ಕೊರೋನ ಸೋಂಕು: ರಾಜಸ್ತಾನದ ಮಾಜಿ ಸಿಎಂ ಜಗನ್ನಾಥ ಪಹಾಡಿಯಾ ನಿಧನ
Update: 2021-05-20 17:24 GMT
ಜೈಪುರ, ಮೇ 20: ಹಿರಿಯ ಕಾಂಗ್ರೆಸ್ ಮುಖಂಡ, ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ (89) ಕೊರೋನ ಸೋಂಕಿನಿಂದ ಬುಧವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೇಂದ್ರದ ಸಚಿವರಾಗಿ ಹಾಗೂ ಬಿಹಾರ ಮತ್ತು ಹರ್ಯಾನದ ರಾಜ್ಯಪಾಲರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮೃತರ ಗೌರವಾರ್ಥ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ರಾಜ್ಯ ಸರಕಾರ ಘೋಷಿಸಿದೆ. ಪಹಾಡಿಯಾ ನಿಧನಕ್ಕೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.
ದೇಶದ ರಾಜಕೀಯ ಕ್ಷೇತ್ರಕ್ಕೆ ಮತ್ತು ರಾಜಸ್ತಾನಕ್ಕೆ ಪಹಾಡಿಯಾ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನ ಪಕ್ಷಕ್ಕೆ ಅಪಾರ ನಷ್ಟವುಂಟು ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಜಗನ್ನಾಥ್ ಪಹಾಡಿಯಾ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಸಾಮಾಜಿಕ ಸಬಲೀಕರಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.