ಮೊದಲ ಹಂತದ ಸೇನೆ ಹಿಂದೆಗೆತ ಪ್ರಕ್ರಿಯೆ ಸಂಪೂರ್ಣ: ಶನಿವಾರ ಭಾರತ-ಚೀನಾ ಕಮಾಂಡರ್ ಮಟ್ಟದ ಮಾತುಕತೆ

Update: 2021-02-19 16:48 GMT

ಹೊಸದಿಲ್ಲಿ, ಫೆ.19: ಪಾಂಗ್ಯಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭಾರತ- ಚೀನೀ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗ ಪೂರ್ವ ಲಡಾಖ್‌ನ ಹಾಟ್‌ಸ್ಪ್ರಿಂಗ್ಸ್, ಗೋಗ್ರ ಮತ್ತು ಡೆಪ್ಸಾಂಗ್‌ನಲ್ಲಿ ಸೇನೆ ಹಿಂದೆಗೆತ ಪ್ರಕ್ರಿಯೆ ಮುಂದುವರಿಸುವ ನಿಟ್ಟಿನಲ್ಲಿ ಫೆ.20ರಂದು (ಶನಿವಾರ) ಉಭಯ ಸೇನೆಗಳ ಕಮಾಂಡರ್ ಮಟ್ಟದ ಮಾತುಕತೆ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಸೇನಾ ಕಮಾಂಡರ್ ಮಟ್ಟದ 10ನೇ ಸುತ್ತಿನ ಮಾತುಕತೆ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಯ ಚೀನಾದ ಭಾಗದಲ್ಲಿರುವ ಮೋಲ್ಡೊ ಗಡಿಕೇಂದ್ರದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಪಾಂಗ್ಯಾಂಗ್ ಸರೋವರ ಪ್ರದೇಶದಿಂದ ಸೇನೆ ಹಿಂದೆಗೆತ ಪೂರ್ಣಗೊಂಡ ಬಳಿಕ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಮೊದಲ ಮಾತುಕತೆ ಇದಾಗಿದೆ. ಪಾಂಗ್ಯಾಂಗ್‌ನ ದಕ್ಷಿಣ ದಂಡೆಯಿಂದ ಸೇನಾಪಡೆ, ಆಯುಧಗಳು ಹಾಗೂ ಇನ್ನಿತರ ಸೇನಾ ಸಾಮಾಗ್ರಿಗಳನ್ನು ಹಿಂದೆಗೆದುಕೊಳ್ಳುವ, ಬಂಕರ್‌ಗಳು, ಟೆಂಟ್‌ಗಳು ಹಾಗೂ ಇತರ ತಾತ್ಕಾಲಿಕ ನಿರ್ಮಾಣಗಳನ್ನು ಕಳಚುವ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದ್ದು ಶುಕ್ರವಾರ ಉಭಯ ದೇಶಗಳ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಿ ಖಾತರಿ ಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲಡಾಕ್ ವಲಯದಲ್ಲಿ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಉಳಿದ ಪ್ರದೇಶದಿಂದ ಸೇನೆ ಹಿಂದೆಗೆತ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕೆಂದು ಶನಿವಾರದ ಮಾತುಕತೆಯಲ್ಲಿ ಭಾರತ ಬಲವಾಗಿ ಪ್ರತಿಪಾದಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾತುಕತೆಯಲ್ಲಿ ಲೇಹ್‌ನಲ್ಲಿ ನೆಲೆಯಾಗಿರುವ 14 ಕಾರ್ಪ್ಸ್ ತುಕಡಿಯ ಕಮಾಂಡರ್ ಲೆಜ ಪಿಜಿಕೆ ಮೆನನ್ ಭಾರತದ ನಿಯೋಗದ ನೇತೃತ್ವ ವಹಿಸಲಿದ್ದರೆ ಚೀನೀ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಲಿಯು ಲಿನ್ ವಹಿಸುತ್ತಾರೆ ಎಂದು ವರದಿಯಾಗಿದೆ. ಪಾಂಗ್ಯಾಂಗ್ ಸರೋವರ ಪ್ರದೇಶದಿಂದ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡ 48 ಗಂಟೆಯೊಳಗೆ, ಉಳಿದ ಎಲ್ಲಾ ಬಿಕ್ಕಟ್ಟಿನ ಇತ್ಯರ್ಥದ ಬಗ್ಗೆ ಚರ್ಚಿಸಲು ಉಭಯ ಸೇನೆಗಳ ಹಿರಿಯ ಕಮಾಂಡರ್‌ಗಳ ಮಟ್ಟದ ಸಭೆ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಈ ಮಧ್ಯೆ, ಕಳೆದ ವರ್ಷದ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ತನ್ನ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಶುಕ್ರವಾರ ಚೀನಾ ಅಧಿಕೃತವಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News