ಎಸಿಬಿ ದಾಳಿ ಪ್ರಕರಣ: ಬಿಬಿಎಂಪಿ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಅಮಾನತು
ಬೆಂಗಳೂರು, ಫೆ.9: ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಅವರನ್ನು ಸೇವೆಯಿಂದ ವಜಾಗೊಳಿಸಿ ಬಿಬಿಎಂಪಿ ಆದೇಶಿಸಿದೆ.
ಆದಾಯಕ್ಕಿಂತ ಆಸ್ತಿ ಸಂಪಾದನೆ ಆರೋಪದಡಿ ಬಂಧಿತ ಆರೋಪಿ ದೇವೇಂದ್ರಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ದೇವೇಂದ್ರಪ್ಪ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿ ಬಳಿಯಿದ್ದ ಲಕ್ಷಾಂತರ ರೂ. ಮೌಲ್ಯದ ನಗದು, 480ಕ್ಕೂ ಹೆಚ್ಚು ಕಡತಗಳನ್ನು ಜಪ್ತಿ ಮಾಡಿದ್ದರು. ತದನಂತರ ದೇವೇಂದ್ರಪ್ಪನನ್ನು ವಿಚಾರಣೆ ನಡೆಸಿದಾಗ, ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನಲ್ಲಿದ್ದ ಸೀಲ್, ಕಚೇರಿಯ ಸೀಲ್ ಹಾಗೂ ದಾಖಲೆಯಿಲ್ಲದ 7.40 ಲಕ್ಷರೂ. ನಗದು ಪತ್ತೆಯಾಗಿತ್ತು.
ಆರೋಪಿ ಮನೆಯಿಂದ ಇದುವರೆಗೆ ಒಟ್ಟು 27.40 ಲಕ್ಷ ರೂ. ಜಪ್ತಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಆಯುಕ್ತರು ಸೇವೆಯಿಂದ ಅಮಾನತು ಮಾಡಿ, ಅಧಿಕೃತ ಆದೇಶ ಹೊರಡಿಸಿದ್ದಾರೆ.