ರುವಾಂಡ ನರಮೇಧ ಜಗತ್ತಿನ ಮುಂದಿಟ್ಟಿದ್ದ ಅಪಾಯದ ಬೀಜಗಳನ್ನು ಬಿತ್ತುತ್ತಿರುವ ಭಾರತದ ಮಾಧ್ಯಮಗಳು

Update: 2020-06-30 17:33 GMT

ಕಳೆದ ಎಪ್ರಿಲ್‌ನಲ್ಲಿ ದಿಲ್ಲಿಯ ನಿಝಾಮುದ್ದೀನ್‌ ನಲ್ಲಿರುವ ತಬ್ಲೀಗಿ ಜಮಾಅತ್‌ನ ಕೇಂದ್ರಕಚೇರಿಯು ಭಾರತದ 10 ಕೊರೋನ ವೈರಸ್ ಹಾಟ್‌ಸ್ಪಾಟ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಬಳಿಕ ಭಾರತೀಯ ಮಾಧ್ಯಮಗಳ ಒಂದು ವರ್ಗವು ಜಮಾಅತ್‌ನ್ನು ಈ ಸಾಂಕ್ರಾಮಿಕ ಪಿಡುಗಿಗೆ ಹೆಚ್ಚುಕಡಿಮೆ ಏಕೈಕ ಹೊಣೆಗಾರನನ್ನಾಗಿ ಮಾಡಿತ್ತು. ವಾಸ್ತವದಲ್ಲಿ, ತಬ್ಲೀಗಿಗಳೇ ಭಾರತಕ್ಕೆ ಕೊರೋನ ವೈರಸ್ ಪಿಡುಗನ್ನು ತಂದವರು ಎಂದು ಹಲವಾರು ಭಾರತೀಯರು ನಂಬಿದ್ದಾರೆ ಎಂದರೆ ಅದು ಅತಿಶಯೋಕ್ತಿಯಾಗುವುದಿಲ್ಲ. ಟಿವಿ ನಿರೂಪಕರು ತಬ್ಲೀಗಿಗಳನ್ನು ‘ತಾಲಿಬಾನ್ ಜಮಾಅತ್’ ಎಂದು ಪ್ರಸ್ತಾಪಿಸುವ ಹಾಗೂ ಅವರು ‘ಕೊರೋನ ಜಿಹಾದ್’ ಅಥವಾ ‘ಉಗುಳುವ ಜಿಹಾದ್’ನಲ್ಲಿ ತೊಡಗಿದ್ದಾರೆಂದು ಆರೋಪಿಸುವ ಮೂಲಕ ಅವರ ಕುರಿತು ಸುದ್ದಿಗಳನ್ನು ವಾರಗಟ್ಟಲೆ ಕಾಲ ಉಪ್ಪುಖಾರ ಸೇರಿಸಿ ಪ್ರಸಾರ ಮಾಡುತ್ತಲೇ ಇದ್ದರು.

ಇದು ಎಷ್ಟೊಂದು ಅತಿರೇಕಕ್ಕೆ ತಲುಪಿತ್ತೆಂದರೆ ಇಸ್ಲಾಮೊಫೋಬಿಕ್ ದ್ವೇಷ ಭಾಷಣಗಳ ಮೇಲೆ ನಿಗಾ ಇರಿಸುವ ಅಮೆರಿಕದ ದಕ್ಷಿಣ ಏಷ್ಯಾ ಮಾನವ ಹಕ್ಕುಗಳ ಗುಂಪು ‘ಈಕ್ವಲಿಟಿ ಲ್ಯಾಬ್’ ತುರ್ತಾಗಿ ಮಧ್ಯಪ್ರವೇಶ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯನ್ನು ಆಗ್ರಹಿಸಿತ್ತು. ಭಾರತದಲ್ಲಿಯ ಮತ್ತು ವಿಶ್ವದಾದ್ಯಂತದ ಮುಸ್ಲಿಮರು ಹೆಚ್ಚುತ್ತಿರುವ ತಾರತಮ್ಯ ಮತ್ತು ಧರ್ಮಾಂಧತೆಯ ಅಪಾಯವನ್ನು ಎದುರಿಸುತ್ತಿದ್ದಾರೆ, ಅವರಿಗೆ ವೈದ್ಯಕೀಯ ಸೇವೆಗಳನ್ನೂ ನಿರಾಕರಿಸಲಾಗುತ್ತಿದೆ ಎಂದು ಅದು ಎಚ್ಚರಿಕೆ ನೀಡಿತ್ತು.

