ಮಾನವೀಯತೆಯನ್ನು ಮರೆಯದಿರೋಣ

Update: 2021-05-10 10:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದ ಜನತೆ ಮತ್ತೊಮ್ಮೆ ಲಾಕ್‌ಡೌನ್‌ಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದಾರೆ. ಇದೊಂದು ‘ಸೆಮಿ ಲಾಕ್‌ಡೌನ್’ ಆಗಿದ್ದರೂ ಜನರ ಬದುಕಿನ ಮೇಲೆ ಬೀರುವ ದುಷ್ಪರಿಣಾಮಗಳು ಅಗಾಧ. ಬೆಳಗ್ಗೆ ಆರರಿಂದ ಹತ್ತು ಗಂಟೆಯವರೆಗೆ ದಿನಸಿ ಇತ್ಯಾದಿ ಅಗತ್ಯ ವಸ್ತುಗಳನ್ನು ಖರೀದಿಸಲು ಸರಕಾರ ಅವಕಾಶಕೊಟ್ಟಿದೆಯಾದರೂ ಯಾವುದೇ ವಾಹನಗಳನ್ನು ಬಳಸಬಾರದು ಎಂದೂ ಆದೇಶ ನೀಡಿದೆ. ಒಂದು ರೀತಿಯಲ್ಲಿ, ಜನರ ಕೈಗಳನ್ನು ಹಗ್ಗದಿಂದ ಬಿಗಿದು, ಸ್ವಾತಂತ್ರವನ್ನು ನೀಡಿದಂತೆ. ಈ ವಿರೋಧಾಭಾಸಗಳಿಂದಾಗಿ, ಲಾಕ್‌ಡೌನ್‌ನ ನಡುವೆಯೂ ಸರಕಾರ ನೀಡಿರುವ ಅವಕಾಶಗಳನ್ನು ಬಳಸುವುದು ಜನರಿಗೆ ಕಷ್ಟಸಾಧ್ಯವಾಗಿದೆ. ಕಳೆದ ಬಾರಿ ಕೇಂದ್ರ ಸರಕಾರವೇ ದೇಶಾದ್ಯಂತ ಲಾಕ್‌ಡೌನ್ ವಿಧಿಸಿತ್ತು. ಆದರೆ ಅದು ಕೊರೋನ ಹೆಚ್ಚುವುದಕ್ಕೆ ಕಾರಣವಾಯಿತು ಮಾತ್ರವಲ್ಲದೆ, ದೇಶದ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಿತು. ಈ ಬಾರಿ, ಎರಡನೆಯ ಅಲೆಯ ಕೊರೋನ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಜನರು ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದಾರೆ. ಇದನ್ನರಿತು ಹಿಂದಿನಂತೆ ‘ಲಾಕ್‌ಡೌನ್’ ಘೋಷಿಸಲು ಕೇಂದ್ರ ಸರಕಾರ ಅಂಜುತ್ತಿದೆ. ಲಾಕ್‌ಡೌನ್ ಹೇರುವ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಟ್ಟಿದೆ. ಅಂದರೆ ಅದರ ಎಲ್ಲ ದುಷ್ಪರಿಣಾಮಗಳಿಗೂ ಅಂತಿಮವಾಗಿ ರಾಜ್ಯ ಸರಕಾರಗಳು ಹೊಣೆಯಾಗಬೇಕಾಗುತ್ತದೆ.

