ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನಿಗೆ ಹಲ್ಲೆ ಎಂದು ಫೋಟೊ ವೈರಲ್ ಮಾಡಿ ನಗೆಪಾಟಲಿಗೀಡಾದ ಕೇಸರಿ ಟ್ರೋಲ್ ಗಳು
ಕೊಚ್ಚಿ: ಮುಸ್ಲಿಮರ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಆರೆಸ್ಸೆಸ್ ವ್ಯಕ್ತಿಗೆ ಥಳಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದು ವೈರಲ್ ಆಗುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ಚಂದ್ರಬೋಸ್ ಎಂದು ಹೇಳಲಾಗಿದೆ.
ಕೇರಳದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ‘ಶೇ 0 ಮಾನವೀಯತೆ, ಶೇ 100 ಸಾಕ್ಷರತೆ, ಕೇರಳಕ್ಕೆ ನಾಚಿಕೆಗೇಡು’ ಎಂದೂ ಈ ವೈರಲ್ ಚಿತ್ರದ ಜತೆಗಿನ ಪೋಸ್ಟ್ ಒಂದರಲ್ಲಿ ಹೇಳಲಾಗಿದೆ.
ವಾಸ್ತವವೇನು?
ಈ ಚಿತ್ರದಲ್ಲಿ ವ್ಯಕ್ತಿ ನಟ ಹಾಗೂ ಕಂಟೆಂಟ್ ಕ್ರಿಯೇಟರ್ ಅರ್ಜುನ್ ರತನ್ ಹಾಗೂ ಈ ವೈರಲ್ ಚಿತ್ರ ಯುಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿರುವ ‘ಕರಿಕ್ಕು’ ಎಂಬ ಯುಟ್ಯೂಬ್ ಚಾನೆಲ್ ನ ಎಪಿಸೋಡ್ ಒಂದರದ್ದು.
‘ಕರಿಕ್ಕು’ ಯುಟ್ಯೂಬ್ ಚಾನೆಲ್ ನಲ್ಲಿ ಇತ್ತೀಚೆಗಷ್ಟೇ ‘ಸ್ಮೈಲ್ ಪ್ಲೀಸ್’ ಎನ್ನುವ ಎಪಿಸೋಡ್ ಒಂದನ್ನು ಅಪ್ಲೋಡ್ ಮಾಡಲಾಗಿತ್ತು. ಈ ಎಪಿಸೋಡ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಲ್ಲಿದ್ದ ಒಂದು ಡೈಲಾಗ್ ಒಂದು ವೈರಲ್ ಆಗಿತ್ತು. ಈ ಎಪಿಸೋಡ್ ನಲ್ಲಿ ನಟ ಅರ್ಜುನ್ ರತನ್ ಮಾವನ ಪಾತ್ರದಲ್ಲಿ ನಟಿಸಿದ್ದರು ಮತ್ತು ಅದರಲ್ಲಿ ಅವರಿಗೆ ಯುವಕರು ಹೊಡೆಯುವ ಹಾಸ್ಯ ಸನ್ನಿವೇಶಗಳಿದ್ದವು. ಎಪಿಸೋಡ್ ಕೊನೆಗೆ ಅರ್ಜುನ್ ಹೊಡೆತ ತಿಂದ ನಂತರ ವೈರಲ್ ಫೋಟೊದಲ್ಲಿರುವ ರೀತಿ ಕಾಣಿಸಿಕೊಳ್ಳುತ್ತಾರೆ.
ಕಾಮಿಡಿ ವೆಬ್ ಸೀರಿಸ್ ಒಂದರ ನಟನ ಚಿತ್ರವನ್ನು ವೈರಲ್ ಮಾಡಿ ದ್ವೇಷ ಹರಡಲು ಯತ್ನಿಸಿದ ಕೇಸರಿ ಟ್ರೋಲ್ ಗಳ ಪ್ರಯತ್ನ ನಗೆಪಾಟಲಿಗೀಡಾಗಿದೆ. ವಿಶೇಷವೆಂದರೆ ಮೂಲ ಚಿತ್ರ ಹಾಗೂ ವೀಡಿಯೋದಲ್ಲಿ ಆ ವ್ಯಕ್ತಿಯ ಹಣೆಯಲ್ಲಿ ಕೇಸರಿ ತಿಲಕವಿಲ್ಲ. ಆದರೆ ವೈರಲ್ ಚಿತ್ರದಲ್ಲಿ ನಟನ ಹಣೆಯಲ್ಲಿ ಕೇಸರಿ ತಿಲಕವಿದೆ.
ಕೃಪೆ: thequint.com