ತಬ್ಲೀಗಿ ಜಮಾಅತ್ ಕುರಿತು ಭಾರತೀಯ ಮಾಧ್ಯಮಗಳ ವರದಿಗಳು ವ್ಯಾಪಕ ವಿಶ್ಲೇಷಣೆಗೊಳಗಾಗಿದ್ದರೂ ಈ ಪೈಕಿ ಕೆಲವು ದ್ವೇಷ ಭಾಷಣಗಳಾಗುವ ಅರ್ಹತೆ ಹೊಂದಿವೆಯೇ ಎನ್ನುವುದನ್ನು ಪರಿಶೀಲಿಸುವುದು ಅರ್ಥಪೂರ್ಣವಾಗುತ್ತದೆ.

ದ್ವೇಷ ಭಾಷಣವು ಪತ್ರಿಕೋದ್ಯಮದ ಸೋಗಿನಲ್ಲಿದ್ದಾಗ ಏನಾಗುತ್ತದೆ?, ಈ ಕುರಿತು ಪ್ರಶ್ನಿಸಿದರೆ ದ್ವೇಷ ಭಾಷಣದ ಸಮರ್ಥಕರು ವಾಕ್ ಸ್ವಾತಂತ್ರದ ವಾದವನ್ನು ಮುಂದಿಡುತ್ತಾರೆ ಮತ್ತು ಹೀಗೆ ಪ್ರಶ್ನಿಸಿದ್ದನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಖಂಡಿಸುತ್ತಾರೆ. ಆದರೆ ‘ವಾಕ್ ಸ್ವಾತಂತ್ರ್ಯ’ವೇ ಕೊಲ್ಲುತ್ತಿದ್ದರೆ ಅಥವಾ ಕೊಲ್ಲುವ ಸಾಮರ್ಥ್ಯ ಹೊಂದಿದ್ದರೆ ಏನಾಗುತ್ತದೆ?

ಮಾಧ್ಯಮಗಳ ವಿಚಾರಣೆಯ ಇತಿಹಾಸ

     ಬಹಳ ಹಿಂದಿನಿಂದಲೂ ಹಿಂಸೆಯನ್ನು ಪ್ರಚೋದಿಸಲು ದ್ವೇಷ ಭಾಷಣವು ಬಳಕೆಯಾಗುತ್ತಿದೆ. ಜರ್ಮನಿಯ ಯಹೂದಿ ವಿರೋಧಿ ಸಾಪ್ತಾಹಿಕ ’ಡೆರ್ ಸ್ಟರ್ಮರ್ ’ನ ಸ್ಥಾಪಕ ಸಂಪಾದಕ ಜ್ಯೂಲಿಯಸ್ ಸ್ಟ್ರೆಷರ್ ಅವರು ಹಿಂಸೆಯನ್ನು ಪ್ರಚೋದಿಸಿದ್ದಕ್ಕಾಗಿ ಉತ್ತರದಾಯಿಯಾಗಿಸಲ್ಪಟ್ಟ ಇತಿಹಾಸದ ಮೊದಲ ಪತ್ರಕರ್ತರ ಪೈಕಿ ಒಬ್ಬರಾಗಿದ್ದರು. ನ್ಯುರೆಂಬರ್ಗ್‌ನಲ್ಲಿ ಅವರ ವಿಚಾರಣೆ ನಡೆದಿತ್ತು ಮತ್ತು ಅವರ ವಿರುದ್ಧದ ನ್ಯಾಯಾಲಯದ ತೀರ್ಪು ‘‘ಯಹೂದಿಗಳ ವಿರುದ್ಧ ತನ್ನ 25 ವರ್ಷಗಳ ಕಾಲ ಭಾಷಣ, ಬರವಣಿಗೆ ಮತ್ತು ಬೋಧನೆಗಳಿಂದಾಗಿ ಸ್ಟ್ರೆಷರ್ ‘ನಂಬರ್ ಒನ್ ಯಹೂದಿ ಪೀಡಕ ’ಎಂದೇ ವ್ಯಾಪಕವಾಗಿ ಪರಿಚಿತರಾಗಿದ್ದಾರೆ ’’ಎಂದು ಹೇಳಿತ್ತು.

