ಎನ್ಡಿಎ ಮೈತ್ರಿ ಕಡಿದುಕೊಂಡ ಶಿರೋಮಣಿ ಅಕಾಲಿ ದಳ
ಹೊಸದಿಲ್ಲಿ, ಸೆ. 26: ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಶನಿವಾರ ಆಡಳಿತಾರೂಢ ಎನ್ಡಿಎಯ ಮೈತ್ರಿ ಕಡಿದುಕೊಂಡಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಮಸೂದೆ ಕುರಿತ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿ ದಳ ಎನ್ಡಿಎಯಿಂದ ಹೊರ ಬಂದಿದೆ. ಆರಂಭದಲ್ಲಿ ವಿದೇಯಕವನ್ನು ಬೆಂಬಲಿಸಿದ್ದ ಶಿರೋಮಣಿ ಅಕಾಲಿ ದಳದ ವರಿಷ್ಠ ಸುಖ್ಬೀರ್ ಸಿಂಗ್ ಬಾದಲ್ ಅನಂತರ ಆಡಳಿತಾರೂಢ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು. ಅಲ್ಲದೆ, ‘‘ದಯವಿಟ್ಟು ರೈತರಿಗೆ ಬೆಂಬಲವಾಗಿ ನಿಲ್ಲಿ’’ ಹಾಗೂ ‘‘ವಿಧೇಯಕಕ್ಕೆ ಸಹಿ ಹಾಕಬೇಡಿ’’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಿದ್ದರು. ಲೋಕಸಭೆಯಲ್ಲಿ ಶಿರೋಮಣಿ ಅಕಾಲಿ ದಳ ಎರಡು ಸ್ಥಾನಗಳನ್ನು ಹೊಂದಿದೆ. ಈ ಪಕ್ಷದ ಸಚಿವೆ ಹರ್ಸಿಮ್ರತ್ ಕೌರ್ ಕೃಷಿ ವಿಧೇಯಕ ವಿರೋಧಿಸಿ ಕೆಲವು ದಿನಗಳ ಹಿಂದೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.