ದೇಶದ್ರೋಹ ಪ್ರಕರಣದಲ್ಲಿ ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್
ದೇಶದ್ರೋಹ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಶುಕ್ರವಾರ ಆಯಿಷಾ ಸುಲ್ತಾನಾಗೆ ನಿರೀಕ್ಷಿತ ಜಾಮೀನು ನೀಡಿದೆ ಎಂದು livelaw ವರದಿ ಮಾಡಿದೆ. ಐಪಿಸಿಯ ಸೆಕ್ಷನ್ 124 ಎ ಮತ್ತು 153 ಬಿ ಅಡಿಯಲ್ಲಿ ತನ್ನ ವಿರುದ್ಧ ಎಫ್ಐಆರ್ ದಾಖಲಾದ ನಂತರ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಜಾಮೀನು ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ನ್ಯಾಯಮೂರ್ತಿ ಅಶೋಕ್ ಮೆನನ್ ಆದೇಶ ಹೊರಡಿಸಿದ್ದಾರೆ.
ಲಕ್ಷದ್ವೀಪದ ಜನರ ವಿರುದ್ಧ ಕೇಂದ್ರವು ಕೋವಿಡ್ 19 ಹರಡಲು ಪ್ರಫುಲ್ ಪಟೇರ್ ರನ್ನು 'ಜೈವಿಕ ಆಯುಧ'ವಾಗಿ ನಿಯೋಜಿಸಿದೆ ಎಂದು ಮಾಧ್ಯಮವೊಂದರಲ್ಲಿ ಅವರು ನೀಡಿದ ಹೇಳಿಕೆಗೆ ಪ್ರಕರಣ ದಾಖಲಾಗಿತ್ತು. ಅದರಂತೆ, 2021 ರ ಜೂನ್ 20 ರಂದು ಕವರಟ್ಟಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ಈ ಮಧ್ಯಂತರ ಜಾಮೀನಿನ ಮೂಲಕ ನೋಟಿಸ್ ಅನ್ನು ಅನುಸರಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆಯಿಶಾಗೆ ನಿರ್ದೇಶಿಸಲಾಗಿತ್ತು. ಅವರು ಹೇಳಿದ ದಿನಾಂಕದಂದು ಕವರಟ್ಟಿ ಪೊಲೀಸ್ ಠಾಣೆಗೆ ಆಯಿಶಾ ಹಾಜರಾದರು ಎಂದು ವರದಿಯಾಗಿದೆ.
ಬಳಿಕ, ಕೇಂದ್ರಾಡಳಿತ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸುವ ಮೂಲಕ ನ್ಯಾಯಾಲಯ ನೀಡಿದ ಮಧ್ಯಂತರ ರಕ್ಷಣೆಯನ್ನು ಆಯಿಶಾ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಲಕ್ಷದ್ವೀಪ ಆಡಳಿತವು ಗುರುವಾರ ಅರ್ಜಿ ಸಲ್ಲಿಸಿತ್ತು ಎನ್ನಲಾಗಿದೆ.