ಅದಾದ 56 ವರ್ಷಗಳ ಬಳಿಕ ರುವಾಂಡದಲ್ಲಿಯ ನರಮೇಧದ ಕುರಿತು ಚೇಂಬರ್ ಆಫ್ ದಿ ಇಂಟರ್‌ನ್ಯಾಷನಲ್ ಕ್ರಿಮಿನಲ್ ಟ್ರಿಬ್ಯೂನಲ್ ಫಾರ್ ರುವಾಂಡ (ಐಸಿಟಿಆರ್) ನಡೆಸಿದ್ದ ವಿಚಾರಣೆಯು ಮೂವರು ಪತ್ರಕರ್ತರನ್ನು ಜನಾಂಗೀಯ ಹತ್ಯೆಗಳು, ನರಮೇಧಕ್ಕೆ ಪ್ರಚೋದನೆ ಮತ್ತು ಮಾನವತೆಯ ವಿರುದ್ಧ ಅಪರಾಧಗಳ ತಪ್ಪಿತಸ್ಥರು ಎಂದು ಎತ್ತಿ ಹಿಡಿದಿತ್ತು. ರುವಾಂಡ ವಿಚಾರಣೆಯು ದ್ವೇಷ ಭಾಷಣವನ್ನು ಪರಿಶೀಲಿಸಲು,ಪ್ರಶ್ನಿಸಲು ಮತ್ತು ಕಾನೂನು ಕ್ರಮವನ್ನು ಕೈಗೊಳ್ಳಲು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಮತ್ತೊಮ್ಮೆ ಮಾರ್ಗವನ್ನು ತೆರೆದಿತ್ತು. ನ್ಯೂರೆಂಬರ್ಗ್ ಮತ್ತು ರುವಾಂಡ ವಿಚಾರಣೆಗಳೆರಡರಲ್ಲೂ ದ್ವೇಷಪೂರಿತ ಅಪಪ್ರಚಾರವು ಮಾನವತೆಯ ವಿರುದ್ಧ ಅಪರಾಧವಾಗುತ್ತದೆ ಮತ್ತು ಅಪರಾಧವಾಗಿದೆ ಮತ್ತು ನರಮೇಧದ ಅಪರಾಧವಾಗಿದೆ ಎನ್ನುವುದು ಸಾಬೀತುಗೊಂಡಿತ್ತು.

ರುವಾಂಡದ ನರಮೇಧ ರಾತ್ರೋರಾತ್ರಿ ನಡೆದಿರಲಿಲ್ಲ. ದ್ವೇಷದ ಬೀಜಗಳು ಸಾಮೂಹಿಕ ಹತ್ಯಾಕಾಂಡವಾಗಿ ಮೊಳಕೆಯೊಡೆಯುವ ಮೊದಲೇ ವರ್ಷಗಳ ಕಾಲ ಅವುಗಳನ್ನು ನೆನೆಸಿಡಲಾಗಿತ್ತು.

ಭಾರತದಲ್ಲಿ ನರಮೇಧ ನಡೆಯುತ್ತಿಲ್ಲ, ಸದ್ಯೋಭವಿಷ್ಯದಲ್ಲಿ ನರಮೇಧ ನಡೆಯುತ್ತದೆ ಎಂದೂ ನನಗೆ ಅನ್ನಿಸುತ್ತಿಲ್ಲ. ಆದರೆ ನೀವು ಗಮನವಿಟ್ಟು ಕೇಳಿದರೆ ದೂರ ದಿಗಂತದಲ್ಲೆಲ್ಲೋ ದ್ವೇಷದ ಡೋಲಿನ ಶಬ್ಧ ಮೆಲ್ಲಗೆ ಮೊಳಗುತ್ತಿರುವುದನ್ನು ನೀವು ಆಲಿಸಬಹುದು. ಇತಿಹಾಸವು ನಿದರ್ಶನವಾಗುವುದಿದ್ದರೆ ತಡವಾಗುವ ಮುನ್ನವೇ ಅದನ್ನು ಗಂಭೀರವಾಗಿ ಪರಿಣಿಸುವುದು ಅನಿವಾರ್ಯವಾಗುತ್ತದೆ.

