ನಕ್ಸಲರಿಂದ ಇಬ್ಬರು ಪೊಲೀಸರು ಸಹಿತ ಐವರ ಹತ್ಯೆ
ರಾಯಪುರ, ಎ.18: ಭದ್ರತಾ ಪಡೆಯ 22 ಮಂದಿ ಸಿಬ್ಬಂದಿಯನ್ನು ಹತ್ಯೆ ಮಾಡಿದ ಎರಡು ವಾರಗಳ ಬಳಿಕ ಮಾವೋವಾದಿ ಉಗ್ರರು, ಕಳೆದ ಮೂರು ದಿನಗಳಲ್ಲಿ ಪದೇ ಪದೇ ದಾಳಿ ನಡೆಸಿ ಕರ್ತವ್ಯದಲ್ಲಿಲ್ಲದ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಮೂರು ಮಂದಿ ಗ್ರಾಮಸ್ಥರನ್ನು ಹತ್ಯೆ ಮಾಡಿದ್ದಾರೆ.
ಸುಕ್ಮಾದಲ್ಲಿ ಸಹಾಯಕ ಕಾನ್ಸ್ಟೇಬಲ್ ಧನಿರಾಮ್ ಕಶ್ಯಪ್ ಮತ್ತು ಪ್ಯುಮೆನ್ ಹಮ್ದಾ ಅವರ ಮೃತದೇಹಗಳು ಧೂಳುಯುಕ್ತ ರಸ್ತೆಯಲ್ಲಿ ಪತ್ತೆಯಾಗಿವೆ. ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಭೆಜ್ಜಿ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೋಟರ್ಸೈಕಲ್ನಿಂದ ಎಳೆದು ಹಾಕಿ ಕತ್ತುಸೀಳಿ ಇವರನ್ನು ಹತ್ಯೆ ಮಾಡಲಾಗಿದೆ.
ಆರಂಭದಲ್ಲಿ ಇದು ವೈಯಕ್ತಿಕ ದ್ವೇಷದ ಕೃತ್ಯ ಎಂದು ಪೊಲೀಸರು ಅನುಮಾನಿಸಿದ್ದರು. ಆದರೆ ಇದು ಮಾವೋವಾದಿ ಉಗ್ರರ ಕೃತ್ಯ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಇಬ್ಬರೂ ಮನೆಗೆ ದಿನಸಿ ಖರೀದಿಸುವ ಸಲುವಾಗಿ ಹೋಗುತ್ತಿದ್ದಾಗ ನಕ್ಸಲರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.