ಹಲವು ಸಮಸ್ಯೆಗಳ ಪರಿಹಾರಕ್ಕೆ ಮೋದಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ: ಅಣ್ಣಾಮಲೈ

Update: 2020-07-30 17:58 GMT

ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತನ್ನ ಸೇವೆಗೆ ರಾಜೀನಾಮೆ ನೀಡಿದ ನಂತರ ಸದ್ಯ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ವಿ ದ ಲೀಡರ್ಸ್’ ಎನ್ನುವ ಸಂಘಟನೆಯೊಂದನ್ನು ಅವರು ಸ್ಥಾಪಿಸಿದ್ದು, ಯುವಜನತೆಗೆ ತರಬೇತಿಗಳನ್ನು ನೀಡಲಿದ್ದು, ಉತ್ತಮ ಉದ್ಯೋಗಾವಕಾಶಗಳು ದೊರಕಲು ಈ ಸಂಘಟನೆ ನೆರವಾಗಲಿದೆ. ಈ ನಡುವೆ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನುವುದು ಕೂಡ ಖಚಿತವಾಗಿದ್ದು, ಈ ಬಗ್ಗೆ indianexpress.com ನಡೆಸಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಮೋದಿ ಮತ್ತು ಅವರ ರಾಜಕಾರಣದ ಬಗ್ಗೆ ನೀವೇನು ಹೇಳುತ್ತೀರಿ’ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, “ಸಮಗ್ರ ದೃಷ್ಟಿಕೋನದಿಂದ ಹೇಳುವುದಾದರೆ ನಮ್ಮ ದೇಶದಲ್ಲಿ ದೀರ್ಘಕಾಲದಿಂದ ಇದ್ದ ಹಲವು ಸಮಸ್ಯೆಗಳ ಸುಧಾರಣೆಗಾಗಿ ಪ್ರಧಾನಿ ಮೋದಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಇದರಲ್ಲಿ ಜಿಎಸ್ ಟಿ ಒಂದು. ಹಿಂದಿನ ಸರಕಾರದ ಅವಧಿಯಲ್ಲಿ ಈ ಆಲೋಚನೆಗೆ ಚಾಲನೆ ನೀಡಲಾಗಿತ್ತಾದರೂ, ಹಲವು ಕಾರಣಗಳಿಂದ ಅದು ಜಾರಿಯಾಗಿರಲಿಲ್ಲ. ಆದರೆ ಪ್ರಧಾನಿ ಮೋದಿ ಅದನ್ನು ಸಾಧಿಸಿದರು. ಭದ್ರತಾ ದೃಷ್ಟಿಕೋನದಿಂದ ನೋಡುವುದಾದರೆ ನೋಟ್ ಬ್ಯಾನ್ ಕೂಡ ಒಳ್ಳೆಯ ನಡೆ. ಆಂತರಿಕ ಭದ್ರತಾ ಬೆದರಿಕೆಗಳಿಗೆ, ಮಾವೋವಾದಿ ಮತ್ತು ಇತರ ಚಟುವಟಿಕೆಗಳಿಗೆ ಅದು ಕಡಿವಾಣ ಹಾಕಿದೆ. ನೋಟು ನಿಷೇಧದಿಂದ ಹೆಚ್ಚು ಹಣ ಅರ್ಥ ವ್ಯವಸ್ಥೆಗೆ ಹರಿದು ಬಂದಿದೆ. ಇದು ಒಳ್ಳೆಯ ಲಕ್ಷಣ. 370ನೆ ವಿಧಿ ಬಗ್ಗೆ ಹೇಳುವುದಾದರೆ ಅದು ನಾವು ದೀರ್ಘಕಾಲದಿಂದ ಮುಂದೂಡುತ್ತಾ ಬಂದಿದ್ದ ತಾತ್ಕಾಲಿಕ ನಿಯಮವಾಗಿತ್ತು. 370ನೆ ವಿಧಿ ರದ್ದತಿಯನ್ನು ಮಾಡಿದ ರೀತಿಯ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ನನ್ನ ಪ್ರಕಾರ 370ನೆ ವಿಧಿ ಮತ್ತು 35ಎ ಕೊನೆಗೊಳ್ಳಲೇ ಬೇಕಾದದ್ದು. ಆದರೆ ಅದನ್ನು ಮಾಡಿದ ರೀತಿಯನ್ನು ಉತ್ತಮವಾಗಿ ನಿರ್ವಹಿಸಬಹುದಾಗಿತ್ತು. ಸಿಎಎ/ಎನ್ ಆರ್ ಸಿ ಚರ್ಚೆಯಲ್ಲಿ ಕೆಳಹಂತದ ಸಂವಹನದಲ್ಲಿ ಸಮಸ್ಯೆಯಿತ್ತು ಎಂದು ನನಗನಿಸಿತು. ಆ ಸಂದರ್ಭ ಸಾಮಾಜಿಕ ಜಾಲತಾಣ ಸಂಪೂರ್ಣ ಕಲುಷಿತಗೊಂಡಿತ್ತು. ಸರಕಾರ ಏನು ಹೇಳಿತ್ತು ಎನ್ನುವುದನ್ನು ಕೇಳುವುದಕ್ಕೆ ಯಾರೂ ಸಿದ್ಧರಿರಲಿಲ್ಲ. ಮುಸ್ಲಿಮರು 2ನೆ ದರ್ಜೆ ನಾಗರಿಕರಾಗುತ್ತಾರೆ ಎನ್ನುವ ವದಂತಿ ಹರಡಿತು. ಆದರೆ ಸಿಎಎ ದೌರ್ಜನ್ಯಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿತ್ತು” ಎಂದವರು ಹೇಳಿದರು.

ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲಿ ಹೊಸ ವ್ಯಕ್ತಿಗೆ ಯಾವುದೇ ಜಾಗವಿಲ್ಲ. ವಿಭಿನ್ನ ದೃಷ್ಟಿಕೋನದೊಂದಿಗೆ ವ್ಯಕ್ತಿಯೊಬ್ಬ ಬಂದರೆ ಆತನ ಮೇಲೆ ದೌರ್ಜನ್ಯಗಳು ನಡೆಯುತ್ತವೆ, ಟ್ರೋಲ್ ಗಳನ್ನು ನಡೆಸಲಾಗುತ್ತದೆ. ಇನ್ನು 2-3 ತಿಂಗಳುಗಳಲ್ಲಿ ರಜಿನಿಕಾಂತ್ ತಮ್ಮ ಪಕ್ಷವನ್ನು ಘೋಷಿಸಿದ ನಂತರ ನಮಗೆ ಆ ಬಗ್ಗೆ ಮಾಹಿತಿ ಲಭಿಸುತ್ತದೆ. ಅವರ ಚಿಂತನೆಗಳು, ವ್ಯವಸ್ಥೆಯಲ್ಲಿ ಅವರು ತರಲು ಬಯಸಿರುವ ಬದಲಾವಣೆಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ನನ್ನ ಮತ್ತು ರಜಿನಿಕಾಂತ್ ನಡುವಿನ ಮಾತುಕತೆಗಳ ಬಗ್ಗೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ರಜಿನಿ ಸರ್ ಮುಂದೆ ಬಂದು ಅವರು ಯೋಜನೆಗಳನ್ನು ಘೋಷಿಸುವುದಕ್ಕಾಗಿ ನಾನೂ ಕಾಯುತ್ತಿದ್ದೇನೆ. ಆ ಬಳಿಕ ನಾನು ನನ್ನ ನಡೆಯ ಬಗ್ಗೆ ತಿಳಿಸುತ್ತೇನೆ” ಎಂದರು.

ನೀವು ಬಿಜೆಪಿ ಪರ ಮೃದುಧೋರಣೆ ಹೊಂದಿದವರು ಬಗ್ಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಎಡವೋ, ಬಲವೋ ಎಂದು ಜನರು ಕೇಳುತ್ತಿದ್ದಾರೆ. ನನ್ನದು ಬಲ ಮತ್ತು ಎಡ ಸಿದ್ಧಾಂತಗಳ ಸಮ್ಮಿಲನ. ನನ್ನ ಮನಸ್ಸು ಬಲ ಎಂದರೆ ನನ್ನ ಹೃದಯ ಎಡ ಎಂದು ಹೇಳಿದಂತೆ. ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಯಾವ ಕಡೆ ಸೇರಿದವನು ಎನ್ನುವುದು ನನಗೆ ಗೊತ್ತಿಲ್ಲ. ನಾನು ಮೋದಿಯವರನ್ನು ಮತ್ತು ಆಧ್ಯಾತ್ಮಿಕತೆಯನ್ನು ಇಷ್ಟಪಡುತ್ತೇನೆ ಎಂದಿದ್ದಕ್ಕಾಗಿ ಜನರು ನನಗೆ ಬಿಜೆಪಿ ಜೊತೆ ಸಂಬಂಧ ಕಲ್ಪಿಸುತ್ತಿದ್ದಾರೆ. ಇಂತಹ ಟ್ರೋಲ್ ಗಳಿಗೆ ಗಮನ ನೀಡುವ ಹಂತವನ್ನು ನಾನು ದಾಟಿ ಬಂದಿದ್ದೇನೆ. ಇದು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಹಕ್ಕಿದೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News