾಲಕನ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ಈ ವಿಡಿಯೋದಲ್ಲಿ ಅವರು ಕೆಲ ವ್ಯಕ್ತಿಗಳ ವಿರುದ್ಧ ಆರೋಪ ಮಾಡುತ್ತಾರೆಯೇ ಹೊರತು ಮಸೀದಿಯ ಬಗ್ಗೆ ಯಾವುದೇ ಆರೋಪ ಮಾಡುವುದಿಲ್ಲ. ಮಸೀದಿಗಾಗಿ ರೋಹಿತ್ ನನ್ನು ಕೊಲ್ಲಲಾಗಿದೆ ಅಥವಾ ಬಲಿ ಕೊಡಲಾಗಿದೆ ಎಂದು ಅವರು ವಿಡಿಯೋದಲ್ಲಿ ಎಲ್ಲೂ ಹೇಳಿಲ್ಲ.

ಇದಕ್ಕೆ ಸಂಬಂಧಿಸಿದ ಎರಡು ವರದಿಗಳಲ್ಲಿ ಒಪಿಇಂಡಿಯಾ ‘ಗೋಪಾಲ್ ಗಂಜ್ ಮಸೀದಿಗಾಗಿ ಬಲಿ ಪ್ರಕರಣ’ ಎಂದು ಬರೆದಿದೆ. ಒಪಿಇಂಡಿಯಾ ಮಾತ್ರವಲ್ಲದೆ, ಸಿರ್ಫ್ ನ್ಯೂಸ್, ಎಬಿಪಿ ಬಿಹಾರ್ ಮತ್ತು ಕನ್ನಡದಲ್ಲಿ ‘ವಿಜಯ ಕರ್ನಾಟಕ’ ಇದೇ ರೀತಿ ವರದಿಯನ್ನು ಪ್ರಕಟಿಸಿದೆ.

ಆದರೆ ಮೇ 13ರಂದು ಒಪಿಇಂಡಿಯಾ 2 ವರದಿಗಳನ್ನು ಪ್ರಕಟಿಸಿದ್ದು, ತಲೆಬರಹದಲ್ಲಿ ಮಸೀದಿ ಅಥವಾ ಬಲಿ ನೀಡಿದ ಉಲ್ಲೇಖವಿಲ್ಲ. ಆದರೆ ವರದಿಯಲ್ಲಿ ಆ ಆರೋಪ ಹಾಗೆಯೇ ಇದೆ. ಈ ಆರೋಪ ಕುಟುಂಬಸ್ಥರದ್ದು ಎಂದು ವರದಿ ತಿಳಿಸಿದೆ. ಒಪಿಇಂಡಿಯಾದ ಈ ವರದಿಗಳನ್ನು ಆಧರಿಸಿ ಕೆಲ ಪ್ರಶ್ನೆಗಳು ಮೂಡುತ್ತವೆ.

1.ಮಾನವ ಬಲಿಯಂತಹ ಪದ್ಧತಿಗಳು ಇಸ್ಲಾಂನಲ್ಲಿ ಇದೆಯೇ?

2.ಮಸೀದಿಯನ್ನು ‘ಶಕ್ತಿಶಾಲಿ’ಯಾಗಿಸಲು ಹಿಂದೂ ಬಾಲಕನನ್ನು ಬಲಿ ನೀಡಲಾಯಿತೇ?

3.ಆರೋಪಿಗಳೆಲ್ಲರೂ ಮುಸ್ಲಿಮರೇ?

4.ಇಲ್ಲಿನ ಹಿಂದೂ ನಿವಾಸಿಗಳು ಮುಸ್ಲಿಂ ನಿವಾಸಿಗಳಿಗೆ ಹೆದರಿದ್ದಾರೆಯೇ?

ಫ್ಯಾಕ್ಟ್ ಚೆಕ್

ಈ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಕಂಡುಕೊಳ್ಳೋಣ. ಇದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದ ಆರಂಭಿಕ ವರದಿಗಳು ಹೇಗೆ ಪ್ರಕಟವಾಗಿತ್ತು ಎನ್ನುವುದನ್ನು ಗಮನಿಸೋಣ. ಒಪಿಇಂಡಿಯಾ ಪ್ರಕಾರ ಘಟನೆ ಮಾರ್ಚ್ 28ರಂದು ನಡೆದಿದೆ. ಮಾರ್ಚ್ 30ರಂದು ದೈನಿಕ್ ಭಾಸ್ಕರ್ ಪ್ರಕಟಿಸಿದ ವರದಿ ಹೀಗಿದೆ.

