"ರೈತರೊಂದಿಗೆ ಚರ್ಚಿಸದ ಸಚಿವರೆಲ್ಲ ಬಂಗಾಳದಲ್ಲಿ ಹೋಟೆಲ್ ಬುಕ್ ಮಾಡಿ ನನ್ನನ್ನು ಕೊಲ್ಲಲು ಸಂಚು ಹೂಡುತ್ತಿದ್ದಾರೆ"
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇಲ್ಲಿನ ಬಂಕುರಾದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ""ರೈತರೊಂದಿಗೆ ಮಾತನಾಡದ ಕೇಂದ್ರ ಸಚಿವರೆಲ್ಲ ಬಂಗಾಳದಲ್ಲಿ ಹೋಟೆಲ್ ಬುಕ್ ಮಾಡಿ ನನ್ನನ್ನು ಕೊಲ್ಲಲು ಸಂಚು ಹೂಡುತ್ತಿದ್ದಾರೆ" ಎಂದು ಆರೋಪಿಸಿದ್ದಾಗಿ ANI ವರದಿ ಮಾಡಿದೆ.
"ರೈತರು ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ ಕೇಂದ್ರದ ಮಂತ್ರಿಗಳೆಲ್ಲಾ ಬಂಗಾಳದಲ್ಲಿ ಹೋಟೆಲ್ ಬುಕ್ ಮಾಡಿ ಕುಳಿತುಕೊಂಡಿದ್ದಾರೆ. ಅಲ್ಲಿ, ನನ್ನನ್ನು ಕೊಲೆಗೈಯಲು, ಟಿಎಂಸಿಯನ್ನು ನಾಶ ಮಾಡಲು ಮತ್ತು ಚುನಾವಣಾ ಆಯೋಗವನ್ನು ಬಳಸಿಕೊಂಡು ಟಿಎಂಸಿ ವಿರುದ್ಧ ಹೇಗೆ ಪ್ರಕರಣಗಳನ್ನು ದಾಖಲಿಸಬಹುದು ಎಂದು ಸಂಚು ಹೂಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಜನರು ತಮ್ಮ ಸಭೆಗಳಿಗೆ ಏಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರು ನಿನ್ನೆ ರಾತ್ರಿ ಸಭೆ ನಡೆಸಿದರು. ಇದರ ಬಗ್ಗೆ ನಾನು ಏನು ಮಾಡಬಹುದು? ನೀವು ಜನರನ್ನು ಹಿಂಸಿಸುತ್ತಿರುವುದೇ ಇದಕ್ಕೆ ಕಾರಣ ”ಎಂದು ಮಮತಾ ಬ್ಯಾನರ್ಜಿ ಹೇಳಿದರು.