ನಿಮ್ಮ ಶರೀರಕ್ಕೆ ಹೆಚ್ಚು ನೀರಿನ ಅಗತ್ಯವನ್ನು ಸೂಚಿಸುವ 10 ಅಪಾಯಕಾರಿ ಸಂಕೇತಗಳಿಲ್ಲಿವೆ

Update: 2020-12-13 11:30 GMT

ನೀರು ನಮ್ಮ ಶರೀರದ ಶೇ.60ಕ್ಕೂ ಅಧಿಕ ಭಾಗವನ್ನು ಆವರಿಸಿಕೊಂಡಿದೆ. ನಮ್ಮ ಬದುಕಿಗೆ ಅಗತ್ಯವಾಗಿರುವ ನೀರು ಶರೀರದಲ್ಲಿಯ ದ್ರವಗಳ ಸಮತೋಲನ,ಉಷ್ಣಾಂಶದ ನಿರ್ವಹಣೆ, ಕೀಲೆಣ್ಣೆಯ ರೂಪದಲ್ಲಿ ಅಂಗಾಂಗಗಳ ನಯಗೊಳಿಸುವಿಕೆ, ವಿಷವಸ್ತುಗಳ ಹೊರಹಾಕುವಿಕೆ, ಸಮೀಕರಣ ಮತ್ತು ಚರ್ಮದ ಸೌಂದರ್ಯದ ರಕ್ಷಣೆ ಹೀಗೆ ವಿವಿಧ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಶರೀರದಲ್ಲಿ ನೀರಿನ ಕೊರತೆ ಅಥವಾ ನಿರ್ಜಲೀಕರಣವು ಶರೀರದ ಕಾರ್ಯಗಳಿಗೆ ವ್ಯತ್ಯಯಗಳನ್ನುಂಟು ಮಾಡುತ್ತದೆ. ವಿಷಾದದ ವಿಷಯವೆಂದರೆ ಹೆಚ್ಚಿನವರಿಗೆ ಈ ಬಗ್ಗೆ ಅರಿವೇ ಇಲ್ಲ. ನಮ್ಮ ಶರೀರಕ್ಕೆ ನೀರಿನ ತೀವ್ರ ಅಗತ್ಯವಿದೆ ಎನ್ನುವುದನ್ನು ಸೂಚಿಸುವ ಈ 10 ಸಂಕೇತಗಳು ನಿಮಗೆ ತಿಳಿದಿರಲಿ.....

* ತಲೆನೋವುಗಳು

 ತಲೆ ಹಗುರವಾದಂತೆ ಅನಿಸುವುದು ಮತ್ತು ತಲೆನೋವುಗಳು ನಮ್ಮ ಶರೀರಕ್ಕೆ ನೀರಿನ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತವೆ. ನಮ್ಮ ಶರೀರದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಅದು ನಮ್ಮ ಮಿದುಳನ್ನು ಹಾನಿಗಳಿಂದ ರಕ್ಷಿಸುವ,ಅದನ್ನು ಸುತ್ತುವರಿದಿರುವ ದ್ರವದ ಪ್ರಮಾಣವನ್ನು ತಗ್ಗಿಸುತ್ತದೆ.

* ಏಕಾಗ್ರತೆ ನಷ್ಟ

ಶರೀರದಲ್ಲಿ ನೀರಿನ ಕೊರತೆಯು ಏಕಾಗ್ರತೆಯನ್ನು ಸಾಧಿಸಲು ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಮರೆವು ಹೆಚ್ಚಾಗುತ್ತದೆ. ಸಂವಹನಕ್ಕೂ ತೊಂದರೆಯನ್ನುಂಟು ಮಾಡುತ್ತದೆ.

* ಒಣ ಬಾಯಿ ಮತ್ತು ಕೆಟ್ಟ ಉಸಿರು

ಉಸಿರು ದುರ್ವಾಸನೆಯನ್ನು ಬೀರುತ್ತಿದ್ದರೆ ಅದು ಶರೀರದಲ್ಲಿ ನೀರಿನ ಕೊರತೆಯನ್ನು ಸೂಚಿಸುವ ಇನ್ನೊಂದು ಲಕ್ಷಣವಾಗಿದೆ. ನೀರಿನ ಕೊರತೆಯಾದಾಗ ಬ್ಯಾಕ್ಟೀರಿಯಾ ನಿರೋಧಕ ಗುಣಗಳುಳ್ಳ ಜೊಲ್ಲಿನ ಉತ್ಪಾದನೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಂಡು ಕೆಟ್ಟ ಉಸಿರಿಗೆ ಕಾರಣವಾಗುತ್ತವೆ. ಇದರ ಜೊತೆಗೆ ಬಾಯಿಯು ಒಣಗಿರುತ್ತದೆ.

