ಪುನರ್‌ ಪರಿಶೀಲನಾ ಸಭೆಯಲ್ಲಿ ಆಮ್ಲಜನಕ ಲಭ್ಯತೆ ಹೆಚ್ಚಿಸಲು ಮೂರು ಸಲಹೆಗಳನ್ನು ನೀಡಿದ ಪ್ರಧಾನಿ

Update: 2021-04-22 16:26 GMT

ಹೊಸದಿಲ್ಲಿ,ಎ.22: ದೇಶಾದ್ಯಂತ ಆಮ್ಲಜನಕದ ಪೂರೈಕೆಯನ್ನು ಪುನರ್ಪರಿಶೀಲಿಸಲು ಗುರುವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಅದರ ಲಭ್ಯತೆಯನ್ನು ಹೆಚ್ಚಿಸಲು ಮಾರ್ಗಗಳ ಕುರಿತು ಚರ್ಚಿಸಿತು. ಇದೇ ವೇಳೆ ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸಲು ಮೂರು ಸಲಹೆಗಳನ್ನು ಮೋದಿ ನೀಡಿದರು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ,ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ನೀತಿ ಆಯೋಗ ಹಾಗೂ ಇತರ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಮತ್ತು ಸಾವುಗಳ ನಡುವೆಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಮ್ಲಜನಕದ ತೀವ್ರ ಕೊರತೆಯ ವರದಿಗಳ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.

ಅಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸುವುದು,ಅದರ ವೇಗ ಮತ್ತು ವಿತರಣೆಯನ್ನು ಹೆಚ್ಚಿಸುವುದು ಹಾಗೂ ಆಸ್ಪತ್ರೆಗಳಿಗೆ ಆಮ್ಲಜನಕ ಬೆಂಬಲವನ್ನೊದಗಿಸಲು ವಿನೂತನ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಮೂರು ವಿಷಯಗಳನ್ನು ಮೋದಿ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು.

ರಾಜ್ಯಗಳ ಆಮ್ಲಜನಕ ಅಗತ್ಯವನ್ನು ಗುರುತಿಸಲು ಮತ್ತು ಅವುಗಳಿಗೆ ಆಮ್ಲಜನಕದ ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಪ್ರಧಾನಿಯವರಿಗೆ ವಿವರಿಸಿದರು. 20 ರಾಜ್ಯಗಳಿಂದ ಹಾಲಿ ಪ್ರತಿದಿನ 6,785 ಟನ್ ದ್ರವ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆಯಿದ್ದು,ಕೇಂದ್ರದಿಂದ ಎ.21ರಿಂದ ಈ ರಾಜ್ಯಗಳಿಗೆ ಪ್ರತಿದಿನ 6,822 ಟನ್ ಹಂಚಿಕೆ ಮಾಡಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ರಾಜ್ಯಗಳಿಗೆ ಆಮ್ಲಜನಕ ಸುಗಮವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ ಮೋದಿ, ವ್ಯತ್ಯಯವುಂಟಾದಲ್ಲಿ ಸ್ಥಳೀಯ ಆಡಳಿತವನ್ನು ಹೊಣೆಯಾಗಿಸುವ ಅಗತ್ಯವಿದೆ ಎಂದು ಹೇಳಿದರು. ಆಮ್ಲಜನಕದ ಕಾಳದಾಸ್ತಾನು ವಿರುದ್ಧ ರಾಜ್ಯ ಸರಕಾರಗಳು ಕಠಿಣಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಿ ಹೇಳಿದರು.
ಆಮ್ಲಜನಕದ ಸಾಗಾಟಕ್ಕಾಗಿ ಟ್ಯಾಂಕರ್ಗಳ ಲಭ್ಯತೆಯನ್ನು ಹೆಚ್ಚಿಸಲೂ ಸರಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News