ಐಪಿಎಲ್ ನಂತಾದ ಭಾರತದ ರಾಜಕೀಯ !

Update: 2021-06-11 05:23 GMT
ಜಿತಿನ್ ಪ್ರಸಾದ್

ತನ್ನ ‘ಹಿರಿಯಣ್ಣ’ ಜ್ಯೋತಿರಾದಿತ್ಯ ಸಿಂದಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಒಂದು ವರ್ಷದ ಬಳಿಕ ಜಿತಿನ್ ಪ್ರಸಾದ್ ಅವರೂ ಅದೇ ದಾರಿಯಲ್ಲಿ ಹೆಜ್ಜೆಯಿರಿಸಿರುವುದು ಅತ್ಯಂತ ನಿರಾಶಾದಾಯಕವಾಗಿದೆ. ಯಾವುದೇ ವ್ಯಕ್ತಿಗತ ಕಹಿಭಾವನೆಯಿಂದ ಈ ಮಾತನ್ನು ನಾನು ಹೇಳುತ್ತಿಲ್ಲ. ಇಬ್ಬರೂ ನನ್ನ ಸ್ನೇಹಿತರಾಗಿದ್ದರು. ಇಬ್ಬರೂ ನನ್ನ ಮನೆಗೆ ಬರುತ್ತಿದ್ದರು ಮತ್ತು ನಾನೂ ಅವರಲ್ಲಿಗೆ ಹೋಗುತ್ತಿದ್ದೆ. ಜಿತಿನ್ ಮದುವೆಗೂ ನಾನು ಹೋಗಿದ್ದೆ. ಹೀಗಾಗಿ ಇದು ವ್ಯಕ್ತಿಗಳ ಕುರಿತಲ್ಲ ಅಥವಾ ವ್ಯಕ್ತಿಗತ ಇಷ್ಟಾನಿಷ್ಟಗಳ ಕುರಿತೂ ಅಲ್ಲ. ಅವರ ಕ್ರಮಗಳ ಬಗ್ಗೆ ನನ್ನ ನಿರಾಶೆಗೆ ಬೇರೆಯೇ ಆದ ಕಾರಣವಿದೆ.

ಸಿಂದಿಯಾ ಮತ್ತು ಪ್ರಸಾದ ಇಬ್ಬರೂ ಬಿಜೆಪಿ ಮತ್ತು ಅದರ ಕೋಮು ಧರ್ಮಾಂಧತೆಯು ಭಾರತಕ್ಕೆ ಒಡ್ಡಿರುವ ಅಪಾಯಗಳ ವಿರುದ್ಧ ಪ್ರಬಲ ಧ್ವನಿಗಳಾಗಿದ್ದರು. ಇಂದು ಅವರಿಬ್ಬರೂ ಒಮ್ಮೆ ತಾವು ಇತರರಿಗಿಂತ ಹೆಚ್ಚಾಗಿ ನಿಂದಿಸಿದ್ದ ಪಕ್ಷವನ್ನು ಖುಷಿಯಿಂದ ಅಪ್ಪಿಕೊಂಡಿದ್ದಾರೆ. ಅವರು ನಿಜಕ್ಕೂ ಏನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ? ಅವರ ರಾಜಕೀಯಕ್ಕೆ ಪ್ರೇರಣೆಯಾಗಿರುವ ನಂಬಿಕೆಗಳು ಮತ್ತು ಮೌಲ್ಯಗಳು ಯಾವುವು? ಅಥವಾ ಅವರು ವೈಯಕ್ತಿಕ ಏಳಿಗೆ ಮತ್ತು ಅಧಿಕಾರಕ್ಕಾಗಿ ಮಾತ್ರ ರಾಜಕೀಯದಲ್ಲಿದ್ದಾರಾ? ರಾಜಕೀಯವು ತತ್ತ್ವರಹಿತ ವೃತ್ತಿಜೀವನವಾಗಬಲ್ಲದೇ? ಇವು ಅವರ ಹೆಜ್ಜೆಗಳು ಎತ್ತಿರುವ ಸ್ಪಷ್ಟ ಪ್ರಶ್ನೆಗಳಾಗಿವೆ.

ನೀವು ರಾಜಕೀಯ ಪ್ರವೇಶಿಸಿದಾಗ ನಿಮ್ಮ ಸಂಕಲ್ಪಗಳಿಗಾಗಿ ಸಾಧನವೊಂದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ
ನನ್ನ ಮಟ್ಟಿಗೆ ರಾಜಕೀಯವು ವಿಚಾರಗಳ ಕುರಿತಾಗಿರಬೇಕು, ಇಲ್ಲದಿದ್ದರೆ ಅಂತಹ ರಾಜಕೀಯಕ್ಕೆ ಯಾವುದೇ ಅರ್ಥವಿಲ್ಲ. ಯಾವುದೇ ಸಂಕಲ್ಪಗಳು ಮತ್ತು ಸಿದ್ಧಾಂತಗಳಿಲ್ಲದ ವೃತ್ತಿಜೀವನದಲ್ಲಿ ನೀವು ಆಸಕ್ತರಾಗಿದ್ದರೆ ನೀವು ಓರ್ವ ಬ್ಯಾಂಕರ್ ಅಥವಾ ವಕೀಲ ಅಥವಾ ಅಕೌಂಟಂಟ್ ಆಗಬಹುದು ಮತ್ತು ದುಡ್ಡನ್ನು ಗಳಿಸಬಹುದು ಅಥವಾ ಕಂಪನಿಯಲ್ಲಿ ಸಿಇಒ ಆಗಿ ಅಧಿಕಾರವನ್ನು ಚಲಾಯಿಸಬಹುದು. ಕಂಪನಿಯೊಂದು ತಯಾರಿಸುವ ಡಿಟರ್ಜಂಟ್ ಉತ್ತಮ ಫಲಿತಾಂಶ ನೀಡುವವರೆಗೆ ಅದರ ವ್ಯವಸ್ಥಾಪಕನ ಸಿದ್ಧಾಂತಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ರಾಜಕೀಯವು ಭಿನ್ನವಾಗಿದೆ. ರಾಜಕೀಯ ಪಕ್ಷಗಳು ಪರಿಪೂರ್ಣ ಸಮಾಜದ ಪರಿಕಲ್ಪನೆಯನ್ನು ಹೊಂದಿರುತ್ತವೆ ಮತ್ತು ಅದನ್ನು ಸಾಕಾರಗೊಳಿಸಲು ವಚನಬದ್ಧವಾಗಿರುತ್ತವೆ. ಅವು ಅಂತಹ ಸಮಾಜವನ್ನು ಹೇಗೆ ರೂಪಿಸಬೇಕು  ಹಾಗೂ ಅದನ್ನು ಹೇಗೆ ನಡೆಸಬೇಕು ಎನ್ನುವ ಕುರಿತು ನಂಬಿಕೆಗಳಿಂದ ಪ್ರೇರಿತವಾಗಿರುತ್ತವೆ. ಅದು ಅವುಗಳ ಸಿದ್ಧಾಂತವಾಗಿರುತ್ತದೆ.

ನೀವು ರಾಜಕೀಯವನ್ನು ಪ್ರವೇಶಿಸಿದಾಗ ಪದವೀಧರನೋರ್ವ ತನಗೆ ಅತ್ಯುತ್ತಮ ಉದ್ಯೋಗದ ಕೊಡುಗೆಯನ್ನು ನೀಡುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಿಕೊಳ್ಳಲು ಸಾಧನವೊಂದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ನಿಮ್ಮ ಪಕ್ಷವು ನಿಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗೆ ಸಾಂಸ್ಥಿಕ ಚೌಕಟ್ಟೊಂದನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಅದು ನೀವು ನಿಮ್ಮ ರಾಜಕೀಯ ವೃತ್ತಿಜೀವನದಲ್ಲಿ ಉತ್ತೇಜಿಸಲು ಮತ್ತು ರಕ್ಷಿಸಲು ವಚನಬದ್ಧರಾಗಿರುವ ಸಿದ್ಧಾಂತಗಳು, ನಂಬಿಕೆಗಳು ಮತ್ತು ವಿಚಾರಗಳನ್ನೂ ಪ್ರತಿಬಿಂಬಿಸುತ್ತದೆ.

ರಾಜಕೀಯವು ನೀವು ಒಂದು ವರ್ಷ ಒಂದು ತಂಡಕ್ಕಾಗಿ ಮತ್ತು ಮುಂದಿನ ವರ್ಷ ಬೇರೊಂದು ತಂಡಕ್ಕಾಗಿ ಆಡುವ ಐಪಿಎಲ್ ನಂತಿರಬಾರದು. ಲೇಬಲ್ಗಳು, ಸಮವಸ್ತ್ರಗಳು ಮತ್ತು ವ್ಯಕ್ತಿಗತ ಆಟಗಾರರನ್ನು ಬಿಟ್ಟರೆ ಐಪಿಎಲ್ ಪ್ರಾಂಚೈಸಿಗಳ ನಡುವೆ ನಿಮಗೆ ಬೇರೆ ಯಾವುದೇ ಆಯ್ಕಯಿರುವುದಿಲ್ಲ, ಆದರೆ ರಾಜಕೀಯ ಪಕ್ಷಗಳ ನಡುವೆ ನೀವು ಆಯ್ಕೆ ಮಾಡಿಕೊಳ್ಳಲು ಸಿದ್ಧಾಂತ ಮತ್ತು ಸಂಕಲ್ಪಗಳ ಪ್ರಮುಖ ವಿಷಯಗಳಿರುತ್ತವೆ. ನೀವು ಒಂದೋ  ಸಾರ್ವಜನಿಕ ಸಂಸ್ಥೆಗಳ ಪಾತ್ರ ಹೆಚ್ಚು ಇರಬೇಕು ಎಂದು ಪ್ರತಿಪಾದಿಸುತ್ತೀರಿ ಅಥವಾ ಖಾಸಗಿ ಉದ್ಯಮಗಳಲ್ಲಿ ನಂಬಿಕೆ ಇಡುತ್ತೀರಿ. ನೀವು ಒಂದೋ  ಎಲ್ಲರನ್ನೂ ಒಳಗೊಂಡ ಸಮಾಜದಲ್ಲಿ ಅಥವಾ ಕೋಮು ವಿಭಜಿತ ಸಮಾಜದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುತ್ತೀರಿ. ನೀವು ಒಂದೋ ಶೋಷಿತರನ್ನು ರಕ್ಷಿಸಲು ಕಲ್ಯಾಣ ರಾಜ್ಯ ನಿರ್ಮಿಸಲು ಬಯಸುತ್ತೀರಿ ಅಥವಾ ಜನರು ತಮ್ಮ ಪಾಡನ್ನು ತಾವೇ ನೋಡಿಕೊಳ್ಳಬೇಕು ಎಂದು ಬಯಸುತ್ತೀರಿ. ಹೀಗೆ ನಂಬಿಕೆಗಳ ಒಂದು ಸಮುಚ್ಚಯವು ಅದಕ್ಕೆ ವಿರುದ್ಧವಾದುದು ಆಗದಂತೆ ತಡೆಯುತ್ತದೆ.

ಐಪಿಎಲ್ ನಂತೆ ರಾಜಕೀಯದಲ್ಲಿ ಉತ್ತಮ ಅವಕಾಶಗಳಿಗಾಗಿ ತಂಡವನ್ನು ಬದಲಿಸುವುದಿಲ್ಲ
ಐಪಿಎಲ್ನಲ್ಲಿ ನಿಮ್ಮ ತಂಡವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡುತ್ತಿಲ್ಲ ಅಥವಾ ನಿಮ್ಮ ಇಷ್ಟದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿಮಗೆ ಅವಕಾಶ ನೀಡುತ್ತಿಲ್ಲ ಎಂಬ ನಿರ್ಧಾರಕ್ಕೆ ನೀವು ಬಂದರೆ ಮತ್ತು ಬೇರೊಂದು ತಂಡಕ್ಕೆ ವರ್ಗಾವಣೆಗೊಳ್ಳಲು ನೀವು ಬಯಸಿದರೆ ನಿಮ್ಮನ್ನು ಯಾರೂ ದೂರುವುದಿಲ್ಲ. ನಿಮಗೆ ಉತ್ತಮ ಅವಕಾಶಗಳಿರುವ ಕಡೆಗೆ,ಟ್ರೋಫಿಯನ್ನು ಜಯಿಸುವ ಒಳ್ಳೆಯ ಸಾಧ್ಯತೆಯಿದೆ ಎಂದು ನೀವು ಭಾವಿಸಿರುವ ತಂಡವನ್ನು ಸೇರಲು ನಿಮಗೆ ಎಲ್ಲ ಹಕ್ಕುಗಳು ಇರುತ್ತವೆ.

