ಬಿಜೆಪಿ ಸೇರಿದ್ದ ಟಿಎಂಸಿ ಮಾಜಿ ಸಂಸದನ ಕಾರು ಸುತ್ತುವರಿದು ಕರಿಪತಾಕೆ ಪ್ರದರ್ಶನ

Update: 2020-12-26 14:27 GMT

ಕೋಲ್ಕತ್ತಾ, ಡಿ. 26: ತೃಣಮೂಲ ಕಾಂಗ್ರೆಸ್‌ನ ಬಂಡಾಯ ಸಂಸದ ಸುನೀಲ್ ಮೊಂಡಲ್ ಅವರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿನ ಬಿಜೆಪಿ ಕಚೇರಿಗೆ ಆಗಮಿಸುತ್ತಿರುವಂತೆ ಟಿಎಂಸಿ ಕಾರ್ಯಕರ್ತರು ಅವರ ಕಾರನ್ನು ಸುತ್ತುವರಿದು ಕರಿ ಪತಾಕೆ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ ಘಟನೆ ಶನಿವಾರ ನಡೆದಿದೆ.

ಮೇದಿನಿಪುರದಲ್ಲಿ ಡಿಸೆಂಬರ್ 19ರಂದು ತೃಣಮೂಲ ಕಾಂಗ್ರೆಸ್‌ನ ಮೊಂಡಲ್ ಹಾಗೂ ಇತರ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದ್ದರು. ಇವರನ್ನು ಸನ್ಮಾನಿಸಲು ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ಕಚೇರಿಯ ಸಮೀಪವೇ ತೃಣಮೂಲ ಕಾಂಗ್ರೆಸ್ ವೇದಿಕೆ ನಿರ್ಮಿಸಿತ್ತು.

ಮೊಂಡಲ್ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯಿಂದ ಘೋಷಣೆಗಳನ್ನು ಕೂಗಿದರು. ಕೆಲವರು ಅವರ ಕಾರಿನ ಮೇಲೆ ಬಿದ್ದರು. ಈ ಸಂದರ್ಭ ಗದ್ದಲ ಏರ್ಪಟ್ಟಿತು.

ಈ ಪ್ರದೇಶದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ತೃಣಮೂಲ ಕಾಂಗ್ರೆಸ್‌ನ ವೇದಿಕೆ ಹಾಗೂ ಬಿಜೆಪಿ ಕಚೇರಿಯ ಪ್ರವೇಶ ದ್ವಾರದ ನಡುವೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ಪ್ರತಿಭಟನೆ ಇದ್ದಕ್ಕಿದ್ದಂತೆ ನಡೆಯಿತು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಹೇಳಿದ್ದಾರೆ. ಬಿಜೆಪಿಯನ್ನು ತುಳಿಯುವ ತೃಣಮೂಲ ಕಾಂಗ್ರೆಸ್‌ನ ಈ ಪ್ರಯತ್ನ ವಿಫಲವಾಗಿದೆ ಎಂದು ಬಿಜೆಪಿ ನಾಯಕ ಜಯ ಪ್ರಕಾಶ್ ಮಜುಂದಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News