ಕೇಂದ್ರದ ಪರೋಕ್ಷ ನಿರ್ದೇಶನದ ಮೇರೆಗೇ ರಾಜ್ಯ ಸರಕಾರ ಈ ಸೆಮಿ ಲಾಕ್‌ಡೌನ್ ಹೇರಿದೆ. ಎಂದಿನಂತೆ, ಇದರ ಪರಿಣಾಮವನ್ನು ಅನುಭವಿಸಲಿರುವವರು ಬಡವರ್ಗ. ಅಂದಂದಿನ ಬದುಕನ್ನು ಅಂದಂದು ದುಡಿದೇ ಬದುಕಬೇಕಾದ ಜನರ ಪಾಲಿಗೆ ಈ ಲಾಕ್‌ಡೌನ್ ಕೊರೋನಕ್ಕಿಂತ ಭೀಕರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಬಾರಿ ಈ ಬಡವರ್ಗವನ್ನು ಲಾಕ್‌ಡೌನ್ ಹೆಸರಿನಲ್ಲಿ ಹಿಂಡಿ ಹಿಪ್ಪೆ ಮಾಡಲಾಗಿದೆ. ಇದೀಗ ಮತ್ತೊಮ್ಮೆ ಅವರನ್ನು ಗಾಣಕ್ಕೆ ಹಾಕಿ ತಿರುಗಿಸಲಾಗುತ್ತಿದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ತತ್ತರಿಸಿರುವ ಇವರಿಗೆ ಈ ಸೆಮಿ ಲಾಕ್‌ಡೌನ್‌ನ್ನು ತಾಳಿಕೊಳ್ಳುವ ಶಕ್ತಿಯೇ ಇಲ್ಲ. ಸಾಧಾರಣವಾಗಿ, ಲಾಕ್‌ಡೌನ್ ಸಂದರ್ಭದಲ್ಲಿ ದಿನಗೂಲಿ ಕಾರ್ಮಿಕರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಬೀದಿಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ಗೂಡಂಗಡಿ, ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವವರು, ಆಟೋ ಓಡಿಸುವವರು ಒಂದು ರೀತಿಯಲ್ಲಿ ದಿನಗೂಲಿಗಳೇ. ಆಯಾ ದಿನ ದುಡಿದರಷ್ಟೇ ಅವರಿಗೆ ಬದುಕು. ಇವರೆಲ್ಲರೂ ಈ ಅವಧಿಯಲ್ಲಿ ಏನು ಮಾಡಬೇಕು? ಇವರಿಗೆ ಸರಕಾರ ಯಾವ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿದೆ? ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ಲಾಕ್‌ಡೌನ್ ಸಂತ್ರಸ್ತರಿಗಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರ ಬಿಡುಗಡೆ ಮಾಡಿದೆ. ಕರೆಂಟ್ ಬಿಲ್ ಪಾವತಿಗೂ ವಿನಾಯಿತಿ ನೀಡಲಾಗಿದೆ. ವಿಶೇಷವೆಂದರೆ, ಅವು ಯಾವುದೂ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲ. ತಮ್ಮ ಸೀಮಿತ ಅವಕಾಶದಲ್ಲಿ ಅವುಗಳು ತಮ್ಮ ಜನರಿಗಾಗಿ ಯೋಜನೆಗಳನ್ನು ರೂಪಿಸಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲೂ ಬಿಜೆಪಿಯೇ ಇರುವ ಕಾರಣ, ರಾಜ್ಯದ ಸಂಸದರು ಒತ್ತಡ ಹೇರಿದರೆ ಹಲವು ಸವಲತ್ತುಗಳು ಕೇಂದ್ರದಿಂದ ರಾಜ್ಯಕ್ಕೆ ಹರಿದು ಬರಬಹುದು. ವಿಪರ್ಯಾಸವೆಂದರೆ, ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನನ್ನು ಕೂಡ ಪೂರೈಸುವುದಕ್ಕೆ ಕೇಂದ್ರ ಹಿಂಜರಿಯಿತು. ಸುಪ್ರೀಂಕೋರ್ಟ್ ಆದೇಶದ ಬಳಿಕವಷ್ಟೇ ಕೇಂದ್ರ ಸರಕಾರ ಆಕ್ಸಿಜನ್ ಪೂರೈಸಲೇ ಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿಕೊಂಡಿದೆ. ಕೇಂದ್ರದಲ್ಲಿ ತನ್ನದೇ ಪಕ್ಷವಿದ್ದರೂ, ಮುಖ್ಯಮಂತ್ರಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಕುರಿತಂತೆ ಕೇಂದ್ರ ಸರಕಾರಕ್ಕಿರುವ ಅಸಹನೆಯನ್ನು ಇದು ಬಯಲು ಮಾಡಿದೆ. ಜಾತಿ ನಿಗಮ, ಮಂಡಳಿ, ಪ್ರತಿಮೆಗಳಿಗೆ, ಅನುಭವ ಮಂಟಪ, ಗೋಶಾಲೆಗಳಿಗೆ ಮೀಸಲಿಟ್ಟ ಹಣವನ್ನು ತಕ್ಷಣ ಲಾಕ್‌ಡೌನ್ ಸಂತ್ರಸ್ತರಿಗಾಗಿ ವರ್ಗಾಯಿಸುವುದೊಂದೇ ಯಡಿಯೂರಪ್ಪ ಅವರಿಗಿರುವ ದಾರಿ. ಆ ಮೂಲಕ, ಜನರು ಹಸಿವಿನಿಂದ ಸಾಯುವ ದುರಂತದಿಂದ ಕಾಪಾಡಬೇಕಾಗಿದೆ. ಜೊತೆಗೆ ಕರೆಂಟ್ ಬಿಲ್, ನೀರಿನ ಬಿಲ್‌ಗಳನ್ನು ಪಾವತಿಸುವುದರಿಂದ ಎರಡು ತಿಂಗಳ ಕಾಲ ಜನರಿಗೆ ವಿನಾಯಿತಿ ನೀಡಲು ಮುಂದಾಗಬೇಕು. ಇದರಲ್ಲಿ ಸರಕಾರ ವಿಫಲವಾದರೆ, ಲಾಕ್‌ಡೌನ್ ಕಾರಣದಿಂದ ಹೆಚ್ಚಳವಾಗುವ ಅಪೌಷ್ಟಿಕತೆ ಜನರನ್ನು ನಾನಾ ರೋಗಗಳಿಗೆ ಈಡು ಮಾಡಲಿದೆ ಮತ್ತು ಆ ಕಾರಣಕ್ಕಾಗಿ ಅವರು ಆಸ್ಪತ್ರೆ ಸೇರಲಿದ್ದಾರೆ. ಹಾಗೆ ಆಸ್ಪತ್ರೆ ಸೇರಿದವರು ಕೊರೋನ ಸೋಂಕನ್ನೂ ಅಂಟಿಸಿಕೊಂಡು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಲಿದ್ದಾರೆ.

