ಉತ್ತರ ಪ್ರದೇಶ: ಅತ್ಯಾಚಾರ ಪ್ರಕರಣ ದಾಖಲಿಸಬೇಕಿದ್ದರೆ ರವಿಕೆ ಹರಿದುಕೊಂಡು ಬಾ ಎಂದ ಪೊಲೀಸರು !
Update: 2020-09-15 17:32 GMT
ಲಕ್ನೊ, ಸೆ.15: ಉತ್ತರಪ್ರದೇಶದ ಪೊಲೀಸ್ ಇಲಾಖೆ ಈಗ ಮತ್ತೊಂದು ವಿವಾದ ಹುಟ್ಟುಹಾಕಿದೆ. ತನ್ನ ಜಮೀನನ್ನು ಮತ್ತೊಬ್ಬ ವ್ಯಕ್ತಿ ಅಕ್ರಮವಾಗಿ ಕಿತ್ತುಕೊಂಡಿದ್ದಾನೆ ಎಂದು ದೂರು ನೀಡಲು ಠಾಣೆಗೆ ಬಂದ ಮಹಿಳೆಯೊಬ್ಬಳಿಗೆ ಠಾಣಾಧಿಕಾರಿ, ರವಿಕೆ ಹರಿದುಕೊಂಡು ಬಂದರೆ ಆಗ ಅತ್ಯಾಚಾರದ ಪ್ರಕರಣ ದಾಖಲಿಸುವುದಾಗಿ ಹೇಳಿರುವ ವೀಡಿಯೊ ಈಗ ವೈರಲ್ ಆಗಿದೆ.
ಉತ್ತರಪ್ರದೇಶದ ಕಾನ್ಪುರ ನಗರದ ನರ್ವಾಲ್ ಠಾಣೆಯ ಅಧಿಕಾರಿ ರಾಮ್ ಅವತಾರ್ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸಾರ್ವಜನಿಕರೊಂದಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯೊಂದಿಗೆ ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.