ಹರ್ಯಾಣದ ರೈತ ಸಾವನ್ನಪ್ಪಲು ಚಳಿ ಕಾರಣ ?
ಹೊಸದಿಲ್ಲಿ, ಡಿ. 8: ದಿಲ್ಲಿ ಹಾಗೂ ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವನ್ನಪ್ಪಲು ವಿಪರೀತ ಚಳಿ ಕಾರಣ ಎಂದು ನಂಬಲಾಗಿದೆ. ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಸುಮಾರು ಎರಡು ವಾರಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ದಿಲ್ಲಿ-ಹರ್ಯಾಣ ಗಡಿಯ ಸಮೀಪದ ಪಾರ್ಕೊಂದರಲ್ಲಿ ಮಂಗಳವಾರ ಬೆಳಗ್ಗೆ 32 ವರ್ಷದ ರೈತನ ಮೃತದೇಹ ಪತ್ತೆಯಾಗಿತ್ತು.
ಅವರನ್ನು ಹರ್ಯಾಣದ ಸೋನಿಪತ್ನ ರೈತ ಅಜಯ್ ಮೋರ್ ಎಂದು ಗುರುತಿಸಲಾಗಿತ್ತು. ಅಜಯ್ ಮೋರ್ ತನ್ನ ಗ್ರಾಮದ ಇತರ ರೈತರೊಂದಿಗೆ ಸಿಂಘು ಗಡಿಯಲ್ಲಿ ಕಳೆದ 10 ದಿನಗಳಿಂದ ಕೊರೆಯುವ ಚಳಿಯ ನಡುವೆಯೂ ಪ್ರತಿಭಟನೆ ನಡೆಸುತ್ತಿದ್ದರು. ತೀವ್ರ ಚಳಿಯಿಂದ ಅವರು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸೋನಿಪತ್ನ ಮುಖ್ಯ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಅಜಯ್ ವೃದ್ಧ ತಾಯಿ, ತಂದೆ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ದಿಲ್ಲಿ-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ಆರಂಭವಾದ ಬಳಿಕ ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ.