ಆತ್ಮಹತ್ಯೆ ಪ್ರಕರಣ: ಆರೋಪಪಟ್ಟಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ಗೆ ಅರ್ನಬ್ ಗೋಸ್ವಾಮಿ ಮನವಿ
Update: 2020-12-03 18:17 GMT
ಮುಂಬೈ: 2018ರಲ್ಲಿ ಇಂಟಿರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಕೆಗೆ ಹಾಗೂ ಮುಂದಿನ ಪ್ರಕ್ರಿಯೆಗೆ ತಡೆಕೋರಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಗುರುವಾರ ಬಾಂಬೆ ಹೈಕೋರ್ಟ್ಗೆ ತುರ್ತು ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಯಗಢ ಜಿಲ್ಲೆಯ ಅಲಿಬಾಗ್ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿ ನಡೆಸಿರುವ ತನಿಖೆಯನ್ನು ಕಳೆದ ವರ್ಷ ಮುಕ್ತಾಯಗೊಳಿಸಿದ್ದರು. ಹೀಗಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ರಾಜ್ಯ ಸಿಐಡಿಗೆ ಪ್ರಕರಣದ ಮರು ತನಿಖೆಗೆ ಆದೇಶಿಸುವ ಯಾವುದೇ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆ ಪ್ರಕರಣದ ಮರು ತನಿಖೆಯ ವೇಳೆ ಗೋಸ್ವಾಮಿ ಓರ್ವ ಆರೋಪಿಯಾಗಿದ್ದು, ಕಳೆದ ತಿಂಗಳು ಅಲಿಬಾಗ್ ಪೊಲೀಸರು ಗೋಸ್ವಾಮಿಯನ್ನು ಬಂಧಿಸಿದ್ದರು. ಆದರೆ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು.