ಕೇಂದ್ರ ಸರಕಾರದ ಆರ್ಥಿಕ ನೀತಿ, ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್

Update: 2020-11-26 17:56 GMT

ತಿರುವನಂತಪುರ, ನ. 26: ಕೇಂದ್ರದ ಆರ್ಥಿಕ ನೀತಿಗಳು ಹಾಗೂ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ  ಸಂಘಟನೆಗಳು ಕರೆ ನೀಡಿದ್ದ 24 ಗಂಟೆಗಳ ರಾಷ್ಟ್ರ ವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಎಡರಂಗದ ಆಡಳಿತ ಇರುವ ಕೇರಳದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು. ಪಶ್ಚಿಮಬಂಗಾಳ, ತ್ರಿಪುರಾ, ತಮಿಳುನಾಡು ಹಾಗೂ ಒಡಿಶಾದಲ್ಲಿ ಸಾಮಾನ್ಯ ಜನಜೀವನ ಭಾಗಶಃ ಬಾಧಿತವಾಯಿತು.

ಪಶ್ಚಿಮಬಂಗಾಳದ ಹಲವು ಭಾಗಗಳಲ್ಲಿ ಎಡರಂಗದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಇತರ ರಾಜ್ಯಗಳಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಿಜೆಪಿಯ ಮಜ್ದೂರ್ ಸಂಘ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಕೇರಳದಲ್ಲಿ ಸರಕಾರಿ ಕಚೇರಿಗಳು, ಉದ್ಯಮಗಳು ಹಾಗೂ ಬ್ಯಾಂಕ್‌ಗಳು ಮುಚ್ಚಿದ್ದವು. ಖಾಸಗಿ ಬಸ್‌ಗಳು, ಆಟೊ ರಿಕ್ಷಾ ಹಾಗೂ ಟ್ಯಾಕ್ಸಿಗಳು ಸಂಚರಿಸದ ಹಿನ್ನೆಲೆಯಲ್ಲಿ ರಸ್ತೆ ನಿರ್ಜನವಾಗಿತ್ತು. ಸಿಐಟಿಯು ಹಾಗೂ ಐಎನ್‌ಟಿಯುಸಿಯಂತಹ ವ್ಯಾಪಾರಿ ಸಂಘಟನೆಗಳು ಪ್ರಭಾವ ಇರುವ ತಿರುವನಂತಪುರದಲ್ಲಿ ಅಂಗಡಿ ಹಾಗೂ ಮುಂಗಟ್ಟುಗಳು ಬಂದ್ ಆಗಿದ್ದವು. ಕೊಚ್ಚಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಮೆಟ್ರೊ ಸೇವೆ ನಿರಾತಂಕವಾಗಿ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಲಿಲ್ಲ. ಶಬರಿಮಲೆಗೆ ತೆರಳುವ ಯಾತ್ರಿಗಳ ಬಸ್‌ಗಳ ಸಂಚಾರಕ್ಕೆ ವಿನಾಯತಿ ನೀಡಲಾಯಿತು.

ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ರಾಜ್ಯಾದ್ಯಂತ ಸಾಮೂಹಿಕ ರ್ಯಾಲಿ ನಡೆಸಲಿಲ್ಲ. ಬದಲಾಗಿ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಸಿದರು. ಪಶ್ಚಿಮಬಂಗಾಳದಲ್ಲಿ ಸಿಪಿಎಂಗೆ ಸೇರಿದ ಸಂಘಟನೆಗಳಾದ ಸಿಐಟಿಯು ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಜಾದವ್‌ಪುರ, ಗರಿಯಾ, ಕಮಲ್‌ಗಂಝಿ, ಲೇಕ್‌ಟೌನ್ ಕೋಲ್ಕತ್ತಾದ ಡಮ್‌ಡಮ್ ಪ್ರದೇಶದಲ್ಲಿ ರಸ್ತೆಗಿಳಿದು ಅಂಗಡಿಗಳನ್ನು ಮುಚ್ಚಿಸಿದರು. ಸಾರಿಗೆ ಸಂಚಾರ ಸುಗಮವಾಗಿ ಸಾಗಲು ಕೋಲ್ಕತ್ತಾದ ಸುತ್ತಮುತ್ತ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಇಲ್ಲಿ ಪಶ್ಚಿಮಬಂಗಾಳದ ಟಿಎಂಸಿ ಪ್ರತಿಭಟನೆಗೆ ಬೆಂಬಲ ನೀಡಲಿಲ್ಲ. ಕಾಂಗ್ರೆಸ್ ಹಾಗೂ ಎಡರಂಗ ಪ್ರತಿಭಟನೆ ನಡೆಸಿತದವು. ಒಡಿಶಾದಲ್ಲಿ ಭುವನೇಶ್ವರ, ಕಟಕ್ ರೂರ್ಕೆಲಾ, ಸಾಂಬಾಲ್ಪುರ, ಬೆರ್ಹಾಮ್‌ಪುರ, ಭದ್ರಾಕ್, ಬಾಲಸೂರೆ, ಖುರ್ದಾ, ರಾಯಗಢ ಹಾಗೂ ಪಾರಾದೀಪ್ ಕಾರ್ಮಿಕ  ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ತ್ರಿಪುರಾದಲ್ಲಿ ಹೆಚ್ಚಿನ ಅಂಗಡಿಗಳು ಹಾಗೂ ಮಾರುಕಟ್ಟೆಗಳು ಮುಚ್ಚಿದ್ದವು. ವಾಹನಗಳ ಸಂಚಾರ ವಿರಳವಾಗಿತ್ತು. ಸರಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳು ಮುಚ್ಚಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News