ವಿವಾದ ಸೃಷ್ಟಿಸಿದ ಕಲ್ಲಕುರಿಚಿ ಶಾಸಕನ ಪ್ರೇಮವಿವಾಹ ಪ್ರಕರಣ

Update: 2020-10-06 04:34 GMT

ವಿಳ್ಳುಪುರಂ: ಕಲ್ಲಕುರಿಚಿ ಶಾಸಕ ತಮ್ಮ ಮನೆಯಲ್ಲಿ ಪ್ರೇಯಸಿಯನ್ನು ವಿವಾಹವಾಗುವ ಮೂಲಕ ಸೋಮವಾರ ವಿವಾದಕ್ಕೀಡಾಗಿದ್ದಾರೆ. 

ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಆಪಾದಿಸಿ ಯುವತಿಯ ತಂದೆ ಶಾಸಕನ ಮನೆ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಘಟನೆಯೂ ನಡೆದಿದೆ. ಆ ಬಳಿಕ ನೂತನ ದಂಪತಿ ಮನೆಯಿಂದ ಹೊರಬಂದು "ನಾವು ಪರಸ್ಪರ ಪ್ರೇಮಿಸುತ್ತಿದ್ದೆವು, ಇದೀಗ ಸ್ವ ಇಚ್ಛೆಯಿಂದ ವಿವಾಹ ಬಂಧನಕ್ಕೊಳಗಾಗಿದ್ದೇವೆ" ಎಂದು ತಿಳಿಸಿದರು.

ತಿಯಾಗದುರುಗಂ ನಿವಾಸಿ, ಕಲ್ಲಕುರಿಚಿ ಕ್ಷೇತ್ರವನ್ನು ಪ್ರತಿನಿಧಿಸುವ ಎಐಎಡಿಎಂ ಶಾಸಕ ಎ. ಪ್ರಭು (35), ಅದೇ ಪಟ್ಟಣದ ಸೌಂದರ್ಯ (19) ಎಂಬಾಕೆಯನ್ನು ಸೋಮವಾರ ಮುಂಜಾನೆ ಮನೆಯಲ್ಲೇ ವಿವಾಹವಾದರು. ಈ ವಿಚಾರ ತಿಳಿದ ಯುವತಿಯ ತಂದೆ ಸಾಮಿನಾಥನ್ (48) ಶಾಸಕರ ಮನೆಗೆ ಧಾವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ತಡೆದಿದ್ದರು. ಬಳಿಕ ಸಾಮಿನಾಥನ್ ಅವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅನ್ವಯ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ರವಿವಾರ ಸಂಜೆ ಸಾಮಿನಾಥನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ತಿರುಚಂಗೋಡಿನ ಖಾಸಗಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ತಮ್ಮ ಹಿರಿಯ ಮಗಳನ್ನು ಶಾಸಕ ಪ್ರಭು ಅಪಹರಿಸಿದ್ದಾರೆ ಎಂದು ಆಪಾದಿಸಿದ್ದರು. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಾರದಂತೆ ಪ್ರಭು ಬೆಂಗಲಿಗರು ದೂರವಾಣಿ ಮೂಲಕ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿದ್ದರು.

ಕಳೆದ ನಾಲ್ಕು ವರ್ಷಗಳಿಂದ ತಮ್ಮ ನಡುವೆ ಪ್ರೇಮಸಂಬಂಧ ಇತ್ತು ಎಂದು ನೂತನ ದಂಪತಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ದೃಢಪಡಿಸಿದ್ದಾರೆ. ಸೌಂದರ್ಯ ವಿವಾಹದ ಬಗ್ಗೆ ಪೋಷಕರ ಜತೆ ಮಾತುಕತೆ ನಡೆಸಿದ್ದಾಗಿ ಪ್ರಭು ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಒಪ್ಪದಿದ್ದಾಗ ಸೌಂದರ್ಯ ಮನೆ ಬಿಟ್ಟು ಬಂದಿದ್ದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News