ಪೂರಕ ವಾತಾವರಣದ ಸೃಷ್ಟಿ

 ಜನರನ್ನು ಮಾನಸಿಕವಾಗಿ ಸನ್ನದ್ಧರನ್ನಾಗಿಸುವ ವಾತಾವರಣವನ್ನು ಸೃಷ್ಟಿಸುವುದು ಯಾವಾಗಲೂ ನರಮೇಧದ ಮೊದಲ ಹಂತವಾಗಿದೆ. ಜರ್ಮನಿಯಲ್ಲಿ ಯಹೂದಿಗಳ ನರಮೇಧ ಮತ್ತು ರುವಾಂಡ ಹತ್ಯಾಕಾಂಡಗಳ ಮುನ್ನ ಇದೇ ರೀತಿಯ ವಾತಾವರಣವನ್ನು ಸ್ಪಷ್ಟಿಸಲಾಗಿತ್ತು ಮತ್ತು ಇದರಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದ್ದವು.

ಭಾರತದಲ್ಲಿ ತಬ್ಲೀಗಿ ಸಮಾವೇಶದ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದವು ಮತ್ತು ಪಿತೂರಿಯ ವರ್ಣರಂಜಿತ ಕಥನಗಳನ್ನು ಹೆಣೆದಿದ್ದವು. ತಬ್ಲೀಗಿ ಜಮಾಅತ್‌ನ ಮುಖ್ಯಸ್ಥ ಮೌಲಾನಾ ಮುಹಮ್ಮದ್ ಸಾದ್ ಅವರನ್ನು ‘ಭಯೋತ್ಪಾದಕ’ ಮತ್ತು ‘ಸಾವುಗಳ ಮೌಲಾನಾ ’ಎಂದು ಹಾಗೂ ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನು ‘ಮಾನವ ಬಾಂಬ್‌ ಗಳು ’ಎಂದು ಬಣ್ಣಿಸಿದ್ದ ಮಾಧ್ಯಮಗಳು ಅವರನ್ನು ಭಯೋತ್ಪಾದಕ ಗುಂಪುಗಳು ಮತ್ತು ಪಾಕಿಸ್ತಾನದೊಂದಿಗೆ ತಳುಕು ಹಾಕಿದ್ದವು. ಈ ಯಾವುದಕ್ಕೂ ಸಾಕ್ಷ್ಯಾಧಾರಗಳೇ ಇರಲಿಲ್ಲ.

  ಝೀ ನ್ಯೂಸ್‌ನ ಸುಧೀರ್ ಚೌಧರಿ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ ಹೆಚ್ಚಿನವರು ಇದೇ ಕೆಲಸವನ್ನು ಮಾಡಿಕೊಂಡು ಬಂದಿದ್ದರು. ಗೋಸ್ವಾಮಿಯಂತೂ ತಬ್ಲೀಗಿ ಜಮಾಅತ್ ಕುರಿತು ತನ್ನ ಪ್ರೈಮ್ ಟೈಂ ಶೋನಲ್ಲಿ ಭಾರತದಲ್ಲಿಯ ಶೇ.50 ರಷ್ಟು ಕೊರೋನ ವೈರಸ್ ಪ್ರಕರಣಗಳಿಗೆ ತಬ್ಲೀಗಿ ಜಮಾಅತ್ ಮರ್ಕಝ್ ಕಾರಣ ಎಂದು ಅರಚಾಡಿದ್ದಲ್ಲದೆ, ಈ ’ವಾಸ್ತವ ’ದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ದೇಶವನ್ನು ಆಗ್ರಹಿಸಿದ್ದರು. ಅಂದ ಹಾಗೆ ಅವರು ಉಲ್ಲೇಖಿಸಿದ್ದ ಈ ಶೇ.50 ಸಂಖ್ಯೆಗೆ ಯಾವುದೇ ಆಧಾರ ಅಥವಾ ಸಾಕ್ಷ್ಯ ಅವರ ಬಳಿಯಿರಲಿಲ್ಲ.

