ಚೀನಾದಿಂದ ಭಾರತದ ಯೋಧರ ಹತ್ಯೆ ಗಡಿಭಾಗದ ಗಂಭೀರತೆಗೆ ಸಾಕ್ಷಿ: ಉಮರ್ ಅಬ್ದುಲ್ಲಾ
Update: 2020-06-16 18:05 GMT
ಶ್ರೀನಗರ, ಜೂ.16: ಗಡಿಭಾಗದಲ್ಲಿ ಉದ್ವಿಗ್ನತೆ ತಗ್ಗಿಸುವ ಪ್ರಕ್ರಿಯೆಯ ಮಧ್ಯೆಯೇ ಚೀನಾದ ಸೇನೆಯು ಭಾರತದ ಮೂವರು ಯೋಧರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದಾದರೆ , ಇಲ್ಲಿ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂದು ಯಾರು ಬೇಕಾದರೂ ಊಹಿಸಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಗುಂಡು ಹಾರಾಟ ನಡೆದಿಲ್ಲ. ಹಿಂಸಾತ್ಮಕ ಘರ್ಷಣೆ ಮತ್ತು ಕಲ್ಲು ತೂರಾಟದಿಂದ ಯೋಧರು ಸಾವನ್ನಪ್ಪಿದ್ದಾರೆ ಎಂಬ ಸರಕಾರದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಶ್ನೆಗಳನ್ನು ಕೇಳುವುದು ರಾಷ್ಟ್ರವಿರೋಧಿ ಎಂಬ ಸರಕಾರದ ಅಭಿಪ್ರಾಯವನ್ನು ಮಾಧ್ಯಮಗಳು ಪ್ರಚಾರ ಮಾಡಿದಾಗ ಹೀಗೆ ಆಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಗಲ್ವಾನ್ ಕಣಿವೆಯಲ್ಲಿ ಗುಂಡು ಹಾರಾಟ ನಡೆದಿಲ್ಲ ಎಂದು ಟ್ವಿಟರ್ ಬಳಕೆದಾರರು ಉಲ್ಲೇಖಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿರುವ ಅಬ್ದುಲ್ಲಾ, ಹಾಗಿದ್ದರೆ ಭಾರತದ ಯೋಧರನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಇದು ಇನ್ನಷ್ಟು ಭಯಾನಕ ವಿಷಯ ಎಂದಿದ್ದಾರೆ.