ಆದರೆ ರಾಜಕೀಯದಲ್ಲಿ ಹೀಗಿರಬಾರದು. ನೀವು ನಿಮ್ಮ ‘ತಂಡ’ದಲ್ಲಿ ಇರುತ್ತೀರಿ,ಏಕೆಂದರೆ ಅದರ ನಿಲುವಿನಲ್ಲಿ ನಿಮಗೆ ನಂಬಿಕೆಯಿರುತ್ತದೆ. ನಿಮ್ಮ ತಂಡದ ಸಾಧನೆ ಕಳಪೆಯಾಗಿದೆ ಎಂದು ನೀವು ಭಾವಿಸಿದರೂ ಅದು ಇನ್ನೂ ನಿಮ್ಮ ತಂಡವಾಗಿರುತ್ತದೆ, ನಿಮ್ಮ ಸಿದ್ಧಾಂತಗಳು ಮತ್ತು ಮೌಲ್ಯಗಳ ಸಾಕಾರವಾಗಿರುತ್ತದೆ. ನಿಮ್ಮ ನಾಯಕ ನಿಮ್ಮನ್ನು ಎಷ್ಟೇ ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿ,ನಿಮ್ಮ ಸಿದ್ಧಾಂತಗಳಿಗೆ ವಿರುದ್ಧವಾದ ವಿಚಾರಗಳನ್ನು ಹೊಂದಿರುವ ನಾಯಕನತ್ತ ನಿಷ್ಠೆಯನ್ನು ಬದಲಿಸುವಂತೆ ಮಾಡಲು ಯಾವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ನಿಮ್ಮ ವಿಚಾರಗಳು ನಿಮ್ಮ ರಾಜಕಿಯದೊಂದಿಗೆ ಎಷ್ಟೊಂದು ಅಂತರ್ನಿಹಿತವಾಗಿರುತ್ತವೆ ಎಂದರೆ ನೀವು ಅವುಗಳನ್ನು ಕಳಚಿಕೊಳ್ಳುವುದು ಸಾಧ್ಯವಿರುವುದಿಲ್ಲ.

ಪಕ್ಷವು ನಿಮ್ಮ ಸಿದ್ಧಾಂತಗಳಿಗೆ ಗೌರವಾನ್ವಿತ ಸಂಸ್ಥೆ ಮಾತ್ರವಲ್ಲ,ಅದು ಮಾನವ ಸ್ವಭಾವವನ್ನು ಹೊಂದಿರುವ ಸಂಘಟನೆಯೂ ಆಗಿದೆ. ಅಲ್ಲಿ ವ್ಯಕ್ತಿಗಳು ಅಧಿಕಾರದಲ್ಲಿದ್ದು, ಎಲ್ಲ ಪಕ್ಷಪಾತಗಳು, ಕೊರತೆಗಳು ಮತ್ತು ದೌರ್ಬಲ್ಯಗಳೂ ಅವರಲ್ಲಿರುತ್ತವೆ. ನೀವು ಗೌರವಿಸುವ ವಿಚಾರಗಳನ್ನು ನಿಮ್ಮ ಪಕ್ಷವು ಹೊಂದಿರಬಹುದು, ಆದರೆ ಅವುಗಳನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಪಕ್ಷದ ಸಾಧನೆ ಕಳಪೆಯಾಗಿರಬಹುದು ಅಥವಾ ಪರಿಣಾಮಕಾರಿಯಾಗಿ ನಿರ್ವಹಣೆಯಾಗುತ್ತಿಲ್ಲದಿರಬಹುದು ಮತ್ತು ಒಳ್ಳೆಯ ವಿಷಯಗಳು ಚುನಾವಣೆಗಳಲ್ಲಿ ಎಂದೂ ಗೆಲುವು ತಂದುಕೊಡುವುದಿಲ್ಲ ಎಂದು ನೀವು ಭಾವಿಸಬಹುದು.
ಇವೆಲ್ಲ ಕಾರಣಗಳಿಂದ ನಿಮ್ಮ ಪಕ್ಷವನ್ನು ತೊರೆಯಲು ನಿಮಗೆ ಪ್ರಚೋದನೆಯೂ ಉಂಟಾಗಬಹುದು. ಆದರೆ ನೀವು ನಿಮ್ಮನ್ನು ಮತ್ತು ನೀವು ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಮೌಲ್ಯಗಳನ್ನು ಗೌರವಿಸುತ್ತೀರಾದರೆ ನೀವು ಅವೇ ದೃಢಸಂಕಲ್ಪಗಳೊಂದಿಗೆ ಬೇರೊಂದು ಪಕ್ಷವನ್ನು ಸೇರುತ್ತಿರಿ ಅಥವಾ ನಿಮ್ಮದೇ ಆದ ಪಕ್ಷವನ್ನು ಸ್ಥಾಪಿಸಬಹುದು. ಆದರೆ ನಿಮ್ಮ ಸಿದ್ಧಾಂತಗಳಿಗೆ ವಿರುದ್ಧವಾದ ಪಕ್ಷವನ್ನು ಎಂದೂ ಸೇರುವುದಿಲ್ಲ.

ಈ ಹಿಂದೆ ರಾಜಕೀಯ ಪ್ರವೇಶಿಸಿದ್ದವರಲ್ಲಿ ಹೆಚ್ಚಿನವರ ವಿಚಾರಧಾರೆಗಳು ಹೀಗೆಯೇ ಇರುತ್ತಿದ್ದವು. ಅವರು ತಮ್ಮ ಪಕ್ಷಗಳನ್ನು ತೊರೆದಿದ್ದರು, ವಿಭಜಿಸಿದ್ದರು ಅಥವಾ ವಿಲೀನಗೊಳಿಸಿದ್ದರು ಅಥವಾ ಹೊಸ ಪಕ್ಷಗಳನ್ನು ಸ್ಥಾಪಿಸಿದ್ದರು. ಆದರೆ ತಮ್ಮ ಸಂಕಲ್ಪಗಳನ್ನು ಅವರು ಎಂದೂ ತೊರೆದಿರಲಿಲ್ಲ.

‘ಕರಿಯರಿಸ್ಟ್’ ರಾಜಕಾರಣಿಗಳ ಆಗಮನ
ಇತ್ತೀಚಿನ ಕೆಲವು ವರ್ಷಗಳಲ್ಲಿ ಸೈದ್ಧಾಂತಿಕ ಕಾರಣಗಳ ಬದಲು ಒಂದು ವೃತ್ತಿಯನ್ನಾಗಿ ರಾಜಕಾರಣವನ್ನು ಪ್ರವೇಶಿಸುವ ‘ಕರಿಯರಿಸ್ಟ್’ ರಾಜಕಾರಣಿಯನ್ನು ನಾವು ನೋಡುತ್ತಿದ್ದೇವೆ. ಆತನ ಪಾಲಿಗೆ ಸಿದ್ಧಾಂತಗಳು ಮತ್ತು ನಿರ್ಧಾರಗಳಿಗಿಂತ ಆತನ ವೈಯಕ್ತಿಕ ಏಳಿಗೆಯ  ಭವಿತವ್ಯವು ಹೆಚ್ಚಾಗಿರುತ್ತದೆ.
ಯಾವುದೇ ಕಾರಣದಿಂದ ಆತ ಆಯ್ಕೆ ಮಾಡಿಕೊಂಡಿರುವ ಪಕ್ಷವು ಚೆನ್ನಾಗಿ ನಿರ್ವಹಿಸುತ್ತಿಲ್ಲವಾದರೆ ಆತ ಅದರೊಂದಿಗೆ ಇನ್ನಷ್ಟು ಕಾಲ ಮುಂದುವರಿಯಲು, ಅದಕ್ಕೆ ಯಶಸ್ಸು ತಂದು ಕೊಡಲು ಕಠಿಣ ಶ್ರಮ ವಹಿಸಲು ಸಿದ್ಧನಿರುವುದಿಲ್ಲ. ತನ್ನ ನಂಬಿಕೆ ಏನು ಎನ್ನುವುದರ ಬದಲು ತನಗೇನು ಸಿಗುತ್ತದೆ ಎನ್ನುವುದು ಆತನ ಮುಖ್ಯ ಕಾಳಜಿಯಾಗಿರುತ್ತದೆ. ಆತನಿಗೆ  ರಾಜಕೀಯ ಪ್ರಕ್ರಿಯೆ,ಸೋಲು ಮತ್ತು ಪುನರುತ್ಥಾನದ ಬಗ್ಗೆ ಸಹನೆ ಇರುವುದಿಲ್ಲ. ಮೌಲ್ಯಗಳು ಮತ್ತು ಸಿದ್ಧಾಂತಗಳಿಂದ ಪ್ರೇರೇಪಿತನಲ್ಲದ ಕರಿಯರಿಸ್ಟ್ ರಾಜಕಾರಣಿಯಾಗಿ ಆತ ತನ್ನ ಮುಂದಿನ ಪದೋನ್ನತಿಯನ್ನು ಮಾತ್ರ ಕಾಯುತ್ತಿರುತ್ತಾನೆ. ಆತ ಅದನ್ನು ತಕ್ಷಣವೇ ಬಯಸುತ್ತಾನೆ, ದೀರ್ಘಾವಧಿಗೆ ಕಾಯಲು ಸಿದ್ಧನಿರುವುದಿಲ್ಲ.