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಗುಂಪಿನಿಂದ ಇಬ್ಬರು ಸಾಧುಗಳು ಸೇರಿದಂತೆ ಮೂವರ ಹತ್ಯೆ ಪ್ರಕರಣ ಕುರಿತು ವರದಿ ಮಾಡುವಾಗ ಇದೇ ಗೋಸ್ವಾಮಿ, ದೇಶದ ಶೇ.80ರಷ್ಟು ಜನರು ಹಿಂದುಗಳಾಗಿದ್ದಾರೆ ಮತ್ತು ಸನಾತನ ಧರ್ಮವನ್ನು ಪಾಲಿಸುವವರಾಗಿದ್ದಾರೆ. ಈ ದೇಶದಲ್ಲಿ ಹಿಂದು ಆಗಿರುವುದೇ ಅಪರಾಧವಾಗಿದೆ ಎಂದು ಹೇಳಿದ್ದರು. ಪಾಲ್ಘರ್ ಹತ್ಯೆಗೆ ಕೋಮುದ್ವೇಷ ಕಾರಣವಲ್ಲದಿದ್ದರೂ ಅವರು ಈ ಬೊಬ್ಬೆಯನ್ನು ಹಾಕಿದ್ದರು.

ಸ್ಟೀರಿಯೋಟೈಪಿಂಗ್‌ನ ಪಾತ್ರ

ಎಪ್ರಿಲ್‌ನಲ್ಲಿ ದ.ಕನ್ನಡ ಜಿಲ್ಲೆಯ ಕೆಲವೆಡೆಗಳಲ್ಲಿ “ಕೊರೋನ ವೈರಸ್ ಸಂಪೂರ್ಣವಾಗಿ ನಿರ್ಮೂಲನಗೊಳ್ಳುವವರೆಗೆ ಮುಸ್ಲಿಮ್ ವ್ಯಾಪಾರಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ” ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ರಾಮನಗರ ಜಿಲ್ಲೆಯ ಹಿಂದುಗಳ ಪ್ರಾಬಲ್ಯವಿರುವ ಅಂಕನಹಳ್ಳಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮಹೇಶ ಎಂಬಾತ ಯಾವುದೇ ಹಿಂದು ಮುಸ್ಲಿಮ್ ಜೊತೆ ಆತ್ಮೀಯವಾಗಿ ಮಾತನಾಡುವಾಗ ಸಿಕ್ಕಿಬಿದ್ದರೆ 500 ರೂ.ನಿಂದ 1000 ರೂ.ವರೆಗೆ ದಂಡ ವಿಧಿಸುವುದಾಗಿ ವೀಡಿಯೊದಲ್ಲಿ ಎಚ್ಚರಿಕೆ ನೀಡಿದ್ದ.

ಫ್ಯಾಶಿಸಂಗೆ ಗಂಭೀರ ಹೋಮ್ ವರ್ಕ್ ಅಗತ್ಯವಿದೆ. ಇಲ್ಲಿ ಸ್ಟೀರಿಯೊಟೈಪಿಂಗ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ಜನಮಾನಸವನ್ನು ಸಿದ್ಧಗೊಳಿಸಲು ಈ ಸ್ಟೀರಿಯೋಟೈಪಿಂಗ್ ಬಳಕೆಯಾಗುತ್ತದೆ. ಎಲ್ಲ ಮಾಧ್ಯಮಗಳು ಒಂದೇ ರೀತಿ ಪ್ರಸಾರ ಮಾಡುತ್ತಿದ್ದರೆ ಅದು ಜನರ ಮೇಲೆ ಪ್ರಭಾವವನ್ನು ಬೀರುತ್ತದೆ. ಜರ್ಮನಿಯಲ್ಲಿ ಇದೇ ಆಗಿತ್ತು. ಯಹೂದಿಗಳ ವಿರುದ್ಧದ ಅಪಪ್ರಚಾರಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಜರ್ಮನ್ನರು ಅದನ್ನು ನಂಬಿದ್ದರು,ಅಂದರೆ ಅದಕ್ಕೆ ಅವರ ಮನಸ್ಸನ್ನು ಸಿದ್ಧಗೊಳಿಸಲಾಗಿತ್ತು.

ಇತಿಹಾಸದ ದೌರ್ಬಲ್ಯ?

