ಊರಲ್ಲಿ ಉದ್ಯೋಗದ ಕೊರತೆ, ಆರ್ಥಿಕ ಸಂಕಷ್ಟ: ಮತ್ತೆ ನಗರಗಳ ಕಡೆಗೆ ವಲಸೆ ಕಾರ್ಮಿಕರು

Update: 2020-08-03 17:58 GMT

ಹೊಸದಿಲ್ಲಿ, ಆ.3: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಂಡ ಲಾಕ್‌ಡೌನ್‌ನಿಂದ ಇಕ್ಕಟ್ಟಿಗೆ ಸಿಲುಕಿ, ಹರಸಾಹಸ ಪಟ್ಟು ತಮ್ಮ ಸ್ವಂತ ಊರಿಗೆ ತೆರಳಿದ್ದ ವಲಸೆ ಕಾರ್ಮಿಕರಲ್ಲಿ ಮೂರನೇ ಎರಡರಷ್ಟು ಮಂದಿ ಈಗ ಮತ್ತೆ ನಗರಕ್ಕೆ ಮರಳಿದ್ದಾರೆ ಅಥವಾ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದ ವರದಿ ತಿಳಿಸಿದೆ.

ಊರಿನಲ್ಲಿ ಸೂಕ್ತ ಉದ್ಯೋಗದ ಅಲಭ್ಯತೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಹೊರೆಯಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರು ಈಗ ಉಲ್ಬಣಗೊಂಡಿರುವ ಕೊರೋನ ಸೋಂಕಿನ ಮಧ್ಯೆಯೇ ಮತ್ತೆ ನಗರದತ್ತ ಮುಖ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಒಳನಾಡಿನಲ್ಲಿ ಅನ್‌ಲಾಕ್ ಪ್ರಕ್ರಿಯೆ ಹೇಗಿದೆ’ ಎಂಬ ಕುರಿತು ನಡೆಸಲಾದ ಅಧ್ಯಯನದಲ್ಲಿ 11 ರಾಜ್ಯಗಳ 48 ಜಿಲ್ಲೆಗಳಲ್ಲಿ, 4,835 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ . ಆಗಾ ಖಾನ್ ರೂರಲ್ ಸಪೋರ್ಟ್ ಪ್ರೋಗ್ರಾಂ(ಇಂಡಿಯಾ), ಆ್ಯಕ್ಷನ್ ಫಾರ್ ಸೋಷಿಯಲ್ ಅಡ್ವಾನ್ಸ್‌ಮೆಂಟ್, ಗ್ರಾಮೀಣ ಸಹಾರಾ, ಐ-ಸಕ್ಷಮ್, ಪ್ರದಾನ್, ಸಾಥಿ-ಅಪ್, ಸೆಸ್ಟಾ, ಸೇವಾ ಮಂದಿರ ಮತ್ತು ಟ್ರಾನ್ಸ್‌ಫಾರ್ಮ್ ರೂರಲ್ ಇಂಡಿಯಾ ಫೌಂಡೇಶನ್ ಜೂನ್ 24ರಿಂದ ಜುಲೈ 8ರ ಅವಧಿಯಲ್ಲಿ ಈ ಸಮೀಕ್ಷೆ ನಡೆಸಿವೆ.

ತಮ್ಮ ಹಳ್ಳಿಗೆ ಹಿಂದಿರುಗಿದ್ದ 29% ವಲಸೆ ಕಾರ್ಮಿಕರು ಮತ್ತೆ ನಗರಕ್ಕೆ ಹಿಂದಿರುಗಿದ್ದರೆ, 45% ಕಾರ್ಮಿಕರು ನಗರಕ್ಕೆ ಹಿಂದಿರುಗಲು ಬಯಸಿದ್ದಾರೆ. ಹಳ್ಳಿಗೆ ಹಿಂದಿರುಗಿದ ಕಾರ್ಮಿಕರು ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಳ್ಳಿಗಳಲ್ಲಿ ಕುಶಲ ಕರ್ಮಿಗಳಿಗೆ ಉದ್ಯೋಗದ ಕೊರತೆ ಕಾರ್ಮಿಕರು ಮರಳಿ ನಗರದತ್ತ ಮುಖ ಮಾಡಲು ಪ್ರಧಾನ ಕಾರಣವಾಗಿದೆ . ಹಳ್ಳಿಗೆ ಮರಳಿರುವ ಕಾರ್ಮಿಕರಲ್ಲಿ 25% ಜನ ಇನ್ನೂ ಕೆಲಸದ ಹುಡುಕಾಟದಲ್ಲಿದ್ದಾರೆ. 24% ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆ ಬಿಡಿಸುವ ಬಗ್ಗೆ ಯೋಚಿಸುತ್ತಿದ್ದಾರೆ.

