ಕೇರಳ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಮಾಜಿ ಆರೋಗ್ಯ ಸಚಿವೆ ಶೈಲಜಾ ಪ್ರತಿಕ್ರಿಯಿಸಿದ್ದು ಹೀಗೆ…
Update: 2021-05-18 14:56 GMT
ಹೊಸದಿಲ್ಲಿ: ಕಳೆದ ವರ್ಷ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಹೊಸ ಸಚಿವ ಸಂಪುಟದಿಂದ ಹೊರಗುಳಿದಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.
‘ಇಂಡಿಯಾ ಟುಡೆ’ ಟಿವಿಯೊಂದಿಗೆ ಮಾತನಾಡಿದ ಶೈಲಜಾ, ‘’ನಾನೊಬ್ಬಳೇ ಅಲ್ಲ. ಇಡೀ ಕ್ಯಾಬಿನೆಟ್ ಅನ್ನು ಬದಲಾಯಿಸಲಾಗಿದೆ. ಇದು ಪಕ್ಷದ ಸಾಮೂಹಿಕ ನಿರ್ಧಾರವಾಗಿತ್ತು. ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಲು ಪಕ್ಷ ನಿರ್ಧರಿಸಿದೆ. ಇದು ಒಳ್ಳೆಯದು. ನಾವು ಖಂಡಿತವಾಗಿಯೂ ಇತರರಿಗೆ ಅವಕಾಶವನ್ನು ನೀಡಬೇಕಾಗಿದೆ. ನನಗೆ ಮಾತ್ರವಲ್ಲ, ಹಿಂದಿನ ಸಂಪುಟದಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ" ಎಂದು ಅವರು ಹೇಳಿದರು.
"ಶೈಲಜಾ ಟೀಚರ್" ಎಂದೂ ಕರೆಯಲ್ಪಡುವ ಕೆ.ಕೆ.ಶೈಲಜಾ ಅವರು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಟ್ಟಣ್ಣೂರು ಕ್ಷೇತ್ರದಿಂದ ಸ್ಪರ್ಧಿಸಿ ಶೇ 61.97 ಮತಗಳನ್ನು ಪಡೆದಿದ್ದರು.