“ರೋಹಿತ್ ತನ್ನ ಇತರ ನಾಲ್ವರು ಸ್ನೇಹಿತರ ಜೊತೆ ಗೊಯಿತಾ ತೋಲಾ ನದಿಗೆ ಈಜಲು ತೆರಳಿದ್ದ. ಆದರೆ ಸಂಜೆಯಾದರೂ ಆತ ಮರಳಿ ಬರದ ಕಾರಣ ಮನೆಯವರು ಆತನಿಗಾಗಿ ಹುಡುಕಾಟ ಆರಂಭಿಸಿದರು. ಇದೇ ಸಂದರ್ಭ, ರೋಹಿತ್ ನದಿಯಲ್ಲಿ ಮುಳುಗಿದ್ದಾನೆ. ಆದರೆ ಈ ಬಗ್ಗೆ ತಿಳಿಸಿದರೆ ಕೊಲ್ಲುವುದಾಗಿ ಸ್ನೇಹಿತರು ಬೆದರಿಸಿದರು. ಅದಕ್ಕಾಗಿ ಸುಮ್ಮನಿದ್ದೆ ಎಂದು ವಿಜಯ್ ಮಾಲ್ ಭಗತ್ ಎಂಬವರ ಪುತ್ರ ಮಾಹಿತಿ ನೀಡಿದ್ದ. ಪೊಲೀಸರು ಆತನ ಹೇಳಿಕೆ ಪಡೆದುಕೊಂಡಿದ್ದಾರೆ” ಎಂದು ಕಟೈಯಾ ಎಸ್ ಎಚ್ ಒ ತಿಳಿಸಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ತಿಳಿಸಿತ್ತು. ಆದ್ದರಿಂದ ಆರಂಭಿಕ ವರದಿಗಳಲ್ಲಿ ಮಸೀದಿಯ ಬಗ್ಗೆಯಾಗಲೀ, ಬಲಿ ನೀಡಿದ ಬಗ್ಗೆಯಾಗಲೀ ಯಾವುದೇ ಉಲ್ಲೇಖವಿಲ್ಲ ಎನ್ನುವುದು ಸ್ಪಷ್ಟಗೊಳ್ಳುತ್ತದೆ.

ಪ್ರಶ್ನೆ 1: ಇಸ್ಲಾಂನಲ್ಲಿ ಮಾನವ ಬಲಿ ನೀಡುವ ಪದ್ಧತಿ ಇದೆಯೇ?

ಈ ಬಗ್ಗೆ altnews.in ಇಸ್ಲಾಮಿಕ್ ವಿದ್ವಾಂಸ ಮುಫ್ತಿ ಮೊಹ್ಸಿನ್ ಇದ್ರಿ ಖಾಸ್ಮಿಯವರನ್ನು ಸಂಪರ್ಕಿಸಿದ್ದು, “ಅಲ್ಲಾಹನಿಗಲ್ಲದೆ ಬೇರೆ ಯಾವುದೇ ಕಾರಣಕ್ಕೆ ಪ್ರಾಣಿಗಳನ್ನು ಬಲಿ ನೀಡುವುದನ್ನೂ ಇಸ್ಲಾಂ ಅನುಮತಿಸುವುದಿಲ್ಲ. ಮಾನವ ಬಲಿ ಇಸ್ಲಾಂನಲ್ಲಿ ಸಂಪೂರ್ಣ ನಿಷಿದ್ಧ” ಎಂದಿದ್ದಾರೆ.

ಪ್ರಶ್ನೆ 2: ಮಸೀದಿಯನ್ನು ‘ಶಕ್ತಿಶಾಲಿ’ಯಾಗಿಸಲು ಹಿಂದೂ ಬಾಲಕನನ್ನು ಬಲಿ ನೀಡಲಾಯಿತೇ?

ಈ ಬಗ್ಗೆ ಮಾಹಿತಿಗಾಗಿ ಆಲ್ಟ್ ನ್ಯೂಸ್ ಬಾಲಕನ ತಂದೆ ರಾಜೇಶ್ ಜೈಸ್ವಾಲ್ ರನ್ನು ಸಂಪರ್ಕಿಸಿದ್ದು, ಅವರು ಮಾನಸಿಕವಾಗಿ ಜರ್ಜರಿತರಾಗಿದ್ದು ಅವರ ಧ್ವನಿಯಲ್ಲೇ ತಿಳಿಯುತ್ತಿತ್ತು. ಅವರು ಆಲ್ಟ್ ನ್ಯೂಸ್ ಜೊತೆ 2 ಹೇಳಿಕೆಯನ್ನು ನೀಡಿದರು.

►ಮೊದಲು ನಿರ್ಮಾಣ ಹಂತದಲ್ಲಿದ್ದ ಮಸೀದಿ ಪ್ರದೇಶದಲ್ಲಿ ತಾನು ಹೋಗುವಾಗ ಮೌಲ್ವಿಯೊಬ್ಬರು ನೀರನ್ನು ಚಿಮುಕಿಸುತ್ತಿದ್ದರು ಎಂದು ರೋಹಿತ್ ಕೆಲ ದಿನಗಳ ಹಿಂದಷ್ಟೇ ತನ್ನ ತಾಯಿಯಲ್ಲಿ ತಿಳಿಸಿದ್ದ.

►ಎರಡನೆಯದು, ತಾನು ಪುತ್ರನ ಜೊತೆಗೆ ಸಾಬಿರ್ ಅನ್ಸಾರಿ ಎಂಬಾತನ ಪಕೋಡ ಅಂಗಡಿಯ ಎದುರೇ ಪಕೋಡ ಅಂಗಡಿಯನ್ನ ನಡೆಸುತ್ತಿದ್ದೆ. ಅನ್ಸಾರಿಯ ಅಂಗಡಿಗೆ ಅಷ್ಟೇನೂ ವ್ಯಾಪಾರವಿರಲಿಲ್ಲ. ಹಾಗಾಗಿ ‘ಇದೇ ಕಾರಣಕ್ಕಾಗಿ ಅವರು ನನ್ನ ಪುತ್ರನನ್ನು ಕೊಂದಿರಬಹುದು’ ಎಂದು ರಾಜೇಶ್ ಅನುಮಾನ ವ್ಯಕ್ತಪಡಿಸಿದರು.

ಆದರೆ ರಾಜೇಶ್ ದಾಖಲಿಸಿದ್ದ ಎಫ್ ಐಆರ್ ನಲ್ಲಿ ಮೌಲ್ವಿ ಬಗ್ಗೆಯಾಗಲೀ ಅನ್ಸಾರಿ ಬಗ್ಗೆಯಾಗಲೀ ಯಾವುದೇ ಉಲ್ಲೇಖವಿರಲಿಲ್ಲ. ಈ ಬಗ್ಗೆ ಅನ್ಸಾರಿಯನ್ನು ಪೊಲೀಸರು ತನಿಖೆ ನಡೆಸಿದ್ದರೇ ಎಂದು ರಾಜೇಶ್ ಬಳಿ ಪ್ರಶ್ನಿಸಿದಾಗ ಪ್ರಕರಣದಲ್ಲಿ ಅನ್ಸಾರಿಯ ಪಾತ್ರವಿಲ್ಲ ಎಂದ ರಾಜೇಶ್, ಅನ್ಸಾರಿ ಜೊತೆ ತನಗೆ ಯಾವುದೇ ಸಮಸ್ಯೆಯಿಲ್ಲ ಎಂದರು. ರಾಜೇಶ್ ಆಡಳಿತ ಮತ್ತು ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನುವುದು ಅವರ ಧ್ವನಿಯಲ್ಲಿ ಸ್ಪಷ್ಟವಾಗಿತ್ತು.

ರಾಜೇಶ್ ರಿಗೆ ಸ್ಪಷ್ಟವಿಲ್ಲದ ವಿವಿಧ ಆರೋಪಗಳಿಂದಲೇ ಈ ಬಗ್ಗೆ ವರದಿ ಮಾಡಲಾಗಿದೆ ಎನ್ನುವುದು  ಸ್ಪಷ್ಟವಾಗುತ್ತದೆ. ತನ್ನ ಪುತ್ರ ಹೇಗೆ ಮೃತಪಟ್ಟ ಎನ್ನುವುದು ರಾಜೇಶ್ ಗೆ ಸ್ಪಷ್ಟವಿಲ್ಲ, ಆದ್ದರಿಂದ ಅವರು ಸಾಧ್ಯತೆಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಪುತ್ರನನ್ನು ಕಳೆದುಕೊಂಡ ತಂದೆಯೊಬ್ಬ ಮಾನಸಿಕತೆ ಸ್ಥಿತಿಯಲ್ಲಿ ನೀಡಿದ ಹೇಳಿಕೆಗಳನ್ನು ಘಟನೆಯ ಕಾರಣವೆಂಬಂತೆ ಒಪಿಇಂಡಿಯಾ ವರದಿ ಪ್ರಕಟಿಸಿದೆ.

ಮೇ 14ರಂದು ಈ ಬಗ್ಗೆ ಮಾಹಿತಿ ನೀಡಿದ್ದ ಡಿಜಿಐ ವಿಜಯ್ ಕುಮಾರ್ ವರ್ಮಾ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಮತ್ತು ಐವರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಹೊಸ ಮಸೀದಿ ನಿರ್ಮಾಣದ ಜೊತೆ ಬಾಲಕನ ಸಾವು ಪ್ರಕರಣಕ್ಕೆ ಸಂಬಂಧವಿದೆ ಎಂಬ ಒಪಿಇಂಡಿಯಾ ವರದಿ ಸುಳ್ಳು ಎಂದು ಅವರು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಒಪಿಇಂಡಿಯಾ ಮತ್ತು ಖಬರ್ ತಕ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದವರು ತಿಳಿಸಿದರು.

