ಕೋಮುನೆಲೆಯಲ್ಲಿ ಮತ ಯಾಚನೆ ಆರೋಪ: ಮಮತಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
Update: 2021-03-25 17:11 GMT
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಮು ನೆಲೆಯಲ್ಲಿ ಜನತೆಯಲ್ಲಿ ಮತ ಯಾಚಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಭಾರತೀಯ ಜನತಾ ಪಕ್ಷ(ಬಿಜೆಪಿ)ಇಂದು ದೂರನ್ನು ನೀಡಿದೆ.
ಪೂರ್ವ ಮಿಡ್ನಾಪುರದಲ್ಲಿ ಬುಧವಾರ ಮಮತಾ ಬ್ಯಾನರ್ಜಿ ಮಾಡಿದ್ದ ಭಾಷಣವನ್ನು ಉಲ್ಲೇಖಸಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಉದ್ದೇಶಪೂರ್ವಕವಾಗಿ ಧಾರ್ಮಿಕ ದೃಷ್ಟಿಯಿಂದ ಕೋಮುವಾದ ಹಾಗೂ ದ್ವೇಷವನ್ನು ಹರಡಲು ಪ್ರಯತ್ನಿಸಿದ್ದಾರೆ ಎಂದು ವೀಡಿಯೊದಲ್ಲಿರುವ ವಿಷಯಗಳು ಬಹಿರಂಗಪಡಿಸಿವೆ ಎಂದಿದೆ.
ಬಂಗಾಳಿಯಲ್ಲಿ ಭಾಷಣ ಮಾಡಿದ್ದ ಮಮತಾ, ಕೇಸರಿ ಉಡುಗೆ ಧರಿಸಿ ಹಾಗೂ ಹಣೆಯ ಮೇಲೆ ತಿಲಕ ಇಟ್ಟುಕೊಳ್ಳುವ ಬಿಜೆಪಿಗರು ಬಂಗಾಳದ ಸಂಸ್ಕೃತಿಯನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದಿದ್ದರು.