* ಮಲಬದ್ಧತೆ

ವಾಂತಿ ಅಥವಾ ಅತಿಸಾರದಿಂದಾಗಿ ಶರೀರವು ಬಹಳಷ್ಟು ದ್ರವಗಳನ್ನು ಕಳೆದುಕೊಂಡಾಗ ಮಲವು ಗಟ್ಟಿಯಾಗುತ್ತದೆ ಮತ್ತು ವಿಸರ್ಜನೆಯು ಕಷ್ಟವಾಗುತ್ತದೆ. ಶರೀರದಲ್ಲಿ ನೀರಿನ ಕೊರತೆಯು ಆ್ಯಸಿಡಿಟಿ ಮತ್ತು ಎದೆಯುರಿಗೂ ಕಾರಣವಾಗುತ್ತದೆ.

* ತಿನ್ನುವ ತುಡಿತ

ದಿಢೀರನೆ ಏನಾದರೂ ತಿನ್ನಬೇಕೆಂಬ ತುಡಿತವುಂಟಾದರೆ ಹಾಗೆ ತಿನ್ನುವ ಮೊದಲು ನೀರನ್ನು ಸೇವಿಸಿ. ಶರೀರದಲ್ಲಿ ನೀರಿನ ಕೊರತೆಯುಂಟಾದಾಗ ಅದು ನಿಮಗೆ ಹಸಿವೆಯಾಗಿದೆ ಎಂಬ ಸುಳ್ಳು ಸಂಕೇತವನ್ನು ರವಾನಿಸುತ್ತದೆ. ಆದರೆ ವಾಸ್ತವದಲ್ಲಿ ನಿಮಗೆ ಅತಿಯಾದ ಬಾಯಾರಿಕೆಯಾಗಿರುತ್ತದೆ.

* ಗಾಢವರ್ಣದ ಮೂತ್ರ

ನಿಮ್ಮ ಮೂತ್ರದ ಬಣ್ಣವು ನಿಮ್ಮ ಒಟ್ಟಾರೆ ಆರೋಗ್ಯದ ಪ್ರಮುಖ ಸಂಕೇತವಾಗಿದೆ. ಮೂತ್ರವು ಸಾಮಾನ್ಯವಾಗಿ ಅತಿ ಲಘುವಾದ ಬಣ್ಣವನ್ನು ಹೊಂದಿರಬೇಕು. ಆದರೆ ಮೂತ್ರವು ಗಾಢ ಹಳದಿ ಬಣ್ಣದ್ದಾಗಿದ್ದರೆ ಅದು ಶರೀರದಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ ಮತ್ತು ನಿರ್ಜಲೀಕರಣವು ಮೂತ್ರ ವಿಸರ್ಜನೆಯ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ.

* ತಲೆ ಸುತ್ತುವಿಕೆ

ನಿಂತುಕೊಂಡಾಗ ಹೃದಯ ಬಡಿತ ದರದಲ್ಲಿ ಏರಿಕೆ ಮತ್ತು ರಕ್ತದೊತ್ತಡದಲ್ಲಿ ದಿಢೀರ್ ಬದಲಾವಣೆ ತಲೆ ಸುತ್ತುವಂತೆ ಮಾಡುತ್ತವೆ. ಸಾಕಷ್ಟು ನೀರನ್ನು ಕುಡಿಯದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸ್ಕ್ವಾಲೇನ್ ಮತ್ತು ಹ್ಯಾಲುರಾನಿಕ್ ಆ್ಯಸಿಡ್ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಮರಳಿಸುವಲ್ಲಿ ಪ್ರಮುಖ ಪಾತ್ರ ಹೊಂದಿವೆಯಾದರೂ ನೀರು ಚರ್ಮಕ್ಕೆ ಉತ್ತಮ ನೋಟವನ್ನು ನೀಡುತ್ತದೆ. ಶರೀರದಲ್ಲಿ ನೀರಿನ ಕೊರತೆಯಾದರೆ ಚರ್ಮವು ಜೋಲು ಬೀಳತೊಡಗುತ್ತದೆ.

* ಸ್ನಾಯು ಸೆಳೆತ

ಸ್ನಾಯುಗಳು ಸೆಳೆಯುತ್ತಿದ್ದರೆ ಅದು ನಿಮ್ಮ ಶರೀರಕ್ಕೆ ಹೆಚ್ಚು ನೀರಿನ ಅಗತ್ಯವಿದೆ ಎನ್ನುವುದರ ಸಂಕೇತವಾಗಬಲ್ಲದು. ವ್ಯಾಯಾಮವನ್ನು ಮಾಡುವವರಲ್ಲಿ ಸ್ನಾಯು ಸೆಳೆತವು ನಿರ್ಜಲೀಕರಣದ ಜೊತೆಗೆ ವಿದ್ಯುದ್ವಿಚ್ಛೇದಗಳ ಸಂಭಾವ್ಯ ಕೊರತೆಯನ್ನೂ ಸೂಚಿಸುತ್ತದೆ.

* ನಿದ್ರೆಯ ಕೊರತೆ

ಶರೀರದಲ್ಲಿ ನೀರಿನ ಕೊರತೆಯುಂಟಾದಾಗ ಅದು ನಿದ್ರೆಯ ಕೊರತೆಗೂ ಕಾರಣವಾಗುತ್ತದೆ ಮತ್ತು ನಿದ್ರಾಹೀನತೆಯು ಬಳಲಿಕೆಯನ್ನುಂಟು ಮಾಡುತ್ತದೆ.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News