ಮೇ 17ರಂದು ಬಿಹಾರ ಪೊಲೀಸ್ ಡಿಜಿಪಿ ಗುಪ್ತೇಶ್ವರ್ ಪಾಂಡೆ, ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ, ಮಸೀದಿಗಾಗಿ ಬಾಲಕನನ್ನು ಬಲಿ ಕೊಡಲಾಗಿದೆ ಎನ್ನುವ ಆರೋಪಗಳು ಸುಳ್ಳು ಎಂದಿದ್ದಾರೆ. ಸ್ವತಃ ಡಿಜಿಪಿ ಬಾಲಕನ ಗ್ರಾಮಕ್ಕೆ ಮತ್ತು ಆತ ಮುಳುಗಿ ಮೃತಪಟ್ಟ ನದಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಜೊತೆಗೂ ಅವರು ಮಾತುಕತೆ ನಡೆಸಿದ್ದಾರೆ. ಈ ಹತ್ಯೆ ಎರಡು ಸಮುದಾಯಗಳ ನಡುವಿನದ್ದು ಎನ್ನುವ ಆರೋಪವನ್ನು ಗ್ರಾಮಸ್ಥರೂ ಕೂಡ ನಿರಾಕರಿಸಿದ್ದಾರೆ. ಇದು ಪೂರ್ವ ನಿರ್ಧರಿತ ಹತ್ಯೆಯೇ ಅಥವಾ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆಯೇ ಎಂದು ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಐವರು ಮಕ್ಕಳು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ದನ ಮೇಯಿಸುವವರು ನೋಡಿದ್ದಾರೆ. ಆದರೆ ಆ ಸಂದರ್ಭ 6ನೆ ಬಾಲಕ ಇರಲಿಲ್ಲ ಎಂದವರು ಮಾಹಿತಿ ನೀಡಿದ್ದಾಗಿ ಪಾಂಡೆ ತಿಳಿಸಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮತ್ತು ಇತರ ಫೋರೆನ್ಸಿಕ್ ತಜ್ಞರ ಜೊತೆಗೂ ಮಾತನಾಡಿದ್ದಾಗಿ ಡಿಜಿಪಿ ತಿಳಿಸಿದ್ದಾರೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮೃತ ಬಾಲಕನ ತಂದೆ ರಾಜೇಶ್ ದಾಖಲಿಸಿರುವ ಎಫ್ ಐಆರ್ ನಲ್ಲಿ ಮಸೀದಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಅದರಲ್ಲಿರುವ ಆರೋಪಗಳು ಈ ರೀತಿ ಇದೆ- ಕೆಲವು ಮಕ್ಕಳು ಮನೆಗೆ ಬಂದು ರೋಹಿತ್ ನನ್ನು ಆಟವಾಡಲು ಕರೆದಿದ್ದರು. ಇದರಲ್ಲಿ ಮೂವರು ಹಿಂದೂಗಳು ಮತ್ತು ಓರ್ವ ಮುಸ್ಲಿಂ. ಸಂಜೆಯಾದರೂ ರೋಹಿತ್ ಮನೆಗೆ ಮರಳಿರಲಿಲ್ಲ. ಮರುದಿನ ನದಿಯಲ್ಲಿ ಪುತ್ರನ ಮೃತದೇಹ ಪತ್ತೆಯಾಗಿತ್ತು. ಕುಟುಂಬಕ್ಕೆ ಒಬ್ಬ ಬಾಲಕನ ಮೇಲೆ ಅನುಮಾನವಿತ್ತು. ಆತನನ್ನ ಪ್ರಶ್ನಿಸಿದಾಗ 6 ಮಕ್ಕಳು ರೋಹಿತ್ ನನ್ನು ಕೊಂದು ಮೃತದೇಹವನ್ನು ನದಿಯಲ್ಲಿ ಮುಳುಗಿಸಿದ್ದರು ಎಂದು ಬಾಲಕ ಹೇಳಿದ್ದ. ಪೊದೆಯೊಂದರಲ್ಲಿ ಆತನ ವಸ್ತ್ರವನ್ನು ಅಡಗಿಸಿಡಲಾಗಿತ್ತು. ರೋಹಿತ್ ಸಾವಿಗೆ ರಾಜೇಶ್ 6 ಜನರು ಕಾರಣ ಎಂದಿದ್ದರು. ಅದರಲ್ಲಿ ಒಬ್ಬ ಹಿಂದೂ ಮತ್ತು ಉಳಿದವರು ಮುಸ್ಲಿಮರು. ಈ 6 ಮಂದಿಯಲ್ಲಿ ನಾಲ್ವರು ಅಪ್ರಾಪ್ತರು.

ಬಾಲಕನ ತಂದೆ ರಾಜೇಶ್ ನದಿಯಿಂದ ರೋಹಿತ್ ಮೃತದೇಹ ತರುತ್ತಿರುವ ವಿಡಿಯೋಗಳನ್ನು ಆಲ್ಟ್ ನ್ಯೂಸ್ ಗೆ ಕಳುಹಿಸಿದ್ದು, ಅದರ ಸ್ಕ್ರೀನ್ ಶಾಟ್ ಈ ಕೆಳಗಿದೆ. ಮೃತದೇಹದ ಕತ್ತಿನಲ್ಲಿ ಯಾವುದೇ ಗಾಯದ ಗುರುತಿಲ್ಲ. ರೋಹಿತ್ ನನ್ನು ಬಲಿ ಕೊಟ್ಟಿದ್ದರೆ ಕತ್ತಿನಲ್ಲಿ ಗಾಯದ ಗುರುತುಗಳು ಇರುತ್ತಿದ್ದವು. ಆದ್ದರಿಂದ ಮಸೀದಿಗಾಗಿ ರೋಹಿತ್ ನನ್ನು ಬಲಿ ಕೊಡಲಾಗಿದೆ ಎನ್ನುವುದು ಸುಳ್ಳು ಎನ್ನುವುದು ಸಾಬೀತಾಗುತ್ತದೆ.

ಪ್ರಶ್ನೆ 3: ಆರೋಪಿಗಳೆಲ್ಲರೂ ಮುಸ್ಲಿಮರೇ?

ಒಪಿಇಂಡಿಯಾ ತನ್ನ ವರದಿಯಲ್ಲಿ ಆರೋಪಿಗಳೆಲ್ಲರೂ ಮುಸ್ಲಿಮರು ಎಂದಿತ್ತು. ಈ ಬಗ್ಗೆ ಬಾಲಕನ ತಂದೆಯೇ ಮಾಹಿತಿ ನೀಡಿದ್ದಾರೆ ಎಂದು ಅದು ಆರೋಪಿಸಿತ್ತು. ಆದರೆ ಎಫ್ ಐಆರ್ ನಲ್ಲಿ ನಾಲ್ವರು ಬಾಲಕರ ಹೆಸರಿದ್ದು, ಅದರಲ್ಲಿ ಒಬ್ಬ ಹಿಂದೂ ಬಾಲಕ. ಒಪಿಇಂಡಿಯಾದ ಪ್ರಕಟಿಸಿದ ವರದಿಯಲ್ಲಿದ್ದ ವಿಡಿಯೋದಲ್ಲಿ ರಾಜೇಶ್ ಆ ಬಾಲಕನ ಹೆಸರನ್ನೂ ಹೇಳುತ್ತಾರೆ.

ಆದ್ದರಿಂದ ಆರೋಪಿಗಳೆಲ್ಲರೂ ಮುಸ್ಲಿಮರು ಎನ್ನುವ ಒಪಿಇಂಡಿಯಾದ ವರದಿಯೂ ಸುಳ್ಳು.

ಪ್ರಶ್ನೆ 4: ಇಲ್ಲಿನ ಹಿಂದೂಗಳು ಮುಸ್ಲಿಂ ನಿವಾಸಿಗಳಿಗೆ ಹೆದರಿದ್ದಾರೆಯೇ?

ಆದರೆ ಈ ಬಗ್ಗೆ ಪ್ರತಿಕ್ರಿಯಿಸುವ ಬಾಲಕನ ತಾಯಿ , ತನ್ನ ಕುಟುಂಬಕ್ಕೆ ಮತ್ತು ಗ್ರಾಮದ ಮುಸ್ಲಿಮರಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆಡಳಿತದ ನಡೆಯಿಂದ ಬೇಸತ್ತು ತಾವು ಗ್ರಾಮ ತೊರೆದಿದ್ದಾಗಿ ಅವರು ಹೇಳುತ್ತಾರೆ. ಮುಸ್ಲಿಮರಿಂದ ಬೆದರಿಕೆ ಇದ್ದ ಕಾರಣ ನಾವು ಗ್ರಾಮ ತೊರೆದಿದ್ದಲ್ಲ ಎಂದಾಕೆ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಪುತ್ರನನ್ನು ಮಸೀದಿಗಾಗಿ ಬಲಿ ಕೊಡಲಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುವ ಅವರು, “ನಾವು ಸುಳ್ಳು ಹೇಳುವುದಿಲ್ಲ. ನಾವು ಕಣ್ಣಾರೆ ಅಂತಹ ಘಟನೆಯನ್ನು ನೋಡಿಲ್ಲ. ನೀವು ಗ್ರಾಮದಲ್ಲಿ ಯಾರನ್ನು ಬೇಕಾದರೂ ಕೇಳಬಹುದು. ಅವರು ಮಗನನ್ನು ಕರೆದರು. ಕೊಂದರು. ನಾವೇ ಕೊಂದು ಮೃತದೇಹ ನದಿಗೆ ಎಸೆದಿದ್ದಾಗಿ ಬಾಲಕರೇ ಒಪ್ಪಿಕೊಂಡಿದ್ದಾರೆ” ಎಂದು ಹೇಳುತ್ತಾರೆ.

ಇಲ್ಲಿನ ಸ್ಥಳೀಯ ಪತ್ರಕರ್ತರೊಬ್ಬರಿಂದ ಆಲ್ಟ್ ನ್ಯೂಸ್ ಮಾಹಿತಿ ಸಂಗ್ರಹಿಸಿದ್ದು, ಅವರು ಗ್ರಾಮಸ್ಥರ  ಜೊತೆ ಮಾತನಾಡಿದ್ದು, ಹಲವು ಗ್ರಾಮಸ್ಥರು ‘ಮಸೀದಿಗಾಗಿ ಬಲಿ’ ಎನ್ನುವ ಆರೋಪವನ್ನು ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿ ಆರೋಪ ಮಾಡುವವರು ಗ್ರಾಮಸ್ಥರಲ್ಲ ಬದಲಾಗಿ ಫೇಸ್ ಬುಕ್ ನಲ್ಲಿರುವವರು ಎಂದವರು ಹೇಳುತ್ತಾರೆ.

ಗ್ರಾಮದಲ್ಲಿರುವ ಹಿಂದೂ ಮುಸ್ಲಿಂ ಅನುಪಾತದ ಬಗ್ಗೆ ಗ್ರಾಮಸ್ಥರಾದ ಪ್ರದ್ಯುಮ್ನ ರೈ ಅವರನ್ನು ಪ್ರಶ್ನಿಸಿದ್ದು, ಗ್ರಾಮದಲ್ಲಿ 150ರಿಂದ 175ರಷ್ಟು ಮುಸ್ಲಿಮರು ಮತ್ತು 600ರಿಂದ 700ರಷ್ಟು ಹಿಂದೂಗಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮುಸ್ಲಿಮರಿಂದಾಗಿಯೇ ಬಾಲಕನ ಕುಟುಂಬ ಗ್ರಾಮ ಬಿಟ್ಟು ಹೋಗಿದೆ ಎನ್ನುವ ಆರೋಪವನ್ನು ಅವರು ಸುಳ್ಳು ಎಂದು ಹೇಳಿದ್ದಾರೆ. ತಾನು ಒಪಿಇಂಡಿಯಾದ ವರದಿಯನ್ನು ಓದಿದ್ದೇನೆ ಎಂದ ಅವರು, ಅದರಲ್ಲಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ.

ಆರೋಪಿಗಳ ಕುಟುಂಬಸ್ಥರು ಹೇಳುವುದೇನು?

ಎಫ್ ಐಆರ್ ನಲ್ಲಿ ಹೆಸರಿಸಲಾಗಿರುವವರ ಕುಟುಂಬಸ್ಥರ ಜೊತೆಗೂ ಪತ್ರಕರ್ತ ಮಾತನಾಡಿದ್ದಾರೆ. ಆರೋಪಿಗಳಲ್ಲೊಬ್ಬನಾದ ಬಾಲಕನ ಅಜ್ಜ ಇದ್ರೀಸ್ ಅನ್ಸಾರಿ ಹೇಳುವಂತೆ, 5 ಮಕ್ಕಳು ನದಿಗೆ ಸ್ನಾನ ಮಾಡಲೆಂದು ತೆರಳಿದ್ದರು. ಅದರಲ್ಲೊಬ್ಬ ಮುಳುಗಿದ್ದ. ಇದರಿಂದ ಹೆದರಿದ ಉಳಿದವರು ಅಲ್ಲಿಂದ ಪರಾರಿಯಾದರು ಎಂದವರು ಹೇಳುತ್ತಾರೆ. ಇನ್ನೊಬ್ಬರು ಮಾತನಾಡಿ, ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಹೇಳುತ್ತಾರೆ. ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದಿದ್ದು , ಪರಸ್ಪರ ಮದುವೆ ಮತ್ತು ಹಬ್ಬಗಳಲ್ಲಿ ಭಾಗಿಯಾಗುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಒಪಿಇಂಡಿಯಾವ ವಿರುದ್ಧ ಎಫ್ ಐಆರ್

ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಈಗಾಗಲೇ ಒಪಿಇಂಡಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಆಧಾರರಹಿತ ಆರೋಪಗಳನ್ನು ಮಾಡಲಾಗಿತ್ತು. ಪ್ರಕರಣದ ಬಗ್ಗೆ ಮಾಹಿತಿಯಿಲ್ಲದೆ ಅಥವಾ ಅರ್ಥ ಮಾಡಿಕೊಳ್ಳದೆ ಒಪಿಇಂಡಿಯಾ ಮೇ 6ರಂದು ವರದಿ ಪ್ರಕಟಿಸಿತ್ತು” ಎಂದು ಪೊಲೀಸ್ ಎಫ್ ಐಆರ್ ತಿಳಿಸಿದೆ.

Full View Full View Full View Full View Full View

Writer - ಕೃಪೆ: altnews.in

contributor

Editor - ಕೃಪೆ: altnews.in

contributor

Similar News