ಕೊರೋನ ಸೋಂಕಿನಿಂದ ಗ್ರಾಮೀಣ ಭಾರತದ ಜನತೆಯಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಿದೆ. ದೈನಂದಿನ ಆಹಾರದ ಬಳಕೆ ಕಡಿಮೆಯಾಗಿದೆ ಎಂದು 43% ಜನ ಹೇಳಿದ್ದರೆ, ಆಹಾರದ ಪ್ರಮಾಣವನ್ನು ಸ್ವತಃ ಕಡಿಮೆ ಮಾಡಿರುವುದಾಗಿ 55% ಜನ ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್ ಅವಧಿಗೆ ಹೋಲಿಸಿದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ದೊರಕುವ ಪಡಿತರದಿಂದಾಗಿ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿರುವುದು ಗಮನಕ್ಕೆ ಬಂದಿದೆ ಎಂದು ಅಧ್ಯಯನದ ವರದಿ ಹೇಳಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಹಣ ಸಾಲ ಪಡೆಯುವ ಅನಿವಾರ್ಯತೆ ಎದುರಾಗಿದ್ದು ಕುಟುಂಬಕ್ಕೆ ಸಂಬಂಧಿಸಿದವರಿಂದ ಸಾಲ ಪಡೆದಿರುವುದಾಗಿ 10% ಕಾರ್ಮಿಕರು ಹೇಳಿದ್ದರೆ, ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದಿರುವುದಾಗಿ 7% ಕಾರ್ಮಿಕರು ಹೇಳಿದ್ದಾರೆ.

ಸಮೀಕ್ಷೆಗೆ ಒಳಪಟ್ಟ ಕಾರ್ಮಿಕರಲ್ಲಿ 71% ಕುಟುಂಬದವರು ಅಡುಗೆ ಅನಿಲದ ಸೌಲಭ್ಯ ಹೊಂದಿದ್ದು ಇದರಲ್ಲಿ 85% ಕುಟುಂಬ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದಾರೆ. 90% ಕುಟುಂಬ ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳು ಮತ್ತು ಇವರಲ್ಲಿ 38% ಕುಟುಂಬಕ್ಕೆ ಸರಕಾರದ 2000 ರೂ. ಸಹಾಯಧನ ದೊರಕಿದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಆರ್ಥಿಕ ಸಮಸ್ಯೆ: ಜಾನುವಾರು ಮಾರಾಟ

ಲಾಕ್‌ಡೌನ್ ಕಾರಣದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿದ್ದ ಹಲವು ವಸ್ತುಗಳನ್ನು ಮಾರಾಟ ಮಾಡಿರುವುದಾಗಿ 6% ವಲಸೆ ಕಾರ್ಮಿಕರು ಹೇಳಿದ್ದರೆ, ಆರ್ಥಿಕ ಸಂಕಷ್ಟದಿಂದ ಮನೆಯಲ್ಲಿದ್ದ ಜಾನುವಾರುಗಳನ್ನು ಮಾರಬೇಕಾಯಿತು ಎಂದು 15% ಕಾರ್ಮಿಕರು ಹೇಳಿದ್ದಾರೆ. 2% ಕಾರ್ಮಿಕರು ಹಾಲುಕೊಡುವ ಹಸುಗಳನ್ನು ಮಾರಿದ್ದಾರೆ.

ಅಲ್ಲದೆ 2% ಕಾರ್ಮಿಕರು ತಮ್ಮ ಜಮೀನನ್ನು ಅಡವಿರಿಸಿ ಸಾಲ ಪಡೆದಿದ್ದರೆ, 1% ಕಾರ್ಮಿಕರು ತಮ್ಮ ಜಮೀನನ್ನೇ ಮಾರಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News