  ಈ ಮಧ್ಯಮ ಲಾಕ್‌ಡೌನ್ ಘೋಷಣೆಯಾದ ಬೆನ್ನಿಗೇ ಪೊಲೀಸರು ಸರಕಾರದ ಆದೇಶವನ್ನು ತಮ್ಮ ಲಾಠಿಗಳ ಮೂಲಕ ಜಾರಿಗೆ ತರಲು ಹೊರಟಿದ್ದಾರೆ. ಈ ಲಾಕ್‌ಡೌನ್‌ನ ನಿಜವಾದ ಉದ್ದೇಶವನ್ನು ಅರಿತು, ಅದನ್ನು ಜಾರಿಗೊಳಿಸಲು ಮುಂದಾದರೆ ಮಾತ್ರ ಪೊಲೀಸರ ಪ್ರಯತ್ನ ಯಶಸ್ವಿಯಾದೀತು. ಇಲ್ಲದೇ ಇದ್ದರೆ, ಪೊಲೀಸರ ಶ್ರಮವೂ ಅನಗತ್ಯವಾಗಿ ಸಾರ್ವಜನಿಕರ ಅಸಹನೆಗೆ ಗುರಿಯಾದೀತು. ‘ಸರಕಾರದ ಆದೇಶಗಳನ್ನು ಯಥಾವತ್ ಪಾಲಿಸುವುದು ನಮ್ಮ ಕರ್ತವ್ಯ’ ಎಂದು ಪೊಲೀಸರು ತಮ್ಮ ಕೃತ್ಯಗಳಿಗೆ ಸಮರ್ಥನೆ ನೀಡುವುದಿದೆ. ಪೊಲೀಸರೂ ಮನುಷ್ಯರು. ಯಂತ್ರಗಳಲ್ಲ. ಮನುಷ್ಯರ ಒಳಿತಿಗಾಗಿ ಈ ಲಾಕ್‌ಡೌನನ್ನು ಜಾರಿಗೆ ತರಲಾಗಿದೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕಾಗಿದೆ. ಬೀದಿಗಿಳಿದವರು ಯಾರೂ ರೌಡಿಗಳೋ, ಗೂಂಡಾಗಳೋ ಅಲ್ಲ. ತೀರಾ ಅಗತ್ಯ ಎನ್ನಿಸುವ ಸಂದರ್ಭದಲ್ಲಿಯೂ ಕೆಲವರು ಕರ್ಫ್ಯೂ ಅಥವಾ ಲಾಕ್‌ಡೌನ್ ಉಲ್ಲಂಘಿಸಿ ಬೀದಿಗಿಳಿಯಬಹುದು. ಇಂತಹ ಸಂದರ್ಭದಲ್ಲಿ ಅವರ ಅನಿವಾರ್ಯತೆ ಏನು ಎನ್ನುವುದನ್ನು ಸಹನೆಯಿಂದ ಆಲಿಸುವ ಹೊಣೆಗಾರಿಕೆಯೂ ಪೊಲೀಸರಿಗಿದೆ. ಯಾರೋ ಅನಿವಾರ್ಯವಾಗಿ ಒಬ್ಬ ರೋಗಿಯನ್ನು ಕರೆದೊಯ್ಯುವ ಸಂದರ್ಭದಲ್ಲಿ, ಲಾಕ್‌ಡೌನ್ ಸಂದರ್ಭದಲ್ಲಿ ಹೊಂದಿರಬೇಕಾದ ದಾಖಲೆ ಆತನಲ್ಲಿ ಇಲ್ಲ ಎಂದು ತಡೆಯುವುದು ಅಮಾನವೀಯವಾಗುತ್ತದೆ. ಪೊಲೀಸರು ಕಾನೂನನ್ನು ಕಠಿಣವಾಗಿ ಪಾಲಿಸುವ ಭರದಲ್ಲಿ ಅಮಾಯಕ ಜೀವಕ್ಕೆ ಹಾನಿಯಾದರೆ ಯಾವ ಕಾನೂನೂ ಅದನ್ನು ತುಂಬಲಾರದು. ಪೊಲೀಸರು ವಿವೇಕ, ದೂರದೃಷ್ಟಿ, ಸಾಮಾನ್ಯ ಜ್ಞಾನ ಇತ್ಯಾದಿಗಳನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು. ಕಾನೂನನ್ನು ಜಾರಿಗೊಳಿಸುವುದು ಮಾತ್ರವಲ್ಲ, ಅನೇಕ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗುವ ಹೊಣೆಗಾರಿಕೆಯೂ ಪೊಲೀಸರಿಗಿದೆ.

