‘ಕೊರೋನದ ಬಗ್ಗೆ ವ್ಯಂಗ್ಯವಾಡದಿದ್ದರೆ ನೀವು ಸುರಕ್ಷಿತವಾಗಿ ಇರಬಹುದಾಗಿತ್ತು’

Update: 2020-07-25 17:37 GMT

ಹೊಸದಿಲ್ಲಿ: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರಿಗೆ ಕೊರೋನ ವೈರಸ್ ಸೋಂಕು ತಗಲಿರುವುದರಿಂದ ತನಗೆ ನೋವಾಗಿದೆ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದಾರೆ.

ಇದೇ ಸಂದರ್ಭ ಅವರು ಕೊರೋನ ಬಿಕ್ಕಟ್ಟಿನ ಕುರಿತು ವ್ಯಂಗ್ಯವಾಡದೆ ಗಂಭೀರವಾಗಿ ಪರಿಗಣಿಸಿದ್ದರೆ ಇದು ನಡೆಯುತ್ತಿರಲಿಲ್ಲ ಎಂದಿದ್ದಾರೆ. ಈ ಬಗ್ಗೆ ಕಮಲ್ ನಾಥ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

“ಶಿವರಾಜ್ ಜಿ, ನೀವು ಕೊರೋನ ಪಾಸಿಟಿವ್ ಆಗಿರುವುದು ತಿಳಿದು ನೋವಾಗಿದೆ. ನೀವು ಶೀಘ್ರ ಗುಣಮುಖರಾಗಬೇಕೆಂದು ನಾನು ಹಾರೈಸುತ್ತೇನೆ. ಆದರೆ ನಾವು ಕೊರೋನ ಬಗ್ಗೆ ಗಂಭೀರವಾಗಿ ಇದ್ದಾಗ ನೀವು ಕಾಂಗ್ರೆಸ್ ನಾಟಕ ಮಾಡುತ್ತಿದೆ. ಸರಕಾರವನ್ನು ಉಳಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದರ ಬಗ್ಗೆ ನಾನು ವಿಷಾದಿಸುತ್ತೇನೆ. ಕೊರೋನದಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದಿತ್ತು. ಅದಕ್ಕಾಗಿ ನೀವು ಅದರ ಬಗ್ಗೆ ವ್ಯಂಗ್ಯವಾಡದೆ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿತ್ತು. ಹಾಗಾಗಿದ್ದಲ್ಲಿ ನೀವು ಇಂದು ಸುರಕ್ಷಿತವಾಗಿ ಇರುತ್ತಿದ್ದಿರಿ. ಏನೇ ಆಗಲಿ ನೀವು ಶೀಘ್ರ ಗುಣಮುಖರಾಗುತ್ತೀರಿ ಎನ್ನುವ ನಂಬಿಕೆ ನನಗಿದೆ” ಎಂದು ಕಮಲ್ ನಾಥ್ ಟ್ವೀಟ್ ಗಳಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News