ಸೆ.30ರೊಳಗೆ ಬಾಬರಿ ಮಸೀದಿ ದ್ವಂಸ ಪ್ರಕರಣದ ತೀರ್ಪು ನೀಡಿ: ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್
Update: 2020-08-22 14:59 GMT
ಹೊಸದಿಲ್ಲಿ: 1992ರ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ತೀರ್ಪು ನೀಡಬೇಕಾದ ಕೊನೆಯ ದಿನಾಂಕವನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ 30ಕ್ಕೆ ಮುಂದೂಡಿದೆ.
“ಸುರೇಂದ್ರ ಕುಮಾರ್ ಯಾದವ್ ಅವರ ವರದಿಯನ್ನು ನಾವು ಓದಿದ್ದು, ವಿಚಾರಣೆ ಕೊನೆಯ ಹಂತದಲ್ಲಿದೆ ಎನ್ನುವುದನ್ನು ನಾವು ಮನಗಂಡಿದ್ದೇವೆ. ಪ್ರಕರಣದ ತೀರ್ಪು ಸೇರಿದಂತೆ ಎಲ್ಲಾ ವಿಚಾರಣೆಗಳ ಕೊನೆಯ ದಿನಾಂಕವನ್ನು ಸೆಪ್ಟಂಬರ್ 30ಕ್ಕೆ ಮುಂದೂಡುತ್ತಿದ್ದೇವೆ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೊನೆಗೊಳಿಸಲು ಆಗಸ್ಟ್ 31 ಕೊನೆಯ ದಿನಾಂಕ ಎಂದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಎಂ.ಎಂ.ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಾಂಭರ ಸೇರಿ 32 ಮಂದಿ ಆರೋಪಿಗಳಾಗಿದ್ದಾರೆ.