  ಇದೇ ಸಂದರ್ಭದಲ್ಲಿ ಸಾರ್ವಜನಿಕರೂ ಪೊಲೀಸರ ಕರ್ತವ್ಯಕ್ಕೆ ಕೈ ಜೋಡಿಸಬೇಕು. ಅವರೊಂದಿಗೆ ಗರಿಷ್ಠ ಮಟ್ಟದಲ್ಲಿ ಸಹಕರಿಸಬೇಕು. ಕೆಲವೊಮ್ಮೆ ಪೊಲೀಸರು ತಾಳ್ಮೆ ಕಳೆದುಕೊಂಡಾಗ, ಜನಸಾಮಾನ್ಯರು ತಾಳ್ಮೆಗೆಡ್ಳದೆ ಅವರೊಂದಿಗೆ ವ್ಯವಹರಿಸಬೇಕು. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಬೇಕು. ಆಗ ಮಾತ್ರ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಮನ್ವಯ ಸೃಷ್ಟಿಯಾಗಬಹುದು. ಇದೇ ಸಂದರ್ಭದಲ್ಲಿ, ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟವರಿಗೆ ಪೊಲೀಸರು ಮತ್ತು ಸಾರ್ವಜನಿಕರು ಜೊತೆ ಜೊತೆಯಾಗಿ ನೆರವಾಗಬೇಕಾಗಿದೆ. ಕಳೆದ ಬಾರಿ ಲಾಕ್‌ಡೌನ್ ವಿಧಿಸಿದಾಗ, ಸಾರ್ವಜನಿಕ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ನೆರವಿನ ಮಹಾಪೂರವನ್ನೇ ಹರಿಸಿದ್ದವು. ಆದರೆ ಈ ಒಂದು ವರ್ಷದ ಅವಧಿಯಲ್ಲಿ ದೊಡ್ಡ ಪ್ರಮಾಣದ ಜನರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಸಂತ್ರಸ್ತರಿಗೆ ನೆರವಾಗುವ ಶಕ್ತಿಯನ್ನು ಹಲವರು ಕಳೆದುಕೊಂಡಿದ್ದಾರೆ. ಆದುದರಿಂದಲೇ ಈ ಬಾರಿ ಈ ಹಿಂದಿನ ಉತ್ಸಾಹ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ವತಃ ಮುತುವರ್ಜಿ ವಹಿಸಿ ಜಿಲ್ಲೆಯ ಶ್ರೀಮಂತಕುಳಗಳನ್ನು ಸಂಪರ್ಕಿಸಿ ಬಡವರಿಗೆ ನೆರವಾಗಲು ಸ್ಫೂರ್ತಿ ತುಂಬಬೇಕು. ಲಾಕ್‌ಡೌನ್ ಕೊರೋನಕ್ಕೆ ಔಷಧಿ ಅಲ್ಲ. ಈ ಅವಧಿಯಲ್ಲಿ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಗರಿಷ್ಠ ಮಟ್ಟದ ಸೌಕರ್ಯಗಳನ್ನು ಒದಗಿಸಲು ಯಶಸ್ವಿಯಾದರೆ ಮಾತ್ರ ಭವಿಷ್ಯದಲ್ಲಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಸರಕಾರ ಯುದ್ಧೋಪಾದಿಯ ಕಾರ್ಯಾಚರಣೆಯನ್ನು ನಡೆಸಿ, ಆದಷ್ಟು ಬೇಗ ಜನರಿಗೆ ಸಾರ್ವಜನಿಕ ಜೀವನವನ್ನು ಮುಕ್ತವಾಗಿಸಿ ಕೊಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News