ಸಚಿವ ಶ್ರೀಪಾದ ನಾಯಕ್ ಆರೋಗ್ಯದಲ್ಲಿ ಸುಧಾರಣೆ
ಪಣಜಿ, ಜ.13: ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರ ಆರೋಗ್ಯಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ.
ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ವ್ಯವಸ್ಥೆ(ವೆಂಟಿಲೇಟರ್)ಯನ್ನು ತೆಗೆದಿದ್ದು ಹೈಫ್ಲೊ ಆಕ್ಸಿಜನ್ ಥೆರಪಿ ವ್ಯವಸ್ಥೆಗೊಳಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಎಐಐಎಂಎಸ್ ದಿಲ್ಲಿಯ ವೈದ್ಯರು, ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಹಾಗೂ ಪ್ರಮೋದ್ ಸಾವಂತ್ ಅವರನ್ನೊಳಗೊಂಡ ಸಮಿತಿಯು ಬುಧವಾರ ಬೆಳಿಗ್ಗೆ ಸಚಿವ ಶ್ರೀಪಾದ ನಾಯಕ್ ಅವರ ಆರೋಗ್ಯಸ್ಥಿತಿಯನ್ನು ಪರಾಮರ್ಶಿಸಿದೆ. ಅವರ ಉಸಿರಾಟ ಪ್ರಕ್ರಿಯೆ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ನಿಯತಾಂಕಗಳು ತೃಪ್ತಿಕರವಾಗಿದೆ.
ಮುಂದಿನ 24 ಗಂಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಸಚಿವರ ಆರೋಗ್ಯಸ್ಥಿತಿಯ ಬಗ್ಗೆ ನಿಕಟ ನಿಗಾ ವಹಿಸಲಿದ್ದಾರೆ ಎಂದು ಎಐಐಎಂಎಸ್ ತಂಡದ ಮುಖ್ಯಸ್ಥೆ ಡಾ ರಾಜೇಶ್ವರಿ ಹೇಳಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಗ್ರಾಮದಲ್ಲಿ ಸೋಮವಾರ ಸಚಿವ ನಾಯಕ್ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಸಚಿವರ ಪತ್ನಿ ಹಾಗೂ ಆಪ್ತ ಸಹಾಯಕ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.