ನಾವು ಸಾಕಷ್ಟು ನಿಕಟವಾಗಿ ಪರಿಶೀಲಿಸಿದರೆ ದ್ವೇಷಕ್ಕಾಗಿ ಭೂಮಿಕೆ ಹೇಗೆ ರಹಸ್ಯವಾಗಿ ಮತ್ತು ಸ್ಥಿರವಾದ ರೀತಿಯಲ್ಲಿ ತಯಾರಾಗುತ್ತಿದೆ ಎನ್ನುವುದನ್ನು ಕಾಣಲು ಸಾಧ್ಯವಾಗಬಹುದು. ರುವಾಂಡದ ಮುಖ್ಯ ಪ್ರಾಸಿಕ್ಯೂಟರ್ ಹಸನ್ ಬುಬಾಕರ್ ಜ್ಯಾಲೊ ಅವರು,ಮಾಧ್ಯಮಗಳು ತಮ್ಮ ಶಕ್ತಿಯನ್ನು ಜನಾಂಗೀಯ ಅಥವಾ ಜನಾಂಗೀಯ ಗುಂಪುಗಳ ಮೇಲೆ ದಾಳಿಗೆ ವಿನಿಯೋಗಿಸಿದರೆ ಅವು ನ್ಯಾಯದ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ವಾದಿಸಿದ್ದರು.

ಮಾನವೀಯ ಮೌಲ್ಯಗಳನ್ನು ಸೃಷ್ಟಿಸುವ ಮತ್ತು ನಾಶಗೊಳಿಸಬಲ್ಲ ಮಾಧ್ಯಮಗಳ ಶಕ್ತಿಯು ಅತ್ಯಂತ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಮಾಧ್ಯಮಗಳನ್ನು ನಿಯಂತ್ರಿಸುವವರು ಅದರ ಪರಿಣಾಮಗಳಿಗೆ ಉತ್ತರದಾಯಿಗಳಾಗುತ್ತಾರೆ ಎಂದು ಐಸಿಟಿಆರ್ ತನ್ನ ತೀರ್ಪಿನಲ್ಲಿ ಹೇಳಿತ್ತು.

 ಕೇವಲ ದ್ವೇಷ ಭಾಷಣವು ಜನಾಂಗೀಯ ನರಮೇಧವನ್ನು ಪ್ರಚೋದಿಸುವುದಿಲ್ಲ ಎಂದು ಯಾರಾದರೂ ಕಾನುನುಬದ್ಧವಾಗಿ ವಾದಿಸಿದರೂ ಇತಿಹಾಸವು ಸಾಬೀತುಗೊಳಿಸಿರುವಂತೆ ಅದು ನರಮೇಧದ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎನ್ನುವುದನ್ನು ಯಾರೂ ನಿರಾಕರಿಸಲು ಸಾಧ್ಯವಾಗುವುದಿಲ್ಲ.

 ಮಾಧ್ಯಮಗಳು ಇತಿಹಾಸದ ದೌರ್ಬಲ್ಯವಾಗುವಂತಿಲ್ಲ ಮತ್ತು ದೌರ್ಬಲ್ಯವಾಗಿ ಉಳಿಯುವಂತಿಲ್ಲ. ರುವಾಂಡದ ವಿಚಾರಣೆಗಳು ತೋರಿಸಿರುವಂತೆ ಪತ್ರಿಕೋದ್ಯಮದ ಉತ್ತರದಾಯಿತ್ವ ಮತ್ತು ವೀಕ್ಷಕರ ಜಾಗರೂಕತೆ ಮಾತ್ರ ಭಾರತದಲ್ಲಿ ಮೊಳಗುತ್ತಿರುವ ಅಪಾಯದ ವಿರುದ್ಧ ನಮಗೆ ರಕ್ಷಣೆಯನ್ನು ನೀಡಬಲ್ಲದು. ಸಾಮೂಹಿಕ ಹತ್ಯೆಗಳ, ತಿರುಗಿ ಬಾರಲು ಸಾಧ್ಯವಾಗದ ಹಂತವನ್ನು ನಾವು ತಲುಪಿದರೆ ಸತ್ತವರನ್ನು ಎಣಿಕೆ ಹಾಕುವಾಗ ಹಿಂಸಾಚಾರದ ಇತಿಹಾಸದ ಜಾಡು ಪತ್ತೆ ಹಚ್ಚುವುದು ಕಠಿಣವಾಗುತ್ತದೆ.

Writer - ನಿಧಿ ಸುರೇಶ್, newslaundry.com

contributor

Editor - ನಿಧಿ ಸುರೇಶ್, newslaundry.com

contributor

Similar News