ಬೆಂಗಳೂರು ಹಿಂಸಾಚಾರ ತನಿಖೆಯಾಗಲಿ

Update: 2020-08-13 05:24 GMT

ಲೇಖನಿ ಖಡ್ಗಕ್ಕಿಂತ ಹರಿತ ಎನ್ನುವ ಮಾತಿದೆ. ಈ ಖಡ್ಗವನ್ನು ಧರಿಸಿದವರಲ್ಲಿ ವಿವೇಕ, ವಿವೇಚನೆಗಳು, ಜೀವಪರವಾದ ಆಲೋಚನೆಗಳು ಇರಬೇಕಾಗುತ್ತವೆ. ಅಪ್ರಬುದ್ಧರ ಕೈಯಲ್ಲಿ ಈ ಖಡ್ಗ ಅಪಾಯಕಾರಿಯಾಗಿ ಬದಲಾಗುತ್ತದೆ. ಆದುದರಿಂದಲೇ, ಪತ್ರಿಕೆಗಳು ಒಂದಿಷ್ಟು ಎಡವಿದರೆ ಅಥವಾ ಪೂರ್ವಾಗ್ರಹ ಪೀಡಿತವಾಗಿ ಬರೆದರೆ ವಿವಾದದ ಬೆಂಕಿ ಭುಗಿಲೇಳುತ್ತದೆ. ಅಪಾರ ಸಾವು ನೋವುಗಳಿಗೂ ಅದು ಕಾರಣವಾಗಬಹುದು. ಸಾಧಾರಣವಾಗಿ ಪತ್ರಿಕೆಗಳಲ್ಲಿ ಯಾವುದೇ ಲೇಖನಗಳು ಉಪಸಂಪಾದಕರು ಓದಿ ಅದರ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡ ಬಳಿಕವಷ್ಟೇ ಪ್ರಕಟವಾಗುತ್ತವೆ. ಆದರೆ ಯಾವಾಗ ಫೇಸ್‌ಬುಕ್ ಅಥವಾ ಸಾಮಾಜಿಕ ಜಾಲತಾಣಗಳ ಯುಗ ಆರಂಭವಾಯಿತೋ ಅಲ್ಲಿಂದ, ಲೇಖನಿಯೆನ್ನುವುದು ‘ಒರೆ’ಯಿಲ್ಲದ ಖಡ್ಗವಾಯಿತು. ಯಾರು, ಯಾವಾಗ, ಎಲ್ಲಿ ಬೇಕಾದರೂ ಬಳಸಬಹುದು ಎನ್ನುವ ಮನಸ್ಥಿತಿಯನ್ನು ಹೊಂದಿದ ಅಪ್ರಬುದ್ಧರ ಕೈಯಲ್ಲಿರುವ ಈ ಖಡ್ಗ ಸಮಾಜಕ್ಕೆ ಒಳಿತು ಮಾಡಿದ್ದಕ್ಕಿಂತ ಹಾನಿ ಮಾಡಿರುವುದೇ ಹೆಚ್ಚು. ನಕಲಿ ಖಾತೆಗಳ ಮರೆಯಲ್ಲಿ ಕುಳಿತು, ಇನ್ನೊಂದು ಜಾತಿ, ಧರ್ಮ, ಪಕ್ಷ, ವ್ಯಕ್ತಿಯನ್ನು ನಿಂದಿಸುವ ಪ್ರವೃತ್ತಿ ಇತ್ತೀಚೆಗಂತೂ ಹೆಚ್ಚಾಗಿವೆ. ಸಮಾಜ ಘಾತುಕ ಶಕ್ತಿಗಳು ಸಮಾಜದ ಸ್ವಾಸ್ಥವನ್ನು ಕೆಡಿಸುವುದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ವಿಪರ್ಯಾಸವೆಂದರೆ ಜನಪರ ಆಲೋಚನೆ, ಚಿಂತನೆಗಳನ್ನು ಹೊಂದಿದ ಬರಹಗಾರರನ್ನು ನಿಯಂತ್ರಿಸಲು ಸಾಮಾಜಿಕ ಜಾಲತಾಣಕ್ಕೆ ಇರುವ ಆಸಕ್ತಿ ಸಮಾಜದ ನೆಮ್ಮದಿಯನ್ನು ಕೆಡಿಸುವ ನಕಲಿಗಳನ್ನು ನಿಯಂತ್ರಿಸುವುದಕ್ಕೆ ಇಲ್ಲವಾಗಿದೆ. ಸೈಬರ್ ಕ್ರೈಮ್‌ಗಳನ್ನು ನಿಯಂತ್ರಿಸುವುದಕ್ಕಾಗಿಯೇ ಪೊಲೀಸ್ ಇಲಾಖೆಗಳಲ್ಲಿ ವ್ಯವಸ್ಥೆಗಳಿದ್ದರೂ, ಅವುಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿವೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರ ಇವೆಲ್ಲದರ ಫಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಎಂಬವರ ಸಂಬಂಧಿಯೊಬ್ಬ ಪ್ರವಾದಿ ಮುಹಮ್ಮದರ ಕುರಿತಂತೆ ನಿಂದಿಸುವ ಹೇಳಿಕೆಯೊಂದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ. ಮಹಾಪುರುಷರೊಬ್ಬರ ಕುರಿತಂತೆ ಅತ್ಯಂತ ವಿಕೃತವಾಗಿ ಬರೆಯುವುದು ಬರೆದವನ ವ್ಯಕ್ತಿತ್ವಕ್ಕೆ ಹಿಡಿಯುವ ಕನ್ನಡಿಯೇ ಹೊರತು, ಅದರಿಂದ ಮಹಾತ್ಮರ ಬದುಕಿಗೆ ಯಾವ ಧಕ್ಕೆಯೂ ಆಗುವುದಿಲ್ಲ. ಇಷ್ಟಕ್ಕೂ ದುಷ್ಟ ಮನಸ್ಸುಗಳು ಪ್ರವಾದಿ ಮುಹಮ್ಮದರನ್ನು ಮಾತ್ರವಲ್ಲ, ಜೀಸಸ್‌ನಿಂದ ಹಿಡಿದು ಗಾಂಧಿ, ಅಂಬೇಡ್ಕರ್‌ವರೆಗೆ ಎಲ್ಲ ಮಹಾಪುರುಷರನ್ನು ನಿಂದಿಸುವ ಮೂಲಕ, ಸುಳ್ಳುಗಳನ್ನು ಹರಡುವ ಮೂಲಕ ಜೀವಪರ ಚಿಂತನೆಗಳಿಗೆ ಕಳಂಕ ತರಲು ಯತ್ನಿಸಿವೆ. ಆದರೆ ಅವರನ್ನು ನಿಂದಿಸಿದವರು ಕಾಲಚಕ್ರದಡಿಯಲ್ಲಿ ಸಿಲುಕಿ ನಾಶವಾಗಿದ್ದಾರೆ. ಮಹಾಪುರುಷರು ಮಾತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಾ ಜಗತ್ತಿಗೆ ಮಾರ್ಗದರ್ಶಕರಾಗಿಯೇ ಉಳಿದಿದ್ದಾರೆ.

ಫೇಸ್‌ಬುಕ್‌ನಲ್ಲಿ ಪ್ರವಾದಿ ನಿಂದನೆಯ ಬರಹ ಯಾರದೇ ಮನಸ್ಸಿಗೆ ನೋವುಂಟು ಮಾಡಿದ್ದರೂ, ಬರೆದವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಜಾಸತ್ತಾತ್ಮಕವಾದ ಹತ್ತು ಹಲವು ಮಾರ್ಗಗಳಿವೆ. ಅವನ ಮೇಲೆ ರಾಜ್ಯದ ಹಲವು ಠಾಣೆಗಳಲ್ಲಿ ದೂರು ಸಲ್ಲಿಸಬಹುದು. ಅವನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಧರಣಿ ಕೂರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾದಿ ಮುಹಮ್ಮದರ ಸಂದೇಶಗಳನ್ನು ಅವನಿಗೆ ತಲುಪುವಂತೆ ಮಾಡಿ ಅವನ ವ್ಯಕ್ತಿತ್ವವನ್ನೇ ಬದಲಿಸಬಹುದು. ಆದರೆ ಬೆಂಗಳೂರಿನಲ್ಲಿ ನಡೆದದ್ದು ಅದಕ್ಕೆ ವ್ಯತಿರಿಕ್ತವಾದುದು. ಏಕಾಏಕಿ ಜನರ ಗುಂಪೊಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ನಿವಾಸಕ್ಕೆ ಹಾನಿ ಮಾಡಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದೆ. ವಾಹನಗಳಿಗೆ ಬೆಂಕಿ ಹಚ್ಚಿದೆ. ಅಂತಿಮವಾಗಿ ಪೊಲೀಸ್ ಗೋಲಿಬಾರಿಗೆ ಮೂವರು ಬಲಿಯಾಗಿದ್ದಾರೆ. ಇಷ್ಟೆಲ್ಲ ಹಾನಿ, ಸಾವು, ನೋವುಗಳ ಮೂಲಕ ಪ್ರತಿಭಟನಾಕಾರರು ಸಾಧಿಸಿದ್ದಾದರೂ ಏನು? ನಾಶ, ನಷ್ಟ, ಸಾವುಗಳ ಮೂಲಕ ಪ್ರವಾದಿ ಮುಹಮ್ಮದರ ಸಂದೇಶಗಳಿಗೆ ಇನ್ನಷ್ಟು ಧಕ್ಕೆಯಾಯಿತೇ ಹೊರತು ಯಾವುದೇ ಲಾಭವಾಗಲಿಲ್ಲ. ಅಂತಿಮವಾಗಿ, ದುಷ್ಕರ್ಮಿಯ ಪ್ರವಾದಿ ನಿಂದನೆಯಿಂದ ನೊಂದವರೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಯಿತು.