ನಮ್ಮ ದೇಶದಲ್ಲಿಯ ರಾಜಕಾರಣಿಗಳು ಮುಂಬರುವ  ಚುನಾವಣೆಯ ಆಚೆಗೆ ಯೋಚಿಸಲು ಅಸಮರ್ಥರಾಗಿದ್ದಾರೆ. ತಾವು ಇರುವಲ್ಲಿ ತಮಗೆ ಯಾವುದೇ ಲಾಭವಿಲ್ಲ ಎಂದಾದರೆ ಇತರ ಯಾವುದೇ ಪಕ್ಷವು,ಅದು ಗೆಲುವಿನ ಮಗ್ಗಲಲ್ಲಿ ಇರುವವರೆಗೆ ಅದರೊಡನಿರಲು ಅವರಿಗೆ ಯಾವುದೇ ಮುಜುಗರವಿಲ್ಲ.

ರಾಜಕೀಯ ಯಾತಕ್ಕಾಗಿ?
ಕೆಲವೊಮ್ಮೆ ಈ ರಾಜಕಾರಣಿಗಳನ್ನು ‘ನೀವು ಈಗ ಏನನ್ನು ಹೇಳುತ್ತಿದ್ದೀರೋ ಅದರ ವಿರುದ್ಧವಾದುದನ್ನು ಪ್ರತಿಪಾದಿಸಿದ್ದ ನಿಮ್ಮ ಹಳೆಯ ವೀಡಿಯೊಗಳು ಅಥವಾ ಪತ್ರಿಕಾ ಹೇಳಿಕೆಗಳನ್ನು ನೋಡಿದಾಗ ನಿಮಗೆ ನಾಚಿಕೆಯ ಭಾವನೆಯುಂಟಾಗುತ್ತದೆಯೇ? ಅಥವಾ ನೀವು ನಿಮ್ಮ ದೃಢಸಂಕಲ್ಪಗಳನ್ನು ಬದಿಗೊತ್ತಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪವಿಲ್ಲದೆ ಆಗ ಪ್ರತಿಪಾದಿಸುತ್ತಿದ್ದಂತೆ ಈಗಲೂ ಪ್ರತಿಪಾದಿಸುತ್ತಿರುವುದಕ್ಕಾಗಿ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಾ?’ ಎಂದು ಪ್ರಶ್ನಿಸಲು ಯಾರಿಗಾದರೂ ತುಡಿತ ಉಂಟಾಗಬಹುದು.
ಜಿತಿನ್ ಪ್ರಸಾದ ಅವರು ಬಿಜೆಪಿಯನ್ನು ಸೇರಲು ಕಾರಣಗಳ ಬಗ್ಗೆ ಊಹಾಪೋಹಗಳಿಂದ ಮಾಧ್ಯಮಗಳು ತುಂಬಿಹೋಗಲಿವೆ. ಆದರೆ ನನ್ನ ಪ್ರಶ್ನೆಯು ಒಂಚೂರು ಭಿನ್ನವಾಗಿದೆ :ರಾಜಕೀಯ ಯಾತಕ್ಕಾಗಿ ? ನನಗೆ ಭಯವಿದೆ, ಈ ಪ್ರಶ್ನೆಗೆ ಅವರಲ್ಲಿ ಸರಿಯಾದ  ಉತ್ತರವಿಲ್ಲ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News