 ಮಂಗಳವಾರ ರಾತ್ರಿ ಅನಿರೀಕ್ಷಿತವಾಗಿ ಭುಗಿಲೆದ್ದ ಹಿಂಸಾಚಾರದ ಹಿಂದೆ ಕೆಲವು ರಾಜಕೀಯ ನಾಯಕರ ಕೈವಾಡಗಳಿವೆ ಎಂದು ಅನುಮಾನಿಸಲಾಗುತ್ತಿದೆ. ಏಕಾಏಕಿ ಅಷ್ಟೊಂದು ಪ್ರಮಾಣದಲ್ಲಿ ಜನರು ಒಟ್ಟಾದದ್ದು ಹೇಗೆ? ಫೇಸ್‌ಬುಕ್‌ನಲ್ಲಿ ದುಷ್ಕರ್ಮಿ ಹಾಕಿದ್ದ ಆ ಹೇಳಿಕೆಯೇ ಅಷ್ಟೊಂದು ಜನರನ್ನು ಅಲ್ಲಿ ಸೇರಿಸಿತು ಎನ್ನುವುದನ್ನು ನಂಬುವುದು ಕಷ್ಟ. ಪ್ರತಿಭಟಿಸುವ ನೆಪದಲ್ಲಿ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಿ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯ ದುರುದ್ದೇಶವೇ ಈ ಪ್ರತಿಭಟನೆಯನ್ನು ಸಂಘಟಿಸಿ, ಅವರಿಂದ ದುಷ್ಕೃತ್ಯಗಳನ್ನು ಮಾಡಿಸಿರಬಹುದು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಆದುದರಿಂದ, ಪೊಲೀಸರು ಕಾಟಾಚಾರಕ್ಕೆ ಕೈಗೆ ಸಿಕ್ಕಿದ ಅಮಾಯಕರನ್ನು ಬಂಧಿಸುವ ಬದಲು ಇದರ ಹಿಂದಿರುವ ರಾಜಕೀಯ ಶಕ್ತಿಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕು. ಗಲಭೆಯ ಹಿಂದೆ ರಾಜಕೀಯವಾಗಿ ಮೂಲೆಗುಂಪಾಗಿರುವ ಕೆಲವು ಹಿರಿಯ ರಾಜಕಾರಣಿಗಳ ಹೆಸರುಗಳೂ ಕೇಳಿ ಬರುತ್ತಿದ್ದು, ಅದರ ಸತ್ಯಾಸತ್ಯತೆ ಗಂಭೀರ ತನಿಖೆಯಿಂದಷ್ಟೇ ಬಹಿರಂಗವಾಗಬಹುದು. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಅಲುಗಾಡಿಸಲು ಬಿಜೆಪಿ ಯೊಳಗೇ ಷಡ್ಯಂತ್ರಗಳು ನಡೆಯುತ್ತಿವೆ. ಇತ್ತೀಚೆಗೆ ಬಿಜೆಪಿ ಮುಖಂಡ ನಿರಾಣಿಯವರ ಫೇಸ್‌ಬುಕ್ ಖಾತೆಯಲ್ಲಿ, ವೈದಿಕ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿತ್ತು. ಆದರೆ ಅವರ ಕ್ಷಮಾಯಾಚನೆಯೊಂದಿಗೆ ಪ್ರಕರಣ ಮುಗಿಯಿತು. ಇದಾದ ಬಳಿಕ, ಬಿಜೆಪಿಯ ನಾಯಕ ಈಶ್ವರಪ್ಪ, ‘ಕಾಶಿ, ಮಥುರಾ’ದ ಹೆಸರುಗಳನ್ನು ಉಲ್ಲೇಖಿಸಿ ಉದ್ವಿಗ್ನಕಾರಿ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ನೀಡಿದರು. ಇದೀಗ ಕಾಂಗ್ರೆಸ್ ಶಾಸಕನೊಬ್ಬನ ಸಂಬಂಧಿಯಿಂದ ಪ್ರವಾದಿ ನಿಂದನೆಯ ಕೆಲಸ ನಡೆದಿದೆ ಮತ್ತು ಏಕಾಏಕಿ ಇದನ್ನು ಬಳಸಿಕೊಂಡು ಕೆಲವು ಶಕ್ತಿಗಳು ಹಿಂಸಾಚಾರ ನಡೆಸಿವೆ. ಶಾಸಕ ಶ್ರೀನಿವಾಸ ಮೂರ್ತಿಯವರು ಅದರ ಕುರಿತಂತೆ ಸ್ಪಷ್ಟನೆ ಮತ್ತು ವಿಷಾದ ವ್ಯಕ್ತಪಡಿಸಿದ ಬಳಿಕವೂ ಅವರನ್ನೇ ಗುರಿಯಾಗಿಸಿ ದಾಳಿ ನಡೆದಿದೆಯೆಂದರೆ, ಈ ಘಟನೆ ಪೂರ್ವನಿಯೋಜಿತ ಎನ್ನುವುದನ್ನು ಊಹಿಸಬಹುದು. ಆದುದರಿಂದಲೇ, ಸ್ವತಂತ್ರ ಸಂಸ್ಥೆಯಿಂದ ಪ್ರವಾದಿ ನಿಂದನೆ ಪ್ರಕರಣ ಮತ್ತು ಆ ಬಳಿಕ ನಡೆದ ಬೆಳವಣಿಗೆಗಳ ಕುರಿತಂತೆ ತನಿಖೆ ನಡೆಯಬೇಕಾಗಿದೆ.

ಒಂದೂವರೆ ಸಾವಿರ ವರ್ಷಗಳ ಹಿಂದೆ ಪ್ರವಾದಿಯವರು ಸಮಾಜದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಸಮ ಸಮಾಜವೊಂದರ ಕನಸು ಕಂಡರು. ವರ್ಣಭೇದವನ್ನು ವಿರೋಧಿಸಿದರು. ಮಹಿಳೆಯರಿಗೆ ಭೂಮಿಯ ಹಕ್ಕು ನೀಡಿದರು. ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು. ಬಡ್ಡಿಯನ್ನು ನಿಷೇಧಿಸಿದರು. ಶ್ರೀಮಂತರಿಗೆ ಕಡ್ಡಾಯ ಝಕಾತ್‌ನ್ನು ಘೋಷಿಸಿದರು. ಮದ್ಯ ನಿಷೇಧ ಮಾಡಿದರು. ಅವರ ಧಾರ್ಮಿಕ, ಆರ್ಥಿಕ, ಸಾಮಾಜಿಕ ಚಿಂತನೆಗಳು ಇಡೀ ಜಗತ್ತನೇ ಬದಲಾಯಿಸಿದವು. ಹೀಗಿರುವಾಗ, ಯಕಶ್ಚಿತ್ ದುಷ್ಕರ್ಮಿಯೊಬ್ಬ ಅವರನ್ನು ನಿಂದಿಸಿದಾಕ್ಷಣ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಾರದು. ಆತನ ವ್ಯಕ್ತಿತ್ವವನ್ನಷ್ಟೇ ಅದು ತೆರೆದಿಟ್ಟಿದೆ. ಪ್ರವಾದಿಗೆ ಅವಮಾನವಾಯಿತು ಎಂದು ಬೀದಿಗಿಳಿದು ನಾಶ, ನಷ್ಟಕ್ಕೆ ಕಾರಣವಾದವರೇ ಪ್ರವಾದಿಯನ್ನು, ಅವರ ಸಂದೇಶಗಳನ್ನು ಪರೋಕ್ಷವಾಗಿ ಅವಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News